Shishir Hegde Column: ಸ್ಟೇಸಿ ಮಾರ್ಕಮ್ ಹೇಳಿದ ಮರಣಶಯ್ಯೆಯ ಕಥೆಗಳು
ರೋಗಿಯ ಬಳಿ ಹೆಚ್ಚೆಂದರೆ 6 ತಿಂಗಳಿಗಿಂತ ಕಡಿಮೆ ಸಮಯವಿರಬೇಕು. ವೈದ್ಯರು ಪ್ರಮಾಣೀಕರಿಸಿರ ಬೇಕು. ಕುಟುಂಬ ಒಪ್ಪಬೇಕು. ಈ ವ್ಯವಸ್ಥೆ ಭಾರತ ದಲ್ಲಿಯೂ ಹಲವೆಡೆ ಬಹಳ ಕಾಲದಿಂದ ಇದೆ, ಅಷ್ಟು ವ್ಯಾಪಕವಲ್ಲ. ಕೆಲ ವರ್ಷಗಳ ಹಿಂದೆ ನನ್ನ ಪರಿಚಯದವರೊಬ್ಬರು ತಮ್ಮ ಬದುಕಿನ ಕೊನೆಯ ಹಂತದಲ್ಲಿದ್ದರು.


ಶಿಶಿರಕಾಲ
shishirh@gmail.com
ಅಮೆರಿಕಾದ ಬಹುತೇಕ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇರುತ್ತದೆ. Hospice Care -ಅಂತ್ಯಕಾಲದ ಆರೈಕೆ. ಅದು ಬದುಕಿನ ಕಟ್ಟಕಡೆಯ ಕೊನೆಯ ಹಂತದಲ್ಲಿರುವವರನ್ನು ನೋಡಿಕೊಳ್ಳುವ ವ್ಯವಸ್ಥೆ. ಇದು ಆಸ್ಪತ್ರೆಯದೇ ಭಾಗವಾದರೂ ಇಲ್ಲಿ ರೋಗಿಗಳಿಗೆ ಯಾವುದೇ ವಿಶೇಷ ಶುಶ್ರೂಷೆ, ಗುಣಮುಖವಾಗಲೆಂದು ಆರೈಕೆ ಇರುವುದಿಲ್ಲ. ಇಲ್ಲಿರುವವರು ಇಲ್ಲಿಂದ ಹಿಂದಕ್ಕೆ ಹೋಗಲಾಗದ ಸ್ಥಿತಿಯಲ್ಲಿರುವವರು. ಮಾರಣಾಂತಿಕ ರೋಗದ ಕೊನೆಯ ಹಂತವನ್ನು ತಲುಪಿದವರು. ಇದು ವೃದ್ಧಾಶ್ರಮವಲ್ಲ-ಹೆಚ್ಚು ಕಡಿಮೆ ಕಾಶಿಯ ಮುಕ್ತಿಧಾಮದ ರೀತಿ. ದಿನಗಣನೆಯವರಷ್ಟೇ ಇಲ್ಲಿ ಸೇರಬಹುದು.
ಕೊನೆಯ ಕೆಲವೇ ದಿನಗಳನ್ನು ಗೌರವಯುತವಾಗಿ ಮತ್ತು ಸಹ್ಯವಾಗುವ ರೀತಿ ನೋಡಿಕೊಳ್ಳುವು ದಷ್ಟೇ ಈ ವ್ಯವಸ್ಥೆಯ ಉದ್ದೇಶ. ಇಲ್ಲಿ ಬಂದವರ ಹೃದಯ ನಿಂತು ಹೋಯ್ತು, ಇನ್ನೇನೋ ಆಯ್ತು ಎಂದರೆ ಅಲ್ಲಿಗೆ ಮುಗಿಯಿತು. ತೀವ್ರ ಕ್ಯಾನ್ಸರ್ ಮೊದಲಾದವುಗಳಿಂದ ಬಳಲುತ್ತಿದ್ದರೆ, ಹೆಚ್ಚಿನ ಪ್ರಮಾಣದ ನೋವು ಅನುಭವಕ್ಕೆ ಬಾರದಂತೆ ನಿವಾರಕ ( Pain Killer ) ಮೊದಲಾದವುಗಳನ್ನು ಕೊಡುತ್ತಾರೆ.
ಆ ಮೂಲಕ ಇನ್ನುಳಿದ ಸಮಯದಲ್ಲಿ ನೋವಿನ ಅನುಭವವಾಗದಂತೆ ನೋಡಿಕೊಳ್ಳುವುದೇ ಇಲ್ಲಿನ ಉದ್ದೇಶ. ಈ ರೀತಿ ಆದಷ್ಟು ಆರಾಮದ ನಿರ್ಗಮನಕ್ಕೆ ವ್ಯವಸ್ಥೆ. ಒಬ್ಬ ವ್ಯಕ್ತಿ ಹಾಸ್ಪೈಸ್ಗೆ ತಾನಾಗಿಯೇ ಹೋಗಿ ಸೇರುವಂತಿಲ್ಲ. ಅದಕ್ಕೊಂದಿಷ್ಟು ನೀತಿ ನಿಯಮ ಇದೆ. ರೋಗ ಮಾರಣಾಂತಿಕವಾಗಿರಬೇಕು.
