Ravi Hunj Column: ಉತ್ಪ್ರೇಕ್ಷೆಗಳಾಚೆಯಲ್ಲಿ ಶರಣ ಚಳುವಳಿಯ ಮಹಿಳಾ ಸಮಾನತೆ !
ಆದ್ಯ ವಚನಕಾರ ದೇವರ ದಾಸಿಮಯ್ಯನ ವಚನವನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಪರಿಷ್ಕರಿಸುತ್ತ ತಮ್ಮದೇ ಹೊಳಹನ್ನು ಈ ವಚನಕಾರ್ತಿಯರು ಕಟ್ಟಿಕೊಟ್ಟರು. ಅಂಥ ವಚನಗಳನ್ನು ಇಲ್ಲಿ ಗಮನಿಸೋಣ: “ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.


ಬಸವ ಮಂಟಪ
ರವಿ ಹಂಜ್
ಮಹಿಳಾ ಶೋಷಣೆ ಸನಾತನವಾಗಿ ಭಾರತದಲ್ಲಿತ್ತು ಎನ್ನುವುದು ಹೇಗೆ ಸತ್ಯವಲ್ಲ ಎನ್ನುವುದನ್ನು ಹಿಂದೆ ಪಣ್ಯಸಿ ಲೇಖನದಲ್ಲಿ ವಿಸ್ತೃತವಾಗಿ ಮನಗಂಡಿರುವಿರಿ. ಇಸ್ಲಾಮಿನ ಪರ್ದಾ ವ್ಯವಸ್ಥೆಯು ಭಾರತಕ್ಕೆ ನವನವೀನ ಕಟ್ಟುಪಾಡಿನ ವ್ಯವಸ್ಥೆಯಾಗಿತ್ತು. ನಗರವಧು ಸಂಸ್ಕೃತಿಯ ಉನ್ನತ ಮಹಿಳಾ ಸ್ವಾತಂತ್ರ್ಯವನ್ನು ಪಾಲಿಸುತ್ತಿದ್ದ ಸಂಸ್ಕೃತಿಗೆ ಪರ್ದಾ ವ್ಯವಸ್ಥೆಯು ಗೌರವದ ಚೌಕಟ್ಟಿನ ಧಕ್ಕೆ ತಂದಿತ್ತು. ಇಂಥ ಸ್ಥಿತ್ಯಂತರಗಳಾದಾಗ ತಾನೇ ಮಹತ್ತರವಾದ ಕ್ರಾಂತಿಕಾರಕ ಬದಲಾವಣೆ ಗಳನ್ನು ಸಮಾಜ ಬಯಸುವುದು ಮತ್ತು ಬೆಂಬಲಿಸುವುದು! ಹಾಗಾಗಿ ಈ ವಿಶೇಷ ಪದ್ಧತಿ ವಿರುದ್ಧ ವಿಶೇಷ ಹೋರಾಟಗಳು ಮೊದಲ್ಗೊಂಡವು. ಮಹಿಳಾ ಸಮಾನತೆಯನ್ನು ಭಕ್ತಿ ಪಂಥದ ಕಾಲ ಮಾನದಲ್ಲಿ ವಿಶೇಷವಾಗಿ ಅಳವಡಿಸಿಕೊಳ್ಳಬೇಕಾಗಿತ್ತು ಎನ್ನುವುದಕ್ಕಿಂತ ಸನಾತನವಾಗಿ ಸದಾ ಆಚರಣೆಯಲ್ಲಿದ್ದ ಮಹಿಳಾ ಸಮಾನತೆಯನ್ನು ವೀರಶೈವವೂ ಸೇರಿದಂತೆ ಎಲ್ಲಾ ಪಂಥಗಳೂ ಉಳಿಸಿಕೊಳ್ಳಬೇಕಿತ್ತು ಎನ್ನುವುದು ಹೆಚ್ಚು ಸೂಕ್ತ.
