ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ನಿಮಗೆ ತಿಳಿದಿರಲಿ, ಇದು ಲಿಂಗಾಹತ ಪ್ರತ್ಯೇಕ ಧರ್ಮಕಾರಣದ ಕರ್ಮಕಾಂಡ !

ತನ್ನ ‘ಲಿಂಗಾಂಗ ಸಾಮರಸ್ಯ’ವನ್ನು ಮುಚ್ಚಿಕೊಳ್ಳಲು ಬಸವಣ್ಣ, ಲಿಂಗಾಯತವನ್ನು ಬಳಸಿದ ಮಹಿಳೆಗೆ ಬಹುವಚನ ಸಲ್ಲದ ಕಾರಣ ಇಲ್ಲಿ ಏಕವಚನ ಬಳಸಲಾಗಿದೆ ಎಂಬುದು ಒಂದು ಸ್ಪಷ್ಟನೆ ಅಷ್ಟೇ. ಈ ಎರಡು ಬದಿಯ ಪ್ರಸ್ತಾವನೆಯಿಂದ ರಾಜಕೀಯ ಪುಳಕವುಂಟಾಗಿ ಅಂದಿನ ಮುಖ್ಯ ಮಂತ್ರಿಗಳು “ಮಹಾಸಭಾ ಮತ್ತು ಮಾತೆ ಇಬ್ಬರೂ ಸೇರಿ ಒಟ್ಟಿಗೆ ಬನ್ನಿ, ನೋಡೋಣ" ಎಂದರು. ಮಹಾದೇವಿಯ ಮಹಾಕಾರ್ಯಗಳ ಅರಿವಿದ್ದ ಮಹಾಸಭಾ ಸುಮ್ಮನಾಯಿತು.

ನಿಮಗೆ ತಿಳಿದಿರಲಿ, ಇದು ಲಿಂಗಾಹತ ಪ್ರತ್ಯೇಕ ಧರ್ಮಕಾರಣದ ಕರ್ಮಕಾಂಡ !

Profile Ashok Nayak Jun 11, 2025 9:33 AM

ಬಸವ ಮಂಟಪ

ರವಿ ಹಂಜ್

ಭಕ್ತಿ ಭಂಡಾರಿ ಬಸವಣ್ಣನ ಫೊಟೋವನ್ನು ಸರಕಾರಿ ಕಚೇರಿಗಳಲ್ಲಿ ಹಾಕಿಸುವ ನಿಯಮವನ್ನು ದೇಶದಲ್ಲಿ ಮೊತ್ತಮೊದಲಿಗೆ ಜಾರಿಗೊಳಿಸಿದ್ದು ಮಹಾರಾಷ್ಟ್ರ ಸರಕಾರ. ಜಾರಿಗೊಳಿಸಿದ ಮುಖ್ಯ ಮಂತ್ರಿ, ದೇವೇಂದ್ರ ಫಡ್ನವೀಸ್! ಕರ್ನಾಟಕಕ್ಕೆ ಹೆಚ್ಚು ಆಪ್ಯಾಯಮಾನನಾದ ಬಸವಣ್ಣನನ್ನು ಆಧುನಿಕ ಸಾಮಾಜಿಕ ಹರಿಕಾರ, ಭಾಗ್ಯವಿಧಾತ ಎನಿಸಿದ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳು ಫಡ್ನವೀಸ್ ನಡೆಯಿಂದ ಎಚ್ಚರಗೊಂಡು ರಾಜ್ಯ ಸರಕಾರದ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕುವುದನ್ನು ಕಡ್ಡಾಯ ಮಾಡುವುದರೊಂದಿಗೆ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ‘ಅಕ್ಕ ಮಹಾದೇವಿ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಿ ಲಿಂಗಾಯತರ ತೊಟ್ಟಿಲು ತೂಗಿ ಸಂತೈಸಿದರು.

ಇವರ ನಾಮಕರಣದ ನಡೆ ಮಹಾರಾಷ್ಟ್ರದ ಫಡ್ನವೀಸರಿಗಿಂತ ತಾವೊಂದು ತೂಕ ಹೆಚ್ಚು ಎಂದು ತೋರಿಸುವ ಪಾಪಪ್ರಜ್ಞೆಯಾಗಿತ್ತೇ ಹೊರತು ಯಾವುದೇ ನೈಜ ಕಳಕಳಿಯಾಗಿರಲಿಲ್ಲ. ನಂತರ ನಡೆದ ವಿದ್ಯಮಾನಗಳು ಈ ಪಾಪಪ್ರಜ್ಞೆಯನ್ನು ಜನಾಂಗೀಯ ದ್ವೇಷ ಬಿತ್ತುವ ಗರ್ವಿಕಪ್ರಜ್ಞೆಯಾಗಿ ಊರ್ಜಿಸಿದ್ದನ್ನು ನಾಡು ಕಂಡಿದೆ. ಅದಕ್ಕೂ ಹಲವಾರು ವರ್ಷಗಳ ಹಿಂದೆ ಒಮ್ಮೆ ನಾನು ಬೆಂಗಳೂ‌ ರಿಗೆ ಹೋಗಿದ್ದಾಗ ನನ್ನ ಮಿತ್ರನೊಬ್ಬನನ್ನು ಭೇಟಿಯಾಗಲು ಕರೆ ಮಾಡಿದೆ.

ಆತ ಗಾಂಧಿನಗರದ ಬಳಿಯಿರುವ ಮುರುಘಾ ಶರಣರ ಆಸ್ತಿಯಾಗಿರುವ ಕಟ್ಟಡದಲ್ಲಿ ತನ್ನ ಜಾತಿ ಸಂಘದ ಸಭೆ ಇದೆ, ಅಲ್ಲಿಗೆ ಬಂದರೆ ಸಿಗೋಣ ಎಂದನು. ಬೇಗನೆ ಹೋದ ನನ್ನನ್ನೂ ಆತ ಸಭೆಗೆ ಕರೆದೊಯ್ದ. ಅಲ್ಲಿ ಅವರ ಜಾತಿ ರಾಜಕಾರಣಿಯು, “ಲಿಂಗಾಯತರು ಗಟ್ಟಿಯಾಗಿ ಬೆಳೆಯುತ್ತಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಇದ್ದಾರೆ. ಅವರನ್ನು ತುಳಿಯಬೇಕು. ಬಲಿಷ್ಠ ಸಮುದಾಯದ ಲಿಂಗಾಯತ, ಒಕ್ಕಲಿಗರನ್ನು ಹಿಮ್ಮೆಟ್ಟಿಸದಿದ್ದರೆ ನಿಮಗೆ ಭವಿಷ್ಯವಿಲ್ಲ" ಇತ್ಯಾದಿಯಾಗಿ ದ್ವೇಷಭಾಷಣ ಮಾಡಿ ದರು.

