India’s Deadliest Plane Crashes: ಭಾರತ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ವಿಮಾನ ದುರಂತಗಳಿವು
ಜೂ. 12ರಂದು ಗುಜರಾತ್ನ ಆಗಸದಲ್ಲಿ ಭೀಕರ ಅಪಘಾತವೊಂದು ನಡೆದಿದ್ದು ಏರ್ ಇಂಡಿಯಾ ವಿಮಾನ ಪತನವಾಗಿ ಅದರಲ್ಲಿದ್ದ 242 ಮಂದಿಯೂ ಮೃತಪಟ್ಟಿದ್ದಾರೆ. ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 171 ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದಲ್ಲಿ ಪತನವಾಗಿದೆ. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 241 ಮಂದಿ ಮೃತಪಟ್ಟಿದ್ದು, ಒಬ್ಬರು ಬದುಕುಳಿದಿದ್ದಾರೆ. ದೇಶದಲ್ಲಾ ಅತೀ ಭೀಕರ ವಿಮಾನ ದುರಂತಗಳ ಮಾಹಿತಿ ಇಲ್ಲಿದೆ.



ಏರ್ ಇಂಡಿಯಾ ಎಕ್ಸ್ಪ್ರೆಸ್ IX-1344 (ಕೋಝಿಕ್ಕೋಡ್-2020)
2020ರಲ್ಲಿ ಭಾರತ ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾಗ ಘೋರ ವಿಮಾನ ದುರಂತವೊಂದು ಕೇರಳದಲ್ಲಿ ನಡೆದಿತ್ತು. ಭಾರಿ ಮಳೆಯ ನಡುವೆ ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ. 7ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 1344 ಅಪಘಾತಕ್ಕೀಡಾಯಿತು. ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ವಾಪಸ್ ಕರೆತರುವ ವಂದೇ ಭಾರತ್ ಮಿಷನ್ಗಾಗಿ ಈ ವಿಮಾನ ಕಾರ್ಯ ನಿರ್ವಹಿಸುತ್ತಿತ್ತು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತ್ತಾದರೂ ಮಳೆಯ ಕಾರಣದಿಂದ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ. ಈ ವಿಮಾನವು 190 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಈ ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದರು.
ದಿನಾಂಕ: 2020ರ ಆ. 7
ಸ್ಥಳ: ಕೋಝಿಕ್ಕೋಡ್, ಕೇರಳ
ಮೃತರು: 21

ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ IX-812 (ಮಂಗಳೂರು-2010)
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಬೆಳಗ್ಗೆ ದುಬೈಯಿಂದ ಮರಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ IX-812 ಅಪಘಾತಕ್ಕೀಡಾಯಿತು.ವಿಮಾನದಲ್ಲಿದ್ದ ಒಟ್ಟು 166 ಮಂದಿಯ ಪೈಕಿ 158 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದು ದೇಶದ ಅತೀ ದೊಡ್ಡ ವಿಮಾನ ದುರಂತಗಳಲ್ಲಿ ಒಂದು ಎನಿಸಿಕೊಂಡಿದೆ.
ದಿನಾಂಕ: 2010ರ ಮೇ 22
ಸ್ಥಳ: ಮಂಗಳೂರು, ಕರ್ನಾಟಕ
ಮೃತರು: 158

ಚರ್ಖಿ ದಾದ್ರಿ ಅಪಘಾತ (ಹರಿಯಾಣ-1996)
ಜಗತ್ತಿನ ಭೀಕರ ವಿಮಾನ ಅಪಘಾತಗಳಲ್ಲಿ ಒಂದು ಎನಿಸಿಕೊಂಡಿರುವ ಇದು 1996ರ ನ. 12ರಂದು ಸಂಭವಿಸಿತ್ತು. ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್-76 ವಿಮಾನಗಳ ನಡುವೆ ಸಂಭವಿಸಿದ ಈ ಡಿಕ್ಕಿಯಲ್ಲಿ ಸುಮಾರು 349 ಮಂದಿ ಅಸುನೀಗಿದ್ದರು. ಸಂವಹನದ ಕೊರತೆಯಿಂದ ಎರಡು ವಿಮಾನಗಳು ಹರಿಯಾಣದ ಚರ್ಖಿ ದಾದ್ರಿ ಗ್ರಾಮದ ಮೇಲೆ ಪರಸ್ಪರ ಡಿಕ್ಕಿ ಹೊಡೆದಿದ್ದವು.
ದಿನಾಂಕ: 1996ರ ನ. 12
ಸ್ಥಳ: ಹರಿಯಾಣ
ಮೃತರು: 349