ಈ ಪಲ್ಲಟವನ್ನು ಬಸವಣ್ಣನಿಗಿಂತ ಒಂದು ಶತಮಾನ ಮೊದಲೇ ಗಮನಿಸಿದ್ದ ದಾಸಿಮಯ್ಯನು ಸೂಕ್ಷವಾಗಿ- “ಮೊಲೆ, ಮುಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ"- ಜೇಡರ ದಾಸಿಮಯ್ಯ(ಸಮಗ್ರ ವಚನ ಸಂಪುಟ: 7, ವಚನದ ಸಂಖ್ಯೆ: 845) ಎಂದು ಆಧ್ಯಾತ್ಮಿಕ ನೆಲೆಯಲ್ಲಿ ದನಿಯೆತ್ತಿದ್ದಾನೆ.
ಹೀಗೆ ಆತ್ಮನಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲ ಎನ್ನುವ ಆದ್ಯ ವಚನಗಳೇ ಇರುವಾಗ ಮಹಿಳೆ ಯರನ್ನು ಎರಡನೇ ದರ್ಜೆಗಿಳಿಸುವ ತೀವ್ರಗೊಂಡ ನೀತಿಯನ್ನು ಹೇಗೆ ತಾನೇ ವೀರಶೈವ ಆದ್ಯರು ಹೇರಲು ಸಾಧ್ಯ? ಹಾಗಾಗಿ ಹನ್ನೆರಡನೇ ಶತಮಾನದ ನವ್ಯ ಶರಣರು ಮಹಿಳಾ ಸಮಾನತೆ ಗಾಗಿ ಸಿಡಿದೆದ್ದರು ಎನ್ನಲು ಅವರು ರಚಿಸಿದ ಸ್ಪಷ್ಟ ವಚನಗಳಿಲ್ಲ. ಅವರ ನಡೆ ಮಾತ್ರ ಪುರುಷ ಪ್ರಾಧಾನ್ಯವಾಗಿದ್ದು ಹೆಣ್ಣಿನ ಸಮಾನತೆಯ ವೈರುಧ್ಯವೇ ಆಗಿದ್ದಿತು!
ಇದನ್ನೂ ಓದಿ: Ravi Hunj Column: ಜಾಗತಿಕ ಲಿಂಗಾಹತ ಮಹಾಸಭಾದ ವಕ್ತಾರರೂ ಮೌಢ್ಯದಿಂದ ಕೂಡಿದ್ದಾರೆ
ಏಕೆಂದರೆ ಈ ನೀತಿಯ ವಿರೋಧಕ್ಕೆ ಶರಣರಿಗಿಂತ ಶರಣೆಯರು ಹೆಚ್ಚು ಅನುವಾಗಿದ್ದಾರೆ ಎಂದು ಸಾಕಷ್ಟು ವಚನಗಳಲ್ಲಿ ಸಾಕ್ಷಿ ಸಿಗುತ್ತದೆ. ಆದ್ಯ ವಚನಕಾರ ದೇವರ ದಾಸಿಮಯ್ಯನ ವಚನವನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಪರಿಷ್ಕರಿಸುತ್ತ ತಮ್ಮದೇ ಹೊಳಹನ್ನು ಈ ವಚನಕಾರ್ತಿಯರು ಕಟ್ಟಿಕೊಟ್ಟರು. ಅಂಥ ವಚನಗಳನ್ನು ಇಲ್ಲಿ ಗಮನಿಸೋಣ: “ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ; ಬಲ್ಲವರ ನೀತಿ ಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬ ಶಂಭುಜಕ್ಕೇಶ್ವರಾ" (ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 1228) ಎಂದು ವಚನಕಾರ್ತಿ ಸತ್ಯಕ್ಕ ಹೇಳಿದರೆ, ಗೊಗ್ಗವ್ವೆ ಹೀಗೆ ಹೇಳಿದ್ದಾಳೆ:
ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 776). ಇನ್ನು ಅಕ್ಕ ಮಹಾದೇವಿಯು, “ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು.
