Citizens Report Cards: ಬೆಂಗಳೂರು ಶಾಸಕ, ಸಂಸದರ ರಿಪೋರ್ಟ್ ಕಾರ್ಡ್ ಔಟ್; ನಂ. 1 ಶ್ರೀಮಂತ ಶಾಸಕ ಗೋಪಾಲಯ್ಯ ಆಸ್ತಿ ಶೇ.1,399ರಷ್ಟು ಹೆಚ್ಚಳ
K.Gopalaiah: ಬೆಂಗಳೂರಿನಿಂದ ಆಯ್ಕೆಯಾಗಿರುವ ಶಾಸಕರು ಹಾಗೂ ಸಂಸದರ ಸಾಧನೆ ಕುರಿತು ಸಿವಿಕ್ ಸಂಸ್ಥೆಯು ನಾಗರಿಕ ವರದಿಯನ್ನು ಬಿಡುಗಡೆ ಮಾಡಿದೆ. ಕಾರ್ಯಕ್ಷಮತೆಯ ಮೌಲ್ಯಮಾಪನ, ಕ್ರಿಮಿನಲ್ ಪ್ರಕರಣಗಳು ಹಾಗೂ ಶಾಸಕರ ಆದಾಯವನ್ನು ವರದಿಯಲ್ಲಿ ತಿಳಿಸಲಾಗಿದ್ದು, ಬೆಂಗಳೂರಿನ ಶಾಸಕರ ಪೈಕಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರ ಆದಾಯವು ಶೇ.1,399ರಷ್ಟು ಹೆಚ್ಚಳವಾಗಿದ್ದು, ನಂಬರ್ 1 ಶ್ರೀಮಂತ ಶಾಸಕರೆನಿಸಿಕೊಂಡಿದ್ದಾರೆ.


ಬೆಂಗಳೂರು: ಬೆಂಗಳೂರಿನಿಂದ (Bengaluru) ಆಯ್ಕೆಯಾಗಿರುವ ಶಾಸಕರು ಹಾಗೂ ಸಂಸದರ ಸಾಧನೆ ಕುರಿತು ಸಿವಿಕ್ ಸಂಸ್ಥೆಯು ನಾಗರಿಕ ವರದಿಯನ್ನು (Citizens Report Cards) ಬಿಡುಗಡೆ ಮಾಡಿದೆ. 'ನಮ್ಮ ನೇತಾ ನಮ್ಮ ವಿಮರ್ಶೆ' ಹೆಸರಿನಲ್ಲಿ ಸಮೀಕ್ಷೆ ನಡೆಸಿ ಈ ವರದಿಯನ್ನು ಬಿಡುಗಡೆ ಮಾಡಲಾಯಿತು. ಕಳೆದ 6 ತಿಂಗಳ ಅವಧಿಯಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ವೆಬ್ಸೈಟ್, ಮಾಹಿತಿ ಹಕ್ಕು ಫೈಲಿಂಗ್ ಮತ್ತು ಲಭ್ಯವಿರುವ ಡೇಟಾ ಮೂಲಗಳನ್ನು ಬಳಸಿಕೊಂಡು ಸ್ವಯಂಸೇವಕರು ಮತ್ತು ವಿದ್ಯಾರ್ಥಿ ಇಂಟರ್ನ್ಗಳ ಸಹಾಯದಿಂದ ಸಮೀಕ್ಷೆ ನಡಸಿ ವರದಿ ಸಿದ್ಧಪಡಿಸಲಾಗಿದೆ. ಕಾರ್ಯಕ್ಷಮತೆಯ ಮೌಲ್ಯಮಾಪನ, ಕ್ರಿಮಿನಲ್ ಪ್ರಕರಣಗಳು ಹಾಗೂ ಶಾಸಕರ ಆದಾಯವನ್ನು ವರದಿಯಲ್ಲಿ ತಿಳಿಸಲಾಗಿದ್ದು, ಬೆಂಗಳೂರಿನ ಶಾಸಕರ ಪೈಕಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ ಕೆ.ಗೋಪಾಲಯ್ಯ (K.Gopalaiah) ಅವರ ಆದಾಯವು ಶೇ. 1,399ರಷ್ಟು ಹೆಚ್ಚಳವಾಗಿದ್ದು, ನಂಬರ್ 1 ಶ್ರೀಮಂತ ಶಾಸಕರೆನಿಸಿಕೊಂಡಿದ್ದಾರೆ.
ಇನ್ನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ನಿವ್ವಳ ಮೌಲ್ಯವು ಶೇ. 959.63ರಷ್ಟು ವೃದ್ಧಿಸಿದ್ದು, ದ್ವಿತೀಯ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಇದ್ದಾರೆ. ಇವರ ಅವರ ಆಸ್ತಿಯಲ್ಲಿ ಶೇ. 318.62ರಷ್ಟು ಹೆಚ್ಚಳವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನಿವ್ವಳ ಮೌಲ್ಯವು ಹಿಂದಿನ ಅವಧಿಗೆ ಹೋಲಿಸಿದರೆ ಶೇ. 104ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
CIVIC Bangalore released Citizens' Report Cards for Bengaluru's 4 MPs and 32 MLAs, for their performance during the current term, on 14th June, 2025. The release was graced by noted actor and activist, @BelawadiBlr .