ಇಂಡಿಯನ್ ಏರ್ಲೈನ್ಸ್ ಫ್ಲೈಟ್ 491 (ಔರಂಗಾಬಾದ್-1993)
1993ರ ಏ. 26ರಂದು ವಿಮಾನವು ಟೇಕ್ ಆಫ್ ಆದ ನಂತರ, ತಪ್ಪಾಗಿ ರನ್ವೇ ಮೇಲೆ ಬಂದ ಟ್ರಕ್ಗೆ ಡಿಕ್ಕಿ ಹೊಡೆದು, ಭೀಕರ ಅಪಘಾತಕ್ಕೆ ಕಾರಣವಾಯಿತು. ಅಸಾಮಾನ್ಯ ಮತ್ತು ಬಹುತೇಕ ತಪ್ಪಿಸಬಹುದಾಗಿದ್ದ ಈ ಅಪಘಾತವು ವಿಮಾನ ನಿಲ್ದಾಣದ ಭದ್ರತೆ ಮತ್ತು ವಾಹನ ನಿಯಂತ್ರಣ ಕಾರ್ಯವಿಧಾನಗಳಲ್ಲಿನ ಕುಂದು-ಕೊರತೆಯನ್ನು ಬಹಿರಂಗಪಡಿಸಿತು.
ದಿನಾಂಕ: 1993ರ ಏ. 26
ಸ್ಥಳ: ಔರಂಗಾಬಾದ್, ಮಹಾರಾಷ್ಟ್ರ
ಮೃತರು: 55

ಇಂಡಿಯನ್ ಏರ್ಲೈನ್ಸ್ ಫ್ಲೈಟ್ 605 (ಬೆಂಗಳೂರು-1990)
ಕರ್ನಾಟಕದಲ್ಲಿ ನಡೆದ ಮತ್ತೊಂದು ದೊಡ್ಡ ವಿಮಾನ ದುರಂತವಿದೆ. 1990ರ ಫೆ. 14ರಂದು ಏರ್ಬಸ್ ಎ320 ವಿಮಾನವು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಅಕಾಲಿಕವಾಗಿ ಕೆಳಗಿಳಿದು ರನ್ವೇಯಿಂದ ಹೊರಗೆ ಅಪ್ಪಳಿಸಿತು. ಇದರಿಂದಾಗಿ 92 ಜನರು ಸಾವನ್ನಪ್ಪಿದ್ದರು.
ದಿನಾಂಕ: 1990ರ ಫೆ. 14
ಸ್ಥಳ: ಬೆಂಗಳೂರು, ಕರ್ನಾಟಕ
ಮೃತರ ಸಂಖ್ಯೆ: 92

ಇಂಡಿಯನ್ ಏರ್ಲೈನ್ಸ್ ಫ್ಲೈಟ್ 113 (ಅಹಮದಾಬಾದ್-1988)
ಗುಜರಾತ್ನ ಅಹಮದಾಬಾದ್ನಲ್ಲಿ ಈ ಹಿಂದೆಯೂ ವಿಮಾನ ಅಪಘಾತ ಸಂಭವಿಸಿ 133 ಮಂದಿಯನ್ನು ಬಲಿ ತೆಗೆದುಕೊಂಡಿದ್ತು. ಪ್ರತಿಕೂಲ ಹವಾಮಾನದಿಂದಾಗಿ 1988ರ ಅ. 19ರಂದು ಇಂಡಿಯನ್ ಏರ್ಲೈನ್ಸ್ ಫ್ಲೈಟ್ 113 ರನ್ ವೇಯಲ್ಲಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಇಬ್ಬರು ಮಾತ್ರ ಬದುಕುಳಿದಿದ್ದರು.
ದಿನಾಂಕ: 1988ರ ಅ. 19,
ಸ್ಥಳ: ಅಹಮದಾಬಾದ್, ಗುಜರಾತ್
ಮೃತರು: 133

ಏರ್ ಇಂಡಿಯಾ ಫ್ಲೈಟ್ 855 (ಮುಂಬೈ-1978)
ಏರ್ ಇಂಡಿಯಾ ಫ್ಲೈಟ್ ಬೋಯಿಂಗ್ 747 ವಿಮಾನವು 1978ರ ಜ. 1ರಂದು ಹಾರಾಟ ಆರಂಭಿಸಿದ ತಕ್ಷಣ ಮಹಾರಾಷ್ಟ್ರದ ಮುಂಬೈಯ ಅರೇಬಿಯನ್ ಸಮುದ್ರಕ್ಕೆ ಬಿದ್ದು 213 ಮಂದಿ ಮೃತಪಟ್ಟಿದ್ದರು.
ದಿನಾಂಕ: 1978ರ ಜ. 1
ಸ್ಥಳ: ಮಹಾರಾಷ್ಟ್ರ, ಮುಂಬೈ
ಮೃತರು: 213