ಇದನ್ನೂ ಓದಿ: Shishir Hegde Column: ಮರೆಯಲಿ ಹ್ಯಾಂಗ ಮರೆವಿನ ಹಂಗ: ಮರೆವು ಒಳ್ಳೆಯದು
ಗುಣವಾಗಿಸುವ ಸಾಧ್ಯತೆ ಮೀರಿರಬೇಕು. ರೋಗಿಯ ಬಳಿ ಹೆಚ್ಚೆಂದರೆ 6 ತಿಂಗಳಿಗಿಂತ ಕಡಿಮೆ ಸಮಯವಿರಬೇಕು. ವೈದ್ಯರು ಪ್ರಮಾಣೀಕರಿಸಿರಬೇಕು. ಕುಟುಂಬ ಒಪ್ಪಬೇಕು. ಈ ವ್ಯವಸ್ಥೆ ಭಾರತ ದಲ್ಲಿಯೂ ಹಲವೆಡೆ ಬಹಳ ಕಾಲದಿಂದ ಇದೆ, ಅಷ್ಟು ವ್ಯಾಪಕವಲ್ಲ. ಕೆಲ ವರ್ಷಗಳ ಹಿಂದೆ ನನ್ನ ಪರಿಚಯದವರೊಬ್ಬರು ತಮ್ಮ ಬದುಕಿನ ಕೊನೆಯ ಹಂತದಲ್ಲಿದ್ದರು.
ಹಾಸ್ಪೈಸ್ ಸೇರಿದ್ದರು. ಹೀಗೊಂದು ವ್ಯವಸ್ಥೆಯೂ ಇದೆ ಎಂದು ನನಗೆ ತಿಳಿದದ್ದೇ ಆಗ. ಉದ್ದದ ಆಸ್ಪತ್ರೆಯ ವಾರ್ಡ್. ಕೋಣೆಗಳು. ಅರೆ ತೆರೆದ ಬಾಗಿಲು. ಪ್ರತೀ ಕೋಣೆಯ ಬೆಡ್ಡಿನ ಮೇಲೂ ಹಾಸಿಗೆ ಹೊದೆದ ರೋಗಿಗಳು, ಬೀಪ್ ಬೀಪ್ ಶಬ್ದ, ಸಾವಿಗಾಗಿ ಕಾಯುತ್ತಿರುವ ರೋಗಿಗಳು. ಕೆಲವರಿಗೆ ಒಂದೆರಡು ತಿಂಗಳು, ಇನ್ನು ಕೆಲವರಿಗೆ ವಾರ, ದಿನ, ಒಪ್ಪತ್ತು. ಅವರಿಗೆ ಗೊತ್ತು-ಬದುಕು ಇನ್ನೇನು ಮುಗಿಯಲಿದೆ ಎಂದು.

ಕುಟುಂಬದವರಿಗೂ ಗೊತ್ತು-ಅವರು ಮಾನಸಿಕವಾಗಿ ತಯಾರಾಗಿ ಆಗಿದೆ. ಹಾರ್ಟ್ ಅಟ್ಯಾಕ್ ಇತ್ಯಾದಿ ಕಾರಣಕ್ಕೆ ಹಠಾತ್ ಸಾಯುವುದು ಒಂದು ರೀತಿ-ಇನ್ನೊಂದು ಈ ಕಾಯುವ ಸಾವು. ಸ್ಟೆಸಿ ಮಾರ್ಕಂ ನನಗೆ ಪರಿಚಯವಾಗಿದ್ದು ಶಿಕಾಗೋ ಸ್ಥಳೀಯ ಲಿಟ್ - (ಸಾಹಿತ್ಯೋತ್ಸವ) ನಲ್ಲಿ. ಸ್ಟೇಸಿ ಓದು ಬರವಣಿಗೆಯ ಹವ್ಯಾಸ ಬೆಳೆಸಿಕೊಂಡವಳು.
ವೃತ್ತಿಯಲ್ಲಿ ಅವಳು ನರ್ಸ್. ಹಾಸ್ಪೈಸ್ ನರ್ಸ್. ಕೊನೆಯ ಹಂತದಲ್ಲಿರುವವರನ್ನು ನೋಡಿ ಕೊಳ್ಳುವ ನರ್ಸ್. ಆಕೆಯ ಇಪ್ಪತೈದು ವರ್ಷದ ಸರ್ವೀಸ್ನಲ್ಲಿ ಏನಿಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ರೋಗಿಗಳನ್ನು ಕೊನೆಯ ಹಂತದಲ್ಲಿ ನೋಡಿಕೊಂಡವಳು. ಅದರರ್ಥ ಅಷ್ಟೇ ಸಂಖ್ಯೆಯ ಸಾವು ಕಂಡವಳು.