ಇದನ್ನೇ ಸೌಹಾರ್ದಯುತವಾಗಿ ಸ್ಪರ್ಧಾತ್ಮಕವಾಗಿ ತಮ್ಮ ಸಮುದಾಯಕ್ಕೆ ಕಿವಿಮಾತಾಗಿ ಹೇಳ ಬಹುದಿತ್ತು. ಆದರೆ ಮದೋನ್ಮತ್ತರಾದ ಅವರಿಗೆ ಅಂಥ ಪ್ರೌಢಿಮೆಯ ಭಾಷಣದಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ ಎನಿಸಿತು. ಇಂಥ ವಿಷಯಗಳಲ್ಲಿ ಅಂದು ನನಗೂ ಯಾವ ಆಸಕ್ತಿಯೂ ಇರಲಿಲ್ಲ. ಹಾಗಾಗಿ ಅದನ್ನು ಉಪೇಕ್ಷಿಸಿ ಭಾಷಣ ಮುಗಿದ ಮೇಲೆ ನನ್ನ ಸ್ನೇಹಿತನೊಂದಿಗೆ ಉಂಡು ವಾಪಸ್ಸಾ ಗಿದ್ದೆ. ಇದು ನಾನು ಕಂಡ, ಮುಂದೆ ಮುಖ್ಯಮಂತ್ರಿಯಾದ ಆ ಜಾತಿನಾಯಕರ ‘ಲಿಂಗಾಯತ ಪ್ರೀತಿ’ಯ ಒಂದು ಪೂರ್ವಗ್ರಹ ಅಭಿಪ್ರಾಯದ ಪ್ರಾತ್ಯಕ್ಷಿಕತೆ!

ಇದನ್ನೂ ಓದಿ: Ravi Hunj Column: ಸಂಶೋಧಕರ ಪೂರ್ವಗ್ರಹದ ಪೊರೆಯಲ್ಲಿ ಮಸುಕಾಗಿರುವ ಬಸವಣ್ಣ ಮತ್ತು ಶರಣರು

ಇರಲಿ, ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳ ಬಸವ ಫಲಕ ಮತ್ತು ಅಕ್ಕಮಹಾದೇವಿ ನಾಮಾಂಕಣ ಕಾರ್ಯಗಳಿಂದ ಖುಷಿಯಾದ ವೀರಶೈವ ಮಹಾಸಭಾ ಅವರನ್ನು ಸನ್ಮಾನಿಸಿ ಪ್ರತ್ಯೇಕ ಧರ್ಮ ಬೇಡಿಕೆಗೆ ಮತ್ತೊಮ್ಮೆ ಜೀವ ತುಂಬಿ ಅವರ ಮುಂದಿಟ್ಟರು. ಇದರಿಂದ “ಇರದ ತನ್ನದನ್ನು ಎಲ್ಲಿಡಲಿ" ಎಂದು ಜಾಗೃತಗೊಂಡ ಮಾತೆ ಮಹಾದೇವಿ ಸಹ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಧರ್ಮದ ಬೇಡಿಕೆ ಸಲ್ಲಿಸಿದಳು.

ತನ್ನ ‘ಲಿಂಗಾಂಗ ಸಾಮರಸ್ಯ’ವನ್ನು ಮುಚ್ಚಿಕೊಳ್ಳಲು ಬಸವಣ್ಣ, ಲಿಂಗಾಯತವನ್ನು ಬಳಸಿದ ಮಹಿಳೆಗೆ ಬಹುವಚನ ಸಲ್ಲದ ಕಾರಣ ಇಲ್ಲಿ ಏಕವಚನ ಬಳಸಲಾಗಿದೆ ಎಂಬುದು ಒಂದು ಸ್ಪಷ್ಟನೆ ಅಷ್ಟೇ. ಈ ಎರಡು ಬದಿಯ ಪ್ರಸ್ತಾವನೆಯಿಂದ ರಾಜಕೀಯ ಪುಳಕವುಂಟಾಗಿ ಅಂದಿನ ಮುಖ್ಯ ಮಂತ್ರಿಗಳು “ಮಹಾಸಭಾ ಮತ್ತು ಮಾತೆ ಇಬ್ಬರೂ ಸೇರಿ ಒಟ್ಟಿಗೆ ಬನ್ನಿ, ನೋಡೋಣ" ಎಂದರು. ಮಹಾದೇವಿಯ ಮಹಾಕಾರ್ಯಗಳ ಅರಿವಿದ್ದ ಮಹಾಸಭಾ ಸುಮ್ಮನಾಯಿತು.

ಇಲ್ಲಿ ವೀರಶೈವ ಮಹಾಸಭಾ ಮತ್ತೊಮ್ಮೆ ಜೀವ ತುಂಬಿ ಪ್ರತ್ಯೇಕ ಧರ್ಮ ಬೇಡಿಕೆಯಿಟ್ಟಿತು ಎಂದದ್ದು ಏಕೆಂದರೆ, ವೀರಶೈವ ಮಹಾಸಭಾವು 2010ರ ಪ್ರತ್ಯೇಕ ಧರ್ಮದ ಮನವಿಯನ್ನು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿತ್ತು. ಆಗ ಸುಶೀಲ್ ಕುಮಾರ್ ಶಿಂಧೆ ಅವರು, “ನಿಮ್ಮ ಮಾಹಿತಿ ಯಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಸ್ಪಷ್ಟತೆಯಿಲ್ಲ.

