H.D Kumaraswamy: ಹೆಚ್ಡಿಕೆಗೆ ಬಿಗ್ ರಿಲೀಫ್; ಭೂಕಬಳಿಕೆ ಆರೋಪ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ!
ಕೇಂದ್ರ ಸಚಿವ ಹೆಚ್.ಡಿ ಕುಮಾರ್ ಸ್ವಾಮಿ (H.D Kumaraswamy) ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸರ್ಕಾರಿ ಜಮೀನು ಒತ್ತುವರಿ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.


ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರ್ ಸ್ವಾಮಿ (H.D Kumaraswamy) ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 8,9, 10, 16, 17 ಮತ್ತು 79ರಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರಿ ಜಮೀನು ಒತ್ತುವರಿ ಆರೋಪಮೇಲೆ ಸಚಿವರ ಮೇಲೆ ಇತ್ತು.
ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿ ಕಾರ್ಯಾಚರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ತಮ್ಮ ವಿರುದ್ದ ವಿಚಾರಣೆಗೆ ಎಸ್ಐಟಿ ರಚನೆ ಮಾಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ನ್ಯಾಯಪೀಠ, ರಾಮನಗರ ತಹಶೀಲ್ದಾರ್ಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಪ್ರಕರಣ?
ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಸೇರಿ ಮತ್ತಿತರರು ಕೇತಗಾನಹಳ್ಳಿಯಲ್ಲಿ 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿತ್ತು. ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2025ರ ಜನವರಿ 28ರಂದು ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್ಐಟಿ ರಚಿಸಿತ್ತು. ಈ ತಂಡ ಜಮೀನಿನ ಮಾಲೀಕತ್ವದ ಕುರಿತು ತನಿಖೆ ನಡೆಸಲು ಆದೇಶಿಸಲಾಗಿತ್ತು. ಆದರೆ, ಎಚ್ಡಿಕೆ ಈ ಎಸ್ಐಟಿ ರಚನೆಯನ್ನು ಕಾನೂನುಬಾಹಿರ ಎಂದು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕುಮಾರಸ್ವಾಮಿ ಅವರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ಹಾಗೂ ಎ.ವಿ.ನಿಶಾಂತ್ ವಾದ ಮಂಡಿಸಿದರು. ಎಸ್ಐಟಿ ರಚನೆಗೆ ಮುನ್ನ ಯಾವುದೇ ಅಧಿಸೂಚನೆಯನ್ನು ಹೊರಡಿಸದೇ ಇದ್ದಿರುವುದು ಕಾನೂನು ವಿರುದ್ಧವಾಗಿದೆ ಎಂದು ಅವರು ವಾದಿಸಿದರು. ಜೊತೆಗೆ, ಎಸ್ಐಟಿಯ ಯಾವುದೇ ಕ್ರಮಗಳನ್ನು ಅನೂರ್ಜಿತವೆಂದು ಘೋಷಿಸುವಂತೆ ಕೋರಿದರು. ಈ ವಾದವನ್ನು ಪರಿಶೀಲಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರು ಎಸ್ಐಟಿ ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದರು.
ಈ ಸುದ್ದಿಯನ್ನೂ ಓದಿ: Nikhil Kumaraswamy: ಜೆಡಿಎಸ್ ಭವಿಷ್ಯ ಭದ್ರವಾಗಿದೆ, ಸುಭದ್ರವಾಗಿದೆ- ನಿಖಿಲ್ ಕುಮಾರಸ್ವಾಮಿ
ಅರ್ಜಿಯಲ್ಲಿ ಏನಿದೆ?
ಅರ್ಜಿದಾರರು 1995ರ ಅಕ್ಟೋಬರ್ 25ರಿಂದ ವಿವಿಧ ಮಾರಾಟ ಪತ್ರಗಳ ಮೂಲಕ ಉಲ್ಲೇಖಿತ ಜಮೀನನ್ನು ಖರೀದಿ ಮಾಡಿದ್ದು, ಅವರ ಸ್ವಾಧೀನದಲ್ಲಿದ್ದು ನಿಜವಾದ ಮಾಲಿಕರಾಗಿದ್ದಾರೆ. 2025ರ ಮಾರ್ಚ್ 11ರಂದು ತಹಶೀಲ್ದಾರ್ ಅವರು ಜಮೀನಿನ ಮರು ಸರ್ವೇ ಮಾಡುವುದಕ್ಕಾಗಿ ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್ ಹೊರಡಿಸಿರುವ ಆದೇಶ ಸಂಬಂಧ ಯಾವುದೇ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಅಲ್ಲದೆ, ಕರ್ನಾಟಕ ಭೂ ಕಂದಾಯ ಕಾಯಿದೆ ಉದ್ದೇಶಕ್ಕೆ ತದ್ವಿರುದ್ದವಾಗಿದೆ ಹಾಗೂ ಕಾನೂನು ಬಾಹಿರವಾಗಿದ್ದು, ರದ್ದುಪಡಿಸಬೇಕು. ಅಲ್ಲದೇ, ಸರ್ಕಾರ ಹೊರಡಿಸಿರುವ ಆದೇಶವು ಕರ್ನಾಟಕ ಸಾಮಾನ್ಯ ಷರತ್ತುಗಳು (ತಿದ್ದುಪಡಿ) ಕಾಯಿದೆ 1985ಯನ್ನು 198ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಇದೇ ಕಾಯಿದೆಗೆ ಸೆಕ್ಷನ್ 3(23-ಬಿ)ಯನ್ನು ಸೇರಿಸಲಾಗಿದೆ. ಅದರಂತೆ ಎಸ್ಐಟಿ ರಚನೆಗೆ ಗೆಜೆಟ್ ಅಧಿಸೂಚನೆ ಹೊರಡಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.