ಅಷ್ಟೊಂದು ಸಾವನ್ನು ಅಷ್ಟು ಹತ್ತಿರದಿಂದ ನೋಡುವುದು, ಅರಗಿಸಿ ಬದುಕು ಸಾಗಿಸುವುದು ಸುಲಭವಲ್ಲ. ಎಂಥವರಿಗೂ ವೈರಾಗ್ಯ ಬಂದುಬಿಡಬಹುದು. ಆಕೆ ಹಾಗಲ್ಲ. ನಾಳೆಯೇ ಇಲ್ಲದಂತೆ ಬದುಕುತ್ತಿರುವವಳು. ಅಷ್ಟು ಜೀವನವನ್ನು ಪ್ರೀತಿಸುವವಳು. ಬಾಯಿ ತೆಗೆದರೆ ‘ಇನ್ ಭಗವದ್ಗೀತೆ..’ ಎಂದೇ ಶುರು ಮಾಡುವ ಅವಳು ಹಿಂದೂ ಗ್ರಂಥಗಳ ಬಗ್ಗೆಯೂ ಸಾಕಷ್ಟು ಓದಿಕೊಂಡವಳು. ಅವಳು ಫೋನ್ ಮಾಡಿದಳೆಂದರೆ ಕನಿಷ್ಠ ಹತ್ತು ಕಥೆಯನ್ನಾದರೂ ಹೇಳಿಯೇ ಫೋನ್ ಇಡುವುದು. ಅವಳ ಎಲ್ಲ ಕಥೆಗಳೂ ಅವಳ ಹಾಸ್ಪೈಸ್ ಅನುಭವದವು. ಅವು ಸಾವಿನ ದವಡೆಯಲ್ಲಿರುವವರದ್ದಾದರೂ ಅವು ಹೇಳುವುದು ನಾವು ಆಯುಷ್ಯವಿರುವವರು ಹೇಗೆ ಬದುಕಬೇಕೆಂದು. ಅವುಗಳಲ್ಲಿ ಕೆಲವು ಕಥೆಗಳು ‘ಬದುಕೆಂದರೆ ಏನೆಂದು’ ಪ್ರಶ್ನಿಸಿದರೆ ಇನ್ನು ಕೆಲವು ನಮ್ಮ ಬದುಕಿನ ಆದ್ಯತೆಗಳನ್ನು ಪ್ರಶ್ನಿಸುತ್ತವೆ. ಯೋಚಿಸಿದಷ್ಟು ಪ್ರಶ್ನೆಗಳು ಹುಟ್ಟುತ್ತವೆ.
ಹಾಸ್ಪೈಸ್ ಬಗ್ಗೆ ಹೇಳಲು ಇನ್ನಷ್ಟಿದ್ದರೂ ಪೀಠಿಕೆಗೆ ಇಷ್ಟು ಸಾಕು. ಈಗ ಸ್ಟೆಸಿ ಹೇಳುವ ಧಾಟಿ ಯಲ್ಲಿಯೇ ಅವಳು ಹೇಳಿದ ಮರಣ ಶಯ್ಯೆಯ ಕೆಲವು ಕಥೆಗಳನ್ನು, ಘಟನೆಗಳನ್ನು ನಿಮ್ಮ ಮುಂದಿಡುತ್ತೇನೆ. ಇವುಗಳಲ್ಲಿ ಕೆಲವು ಆಕೆ ಕಣ್ಣಾರೆ ಕಂಡದ್ದು, ಇನ್ನು ಕೆಲವು ಆಕೆಯ ಕರ್ತವ್ಯ ವಲಯದಲ್ಲಿ ನಡೆದವು, ಕೇಳಿ ತಿಳಿದವು. ಈ ಕಥೆ, ಘಟನೆಗಳ ವಿಶ್ಲೇಷಣೆ, ನೀತಿ ಅವೆಲ್ಲದರ ತಂಟೆಗೆ ನಾನು ಹೋಗುವುದಿಲ್ಲ.
ಒಂದೊಂದು ಪ್ಯಾರಾ-ಒಂದೊಂದು ಘಟನೆ. ಅವರೊಬ್ಬ ಇಂಡಿಯನ್ ಅಮೆರಿಕನ್ ಪೇಶಂಟ್. ಭಾರತೀಯ ಮೂಲದವರು. ಹೆಸರು ಮಿಸ್ಟರ್ ದಾಸ್. ಅವರದು ಭಾರತದಲ್ಲಿ ಕೃಷಿ ಕುಟುಂಬವಂತೆ. ಸಣಕಲು ದೇಹ. ಚಾರ್ಲಿ ಚಾಪ್ಲಿನ್ ಮೀಸೆ. ಅವರು ಹಾಸ್ಪೈಸ್ ಸೇರುವಾಗ ಬಾಕಿ ಇದ್ದದ್ದು ಎರಡು ತಿಂಗಳ ಸಮಯ. ದಾಸ್ ಅವರದ್ದು ನಿತ್ಯ ಒಂದು ಕೋರಿಕೆಯಿರುತ್ತಿತ್ತು. ಪ್ರತಿ ದಿನ ಬೆಳಗ್ಗೆ ಅವರನ್ನು ಆಸ್ಪತ್ರೆಯ ಚಿಕ್ಕ ಗಾರ್ಡನ್ಗೆ ಕರೆದುಕೊಂಡು ಹೋಗಬೇಕಿತ್ತು. ಅವರು ಅಲ್ಲಿ ಮಣ್ಣನ್ನು ಮುಟ್ಟುತ್ತಿದ್ದರು, ಕಳೆಯನ್ನು ಕೇಳುತ್ತಿದ್ದರು.
