Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿ ಮಾಂಡವ್ಯ ಋಷಿ
ಜ್ಞಾನಿಯಾದ ಅಣಿಮಾಂಡವ್ಯ ಕೊಟ್ಟ ಶಾಪದಿಂದ ಯಮನೇ ಮುಂದೆ ಧರ್ಮರಾಯನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ, ಕೋಪಗೊಳ್ಳದೇ ಧಾರ್ಮಿಕನಾಗಿಯೇ ಉಳಿಯುತ್ತಾನೆ. ಅಣಿಮಾಂಡವ್ಯ ರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಯಮರಾಜ ತಪ್ಪು ಮಾಡಿದ್ದರು ಕೂಡ ನಂತರ ಅದನ್ನು ತಿದ್ದುಕೊಂಡು ವಿಷ್ಣುವಿನ ಬಳಿ ಅವರ ಪರವಾಗಿ ಮಾತನಾಡಿದ್ದರ ಪರಿಣಾಮ ವಾಗಿ ಧಾರ್ಮಿಕ ನಾಗಿಯೇ ಉಳಿದು ಧರ್ಮರಾಯನಾಗಿ ಜನಿಸುವ ಅವಕಾಶ ಸಿಗುತ್ತದೆ.


ಒಂದೊಳ್ಳೆ ಮಾತು
rgururaj628@gmail.com
ಸಕಲಜೀವಿಗಳಿಗೆ ಹುಟ್ಟೆಂದ ಮೇಲೆ ಸಾವು ಇದ್ದೇ ಇರುತ್ತದೆ. ನಾವು ಮಾಡಿದ ಪಾಪ ಕರ್ಮಗಳ ಫಲಾನುಸಾರವಾಗಿ ನಮಗೆ ಶಿಕ್ಷೆಗಳು ನಿರ್ಣಯವಾಗಿರುತ್ತವೆ. ಸತ್ತ ನಂತರ ನಮ್ಮ ಪಾಪಗಳಿಗ ನುಗುಣವಾಗಿ ಸ್ವರ್ಗ ನರಕಗಳು ಪ್ರಾಪ್ತಿಯಾಗುತ್ತವೆಯಂತೆ. ಅಷ್ಟಕ್ಕೂ ಸ್ವರ್ಗ ಎಂದರೇನೆಂದು ಕೇಳಿದರೆ ನಮ್ಮ ಹಿರಿಯರು ಹೇಳುವ ಪ್ರಕಾರ ಒಳ್ಳೆಯದನ್ನು ಮಾಡುವ, ಒಳ್ಳೆಯದನ್ನೇ ಬಯಸುವ, ಒಳ್ಳೆಯವನಾಗೇ ಇರುವ ಸದ್ಗುಣ ಸಂಪನ್ನನಿಗೆ ಸಕಲ ಸುಖಗಳು ದೊರೆಯುತ್ತವೆ. ಜೊತೆಗೆ ಮನಸ್ಸಿಗೆ ಸದಾ ನೆಮ್ಮದಿ ಇದ್ದು ಸುಖವೇ ಸುತ್ತಲೂ ಇರುತ್ತದೆ. ಇಂಥಹ ಸ್ಥಳಕ್ಕೆ ಸ್ವರ್ಗ ಎಂದು ಹೆಸರು. ನರಕ ಎಂದರೇ ವಿಚಿತ್ರ ಕಲ್ಪನೆಗಳಿವೆ.