ಹಿಂದೂ ಅಲ್ಲ ಎನ್ನುತ್ತೀರಿ, ಶಿವನನ್ನು ಆರಾಧಿಸುತ್ತೀರಿ; ವೈದಿಕ ಅಲ್ಲ ಎನ್ನುತ್ತೀರಿ, ಲಿಂಗಪೂಜೆ ಎನ್ನುತ್ತೀರಿ. ಹಾಗಾಗಿ ನಿಮ್ಮ ಸಿದ್ಧಾಂತದಲ್ಲಿ ಸ್ಪಷ್ಟತೆಯನ್ನು ಕಂಡುಕೊಂಡು ಬನ್ನಿ" ಎಂದರು. ಕೇವಲ ವೋಟಿಗಾಗಿ ಮಹಾಸಭಾಗೆ ಆತುಕೊಂಡಿದ್ದ ರಾಜಕಾರಣಿಗಳ ಆಡಳಿತದಲ್ಲಿದ್ದ ಮಹಾ ಸಭಾವು ವೀರಶೈವ ಸಂಶೋಧಕರನ್ನು, ಧಾರ್ಮಿಕ ಪಂಡಿತರನ್ನು ಈ ಸಭೆಗೆ ಪರಿಗಣಿಸಿಯೇ ಇರಲಿಲ್ಲ. ಹಾಗಾಗಿ ಬೌದ್ಧಿಕ ಪಂಡಿತರನ್ನು ನಿಯೋಜಿಸಿ ತಕ್ಕ ವಾದ ಮಂಡಿಸದೆ ಖುದ್ದು ವಾದ ಮಂಡಿಸಿದ್ದು ಈ ತಿರಸ್ಕಾರಕ್ಕೆ ಕಾರಣವಾಗಿತ್ತು. ಮುಂದೆಯೂ ಇದನ್ನು ಸರಿಪಡಿಸದೆ ರಾಜಕಾರಣಿ ಆಡಳಿತವರ್ಗ ಸೋನಿಯಾ ಗಾಂಧಿಯವರ ಮುಂದೆ ಪರೇಡು ಮಾಡಿ ಡೊಗ್ಗು ಸಲಾಮು ಹೊಡೆದು ಸುಮ್ಮನಾಯಿತು.

ಮಹಾಸಭಾದ ಪರೇಡು, ಡೊಗ್ಗು ಸಲಾಮಿನ ಮಾಹಿತಿ ಸಿಕ್ಕೊಡನೆ ಮಾತೆ, ಮತ್ತಿತರೆ ಪ್ರತ್ಯೇಕಿಗಳು ಮುದಗೊಂಡು ಧರ್ಮವೆಂದರೆ ಒಬ್ಬ ಪ್ರವಾದಿ, ಒಂದು ಧರ್ಮಗ್ರಂಥ ಎಂಬ ಶೀಘ್ರಸ್ಖಲಿತ ವಾದ ದಂತೆ ಬಸವಣ್ಣ, ವಚನ ಎಂದು ಬಡಬಡಾಯಿಸತೊಡಗಿದರು. ಇದಕ್ಕೆ ನೀರೆರೆದು ಪೋಷಿಸಿದ್ದು ಪಾಮರಪಂಡಿತ ಪ್ರೊ.ಕಲಬುರ್ಗಿ!

ತಾವು ಯಾರನ್ನು ಆಂಧ್ರದಿಂದ ಓಡಿ ಬಂದ ಆರಾಧ್ಯ ಬ್ರಾಹ್ಮಣರು ಎನ್ನುವರೋ ಅಂಥ ಜಂಗಮ ಆರ್.ಸಿ.ಹಿರೇಮಠರ ಮನೆಯಲ್ಲಿ ಮಾನ್ಯ ಕಲಬುರ್ಗಿಯವರು ಆಶ್ರಯ, ದಾಸೋಹ, ಪ್ರಸಾದ, eನಾರ್ಜನೆ ಪಡೆದು ಉದ್ಯೋಗ ಗಿಟ್ಟಿಸಿದ್ದರು. ಮುಂದೆ ಇಂಥದೇ ಆಂಧ್ರದಿಂದ ಓಡಿ ಬಂದ ಆರಾಧ್ಯ ಬ್ರಾಹ್ಮಣರು ಎನ್ನುವರೋ ಅಂಥ ಜಂಗಮ ಎಂ.ಪಿ.ಪ್ರಕಾಶ್ ಅವರ ಕಾಲಿಗೆ ಬಿದ್ದು ಕಾಡಿಬೇಡಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆ ಗಿಟ್ಟಿಸಿಕೊಂಡರು.

ಚೆನ್ನಬಸವಣ್ಣನ ಜನ್ಮರಹಸ್ಯವನ್ನು ಖುದ್ದು ಕಂಡಂತೆ ವರ್ಣಿಸಿದಾಗ ಜನ ತದುಕಲು ಬೆನ್ನಟ್ಟಿ ಬಂದಾಗ ಇವರು ರಕ್ಷಣೆ ಪಡೆದದ್ದೂ ಅದೇ ಆಂಧ್ರದಿಂದ ಓಡಿ ಬಂದ ಆರಾಧ್ಯ ಬ್ರಾಹ್ಮಣರಾದ ಗದುಗಿನ ತೋಂಟದಾರ್ಯ ಮಠಾಧಿಪತಿಗಳಡಿಯಲ್ಲಿಯೇ! ಹೀಗೆ ತಮ್ಮ ಜೀವನಪರ್ಯಂತ ಇಂಥ ಗುರುಲಿಂಗಜಂಗಮ ದಾಸೋಹ ಪಡೆದು ಉಂಡಮನೆಯಗಳ ಹಿರಿದ ಖ್ಯಾತಿ ಕಲಬುರ್ಗಿಯವರಿಗಿದೆ.