ಕೈಲಾಗದಿದ್ದರೂ ಕುಳಿತ ವೀಲ್ ಚೇರ್ನಿಂದಲೇ ಬಾಗಿ ಏನೋ ಒಂದು ಚಿಕ್ಕ ಗಾರ್ಡನ್ ಕೆಲಸ ಮಾಡುತ್ತಿದ್ದರು. ಅವರಿಗೆ ಒಮ್ಮೆ ಕೈ ಮಣ್ಣು ಮಾಡಿಕೊಂಡರೆ ಅದೇನೋ ಸಮಾಧಾನ. ಶಿಕಾಗೋ ಚಳಿ ಹೆಚ್ಚಿದ್ದರೆ ಅವರನ್ನು ಹೊರಗೆ ಕರೆದೊಯ್ಯಲು ಅನುಮತಿಯಿರುತ್ತಿರಲಿಲ್ಲ. ಆ ದಿನ ಅವರ ಚಟಪಡಿಕೆ ಹೇಳತೀರದು. ಸಾಯುತ್ತಿದ್ದೇನೆ ಎಂಬುದು ಅವರನ್ನು ಬಾಧಿಸಿದ್ದಕ್ಕಿಂತ ಒಂದು ದಿನ ಮಣ್ಣು ಮುಟ್ಟಲಾಗಲಿಲ್ಲವಲ್ಲ ಎಂಬ ಚಟಪಡಿಕೆಯೇ ಹೆಚ್ಚಿರುತ್ತಿತ್ತು.
ದಿನ ಕಳೆದಂತೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಅವರಿಗಿದ್ದದ್ದು ಕ್ಯಾನ್ಸರ್. ಆದರೆ ಅವರನ್ನು ಗಾರ್ಡನ್ಗೆ ಕರೆದುಕೊಂಡು ಹೋಗುವುದು ಮಾತ್ರ ತಪ್ಪಿಸುವಂತಿರಲಿಲ್ಲ. ಈಗ ದಾಸ್ ಬಳಿ ಹೆಚ್ಚೆಂದರೆ ಎರಡರಿಂದ ಮೂರು ವಾರದ ಆಯಸ್ಸು ಬಾಕಿ ಇತ್ತು. ಮಿಸ್ಟರ್ ದಾಸ್ ಅದೊಂದು ದಿನ ಬೆಳಗ್ಗೆ ಎzಕ್ಷಣ ತಾನು ಗಾರ್ಡನ್ನಲ್ಲಿ ‘ಮಾರಿಗೋಲ್ಡ್’ ಗಿಡವನ್ನು ನೆಡಬೇಕೆಂದು ಆಸೆ ಮುಂದಿಟ್ಟರು. ಅವರು ಹಾಸ್ಪೈಸ್ಗೆ ಬಂದ ಒಂದು ತಿಂಗಳ ಗಾರ್ಡನ್ನಲ್ಲಿ ತುಂಬಾ ಸುಮಾರು ಇಪ್ಪತ್ತು ಗಿಡ ನೆಟ್ಟಿದ್ದರು. ಕೊನೆಯ ಆಸೆ ಇಂದು ಮಾರಿಗೋಲ್ಡ್ ವ್ಯವಸ್ಥೆಯನ್ನೂ ಮಾಡಲಾ ಯಿತು.
ದಾಸ್ ಗಾಲಿ ಚಕ್ರದಲ್ಲಿಯೇ ಕೂತು ಉಳಿದವರ ಸಹಾಯದಿಂದ ಬೀಜ ಬಿತ್ತಿದರು. ತನ್ನ ಕುಡಿಯುವ ನೀರಿನ ಬಾಟಲಿಯಿಂದಲೇ ಸ್ವಲ್ಪ ನೀರನ್ನು ಮಣ್ಣ ಮೇಲೆ ಸಿಂಪಡಿಸಿದರು. ನಂತರ ನಾವಿಬ್ಬರೂ ಒಳಗಡೆ ಬಂದೆವು. ನನಗೆ ದಾಸ್ ಅವರಲ್ಲಿ ಸಲುಗೆಯಿತ್ತು. ಅವರೂ ತಮಾಷೆ ಮಾಡಿಕೊಂಡಿರು ವವರೇ ಆಗಿದ್ದರು. ಆ ದಿನ ಅವರಲ್ಲಿ ಮಿಸ್ಟರ್ ದಾಸ್, ನೀವು ಇನ್ನು ಹೆಚ್ಚೆಂದರೆ ಎರಡು ಅಥವಾ ಮೂರು ವಾರ ಬದುಕಬಹುದು. ಅದು ನಿಮಗೂ ಗೊತ್ತು, ಎಲ್ಲರಿಗೂ ಗೊತ್ತು. ಆದರೂ ಮಾರಿ ಗೋಲ್ಡ್ ಬೀಜ ನೆಟ್ಟದ್ದೇಕೆ? ಅದು ಹುಟ್ಟಿ ಹೂವಾಗಲು ಕನಿಷ್ಠ ಎರಡು ತಿಂಗಳಾದರೂ ಬೇಕು. ಸುಮ್ಮನೆ ಬೇರಿನ್ನೇನೋ ಸಸಿ ನೆಡಬಹುದಿತ್ತಲ್ಲ!.