— CIVIC Bangalore (@civicbangalore) June 15, 2025
Link to all the report cards: https://t.co/cKahOdQTOH pic.twitter.com/SZCpDRnnSh
ಈ ಸುದ್ದಿಯನ್ನೂ ಓದಿ: ಕಾಟನ್ ಕ್ಯಾಂಡಿಯಿಂದ ಕಲುಷಿತ ಚಹಾದವರೆಗೆ: ಆರೋಗ್ಯ ಸಚಿವರಿಂದ ಕರ್ನಾಟಕದ ಆಹಾರ ಸುರಕ್ಷತಾ ಅಭಿಯಾನದ ನಕ್ಷೆಗಳು
ಬೆಂಗಳೂರಿನ ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ 1 ವರ್ಷವನ್ನು ಪೂರ್ಣಗೊಳಿಸಿದ ಮತ್ತು 16ನೇ ವಿಧಾನಸಭೆಯ ಶಾಸಕರು 2 ವರ್ಷಗಳನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ. ಬೆಂಗಳೂರಿನ ನಾಲ್ವರು ಸಂಸದರು, ಶಾಸಕರ ಮೌಲ್ಯಮಾಪನ ನಡೆದಿದೆ.
2023ರಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷಾಂತ್ಯದಲ್ಲಿ ಅವರ ವಿರುದ್ದ ಹನಿಟ್ರ್ಯಾಪ್ ಆರೋಪ ಹೊರಿಸಲಾಯಿತು. ಇದರಿಂದಾಗಿ ಅವರು ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕ ಎನಿಸಿಕೊಂಡಿದ್ದಾರೆ.
ಮೌಲ್ಯಮಾಪನಕ್ಕೆ ಒಳಪಟ್ಟ ಜನಪ್ರತಿನಿಧಿಗಳ ಕೇವಲ ಶೇ. 29ರಷ್ಟು ಮಂದಿ ಮಾತ್ರ ಶೇ. 90ಕ್ಕಿಂತ ಹೆಚ್ಚು ಹಾಜರಾತಿಯನ್ನು ಹೊಂದಿದ್ದಾರೆ. ಶಾಸಕರ ಪೈಕಿ ನೆಲಮಂಗಲ ಕ್ಷೇತ್ರದ ಎನ್.ಶ್ರೀನಿವಾಸ್ ಶೇ. 100ರಷ್ಟು ಹಾಜರಾತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪ್ರಿಯಾ ಕೃಷ್ಣ ಶೇ. 53.62ರೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ, ಸಚಿವರಲ್ಲದ ಶಾಸಕರಲ್ಲಿ ಮೂರನೇ ಒಂದು ಭಾಗದಷ್ಟು ಜನರು ವಿಧಾನಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಲಿಲ್ಲ. ಬೆಂಗಳೂರಿನ ಯಾವುದೇ ಶಾಸಕರು ಯಾವುದೇ ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿಲ್ಲ. ಕೇವಲ 4 ಶಾಸಕರು ಮಾತ್ರ 4 ಕೋಟಿ ರೂ.ಗಳ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (KLLADS) ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಮಹದೇವಪುರ ಶಾಸಕಿ ಎಸ್. ಮಂಜುಳಾ ಯಾವುದೇ ಹಣ ಹಂಚಿಕೆ ಮಾಡಿಲ್ಲ.
ಸಂಸದರ ಪೈಕಿ ಪಿ.ಸಿ.ಮೋಹನ್ ಅತಿ ಹೆಚ್ಚು ಹಾಜರಾತಿ (ಶೇ. 98.5) ಹೊಂದಿದ್ದರೆ, ತೇಜಸ್ವಿ ಸೂರ್ಯ ಅತಿ ಕಡಿಮೆ ಹಾಜರಾತಿಯನ್ನು (ಶೇ. 77.6) ದಾಖಲಿಸಿದ್ದಾರೆ. ಇದು ರಾಷ್ಟ್ರೀಯ ಸರಾಸರಿ (ಶೇ. 87)ಕ್ಕಿಂತ ಕಡಿಮೆ. ಆದಾಗ್ಯೂ ತೇಜಸ್ವಿ ಸೂರ್ಯ ಸಂಸತ್ತಿನ ಚರ್ಚೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು 84 ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂಸದ ಸಿ.ಎನ್.ಮಂಜುನಾಥ್ ನಿಧಿ ಬಳಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, 6.3 ಕೋಟಿ ರೂ. ಹಂಚಿಕೆ ಮಾಡಿದರೆ, ಮೋಹನ್ ಲಭ್ಯವಿರುವ 5 ಕೋಟಿ ರೂ.ಗಳಲ್ಲಿ ಕೇವಲ 47 ಲಕ್ಷ ರೂ.ಗಳನ್ನು ಬಳಸಿದ್ದಾರೆ.