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು. ಲೋಕವೆಂಬ ಮಾಯೆಗೆ ಶರಣರ ಚಾರಿತ್ರವು ಮರುಳಾಗಿ ತೋರುವುದು ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆ ಯಿಲ್ಲ ಮರಹಿಲ್ಲ ಅಭಿಮಾನವೂ ಇಲ್ಲ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 282) ಎಂದು ಲಿಂಗ ಸಮಾನತೆಯನ್ನು ವರ್ಣಿಸಿದ್ದಾಳೆ.
ಇನ್ನು ಆಯ್ದಕ್ಕಿ ಲಕ್ಕಮ್ಮ ಹೆಣ್ಣು ಮತ್ತು ಗಂಡು ಸಮಾನವಾಗಿ ಸೇರಿಯೇ ಸೃಷ್ಟಿ ಸಾಧ್ಯ ಎಂಬರ್ಥ ದಲ್ಲಿ ಹೀಗೆ ಹೇಳಿದ್ದಾಳೆ: “ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ? ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ? ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು. ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ? ಬೇರೊಂದಡಿ ಯಿಡದಿರು, ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ!" (ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 709).
ಇನ್ನು ಗಜೇಶ ಮಸಣಯ್ಯಪ್ರಿಯ ಪುಣ್ಯಸೀ ಮಸಣಮ್ಮ ಹೆಣ್ಣು ಹೊನ್ನು ಮಣ್ಣುಗಳನ್ನು ಲೌಕಿ ಕಾರ್ಥದಲ್ಲಿ ಇವು ಭಕ್ತಿಗೆ ಹೊರಗು ಎಂಬುದನ್ನು ಕೆಳಗಿನ ವಚನದಲ್ಲಿ ಪ್ರಶ್ನಿಸಿ ಲೌಕಿಕ ದಿಂದಲೇ ಅಲೌಕಿಕತೆಯನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಬಯಸುತ್ತಾಳೆ. ಇಲ್ಲಿ ನಿಮಗೆ ರಜನೀಶರ ’ಸಂಭೋಗದಿಂದ ಸಮಾಧಿ’ ತತ್ವ ನೆನಪಾದರೆ ಅದು ಹೊಸತಲ್ಲ. ಕ್ರಿಸ್ತಪೂರ್ವ ಸನಾತನ ತತ್ವವಾದ ಅದನ್ನು ಹನ್ನೆರಡನೇ ಶತಮಾನದ ವಚನಕಾರ್ತಿ ಪುನರುಚ್ಚರಿಸಿದ್ದಾಳಷ್ಟೇ ಎಂದಷ್ಟೇ ಮನಗಾಣಬೇಕು: “ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? ಹೆಣ್ಣ ಬಿಟ್ಟು ಲಿಂಗವ ನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ? ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು, ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ? ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ? ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ!" (ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 771).
ಹಾಗೆಯೇ ಸೂಳೆ ಸಂಕವ್ವೆ ಸಹ ಪರೋಕ್ಷವಾಗಿ ಮಹಿಳೆಯು ಹೇಗೆ ಶೋಷಣೆಗೊಳಗಾಗುತ್ತಿzಳೆ ಎಂಬ ಚಿತ್ರಣವನ್ನು ತನ್ನ ಈ ವಚನದಲ್ಲಿ ತೋರುತ್ತಾಳೆ: “ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ. ವ್ರತಹೀನ ನನರಿದು ಬೆರೆದಡೆ ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ. ಒನೊ ಬನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ" (ಸಮಗ್ರ ವಚನ ಸಂಪುಟ: 5).