ದಾಸ್ ಬಹಳ ಸಮಾಧಾನಿ, ಪಿಸು ಮಾತಿನಲ್ಲಿ We always plant in faith. Never just for today. ನಾವು ಯಾವತ್ತೂ ನಂಬಿಕೆಯಿಟ್ಟು ಸಸಿ ನೆಡುತ್ತೇವೆ. ಇವತ್ತಿಗಾಗಿ ಯಾರೂ ಸಸಿ ನೆಡುವುದಿಲ್ಲ. ಇದಾದ ಎರಡು ವಾರದಲ್ಲಿ ದಾಸ್ ತೀರಿಕೊಂಡರು. ಕೊನೆಗೊಂದು ದಿನ ಅವರು ನೆಟ್ಟ ಮಾರಿಗೋಲ್ಡ್ ಬೆಳೆದು ಹೂ ಬಿಟ್ಟಿತು. ನಂತರ ನಾವೆಲ್ಲ ಸೇರಿ Planted for tomorrow. & Mr Das ಎಂದು ಒಂದು ಒಂದು ಚಿಕ್ಕ ಫಲಕ ಹಾಕಿದೆವು. ಮಿಸ್ಟರ್ ಎಲಿಸನ್ಗೆ 84 ವರ್ಷ. ಎಲಿಸನ್ ವಿಶ್ರಾಂತಿ ಪಡೆಯುವಾಗಲ್ಲ ಕೈಯಲ್ಲಿ ಏನೋ ಒಂದನ್ನು ತಿರುಗಿಸುತ್ತಿದ್ದ.
ಆತನ ಹಾವಭಾವ ವಿಚಿತ್ರವಿತ್ತು. ಮೊದಲು ನಮಗಿದು ತಿಳಿಯಲಿಲ್ಲ. ಅವನ ಮಗ ಬಂದು ಹೇಳಿದ ಮೇಲೆಯೇ ಆತ ಕೈಯ ಅಗೋಚರ ವಾಚ್ ರಿಪೇರಿ ಮಾಡುತ್ತಿದ್ದೇನೆಂದು ತಿಳಿದದ್ದು. ಆತ ನಿವೃತ್ತ ವಾಚ್ ಮೇಕರ್. ಕೈಗಡಿಯಾರ ತಯಾರಿಸುತ್ತಿದ್ದವ. ಅವನ ಮಗ ನಿತ್ಯ ಬೆಳಗ್ಗೆ ಎಲಿಸನ್ ಅವರನ್ನು ನೋಡಲು ಬರುತ್ತಿದ್ದ. ಅದೊಂದು ದಿನ ಎಲಿಸನ್ ಮಗ ಅರ್ಧಗಂಟೆ ತಡವಾಗಿ ಬಂದ. ಒಳ ಬಂದ ಮಗನನ್ನು ಕಂಡು ಎಲಿಸನ್ ಕೋಪಿತನಾಗಿದ್ದ.
‘ಸಮಯ ಎನ್ನುವುದು ಎಷ್ಟು ಮುಖ್ಯ ಗೊತ್ತಾ ನಿನಗೆ? ಎಲ್ಲಿ ನಿನ್ನ ವಾಚ್ ಕೊಡು’ ಎಂದು ತೆಗೆದುಕೊಂಡ. ಕೈಗಡಿಯಾರದ ಸಮಯವನ್ನು ಐದು ನಿಮಿಷ ಮುಂದೆ ಮಾಡಿದ. ಮತ್ತು ಮಗನಿಗೆ ವಾಚ್ ಮರಳಿಸುತ್ತ ‘ನೀನು ಇನ್ನುಮೇಲೆ ಎಲ್ಲಿಗೂ ತಡವಾಗಿ ಹೋಗುವುದಿಲ್ಲ’ ಎಂದ.
ಎಲಿಸನ್ ಅದೇ ದಿನ ಸಂಜೆ ಕೊನೆಯುಸಿರೆಳೆದ. ಅವನು ತೀರಿಕೊಂಡ ಐದು ನಿಮಿಷದ ನಂತರ ಅವನ ವಾಚ್ ಕೂಡ ನಿಂತಿತ್ತು. ಅದನ್ನು ಕಂಡ ನಂತರ ಟೈಮ್ ಆಫ್ ಡೆತ್-ಮರಣದ ಸಮಯ ಬರೆಯುವಾಗ ನಮಗೂ ದಿಗಿಲಾಯಿತು. ಜೂನಿಯರ್ ನರ್ಸ್ಗಳು ಎರಡು ದಿನ ಎಲಿಸನ್ ಕೊನೆಯುಸಿರೆಳೆದ ರೂಮಿಗೆ ಹೋಗಲಿಲ್ಲ. ಏಕೆಂದರೆ ಅವನು ತೀರಿಕೊಂಡ ಕೆಲವು ಗಂಟೆಗಳಲ್ಲಿ ಆ ರೂಮಿನಲ್ಲಿಟ್ಟಿದ್ದ ಗಡಿಯಾರವೂ ನಿಂತಿತ್ತು.