ಇಂಥ ಹೆಡ್ಡ ಸಂಶೋಧಿಗರು ಶಿವನೇ ಬೇರೆ, ಲಿಂಗವೇ ಬೇರೆ, ಕನ್ನಡ ಧರ್ಮ, ಸಾಮಾಜಿಕ ಕ್ರಾಂತಿ ಇತ್ಯಾದಿಯಾಗಿ ಕಾಲ್ಪನಿಕ ಸಂಕಥನ ಕಟ್ಟಿ ಅದಕ್ಕೆ ತಪ್ಪು ತಪ್ಪು ಸಂಶೋಧನೆ ಜೋಡಿಸಿ ಪ್ರತ್ಯೇಕತೆ ಯ ಅಮಲಿಗರಿಗೆ ಹೆಂಡ ಕುಡಿಸಿದರು. ಮುಂದೆ ಕಲಬುರ್ಗಿ ದಿವಂಗತರಾದ ನಂತರ ನಿವೃತ್ತಿಯಾಗಿ ಖಾಲಿ ಇದ್ದ ಜಾಮದಾರರೆಂಬ ಅಧಿಕಾರಿಶಾಹಿಗೆ ಪೌರಾಣಿಕ ಲಿಂಗೋದ್ಭವವನ್ನು ಪ್ರಶ್ನಿಸಿ ಖುದ್ದು ತಾವೇ ಏಕೆ ಉದ್ಭವವೂ ಆಧುನಿಕ ಬಸವಣ್ಣನೂ ಆಗಬಾರದು ಎಂಬ ದಿವ್ಯಜ್ಞಾನ ಹೊಳೆದು ಕಲಬುರ್ಗಿ-ಪ್ರಣೀತರಾಗಿ ಲಿಂಗಾಯತ ಬೇರೆ ವೀರಶೈವ ಬೇರೆ ಎಂದು ರಂಗಕ್ಕಿಳಿದರು. ಅದೇ ಉದ್ದೇಶದ ಹಲವಾರು ಪ್ರಭೃತಿಗಳೂ ಅವರೊಟ್ಟಿಗೆ ಕೈಜೋಡಿಸಿದರು.

ಇದಕ್ಕೆ ಸೋಮಾರಿ ಕಾವಿಧಾರಿಗಳು, ಶುಭ್ರ ಶ್ವೇತಾಂಗನೆಯರು, ಮತ್ತು ಕೆಂಪಂಗಿಗಳು ತೆಕ್ಕೆ ಹಾಕಿ ಕೊಂಡು ಸೇರಿಕೊಂಡರು. ಧರ್ಮ ಎನ್ನುತ್ತಾ ಧರ್ಮಾಚರಣೆಯ ಒಂದೇ ಒಂದು ತತ್ವವನ್ನೂ ಪ್ರತಿಪಾದಿಸದೆ, ಪಾಲಿಸದೆ ಸಾಮಾಜಿಕ ವಚನಗಳನ್ನೇ ಧರ್ಮ ಎಂದು, ಸಾಮಾಜಿಕ ಮೀಸಲಾತಿ ಎಂಬ ಅಮಲನ್ನು ಹಂಚಲಾರಂಭಿಸಿದರು.

ಈ ಅಮಲಿನ ಘಮಲು ಇಡೀ ರಾಜ್ಯವನ್ನು 2018ರಲ್ಲಿ ಆವರಿಸಿಕೊಂಡಿತು. ಇದಕ್ಕೆ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಲಿಂಗಾಯತ ರಾಜಕಾರಣಿಗಳು ಬಂಡವಾಳ ಹೂಡಿ ಹಣದ ಹೊಳೆ ಹರಿಸಿ ಧರ್ಮದ ತಲೆ ಹಿಡಿದರು. ಈ ಅಮಲಿನ ಪರಿಣಾಮವೇ ಓರ್ವ ನವ್ಯ ಜಾತಿಪೀಠಿ ಹುಬ್ಬಳ್ಳಿಯ ಸಮಾವೇಶದಲ್ಲಿ, “ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು.

ಐವರು ತಂದೆಗೆ ಹುಟ್ಟಿದವರು ವೀರಶೈವರು" ಎಂದು ತಮ್ಮ ಖಾಸಗಿ ಅಧ್ಯಾತ್ಮದ ತಾದಾತ್ಮ್ಯತೆ ಯನ್ನು ಪ್ರದರ್ಶಿಸಿದರು. ಇದಕ್ಕೆ ಘಮ ಗುಟ್ಟುವ ಅಮಲಿಗ ಸಮೂಹವು ‘ಬೋಪರಾಕ್ ಬೋಪರಾಕ್’ ಎಂದು ಜಯಘೋಷ ಮೊಳಗಿಸಿತು. ಅಂದ ಹಾಗೆ ಹನ್ನೆರಡನೇ ಶತಮಾನದ ಶರಣ ಚಳವಳಿಯೇ ಲಿಂಗಾಯತದ ಮೂಲ ಎನ್ನುವುದಾದರೆ, ಅದಕ್ಕಿರುವುದು ಏಳುನೂರ ಎಪ್ಪತ್ತು ಗಣಂಗಳೇ ಹೊರತು ಏಕೈಕನೊಬ್ಬನಲ್ಲ!

ಅಂದಹಾಗೆ ಜನಾಂಗೀಯ ಜಂಗಮದ್ವೇಷದ ಇವರು ಅರಿಯಬೇಕಾದ್ದು ಅನೇಕ ವೀರಶೈವ ವಿರಕ್ತ ಮಠಗಳಲ್ಲಿ ಜಂಗಮೇತರ ಸ್ವಾಮಿಗಳಿದ್ದಾರೆ ಎನ್ನುವುದು. ಉದಾಹರಣೆಗೆ ಸಿದ್ಧಗಂಗಾ, ಭಾಲ್ಕಿ, ಇಳಕಲ್ ಮಠಗಳು, ಬೈಲೂರಿನ ನಿಜಗುಣಾನಂದ ಸ್ವಾಮಿ, ದೇವನೂರಿನ ಗುರುಮಶ್ವರ ಮಠ ಮತ್ತು ಅದರ ಎ 365 ಶಾಖಾಮಠಗಳು, ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ, ನಂಜನಗೂಡಿನ ಕಂಬಳೇಶ್ವರ ಮಠ.... ಹೀಗೆ ಅನಾದಿಯಾಗಿ ಅನೇಕ ಮಠಗಳಲ್ಲಿ ಜಂಗಮೇತರ ಸ್ವಾಮಿಗಳೇ ಇದ್ದಾರೆ. ಇನ್ನುಳಿದಂತೆ ಜಾತಿಪೀಠಗಳಲ್ಲಿ ಆಯಾಯ ಜಾತಿಯ ಸ್ವಾಮಿಗಳಿದ್ದಾರೆಯೇ ಹೊರತು ಅವರು ಯಾವುದೇ ಅನ್ಯಜಾತಿಯ ಸ್ವಾಮಿಯನ್ನು ಹೊಂದಿಲ್ಲ.