ಒಟ್ಟಿನಲ್ಲಿ ಮಹಿಳೆಯರನ್ನು ಎರಡನೇ ದರ್ಜೆಗಿಳಿಸುವ ಸಾಮಾಜಿಕ ಪಲ್ಲಟವನ್ನು ನಿವಾರಿಸಿ ಮತ್ತೆ ಮುನ್ನೆಲೆಗೆ ತರುವುದು ಸಹ ಎಲ್ಲಾ ಭಕ್ತಿಪಂಥಗಳ ಅಂಶವಾಗಿತ್ತು. ವೀರಶೈವ ಪಂಥದಲ್ಲಿ ಹೇಗೆ ವಚನಕಾರ್ತಿಯರು ಮುನ್ನೆಲೆಗೆ ಬಂದರೋ ಅದೇ ರೀತಿ ಲಶ್ವರಿ, ಮೀರಬಾಯಿಯಂಥ ಕವಯತ್ರಿ ಯರು ಆಧ್ಯಾತ್ಮಿಕ ಧ್ಯೇಯ ಸಿದ್ಧಾಂತಗಳ ರೂವಾರಿಗಳೆನಿಸಿದ್ದರು. ಆದರೆ ವೀರಶೈವ ಪಂಥದ ವಚನಕಾರ್ತಿಯರಷ್ಟು ಸಾಮಾಜಿಕ ಕಳಕಳಿಯನ್ನು ಈ ಆಧ್ಯಾತ್ಮಿಕ ನಾಯಕಿಯರು ಅಷ್ಟಾಗಿ ತೋರಲಿಲ್ಲ.
ಹಾಗೆಯೇ ಬಸವಾದಿ ಪುರುಷ ವಚನಕಾರರು ಹೆಣ್ಣು ಮಾಯೆ ಎಂಬ ಪರಿಧಿಯನ್ನು ಮೀರಿ ದಾಟಲೂ ಇಲ್ಲ ಎಂಬುದು ವಾಸ್ತವಿಕ ಸಂಗತಿ. ಕಾಯವೇ ಕೈಲಾಸ ಎಂಬ ತತ್ವವನ್ನು ಪಾಲಿಸುತ್ತಾ ಹೆಣ್ಣು, ಹೊನ್ನು, ಮಣ್ಣು ಮೋಹ ಎಂದು ದ್ವಂದ್ವವನ್ನು ಹೇಳುವ ಶರಣರ ಪರೋಕ್ಷ ಮಹಿಳಾ ಅಸಮಾನತೆಯನ್ನು ಬೆಂಬಲಿಸುವ ವಚನಗಳು ಸಾಕಷ್ಟಿವೆ.
ಇದಕ್ಕೆ ಸಾಕ್ಷಿಯಾಗಿ “ಮಹಾದೇವಿಯಕ್ಕಗಳು ಕಲ್ಯಾಣದ ದಾರಿಯಲ್ಲಿದ್ದಾಗ (ಆಕೆಯನ್ನು) ಕಿನ್ನರಯ್ಯನು ಹರುಷಿಸಿ (ಪರುಷಿಸಿ/ಸ್ಪರ್ಶಿಸಿ) ನೋಡಲು ಅಕ್ಕಗಳು ಅಂತರಂಗದ ಜ್ಞಾನಾಗ್ನಿ ಯೊಳ್ ಕಾಮನ ಭಸ್ಮಮಂ ಮಾಡಿತೋರಿದರೆಂಬ" ಪ್ರಸಂಗವನ್ನು ಹಲಗೆಯಾರ್ಯನು ತನ್ನ ಶೂನ್ಯ ಸಂಪಾದನೆಯಲ್ಲಿ, “ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿ ಕಿನ್ನರಯ್ಯನು ಮಹಾ ದೇವಿಯನ್ನು ಪರೀಕ್ಷಿಸಿದ್ದನು ಎಂದಿದ್ದಾನೆ.
ಬಸವಣ್ಣನ ಪತ್ನಿ ನೀಲಮ್ಮ ಈ ಸಾಮಾಜಿಕ ಹೋರಾಟಕ್ಕೆ ಭಿನ್ನವಾಗಿ ತನ್ನ ಅಂತರಂಗವನ್ನು ತೆರೆದಿಡುತ್ತಾಳೆ. ಖ್ಯಾತ ಪ್ರಭಾವಶಾಲಿ ವ್ಯಕ್ತಿಯ ಹೆಂಡತಿಯೊಬ್ಬಳು ಅನುಭವಿಸುವ ಮಾನಸಿಕ ತುಮುಲಗಳನ್ನು, ಒಂಟಿತನವನ್ನು, ಅಸಹನೆಯನ್ನು, ದೂರನ್ನು ಸೂಕ್ಷ್ಮವಾಗಿ ಆದರೆ ಸ್ಪಷ್ಟವಾಗಿ ವಚನದ ನೆಲೆಯ ಕಟ್ಟಿಕೊಡುತ್ತಾಳೆ.