ಅವಳ ಹೆಸರು ಮೊರ್ಜರಿ. ವಯಸ್ಸು 79. ಒಂದು ಕಾಲದ, ಶಿಕಾಗೋದ ಜನಪ್ರಿಯ ಜಾಸ್ (ಒಂದು ಪಾಶ್ಚಾತ್ಯ ಸಂಗೀತ ಪ್ರಕಾರ) ಹಾಡುಗಾರ್ತಿ. ನಾನು ಆ ದಿನ ಮೊರ್ಜರಿಗೆ ಸ್ನಾನ ಮಾಡಿಸುತ್ತಿದ್ದೆ. ಮೊರ್ಜರಿ ನನ್ನನ್ನೇ ದಿಟ್ಟಿಸುತ್ತ ‘ನಿನಗೆ ಗೊತ್ತಾ, ನನ್ನನ್ನು ಜನರು ‘women in red' ಎಂದೇ ಕರೆಯುತ್ತಿದ್ದರು. ನಾನು ಜಾಸ್ ಹಾಡಲು ವೇದಿಕೆಗೇರುವಾಗ ಬಟ್ಟೆ, ಲಿಪ್ಸ್ಟಿಕ್ ಎಲ್ಲವೂ ಕೆಂಪು ಇರುತ್ತಿತ್ತು. ಅವಳ ಸಣಕಲು ಕೃಶ ದೇಹವನ್ನು ಸ್ಪಾಂಜ್ನಲ್ಲಿ ಸ್ವಚ್ಛ ಮಾಡುತ್ತ ನಾನು ‘ಹೌದಾ’ ಎಂದು ಸುಮ್ಮನಾದೆ. ಆ ದಿನ ಅವಳು ಇನ್ನೇನೂ ಮಾತನಾಡಲಿಲ್ಲ, ಔಷಧಿ ಕೊಟ್ಟರೆ ಸ್ವೀಕರಿಸ ಲಿಲ್ಲ.
ವಿಷಯ ಏನೆಂದು ಕೇಳಲಾಗಿ ‘ನನಗೊಂದು ಕೆಂಪು ಲಿಪ್ಸ್ಟಿಕ್ ಬೇಕು. ಕೊಟ್ಟರೆ ನೀವು ಹೇಳಿದ್ದು ಕೇಳುತ್ತೇನೆ’ ಎಂದಳು. ಅಯ್ಯೋ ದೇವರೇ ಎಂದು ನಾವೆಲ್ಲ ನಕ್ಕೆವು. ಮತ್ತು ಅವಳಿಗೊಂದು ಕೆಂಪು ಲಿಪ್ಸ್ಟಿಕ್ ತಂದುಕೊಟ್ಟೆವು. ಅದನ್ನು ಕಂಡದ್ದೇ ಎಲ್ಲಿಲ್ಲದ ಉತ್ಸಾಹದಲ್ಲಿ ಕನ್ನಡಿ ತರಿಸಿ ಲಿಪ್ಸ್ಟಿಕ್ ಹಚ್ಚಿಕೊಂಡಳು. ನನ್ನತ್ತ ನೋಡುತ್ತ ‘Now I'm ready for the curtain call.‘ಪರದೆ ಸರಿಸಬಹುದು, ನಾನು ತಯಾರಾಗಿದ್ದೇನೆ’ ಎಂದಳು. ಅದೇ ದಿನ ಮಧ್ಯ ರಾತ್ರಿ ಆಕೆ ಅಸ್ತಂಗತವಾದಳು. ಲಿಪ್ಸ್ಟಿಕ್ ಇನ್ನೂ ಹಾಗೆಯೇ ಇತ್ತು. Women in red!
ಡೇವಿಡ್ನ ಸ್ಥಿತಿ ಕೈಮೀರಿತ್ತು. ಅವನಿಗಿದ್ದದ್ದು ಇನ್ನು ಕೇವಲ ಎರಡು ಮೂರು ದಿನ. ಅದು ಡೇವಿಡ್ಗೂ ತಿಳಿದಿತ್ತು. ಡೇವಿಡ್ ನನ್ನನ್ನು ಕರೆದ ಮತ್ತು ಅವನ ತಮ್ಮ ಕ್ರಿಸ್ಗೆ ಫೋನ್ ಮಾಡಿ ಕೊಡಲು ಹೇಳಿದ. ಡೇವಿಡ್ ತಮ್ಮನ ಹತ್ತಿರ ಹದಿನೇಳು ವರ್ಷದಿಂದ ಮಾತಾಡಿರಲಿಲ್ಲವಂತೆ. ಅದೇನೋ ಜಗಳವಾಗಿತ್ತು. ಫೋನ್ ಲೌಡ್ ಸ್ಪೀಕರ್ನಲ್ಲಿತ್ತು. ಅತ್ತಕಡೆಯಿಂದ ತಮ್ಮ ಫೋನ್ ಎತ್ತಿದವನೇ ಐ ಆಮ್ ಸಾರಿ ಎಂದು ಗದ್ಗದಿತನಾದ. ಡೇವಿಡ್ ಬಾಯಿಂದ ಮಾತೇ ಹೊರಡಲಿಲ್ಲ.