ರಂಗಜ ಸಾಣೇಹಳ್ಳಿ ಸ್ವಾಮಿ ಸಹ ತಮ್ಮ ಪೀಠಕ್ಕೆ ಓರ್ವ ದಲಿತನನ್ನು ಸ್ವಾಮಿ ಮಾಡುತ್ತೇನೆ ಎನ್ನದೆ ತಮ್ಮ ಜಾತಿಯ ಸ್ವಾಮಿಯನ್ನೇ ನೇಮಕ ಮಾಡಲಿದ್ದಾರೆ. ಜಾತಿಪೀಠಗಳ ಇವರೆಲ್ಲರೂ ಸವಣ್ಣನಂತೆ ಸಂಸಾರಿಗರಾಗಿ ಭಕ್ತಿ ತೋರದೆ ಸನಾತನ ಧರ್ಮದಂತೆ ಕಾವಿ ಧರಿಸಿ ಬ್ರಹ್ಮಚಾರಿಗಳಾಗಿ ಕೈವಾಡ ತೋರುತ್ತಿದ್ದಾರೆ.

ನಾವು ಕ್ರಿಶ್ಚಿಯನ್ನರ ಪ್ರೊಟೆಸ್ಟಂಟರಂತೆ ಎನ್ನುವ ಇವರು ಪ್ರೊಟೆಸ್ಟಂಟರಂತೆ ಮದುವೆಯಾಗಿ ಮಕ್ಕಳ ಹೊಂದಿಯೂ ಚರ್ಚುಗಳ ಧರ್ಮಬೀರುಗಳಾಗಿ ಏಕೆ ಕಾರ್ಯ ನಿರ್ವಹಿಸಬಾರದು ಎಂಬುದು ಒಂದು ಜಿಜ್ಞಾಸೆ. ಅನಾದಿಯಾಗಿ ಅಧಿಕಾರ ಕೇಂದ್ರೀಕರಣ ತಪ್ಪು, ಅಧಿಕಾರ ವಿಕೇಂದ್ರೀ ಕರಣವೇ ಮುಖ್ಯ ಎಂಬ ನಿಚ್ಚಳ ಸ್ವರೂಪವೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂವರು ದೇವರುಗಳ ಸೃಷ್ಟಿಯ ಕಲ್ಪನೆಯಾಗಿದೆ.

ಇದನ್ನೇ ಜಗತ್ತಿನ ಅನೇಕ ಸಂವಿಧಾನಗಳು ಅಳವಡಿಸಿಕೊಂಡಿವೆ. ಇಂದಿಗೂ ಕೇಂದ್ರೀಕೃತ ಮೈಕ್ರೋ ಸಾಫ್ಟ್, ಆಪಲ, ಗೂಗಲ್ ಮುಂತಾದ ಕಂಪನಿಗಳನ್ನು ವಿಭಜಿಸಿ ವಿಕೇಂದ್ರಿಕರಿಸಿ ಎಂದು ನ್ಯಾಯಾ ಲಯಗಳು ತೀರ್ಪು ಇತ್ತಿವೆ. ಇಂಥ ಸಾಮಾನ್ಯ ಆಧ್ಯಾತ್ಮಿಕ ಸಾಮಾಜಿಕ ವಾಸ್ತವಿಕ ಧಾರ್ಮಿಕ ವ್ಯವಸ್ಥೆಯ ‘ರ ಠ ಈ ಕ’ ಅರಿಯದ ಹೆಡ್ಡರನ್ನು ಜಾತಿಪೀಠಗಳ ಮೇಲೆ ಕೂರಿಸಿ, ಪುಟದಿಂದ ಪುಟಕ್ಕೆ ರದ್ದಾಗುವ ಹುಂಬರನ್ನು ಸಂಶೋಧಕರನ್ನಾಗಿ ಮಾಡಿಕೊಂಡು, ತನ್ನ ‘ಲಿಂಗಾಂಗ ಸಾಮರಸ್ಯ’ ವನ್ನು ಮುಚ್ಚಿಕೊಳ್ಳಲು ‘ಬಸವಾ ಬಸವಾ’ ಜಪಿಸಿದವಳನ್ನು ಜಗನ್ಮಾತೆಯಾಗಿಸಿ, ಅಧ್ಯಾತ್ಮದ ಷಟ್‌ಸ್ಥಲದ ವಚನಗಳನ್ನು ಬಿಟ್ಟು ಕೇವಲ ಅವಧಿ ಮೀರಿದ ಸಾಮಾಜಿಕ ವಚನಗಳನ್ನು ಹಿಡಿದು ಕೊಂಡವರು ಧರ್ಮ ಎಂದರೆ, ಅಂಥ ಧರ್ಮ ನಿಂತೀತೆ?!

ಹಾಗಾಗಿಯೇ ಈ ಸಮಾವೇಶ ಮುಗಿದ ಮೇಲೆ ‘ಲಿಂಗಾಯತ ಧರ್ಮ’ ಎಂಬ ಬರಹವನ್ನು ಹೊತ್ತಿದ್ದ ಟೋಪಿ ಧರಿಸಿದ ಹಲವಾರು ಸಮಾವೇಶಿಗರು ಅಮಲು ಹೆಚ್ಚಾಗಿ ಚರಂಡಿಗಳಲ್ಲಿ ಬಿದ್ದಿರುವ ಫೋಟೋಗಳು ಎಲ್ಲಿಯೂ ಅಂದು ಮಾಧ್ಯಮಗಳಲ್ಲಿ ರಾರಾಜಿಸಿದ್ದವು.