‘ಹೆಣ್ಣು ಮಾಯೆ’ ಎಂಬ ಪುರುಷಶಾಹಿತ್ವದ ಹಂಗಿನ ಹೆಣ್ಣನ್ನು ಹಂಗಿಸುವ ಪುರುಷ ವಚನಕಾರರ ಪಡಿಯಚ್ಚಿನ ಏಕತಾನತೆಯ ಪರಿಽಯಾಚೆಗೆ ಹೆಣ್ಣಿನ ಅಸ್ತಿತ್ವ ಮತ್ತು ಮಾಯೆಯ ಮುಸುಕಿನಲ್ಲಿ ತಮ್ಮ ಸಾಂಸಾರಿಕ ಜವಾಬ್ದಾರಿ ವಿಮುಖತೆಗೆ ಶ್ರೀರಕ್ಷೆ ಪಡೆಯುವ ಗಂಡನ್ನು ಅನಾವರಣಗೊಳಿಸು ತ್ತಾಳೆ. ತನ್ನ ಬಹುಪಾಲು ವಚನಗಳಲ್ಲಿ ಆಕೆಯ ನಿರೀಕ್ಷೆ, ಸಾಂಸಾರಿಕ ವಾಂಛೆ, ಅಸ್ತಿತ್ವದ ಅಹಂ, ಅತೃಪ್ತ ಆಕಾಂಕ್ಷೆಗಳನ್ನೆ ವಚನಗಳಾಗಿಸಿರುವ ನೀಲಮ್ಮ ಬೇರೆ ವಚನಕಾರ್ತಿಯರಿಗಿಂತ ಭಿನ್ನವಾಗಿ ನಿಲ್ಲುವುದಲ್ಲದೆ ಅದನ್ನು ಸಕಾರಣವಾಗಿ ಪ್ರಶ್ನಿಸುತ್ತಾಳೆ ಸಹ.
ಹಾಗೆಯೇ ಪ್ರಸಿದ್ಧ ವ್ಯಕ್ತಿಯ ಛಾಯೆಯಾದ ಅವನ ಪತ್ನಿಯಾಗಿ ತನ್ನ ಸ್ವಂತಿಕೆಯ ಅಸ್ತಿತ್ವವೇನು ಎಂದೂ ಪ್ರಶ್ನಿಸುತ್ತಾಳೆ. ಈ ಎಲ್ಲಾ ಸಮಗ್ರ ಭಾವನೆಗಳನ್ನು ಹೊಮ್ಮಿಸುವ ಆಕೆಯ ವಚನಗಳು ಹೀಗಿವೆ: “ಎನಗೆ ಇಲ್ಲಿ ಏನು ಬಸವ ಬಸವಾ? ಎನಗೆ ಅದರ ಕುರುಹೇನು ಬಸವಾ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ?" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 874).
“ಮಡದಿ ಎನಲಾಗದು ಬಸವಂಗೆ ಎನ್ನನು. ಪುರುಷನೆನಲಾಗದು ಬಸವನ ಎನಗೆ. ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು, ಬಸವನೆನ್ನ ಶಿಶುವಾದನು. ಪ್ರಮಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 1024).
“ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ. ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ. ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ. ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ. ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ?" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 811).