ಇಬ್ಬರೂ ಬಿಕ್ಕಳಿಸಿ ಅತ್ತರು. ‘ತಮ್ಮ ನಾಳೆಯೇ ನಿನ್ನನ್ನು ಬಂದು ನೋಡುತ್ತೇನೆ’ ಎಂದ. ಡೇವಿಡ್ ಅದೇ ದಿನ ರಾತ್ರಿ ಕೊನೆಯುಸಿರೆಳೆದ. ಪೋನ್ ಅವನ ಕೈಯ ಇತ್ತು. ಮಿಸ್ ರೊಮೆರೊ ಹಾಸ್ಪೈಸ್ ಬೆಡ್ಡಿನ ಪಕ್ಕದಲ್ಲಿ ಒಂದು ಖಾಲಿ ಕುರ್ಚಿ ಇಟ್ಟುಕೊಂಡಿದ್ದಳು. ಯಾರೇ ಬಂದರೂ ಆ ಕುರ್ಚಿಯ ಮೇಲೆ ಕೂರುವಂತಿಲ್ಲ. ಅದು ಅವಳ ಗಂಡನ ಕುರ್ಚಿ. ಆದರೆ ಅವನು ಸತ್ತು ಹದಿನೈದು ವರ್ಷ ವಾಗಿತ್ತು.
ಅವಳೇನು ಅರಳು-ಮರಳು ಹಿಡಿದವಳಲ್ಲ. ಅವಳೇ ಒಂದು ದಿನ, ‘ಸ್ಟೇಸಿ, ನನ್ನ ಗಂಡ ಸತ್ತು ಹೋದದ್ದು ನನಗೆ ಗೊತ್ತು. ನಾನು ಯಾವುದೇ ಭ್ರಮೆಯಲ್ಲಿಲ್ಲ. ಹುಚ್ಚೂ ಹಿಡಿದಿಲ್ಲ. ನಾವಿಬ್ಬರೂ ಪರಸ್ಪರ ಅತ್ಯಂತ ಪ್ರೀತಿಯಿಂದ ಬದುಕಿದೆವು. ಆತನ ಸಾಂಗತ್ಯ-ಅದೊಂದು ನೆನಪಾಗಿ ಇಂದಿಗೂ ಹಾಗೆಯೇ ಇದೆ. ಆತನ ಜತೆಯಲ್ಲಿದ್ದ ದಿನಗಳನ್ನು ನೆನೆಸಿಕೊಂಡಾಗಲೆಲ್ಲ ನಾವೆಷ್ಟು ಖುಷಿಯಿಂದ ಬದುಕಿದೆವು ಎಂದು ಕುರುಬುತ್ತೇನೆ. ಏನು ಗೊತ್ತಾ, ನಾವು ಆಗ ಆ ಬದುಕನ್ನು ಬದುಕುತ್ತಿದ್ದಾಗ ಅದರ ಮಹತ್ವವೇ ತಿಳಿಯಲಿಲ್ಲ. ಆ ಸಮಯ ಅಷ್ಟು ಸುಂದರವಾಗಿತ್ತು ಎಂದು ಅನಿಸಿರಲೇ ಇಲ್ಲ.
ಈಗ ಕುರ್ಚಿಯಲ್ಲಿ ಅವನಿಲ್ಲ. ಆದರೆ ಅವನ ನೆನಪಿದೆ. ಈಗ ನಾನು ಅದೆಲ್ಲವನ್ನೂ ನೆನಪು ಮಾಡಿ ಕೊಳ್ಳುತ್ತೇವೆ. ಕುಟುಂಬ ಎಂದರೆ ಎಲ್ಲರೂ ಜತೆಯಲ್ಲಿಯೇ ಇರಬೇಕೆಂದಿಲ್ಲ. ದೈಹಿಕವಾಗಿ ದೂರ ವಿದ್ದರೂ, ದೂರವಾಗಿ ಹೋದರೂ ಕುಟುಂಬದ ಅನುಭವವಾಗುತ್ತಿರಬೇಕು!’. ಆ ದಿನ ಅವಳಿಗೆ ಏನನಿಸಿತೋ ಏನೋ, ಕುರ್ಚಿಯನ್ನು ನೋಡಿ ‘ಸರಿ ಹಾಗಾದರೆ, ಇವತ್ತು ಹೊರಡೋಣ’ ಎಂದಳು. ಅವಳು ಮತ್ತೆ ಮಾತಾಡಲೇ ಇಲ್ಲ.
ಹಾಸ್ಪೈಸ್ನಲ್ಲಿರುವ ರೋಗಿಗಳನ್ನು ನೋಡಲು ಬರುವವರಿಗೆ ಏನು ಮಾತಾಡಬೇಕು ಎಂಬ ಪರಿeನವಿರುವುದಿಲ್ಲ. ಖುದ್ದು ಕುಟುಂಬದವರಿಗೂ ರೋಗಿಯ ಜತೆ ಏನು ಮಾತನಾಡಬೇಕು ಎಂದು ತಿಳಿಯುವುದಿಲ್ಲ. ಮಾತನಾಡಿದರೂ ಹೆಚ್ಚಿನ ರೋಗಿಗಳಿಗೆ ಉತ್ತರಿಸುವ ಸ್ಥಿತಿಯಲ್ಲಿರುವುದಿಲ್ಲ. ಮಾತನ್ನು ಕೇಳಿಸಿಕೊಂಡು ಕೈ-ಬಾಯ್ ಸನ್ನೆಯ ಉತ್ತರಿಸುತ್ತಾರೆ. ಬಹುತೇಕರಿಗೆ ಮಾತು ಬೇಡ ವಾಗಿರುತ್ತದೆ.