ಸಣ್ಣ ಪುಟ್ಟ ತಪ್ಪುಗಳಿಗೂ ಉಗ್ರ ಶಿಕ್ಷೆ ಕೊಡುವ ಊಹಿಸಿಕೊಳ್ಳಲು ಭಯವಾಗುವ ಒಂದು ಕ್ರೂರ ಸ್ಥಳ. ಅಲ್ಲಿ ಕಾದ ಎಣ್ಣೆಯ ಬಾಂಡಲಿ, ಶೂಲಗಳು, ಕಣ್ಣು ಕೀಳುವ, ಕಿವಿಗೆ ಕಾದ ಎಣ್ಣೆ ಸುರಿಯುವ, ದೇಹದ ಚರ್ಮವನ್ನು ಸುಲಿಯುವ ಯಮಭಟರು ಹೀಗೆ ಹೇಳುತ್ತಾ ಹೋದರೇ ಸಾಲದು. ಇಂಥ ಸ್ವರ್ಗ ನರಕಗಳನ್ನು ನೋಡಿಕೊಳ್ಳಲು ಒಬ್ಬೊಬ್ಬ ಅಧಿಪತಿಗಳಿದ್ದಾರೆ. ಅದರಂತೆ ಇಂದ್ರ ಸ್ವರ್ಗಕ್ಕೆ ಅಧಿಪತಿಯಾದರೇ ಯಮನು ನರಕದ ಅಧಿಪತಿ. ಬ್ರಹ್ಮನಿಂದ ನೇಮಿಸಲ್ಪಟ್ಟವರು. ಎಲ್ಲರ ತಪ್ಪುಗಳಿಗೆ ಶಿಕ್ಷೆ ಕೊಡುವ ಯಮನಿಗೆ ಶಾಪಕೊಟ್ಟು ಅವನನ್ನು ಮಾನವನನ್ನಾಗಿ ಹುಟ್ಟುವಂತೆ ಮಾಡಿ ಅನೇಕ ಕಷ್ಟಗಳನ್ನು ಅನುಭವಿಸುವಂತೆ ಮಾಡಿದ ಮುನಿಯೇ ಅಣಿಮಾಂಡವ್ಯ.
ಇದನ್ನೂ ಓದಿ: Roopa Gururaj Column: ಶಂಕರರ ನಾಲಿಗೆಯಿಂದ ಬಂದ ಶಾರದಾಂಬೆಯ ಆದೇಶ
ಅಣಿಮಾಂಡವ್ಯ ಮಾಡದ ತಪ್ಪಿಗೆ ರಾಜನಿಂದ ಬಂಧಿಸಲ್ಪಟ್ಟು ಅವನಿಂದ ಶೂಲಕ್ಕೇರಿಸಿದ್ದಾಗ ಯಮಭಟರು ಬಂದು ಅವರನ್ನು ಕರೆದೊಯ್ದಿದ್ದರು. ಆದರೆ ವಿಧಿನಿಯಮದಂತೆ ಅವರಿಗೆ ಇನ್ನೂ ಒಂದು ದಿವಸ ಆಯುಷ್ಯವಿತ್ತು. ಆದರೇ ಒಂದು ದಿನ ಮೊದಲೇ ಅವರನ್ನ ಯಮಲೋಕಕ್ಕೆ ಕರೆದು ಬಂದಿದ್ದರಿಂದ ದೇವರ ಸ್ಮರಣೆ ಮಾಡಲು ಸಾಧ್ಯವಾಗದ ಕಾರಣ, ಜೊತೆಗೆ ಅವರು ಚಿಕ್ಕವಯಸ್ಸಿ ನಲ್ಲಿ ಕೀಟಗಳನ್ನು ಕೊಂದಿದ್ದ ಕಾರಣಕ್ಕಾಗಿ ಅಣಿಮಾಂಡವ್ಯನಿಗೆ ಭೂಮಿಯಲ್ಲಿಯೇ ಶೂಲದ ಶಿಕ್ಷೆಯನ್ನು ಯಮನೇ ರಾಜಭಟರ ಮೂಲಕ ಕೊಟ್ಟಿದ್ದನು ತಿಳಿದ ಜ್ಞಾನಿಗಳಾದ ಅಣಿಮಾಂಡವ್ಯ ನೀನು ಮಾನವನಾಗಿ ಜನಿಸಿ ಕಷ್ಟಗಳನ್ನು ಅನುಭವಿಸು ಎಂದು ಶಾಪಕೊಡುತ್ತಾರೆ.
ಇದರಿಂದ ಕಂಗಾಲಾದ ಯಮ ವಿಷ್ಣುವಿನ ಬಳಿ ಅಣಿಮಾಂಡವ್ಯನನ್ನು ಕರೆದುಕೊಂಡು ಹೋದಾಗ ಅಣಿಮಾಂಡವ್ಯರು ಚಿಕ್ಕ ವಯಸ್ಸಿನಲ್ಲಿ ಬುದ್ಧಿಯಿಲ್ಲದ ಕಾರಣ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ಅರ್ಹರಾಗಿರುವುದಿಲ್ಲ. ಹಾಗಾಗಿ ಚಿಕ್ಕವಯಸ್ಸಿನ ತಪ್ಪುಗಳಿಗೆ ನರಕದಲ್ಲಿ ಶಿಕ್ಷೆ ವಿಧಿಸಬಾರದೆಂದು ಹರಿಯನ್ನು ಬೇಡಿಕೊಂಡಾಗ ಹರಿಯು ನಸುನಕ್ಕು ತಥಾಸ್ತು ಎಂದಾಗ ಕಣ್ಣಂಚಲಿ ನೀರು ಸುರಿಸುತ್ತಾ ಅಣಿಮಾಂಡವ್ಯ ದೇವರ ಪಾದಕ್ಕೆರಗಿ ಯಮನಿಗೆ ಶಾಪ ನೀಡಿದ್ದಕ್ಕೆ ಮನ್ನಿಸಬೇಕೆಂದು ಕೇಳಿಕೊಳ್ಳುತ್ತಾನೆ.