ಅಲ್ಲದೆ ನೀಲಮ್ಮನು ಬೇರೆ ವಚನಕಾರ್ತಿಯರಿಗಿಂತ ಭಿನ್ನವಾಗಿ ಕಾಮದ ಕುರಿತು ವಚನಗಳನ್ನು ರಚಿಸಿದ್ದಾಳೆ. ಬೇರೆ ವಚನಕಾರ್ತಿಯರು ಕಾಮವನ್ನು ಪಾಪದ ನೆಲೆಯಲ್ಲಿ ಅರಿಷಡ್ವರ್ಗಗಳ ನೆಲೆಯಲ್ಲಿ ಕಂಡಿದ್ದರೆ, ನೀಲಮ್ಮ ಕಾಮವನ್ನು ತನ್ನ ವಚನಗಳಲ್ಲಿ ಹೆಣ್ತನದ ನೆಲೆಯಲ್ಲಿ ಕಟ್ಟಿಕೊಡುತ್ತಾಳೆ. ಪತಿಯ ಮಿಲನಕ್ಕೆ ಕಾದು ಕಂಗೆಟ್ಟ ಪತ್ನಿಯ ವಿರಹವನ್ನು ಮತ್ತು ತನ್ನಿಚ್ಛೆಗೆ ಸ್ಪಂದಿಸದ ಪತಿಯನ್ನು ‘ಪ್ರಾಣದ ಕುರುಹಿಲ್ಲದವ’ ಎನ್ನುತ್ತಾ ತಾನು ಮುಸುಕಿಟ್ಟು ಬಸವಳಿದೆ’ ಎಂದು ನಿಟ್ಟುಸಿರು ಬಿಡುತ್ತಾಳೆ: “ಕಾಮದ ಹಂಗಿಗನಲ್ಲ ಶರಣ, ಮೋಹದ ಇಚೆಯವನಲ್ಲ ಶರಣ, ಉಭಯದ ಸಂಗದವನಲ್ಲ ಶರಣ, ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ. ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 939). ಹಾಗೆಯೇ ಆಕೆಯ ಮುಂದಿನ ವಚನದಲ್ಲಿ ವೈವಾಹಿಕ ಸಂಬಂಧದಲ್ಲಿರಬೇಕಾದ ಕಾಮಿತವಿಲ್ಲದೆ ಸ್ವಯ-ಲಿಂಗ-ಸಂಬಂಧ ನನಗೇಕೆ? ಎಂದು ತನ್ನ ಸಾಂಸಾರಿಕ ನಿರೀಕ್ಷೆಗಳನ್ನು ಮುನ್ನಳ ದೋಷವೆಂದು ದೂರುತ್ತಾಳೆ: “ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ, ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು ಬಸವನನರಿಯದೆ ಕೆಟ್ಟ ಪಾಪಿಯಾನು. ಶಬ್ದದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ ಸ್ವಯಲಿಂಗಸಂಬಂಧವೆನಗೆಂತಯ್ಯ?" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 1050). ಕಡೆಗೆ ಈಡೇರದ ತನ್ನ ಬಯಕೆಗಳನ್ನು ಹೇಗೆ ಆಕೆ ಹತ್ತಿಕ್ಕಿಕೊಂಡು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಳು ಎಂಬ ಚಿತ್ರಣವನ್ನು ಈ ವಚನದಲ್ಲಿ ತೋರುತ್ತಾಳೆ: “ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು. ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ. ಏನೆಂದೆನ್ನದ ಮುನ್ನ ತಾನೆಯಾಯಿತ್ತು;ಸಂಗಯ್ಯನಲ್ಲಿ ಶಬ್ದಮುಗ್ಧ ವಾಯಿತ್ತು" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 859). ಕಡೆಗೆ ಕಾಮವನ್ನು ಕಳೆದು ಕೊಂಡು ಪ್ರಸನ್ನವದನೆಯಾದೆ ಎಂದು ಈ ವಚನದಲ್ಲಿ ನೀಲಮ್ಮ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ: “ಕರಣಂಗಳ ಹಂಗ ಹರಿದು, ಕಾಮದ ಸೀಮೆಯ ಹರಿದು, ಕಾಮದ ಪ್ರಪಂಚ ನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 935).