ಹಾಸ್ಪೈಸ್ಗೆ ದಾಖಲಾದ ಮಾರ್ಕ್ ಜೆನ್ಗೆ ಹಾಸ್ಪೈಸ್ ವ್ಯವಸ್ಥೆಯ ಬಗ್ಗೆ ಸ್ಪಷ್ಟವಾಗಿ ಎಲ್ಲವೂ ತಿಳಿದಿತ್ತು. ಏಕೆಂದರೆ ಆತ ಖುದ್ದು ವೈದ್ಯನಾಗಿದ್ದವ. ಆತ ಹಾಸ್ಪೈಸ್ ಸೇರಿದ ಮೊದಲನೇ ದಿನವೇ ಒಂದು ವಿಚಿತ್ರ ವಿನಂತಿ ಮಾಡಿಕೊಂಡ. ‘ನನ್ನನು ಯಾರೇ ನೋಡಲು ಬರಬಹುದು, ಆದರೆ ಅವರು ನನ್ನ ಬಳಿ ಮಾತನಾಡುವಂತಿಲ್ಲ. ನನ್ನೆದುರು ಬಂದು ಅಳುವಂತಿಲ್ಲ. ನನ್ನ ಕೈ ಹಿಡಿದು ಎಷ್ಟು ಹೊತ್ತು ಬೇಕಾದರೂ ಇರಬಹುದು.’ ಇದು ಅವನ ಷರತ್ತು.
ನಾವು ಮೊದಮೊದಲು ಅವನು ತಮಾಷೆ ಮಾಡುತ್ತಿದ್ದಾನೆ ಎಂದುಕೊಂಡೆವು. ಆದರೆ ಬಂದ ಒಂದಿಬ್ಬರು ಸಂಬಂಧಿಕರು ಅವನ ಬಳಿ ಮಾತನಾಡಿದ್ದಕ್ಕೆ ಆತ ನಖಶಿಕಾಂತ ಕೋಪಗೊಂಡು ನಮ್ಮೆಲ್ಲರ ಮೇಲೆ ಕೂಗಾಡಿದ್ದ. ಸುಮಾರು ಎರಡೂವರೆ ತಿಂಗಳು ನೋಡಲು ಬಂದ ಯಾರ ಬಳಿಯೂ ಆತ ಮಾತನಾಡಲೂ ಇಲ್ಲ, ಅವರಿಗೆ ಮಾತಾಡಲು ಅನುಮತಿಯನ್ನೂ ಕೊಡಲಿಲ್ಲ.
ಬಂದವರೆಲ್ಲರೂ ಅವನ ಕೈ ಹಿಡಿದು ಮೌನವಾಗಿದ್ದೇ ಹೋಗುತ್ತಿದ್ದರು. ಆದರೆ ನಾವು ದಾದಿಯರು ಅವನು ಜತೆ ಮಾತನಾಡುತ್ತಿದ್ದದ್ದು ಎಷ್ಟು ಬೇಕೋ ಅಷ್ಟೇ. ಆ ದಿನ ಅವನು ಕುಟುಂಬದವರನ್ನೆಲ್ಲ ಆಸ್ಪತ್ರೆಗೆ ಕರೆಸಿಕೊಂಡ. ಎಲ್ಲರೂ ಅವನ ಬೆಡ್ ಸುತ್ತಲೂ ಕೂತರು. ಯಾರದೂ ಮಾತಿಲ್ಲ. ಅವನು ಸುಮಾರು ಮೂರು ತಿಂಗಳ ನಂತರ ಕುಟುಂಬದವರೆದುರು ಮೊದಲ ಬಾರಿ ಬಾಯಿ ತೆಗೆದ, ಮಾತನಾಡಿದ.
ಅವನು ಆ ಕೊನೆಯ ದಿನ ಹೇಳಿದ್ದು ಇಷ್ಟು ನಾವು ಆಡುವ ಯಾವ ಮಾತಿಗೂ ಯಾವುದೇ ಅರ್ಥವಿಲ್ಲ. ಮಾತುಗಳೆಂದರೆ ಯೋಚನೆಗಳು. ಯಾವುದೇ ಯೋಚನೆಗೂ ಅರ್ಥವಿರುವುದಿಲ್ಲ. ಬದುಕೆಂದರೆ ಕುಟುಂಬದ, ಇಷ್ಟೇತರರ ಸಾಮೀಪ್ಯ. ನೀವು ಹೇಳಬೇಕಾದದ್ದು ಮಾತಿನಲ್ಲಿಯೇ ಹೇಳಬೇಕೆಂದಿಲ್ಲ. ನೀವು ಇಲ್ಲಿದ್ದೀರಿ ಎಂಬುದರ ಮುಂದೆ ನಿಮ್ಮ ಯಾವುದೇ ಮಾತು ಅರ್ಥಹೀನ. ಮೌನಕ್ಕಿರುವ ಅರ್ಥ ಮಾತಿಗಿಲ್ಲ. ಈ ಲೇಖನವನ್ನು ಪದಮಿತಿಯಿಂದಾಗಿ ಇಷ್ಟಕ್ಕೇ ನಿಲ್ಲಿಸು ತ್ತಿದ್ದೇನೆ. ಇನ್ನೊಮ್ಮೆ ಯಾವತ್ತಾದರೂ ಸ್ಟೇಸಿ ಹೇಳಿದ ಇನ್ನೊಂದಿಷ್ಟು ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.