ಅಂದ ಹಾಗೆ ವಚನಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ವಚನಗಳಿವೆ. ಆಧ್ಯಾತ್ಮಿಕ ವಚನಗಳು ಷಟ್‌ಸ್ಥಲ ಆಚರಣೆಗೆ ತಕ್ಕಂತೆ ರೂಪುಗೊಂಡಿದ್ದರೆ, ಸಾಮಾಜಿಕ ವಚನಗಳು ಅಂದಿನ ವರ್ತಮಾ ನದ ಸಾಮಾಜಿಕ ಕಳಕಳಿಗೆ ತಕ್ಕಂತೆ ರೂಪಿತಗೊಂಡಿದ್ದವು. ಅವು ಅಂದಿನ ವರ್ತಮಾನಕ್ಕೆ ಮಾತ್ರ ಸೀಮಿತ. ಇಂದಿನ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅವು ಇತಿಹಾಸವಷ್ಟೇ. ಮೇಲಾಗಿ ಧಾರ್ಮಿಕ ವಾಗಿ ಸಹ ಅವು ಎಂದೆಂದಿಗೂ ಅಪ್ರಸ್ತುತ.

ಇಂಥ ಸಾಮಾನ್ಯ ಜ್ಞಾನವೂ ಇರದ ಸರಕಾರ ರಚಿಸಿದ ಸಮಿತಿಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್ ವಹಿಸಿದ್ದರೆ ಸಾಹಿತಿ ಚಿಂತಕ ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ವಕೀಲ-ತನಿಖಾ ಪತ್ರಕರ್ತ, ಚಿಂತಕ ಸಾಹಿತಿಗಳಾದ ಸಿ.ಎಸ್.ದ್ವಾರಕಾ ನಾಥ್, ಪತ್ರಕರ್ತ ಸಾಹಿತಿ ಸರಜೂ ಕಾಟ್ಕರ್, ಸಾಹಿತಿ ಪ್ರೊ.ರಾಮಕೃಷ್ಣ ಮರಾಠೆ, ಸಂಶೋಧಕ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಸಂಶೋಧಕ ಪ್ರೊ.ಮುಜಾಫರ್ ಅಸಾದಿ ಮತ್ತು ಲೇಖಕಿ ಸಂಶೋಧಕಿ ಹನುಮಾಕ್ಷಿ ಗೋಗಿ ಈ ಸಮಿತಿಯ ಸದಸ್ಯರಾಗಿದ್ದರು.

ಈ ಸಮಿತಿಯ ವರದಿಯು ಸಾರ್ವತ್ರಿಕವಾಗಿ ಲಭ್ಯವಿಲ್ಲ. ಆದರೆ ಈ ಸಮಿತಿಯು ಲಿಂಗಾಯತ ಪ್ರತ್ಯೇಕ ಧರ್ಮವೆಂದು ವರದಿ ಕೊಟ್ಟಿತ್ತು ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಈ ಸಮಿತಿ ಯು ತನ್ನ ಸತ್ಯಶೋಧನೆಗೆ ಯಾವ ಆಕರಗಳನ್ನು ಬಳಸಿತ್ತೋ ಗೊತ್ತಿಲ್ಲ.

ಇವರು ಪ್ರಮುಖವಾಗಿ ಬಸವ ಕೇಂದ್ರಿತ ಆಕರಗಳನ್ನು ಬಳಸಿರಬಹುದಾದ ಕಾರಣ ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥ ವಿರಚಿತ ತೆಲುಗು ಭಾಷೆಯಲ್ಲಿರುವ ‘ಬಸವಪುರಾಣಮು’ ಕೊರಳಿಗೆ ಲಿಂಗ ಕಟ್ಟುವ ಪದ್ಧತಿ ಬಸವಪೂರ್ವದಿಂದಲೂ ಜಾರಿಯಲ್ಲಿತ್ತು ಎಂದು ಹೇಳಿದೆ.

ಇದನ್ನೇ ಹರಿಹರನ ‘ಬಸವರಾಜದೇವರ ರಗಳೆ’ ಅನುಮೋದಿಸುತ್ತದೆ, ಭಾರತೀಯ ಇತಿಹಾಸ ಪುರಸ್ಕರಿಸುತ್ತದೆ, ಉತ್ಖನನ ಸಾಕ್ಷ್ಯ ಪುರಾವೆ ಕೊಡುತ್ತದೆ. ಇಷ್ಟೆ ಪುರಾವೆಗಳಿದ್ದೂ ಬಸವಣ್ಣನೇ ಇಷ್ಟಲಿಂಗ ಜನಕ ಎಂದು ಈ ಸಮಿತಿ ತೀರ್ಮಾನಿಸಿತ್ತು. ಇನ್ನು ವಚನಗಳಲ್ಲಿ ವೀರಶೈವ ಎಂಬ ಪದವನ್ನು 142 ವಚನಗಳಲ್ಲಿ ಒಟ್ಟು 221 ಕಡೆ 30ಕ್ಕೂ ಹೆಚ್ಚು ವಚನಕಾರರು ಬಳಸಿದ್ದಾರೆ.

