ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 'ಪಕ್ಷಪಾತ ಸರಿಯೇ?'- ಅಭಿಮನ್ಯು ಈಶ್ವರನ್‌ಗೆ ಸ್ಥಾನ ನೀಡದ ಬಗ್ಗೆ ಫ್ಯಾನ್ಸ್ ಕಿಡಿ!

ಇಂಗ್ಲೆಂಡ್ ವಿರುದ್ಧ ಜೂನ್ 20 (ಶುಕ್ರವಾರ) ರಂದು ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ಅಭಿಮನ್ಯು ಈಶ್ವರನ್ ಮತ್ತೆ ಎಡವಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಲೀಡಿಂಗ್ ಸ್ಕೋರರ್ ಆಗಿದ್ದ ಸಾಯಿ ಸುದರ್ಶನ್ ಬದಲಿಗೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ನ್‌ನಲ್ಲಿರುವ ಅಭಿಮನ್ಯು ಈಶ್ವರನ್‌ಗೆ ಸ್ಥಾನ ನೀಡಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs ENG: ಅಭಿಮನ್ಯು ಈಶ್ವರನ್‌ಗೆ ಸ್ಥಾನ ನೀಡದ ಬಗ್ಗೆ ಫ್ಯಾನ್ಸ್ ಆಕ್ರೋಶ!

ಅಭಿಮನ್ಯು ಈಶ್ವರನ್‌ಗೆ ಸ್ಥಾನ ನೀಡದ ಬಗ್ಗೆ ಫ್ಯಾನ್ಸ್‌ ಆಕ್ರೋಶ.

Profile Ramesh Kote Jun 20, 2025 8:43 PM

ಲೀಡ್ಸ್‌: ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವಲ್ಲಿ ಅಭಿಮನ್ಯು ಈಶ್ವರನ್ (Abhimanyu Easwaran) ಮತ್ತೊಮ್ಮೆ ವಿಫಲರಾಗಿದ್ದಾರೆ. ಜೂನ್ 20 (ಶುಕ್ರವಾರ) ರಂದು ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ (IND vs ENG) ಐಪಿಎಲ್ ತಾರೆ ಸಾಯಿ ಸುದರ್ಶನ್ (Sai Sudarshan) ಅವರು ಸ್ಥಾನ ಪಡೆದಿದ್ದು, 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಡಕೌಟ್ ಆದರು. ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಎಡವಿದ ಸಾಯಿ ಸುದರ್ಶನ್ ಬದಲಿಗೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಅಭಿಮನ್ಯು ಈಶ್ವರನ್‌ಗೆ ಸ್ಥಾನ ನೀಡಬೇಕಿತ್ತು ಎಂದು ಅಭಿಮಾನಿಗಳು ಬಿಸಿಸಿಐ ಆಯ್ಕೆ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು 29ರ ವಯಸ್ಸಿನ ಆಟಗಾರ ಸುದೀರ್ಘ ಕಾಲದಿಂದ ಕಾಯುತ್ತಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

IND vs ENG: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ

ಕಳೆದ ವರ್ಷ ದೇಶಿ ಕ್ರಿಕೆಟ್ ನಲ್ಲಿ ಅಭಿಮನ್ಯು ಈಶ್ವರನ್ ಉತ್ತಮ ಪ್ರದರ್ಶನ ತೋರಿದ್ದಾರೆ. ದುಲೀಪ್, ಇರಾನಿ ಅಲ್ಲದೆ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ಅಭಿಮನ್ಯು ಈಶ್ವರನ್, 127*, 191, 116, 19,157*,13,4,200*,72 ಹಾಗೂ 65 ರನ್ ಬಾರಿಸಿದ್ದಾರೆ. ಅಲ್ಲದೆ ಬಂಗಾಳದ ಆಟಗಾರ ಇದುವರೆಗೂ 103 ಪ್ರಥಮ ದರ್ಜೆ ಪಂದ್ಯಗಳಿಂದ 48.70 ಸರಾಸರಿ ಯಲ್ಲಿ 7841 ರನ್ ಗಳಿಸಿದ್ದು, ಇದರಲ್ಲಿ 27 ಶತಕ ಹಾಗೂ 31 ಅರ್ಧಶತಕ ಸಿಡಿಸಿದ್ದಾರೆ. ಹೀಗಿದ್ದರೂ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡದೆ ನಿರ್ಲಕ್ಷಿಸಿದ್ದಕ್ಕೆ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಐಪಿಎಲ್ ಪ್ರದರ್ಶನವೇ ಮುಖ್ಯವಾಯಿತೇ?