ಪತಿಯಿರದಿದ್ದರೂ ಬಾಳುವ ಛಲ ನನ್ನಲ್ಲುಂಟು ಏಕೆಂದರೆ ಕಾಮವನ್ನು ಕಳೆದುಕೊಂಡವಳಾ ದುದರಿಂದ ಬಸವನ ಹಂಗು ನನಗಿಲ್ಲ ಎನ್ನುವ ಛಲವನ್ನು ನೀಲಮ್ಮ ತೋರುತ್ತಾಳೆ- “ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು. ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ. ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 1080). ಆದರೆ ತನ್ನ ಇನ್ನೊಂದು ವಚನದಲ್ಲಿ ಕೇವಲ ನಿಷ್ಠೆ ಎಂಬ ಒಂದು ಬದ್ಧತೆಯ ಕಾರಣವಾಗಿ ಎಲ್ಲಾ ವಾಂಛೆಗಳನ್ನು ಕಷ್ಟ ದಿಂದ ಕಳೆದುಕೊಳ್ಳುತ್ತಾ ಯಾವುದೇ ಸುಖವಿಲ್ಲದಿದ್ದರೂ ಕೇವಲ ಪ್ರಸಿದ್ಧ ಪುರುಷನ ಇರುವಿಕೆಯ ಏಕೈಕ ಕಾರಣದಿಂದ ಬದುಕಿದ್ದೆ.
ಈಗವನು ಇಲ್ಲದ ಕಾರಣ ನನ್ನ ಕಾಯವನ್ನು ಅಳಿಯುವೆ ಎಂದು ತನ್ನ ವಿಕ್ಷಿಪ್ತ ಮನಸ್ಥಿತಿಯನ್ನೂ ತೋರಿದ್ದಾಳೆ. ಆ ವಚನ ಹೀಗಿದೆ: “ನಿಷ್ಠೆಯೆಂಬುದನೊಂದ ತೋರಿ ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ. ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ. ಅನುಭವ ಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ, ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 987). ಹೀಗೆ ನೀಲಮ್ಮನ ವಚನಗಳು ಹೆಣ್ಣಿನ ಸೂಕ್ಷ್ಮಗಳನ್ನು, ಮಾನಸಿಕ ತುಮುಲಗಳನ್ನು, ಕಾಮನಿಗ್ರಹದ, ಕಾಮಾಸಕ್ತ ನಲ್ಲದ ಸಂಗಾತಿಯೊಂದಿಗಿನ ಒಡನಾಟವನ್ನು ಸೂಚ್ಯವಾಗಿ ತೆರೆದಿಡುತ್ತವೆ.
ಸಾಮಾಜಿಕವಾಗಿ ಬಸವಣ್ಣನನ್ನು ಜಗಜ್ಯೋತಿ, ಸಮಾನತೆಯ ಹರಿಕಾರ ಎಂದೆ ಗುರುತಿಸಿದ್ದರೂ, ನೀಲಮ್ಮನು ತನ್ನ ಪತಿಯಾದ ಬಸವಣ್ಣನನ್ನು ತೆರೆದಿಡುವ ಪರಿಯೇ ಬೇರೆ. ಇವಳ ವಚನದಲ್ಲಿ ಬಸವಣ್ಣ ಪುರುಷಶಾಹಿಯ ಅಧಿಪತಿಯೆನಿಸುತ್ತಾನೆ, ಅಧ್ಯಾತ್ಮದ ನೆಪದಲ್ಲಿ ಸಾಂಸಾರಿಕ ಬಯಕೆ ಗಳನ್ನು ಈಡೇರಿಸದ ಶರಣನಿದ್ದಾನೆ. ನಟ್ಟನಡುವೆ ಬಿಟ್ಟು ಹೋದ ಪತಿಯಿದ್ದಾನೆ.