ಲಿಂಗಾಯತ ಎಂಬ ಪದವನ್ನು ಒಟ್ಟು 10 ವಚನಗಳಲ್ಲಿ 12 ಕಡೆ 8 ವಚನಕಾರರು ಬಳಸಿದ್ದಾರೆ. ಈ ಸಮಿತಿಯ ಸತ್ಯಶೋಧನೆಗೆ ವಚನಗಳೇ ಬಹುಪಾಲು ಆಧಾರವಾಗಿರುವಾಗ ಇಂಥ ಅಧಿಕೃತ ಕನಿಷ್ಠ ಅಂಕಿ ಅಂಶಗಳನ್ನೇ ಕೆದಕದ ಈ ಸಮಿತಿಯಲ್ಲಿದ್ದ ಖ್ಯಾತ ನಿವೃತ್ತ ನ್ಯಾಯಾಧೀಶರು, ಸಂಶೋಧನ ಹಿನ್ನೆಲೆಯ ಪ್ರಾಧ್ಯಾಪಕರು, ತನಿಖಾ ವಿಶ್ಲೇಷಣಾ ವರದಿಗಾರ ತಜ್ಞ ಪತ್ರಕರ್ತರು ಅವರವರ ವೃತ್ತಿ ಗಳಿಗೆ ಅದೆಷ್ಟು ನೈತಿಕತೆ, ನ್ಯಾಯಬದ್ಧತೆ, ಸತ್ಯನಿಷ್ಠೆಯನ್ನು ತೋರಿದ್ದರು ಎಂಬ ಧನಾ (ಋಣಾ)ತ್ಮಕ ಸಂಶಯವನ್ನು ಸಹಜವಾಗಿ ಮೂಡಿಸುತ್ತವೆ!

ಏಕೆಂದರೆ ಯಾವಾಗ ಮಾರ್ಚ್ 27, 2018ರಂದು ಚುನಾವಣೆ ಘೋಷಣೆಯ ಅಧಿಸೂಚನೆಯಂತೆ ಚುನಾವಣಾ ಸಂಹಿತೆ ಶೀಘ್ರದಲ್ಲಿ ಜಾರಿಯಾಗುವುದು ಎಂದು ತಿಳಿಯಿತೋ ಆಗ ಕಾಂಗ್ರೆಸ್ ಸರಕಾರವು ವಿಧಾನಸಭೆಯಲ್ಲಿ ಚರ್ಚಿಸದೆ ತರಾತುರಿಯಲ್ಲಿ ಮಾರ್ಚ್ 22ರಂದು ‘ಮುಚ್ಚಿದ ದ್ವಾರಗಳ’ ಕ್ಯಾಬಿನೆಟ್ ಮೀಟಿಂಗಿನಲ್ಲಿ ಈ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿತು.

ಆರು ತಿಂಗಳ ಸಮಯ ಕೇಳಿದ್ದ ನಾಗಮೋಹನ್ ದಾಸ್ ಸಮಿತಿ ಎರಡೇ ತಿಂಗಳಲ್ಲಿ ಶೀಘ್ರ ಸ್ಖಲಿತ ಗೊಂಡು ಮಾರ್ಚ್ 20ಕ್ಕೇ ತನ್ನ ವರದಿ ಸಲ್ಲಿಸಿ ಸರಕಾರಕ್ಕೆ “ತಾನಿತಂದಾನ ಜೋಡಿ ಯಾಗೋಣ" ಎಂದು ಕೋರಸ್ ಹಾಡಿತು. ಅಂದಹಾಗೆ ಈ ಸಮಿತಿಯ ಸಂಪೂರ್ಣ ವರದಿಯ ಲೇಖಕರು ಶ್ರೀಯುತ ಜಾಮದಾರರು ಎಂದು ಇಡೀ ರಾಜ್ಯವೇ ಮಾತನಾಡಿಕೊಂಡಿತ್ತು!

ಹೀಗೆ ಜಾಮದಾರರು ಕೊಟ್ಟರೆನ್ನುವ ಇಡೀ ವರದಿಗೆ ಸಮಿತಿಯು ತನ್ನ ಹೆಸರು ಹಾಕಿ ಕೈತೊಳೆದು ಕೊಂಡು ಸರಕಾರದ ಮೂತಿಗೆ ತನ್ನ ಖರ್ಚಿನ ಬಾಬತ್ತು 36 ಲಕ್ಷ ರುಪಾಯಿಗಳನ್ನು ಒರೆಸಿತು. ಈ ಸಮಯದಲ್ಲಿ ವಕೀಲರೊಬ್ಬರು ನಾಗಮೋಹನ ದಾಸರನ್ನು ‘ಅಪ್ರಾಮಾಣಿಕ’ ಎಂದು ಸಾಕ್ಷಿ ಸಮೇತ ಸಾಬೀತು ಮಾಡಿದ ವರದಿಯು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವೂ ಆಗಿತ್ತು.

ಈ ಎಲ್ಲಾ ಕಾರಣಗಳಿಗಾಗಿಯೇ ಕಾಂಗ್ರೆಸ್ ಸರಕಾರದ ಆಶಯಕ್ಕೆ ತಕ್ಕಂತೆ ವರದಿ ಕೊಡುವ ಏಕ ಮಾತ್ರ ನ್ಯಾಯನಿರ್ಣಯಿ ಪುಂಗಿದಾಸರೆಂಬ ಖ್ಯಾತಿವರೇಣ್ಯರಾದ ಕಾರಣ ಇವರು ಈಗಲೂ ಕಾಂಗ್ರೆಸ್ ಸರಕಾರದ ಅನೇಕ ಸಮಿತಿಗಳ ಏಕಮಾತ್ರ ಸದಸ್ಯರಾಗಿದ್ದಾರೆ. ಈ ಸಮಿತಿಯ ಓರ್ವ ಸದಸ್ಯರು ಫಲಾನುಭವಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಉಳಿದವರು ಅವರವರ ಯೋಗ್ಯತೆಗೆ ತಕ್ಕ ಭಾಗ್ಯಗಳನ್ನು ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಓರ್ವ ಅಧಿಕಾರಸ್ಥ ರಾಜಕಾರಣಿ ರಚಿಸಿದ ಸಮಿತಿಯು ಆ ರಾಜಕಾರಣಿಗೆ ಬದ್ಧವಾಗಿತ್ತೇ ಹೊರತು ವಿಷಯಕ್ಕಲ್ಲ ಎಂದು ಈ ಸಮಿತಿಯ ವರದಿ ಸಾಬೀತು ಮಾಡಿತ್ತು. ಇರಲಿ, ಅಂತಿಮವಾಗಿ ಈ ಸಮಿತಿಯು (ನಿಗೂಢ ಕರ್ತೃ ಜಾಮದಾರ) ಲಿಂಗಾಯತ ಪ್ರತ್ಯೇಕ ಧರ್ಮ ಪುರಸ್ಕರಿಸಿ, “ಬಸವ ತತ್ವ ನಂಬುವವರು ಲಿಂಗಾಯತ ಧರ್ಮಿಗರು" ಎಂದಿತೇ ಹೊರತು ಬಸವತತ್ವ ಪಾಲಿಸುವವರು ಲಿಂಗಾಯತರು ಎನ್ನಲಿಲ್ಲ.

