Ahmedabad Plane Crash: ವಿಮಾನ ಪತನವಾಗುವ ಮುನ್ಸೂಚನೆ ಈತನಿಗಿತ್ತಾ? ಏನಿದು ವೈರಲ್ ಪೋಸ್ಟ್?
ಅಹಮದಾಬಾದ್ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಗುವ ಕೆಲವೇ ಗಂಟೆಗಳ ಮೊದಲು, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬ ದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣಿಸುವಾಗ ಹಲವಾರು ತಾಂತ್ರಿಕ ದೋಷಗಳನ್ನು ಅನುಭವಿಸಿದ್ದಾಗಿ ಹೇಳಿ ಅದರ ವಿಡಿಯೊ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಗಾಂಧಿನಗರ: ಇಂದು (ಜೂನ್ 12) ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ನ ಗಾಟ್ವಿಕ್ಗೆ ತೆರಳುತ್ತಿದ್ದ ಏರ್ ಇಂಡಿಯಾ(Air India) ವಿಮಾನ AI171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲು, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬ ದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣಿಸುವಾಗ ಹಲವಾರು ತಾಂತ್ರಿಕ ದೋಷಗಳನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಸೋಶಿಯಲ್ ಮೀಡಿಯಾ ನೆಟ್ಟಿಗರೊಬ್ಬರು ಲಂಡನ್ ಗಾಟ್ವಿಕ್ಗೆ ಹಾರುವ ಸುಮಾರು ಎರಡು ಗಂಟೆಗಳ ಮೊದಲು ಅದೇ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದಲ್ಲಿ ಪ್ರಯಾಣ ಮಾಡಿದ್ದು, ಆ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷಗಳನ್ನು ಗಮನಿಸಿದ್ದೇನೆ ಮತ್ತು ಸಮಸ್ಯೆಗಳನ್ನು ವರದಿ ಮಾಡಲು ಏರ್ ಇಂಡಿಯಾವನ್ನು ಟ್ಯಾಗ್ ಮಾಡುವ ಉದ್ದೇಶದಿಂದ ವಿಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಹೇಳಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊಗಳಲ್ಲಿ, ಆತ ಸರಿಯಾಗಿ ವರ್ಕ್ ಆಗದ ಎಸಿ, ಹಾಳಾದ ಸೀಟ್ ಬಟನ್ಗಳು ಮತ್ತು ಆನ್ ಆಗದ ಎಂಟರ್ಟೈನ್ಮೆಂಟ್ ಸ್ಕ್ರೀನ್ಗಳನ್ನು ತೋರಿಸಿದ್ದರು.
ವಿಡಿಯೊ ಇಲ್ಲಿದೆ ನೋಡಿ...
I was in the same damn flight 2 hours before it took off from AMD. I came in this from DEL-AMD. Noticed unusual things in the place.Made a video to tweet to @airindia i would want to give more details. Please contact me. @flyingbeast320 @aajtak @ndtv @Boeing_In #planecrash #AI171 pic.twitter.com/TymtFSFqJo
— Akash Vatsa (@akku92) June 12, 2025
ಅಹಮದಾಬಾದ್ ಏರ್ ಇಂಡಿಯಾ ಅಪಘಾತ
242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ AI171 ವಿಮಾನವು ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:38 ಕ್ಕೆ ಲಂಡನ್ ಗ್ಯಾಟ್ವಿಕ್ಗೆ ಹೊರಟಿತು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವು ಸುಮಾರು 825 ಅಡಿ ಎತ್ತರದಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು 1 ಕೆನಡಾ ಪ್ರಜೆ ಇದ್ದರು.
ಘಟನೆಯನ್ನು ಏರ್ ಇಂಡಿಯಾ ಒಪ್ಪಿಕೊಂಡಿದ್ದು, ವಿಮಾನಯಾನ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಹೇಳಿದೆ. ಈ ಘಟನೆಯ ಬಗ್ಗೆ ಪ್ರಧಾನಿ ಮೋದಿ “ಇದು ಪದಗಳಲ್ಲಿ ಹೇಳಲಾಗದ ಹೃದಯವಿದ್ರಾವಕ ಘಟನೆ " ಎಂದು ಹೇಳಿದ್ದಾರೆ. ಹಾಗೇ ಅಪಘಾತಕ್ಕೀಡಾದವರ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹಾಗೇ ಯುಕೆ, ಯುರೋಪಿಯನ್ ಒಕ್ಕೂಟ, ಇಸ್ರೇಲ್, ಮಾಲ್ಡೀವ್ಸ್ ಮತ್ತು ಇತರ ರಾಷ್ಟ್ರಗಳ ನಾಯಕರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ahmedabad Plane Crash: ಗುಜರಾತ್ ವಿಮಾನ ಪತನ; ಎಲ್ಲ 242 ಪ್ರಯಾಣಿಕರು ಸಾವು
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿ ರಾಜ್ಯಕ್ಕೆ ಎಲ್ಲ ರೀತಿಯ ಸಹಾಯದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲು ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಚಿಕಿತ್ಸಾ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