"ಕಳೆದ ಐದು ವರ್ಷಗಳಿಂದ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅಭಿಮನ್ಯು ಈಶ್ವರನ್ ಕಾಯುತ್ತಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಯಾರಾದರೂ ಆಟಗಾರರು ಅವರ ಆಯ್ಕೆಗೆ ಅಡ್ಡಿಯಾಗುತ್ತಿದ್ದಾರೆ. ಬಿಸಿಸಿಐ ಆಯ್ಕೆಗಾರರು ಕೂಡ ಐಪಿಎಲ್ ಆಟಗಾರರಿಗೆ ಮಣೆ ಹಾಕುತ್ತಾರೆ. ಇದು ಅಕ್ಷರಶಃ ಸತ್ಯದ ಸಂಗತಿಯಾಗಿದೆ. ಸಾಯಿ ಸುದರ್ಶನ್ ಕೂಡ ಅದ್ಭುತ ಆಟಗಾರರಾಗಿದ್ದಾರೆ. ಅಲ್ಲದೆ ಆತನಿಗೆ ಉತ್ತಮ ಭವಿಷ್ಯವಿದೆ. ಆದರೆ ಹಲವು ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆ ಹೊಂದಿರುವ ಅಭಿಮನ್ಯು ಈಶ್ವರನ್ ಅವರಿಗೂ ಒಂದೇ ಒಂದು ಅವಕಾಶ ನೀಡಬೇಕಲ್ಲವೇ?" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.



ಅಭಿಮನ್ಯು ಈಶ್ವರನ್‌ರನ್ನು ಪರಿಗಣಿಸಿ

"ಎಲ್ಲರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗದ ಬಗ್ಗೆಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಭಿಮನ್ಯು ಈಶ್ವರನ್‌ಗೆ ಸ್ಥಾನ ಸಿಗದ ಬಗ್ಗೆ ಯಾರು ಮಾತನಾಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಇವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಸಿಡಿಸಿರುವ ಅಭಿಮನ್ಯು ಈಶ್ವರನ್, ಐಪಿಎಲ್ ಆಟಗಾರರಿಗೆ ಸ್ಥಾನ ಕಲ್ಪಿಸುವುದಕ್ಕಾಗಿ ಸ್ಥಾನ ಕಳೆದುಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ," ಎಂದು ಮತ್ತೊಬ್ಬ ಅಭಿಮಾನಿ ಎಕ್ಸ್ ಖಾತೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.



ಭಾರತದ ಪರ ಆಡಲು ಏನು ಮಾಡಬೇಕು?

"ಭಾರತದ ಪರ ಆಡಲು ಅಭಿಮನ್ಯು ಈಶ್ವರನ್ ಮತ್ತೇನು ಮಾಡಬೇಕು? ಹಲವು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್‌ಗಿಂತ ಅಭಿಮನ್ಯು ಈಶ್ವರನ್ ಉತ್ತಮ ಪ್ರದರ್ಶನ ತೋರಿಸಿದ್ದಾರೆ," ಎಂದು ಇನ್ನೊಬ್ಬರು ಹೇಳಿದ್ದಾರೆ.



ಅಭಿಮನ್ಯು ಈಶ್ವರನ್ ನಿರ್ಲಕ್ಷ್ಯ ಸರಿಯೇ?

"ಸಾಯಿ ಸುದರ್ಶನ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ. ಆದರೆ ಅಭಿಮನ್ಯು ಈಶ್ವರನ್ ಅವರ ಕಡೆಗಣನೆ ಬೇಸರ ಮೂಡಿಸಿದೆ. ಸಾಯಿ ಸುದರ್ಶನ್‌ಗಿಂತ ಮೊದಲೇ ತಂಡದಲ್ಲಿ ಸ್ಥಾನ ಪಡೆಯಲು ಅಭಿಮನ್ಯು ಈಶ್ವರನ್ ಅರ್ಹರಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ 7500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಟೆಸ್ಟ್ ತಂಡದ ಆಯ್ಕೆಗೆ ಐಪಿಎಲ್ ಟೂರ್ನಿಯ ಪ್ರದರ್ಶನವೇ ಪ್ರಾಮುಖ್ಯತೆ ಪಡೆಯಿತೇ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.



ಭಾರತ ತಂಡದ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