ಕಟ್ಟಕಡೆಗೆ ನೀಲಮ್ಮನು ಗತ್ಯಂತರವಾಗಿ ಅಧ್ಯಾತ್ಮವನ್ನು ಹೇರಿಕೊಂಡು ನಾನು ಹಂದೆಯಲ್ಲ (ಅಂಜುಬುರುಕಿಯಲ್ಲ) ಎನ್ನುತ್ತ ಬರುವ ಎಲ್ಲಾ ಸನ್ನಿವೇಶಗಳನ್ನೂ ಛಲದಿಂದ ಎದುರಿಸುತ್ತ ಪುರುಷನನ್ನು ಸಮಗಟ್ಟುವುದಲ್ಲದೆ ಆತನನ್ನು ಮೀರಿದ ಓರ್ವ ಸರ್ವಸ್ವತಂತ್ರ ದಿಟ್ಟ ಮಹಿಳೆಯಾಗಿ ಹೊಮ್ಮಿದ್ದಾಳೆ.
ಆದರೆ ಮತ್ತೊಮ್ಮೆ ಬಸವನಿಲ್ಲದ ಮೇಲೆ ನನಗೇನು ಇಲ್ಲಿ ಹಾಗಾಗಿ ನಾನೂ ಅಳಿಯುವೆ ಎಂಬ ವಿಕ್ಷಿಪ್ತತೆಯನ್ನು ತೋರಿದ್ದಾಳೆ. ಇಂಥ ವಿಕ್ಷಿಪ್ತತೆಯನ್ನು ನೀಲಮ್ಮನಲ್ಲದೆ ಅನೇಕ ವಚನಕಾರರೂ ತಮ್ಮ ವಚನಗಳಾದ್ಯಂತ ತೋರಿದ್ದಾರೆ.
ನೀಲಮ್ಮನ ಎಲ್ಲಾ ದೂರು, ದುಮ್ಮಾನಗಳು ಸತ್ಯವೆಂಬಂತೆ ಬಸವಣ್ಣನ ಈ ವಚನ ಅನಾವರಣ ಗೊಳ್ಳುತ್ತದೆ: “.....ಕಾಮನೇಮವೆಂಬ ಸಿಂಧುಬಳನ ವಧುವ ಸರ್ವಭುವನದೊಡೆಯ ಸಂಗಮ ದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮ ದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬ.... ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲ ಸಂಗಮದೇವಾ" (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 1111). ಆಧ್ಯಾತ್ಮ, ಚಳವಳಿ, ಮೌಲ್ಯಗಳು ಮಾನವನನ್ನು ಗಾಢವಾಗಿ ಆವರಿಸಿಕೊಂಡಾಗ ಎಂಥ ಒಂದು ಸಮಾಧಿ ಸ್ಥಿತಿಗೆ ಮನಸ್ಸು ಲೀನವಾಗಿರುತ್ತದೆ ಎನ್ನುವುದನ್ನೂ ಬಸವಣ್ಣನ ಈ ವಚನ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸುತ್ತದೆ.
ಯಾವುದೇ ಲೌಕಿಕ ವಿಚಾರಗಳು ನನ್ನ ಭಕ್ತಿಮಾರ್ಗಕ್ಕೆ ತಡೆಯೊಡ್ಡಲಾರವು ಎಂಬುದನ್ನು ನಿಷ್ಠುರ ವಾಗಿ ಆದರೆ ಭಕ್ತಿಲೋಲುಪ್ತನಾಗಿ ನುಡಿಯುವಾಗ ಬಸವಣ್ಣನು “ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬ" ಎನ್ನುತ್ತಾನೆ.
ಅಂದರೆ ಸಂಸಾರದ ಬಗ್ಗೆ ಬಸವಣ್ಣನು ಎಂಥ ದಿವ್ಯ ವಿರಕ್ತಿಯನ್ನು ಹೊಂದಿದ್ದನು ಎಂಬ ವಿಶಾಲಾ ರ್ಥದೊಂದಿಗೆ ಈ ವಚನವು ಆತನ ಸಂಸಾರದ ಸೂಕ್ಷ್ಮಗಳನ್ನೂ ತೋರುತ್ತದೆ. (ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)