ಆದರೆ ಜ್ಞಾನಿಯಾದ ಅಣಿಮಾಂಡವ್ಯ ಕೊಟ್ಟ ಶಾಪದಿಂದ ಯಮನೇ ಮುಂದೆ ಧರ್ಮರಾಯನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ, ಕೋಪಗೊಳ್ಳದೇ ಧಾರ್ಮಿಕನಾಗಿಯೇ ಉಳಿಯುತ್ತಾನೆ. ಅಣಿಮಾಂಡವ್ಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಯಮರಾಜ ತಪ್ಪು ಮಾಡಿದ್ದರು ಕೂಡ ನಂತರ ಅದನ್ನು ತಿದ್ದುಕೊಂಡು ವಿಷ್ಣುವಿನ ಬಳಿ ಅವರ ಪರವಾಗಿ ಮಾತನಾಡಿದ್ದರ ಪರಿಣಾಮ ವಾಗಿ ಧಾರ್ಮಿಕನಾಗಿಯೇ ಉಳಿದು ಧರ್ಮರಾಯನಾಗಿ ಜನಿಸುವ ಅವಕಾಶ ಸಿಗುತ್ತದೆ. ತಪ್ಪು ಮಾಡುವುದು ದೊಡ್ಡದಲ್ಲ ಆದರೆ ಅದನ್ನು ತಿದ್ದಿ ನಡೆದಾಗ ಎಂತಹವರಿಗೂ ಕೂಡ ಭಗವಂತ ಮತ್ತೊಂದು ಅವಕಾಶವನ್ನು ಕೊಡುತ್ತಾನೆ ಎನ್ನುವುದಕ್ಕೆ ಮೇಲಿನ ಕಥೆಯೇ ಉದಾಹರಣೆ.
ಕೆಲವೊಮ್ಮೆ ನಮ್ಮಿಂದಾದ ತಪ್ಪುಗಳಿಗೆ ನಾವು ಎಷ್ಟು ವಿಚಲಿತರಾಗುತ್ತೇವೆ ಎಂದರೆ ಅದನ್ನು ಒಪ್ಪಿಕೊಂಡರೆ ಮತ್ತಷ್ಟು ಜನರ ಮುಂದೆ ಕುಗ್ಗಿ ಹೋಗುತ್ತೇವೆ ಎಂದು ಎಣಿಸುತ್ತಾ ವಿತಂಡವಾದ ಮಾಡುತ್ತಲೇ ಸಾಗುತ್ತೇವೆ. ಆದರೆ ನೆನಪಿರಲಿ ನಮ್ಮ ತಪ್ಪನ್ನು ನಾವು ಸಮರ್ಥಿಸಿಕೊಂಡಷ್ಟು ನಾವು ಮತ್ತೂ ನೋಡುವವರ ಚಿಕ್ಕವರಾಗುತ್ತಾ ಹೋಗುತ್ತೇವೆ. ತಪ್ಪು ಮಾಡಿದ್ದಾಗ ಕ್ಷಮೆಯಾಚಿಸುವು ದರಲ್ಲಿ ಯಾವ ಅವಮಾನವೂ ಇಲ್ಲ. ಬದಲಾಗಿ ಇದರಿಂದ ನಮಗೆ ಒಳ್ಳೆಯದಾಗುವ ಅವಕಾಶಗಳೇ ಹೆಚ್ಚು. ಪಶ್ಚಾತಾಪ ಪಡುವುದು ಕ್ಷಮೆ ಯಾಚಿಸುವುದು ವಿವೇಕಿಗಳ ಲಕ್ಷಣ. ಇನ್ನಾದರೂ ಬದಲಾ ಗೋಣ.