ಸಮಗ್ರವಾಗಿ ಇಂತಿಷ್ಟು ಘಟನೆಗಳ ಇತಿಹಾಸ ನಮ್ಮೆಲ್ಲರ ಕಣ್ಣ ಮುಂದಿದೆ. ಇಂಥ ಕ್ಷುಲ್ಲಕ ಘಟನೆ ಗಳನ್ನು ವಿಸ್ತರಿಸಿ ಪುಸ್ತಕ ಬರೆದು ಅದು ಇತಿಹಾಸದ ದಾಖಲೆ ಎನ್ನುವುದು ಥಾಯ್ಲೆಂಡಿನಲ್ಲಿ ಬಸವಣ್ಣನನ್ನು ಕಂಡವರಿಗೆ ಮತ್ತು ವೃಷಣವನ್ನು ಮಸ್ತಕಕ್ಕಿಂತ ದೊಡ್ಡದೆಂದು ಚಿತ್ರಿಸುವವರಿಗೆ ಮಾತ್ರ ಸಾಧ್ಯ!

ಹಾಗೆಯೇ ಇಂಥ ಸ್ಫಟಿಕ ಸದೃಶ ಸುಳ್ಳುಗಳನ್ನು ಪುರಸ್ಕರಿಸಿ ಕೈಗಾರಿಕಾ ಮಂತ್ರಿಮಹೋದಯರು ಬೀಗಿ ತೂಗುವುದು, ಈ ಸುಳ್ಳುಗಳನ್ನು ಅನಾವರಣಗೊಳಿಸಿದ ಶಿಕ್ಷಣ, ಸಂಶೋಧನೆ, ವಿಕಾಸಗಳ ವಾಸ್ತವಿಕ ಅರಿವೇ ಇಲ್ಲದೆ ಶಿಕ್ಷಣ ಕ್ಷೇತ್ರದಿಂದ ಸತತವಾಗಿ ಗೆದ್ದು ಪರಿಷತ್ತಿನ ಅಧ್ಯಕ್ಷರಾದವರು ತಮ್ಮ ಸ್ಥಾನದ ಘನತೆ ಮರೆತು ಜಾತಿಯ ಪ್ರತಿಪಾದಕರಂತೆ ಜಾತಿಯ ಸಂಸ್ಥಾಪಕರಂತೆ ಮಾತನಾ ಡಿದ್ದು ಎಲ್ಲವೂ ಮಾಹಿತಿ ತಂತ್ರಜ್ಞಾನ ಯುಗದ ಬಸವದುರಂತ!

ಒಟ್ಟಾರೆ, ಸರಕಾರ ನಿಯೋಜಿಸಿದ್ದ ಲಿಂಗಾಯತ ಧರ್ಮ ಅಧ್ಯಯನ ಸಮಿತಿ, ಮತ್ತು ಧರ್ಮಾ ಭಂಜಕರು ಕಟ್ಟಿಕೊಂಡಿರುವ ಜಾಗತಿಕ ಲಿಂಗಾಹತ ಮಹಾಸಭಾ ಎಂಬುದು ವಿದೂಷಕರ ಅಧೋ ಗತಿಯ ಮಾಪನವೇ ಹೊರತು ಸಮಾಜದ ಮಾಪಕವಲ್ಲ ಎಂದೇ ಕಾಲ ನಿರ್ಣಯಿಸಲಿದೆ.

ಮೊಹೆಂಜೋ-ದಾರೋ ಉತ್ಖನನದಿಂದ ಉದ್ಭವಗೊಂಡು ಭಕ್ತಿಪಂಥದಲ್ಲಿ ಆಸ್ಫೋಟಕರವಾಗಿ ಬೆಳೆದು ಹತ್ತನೇ ಶತಮಾನದಿಂದ ಹದಿಮೂರನೇ ಶತಮಾನದವರೆಗೆ ವಿಕಾಸಗೊಳ್ಳುತ್ತ ಸಾಗಿ ಬಂದ ವೀರಶೈವದ ಹಾದಿಯು ಬಹು ವಿಸ್ತಾರವಾದುದು. ಅಂದಿನ ಧಾರ್ಮಿಕ, ಸಾಮಾಜಿಕ, ರಾಜಕೀಯ, ಮಾನವ ವಿಕಾಸ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಇತಿಹಾಸಗಳನ್ನೆಲ್ಲ ಸಮಗ್ರವಾಗಿ ಪರಿಗಣಿಸಿ ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಕಂಡುಬರುವ ಸತ್ಯ, ಕಾಳಾಮುಖ- ವೀರಶೈವ-ಲಿಂಗಾಯತ ವಷ್ಟೇ!

ಇದನ್ನೇ ‘ವಿಶ್ವವಾಣಿ’ ಲೇಖನಗಳು ವೀರಶೈವ-ಲಿಂಗಾಯತವನ್ನು ಆಧಾರಯುಕ್ತವಾಗಿ, ಸವಿಸ್ತಾರ ವಾಗಿ, ಐತಿಹಾಸಿಕವಾಗಿ, ಸಾಮಾಜಿಕವಾಗಿ, ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಸವಾಲೊಡ್ಡಿ ವೀರ ಶೈವ ಲಿಂಗಾಯತವು ಒಂದೇ ಎಂದು ಸಾಬೀತುಮಾಡಿದೆ. ಅಲ್ಲದೆ ಹಿಂದೂ ಎನ್ನುವುದು ಧರ್ಮ ವಲ್ಲ ಸಂಸ್ಕೃತಿ ಎಂಬ ಹಿನ್ನೆಲೆಯಲ್ಲಿ ವೀರಶೈವವು ಹೇಗೆ ಪ್ರತ್ಯೇಕ ಧರ್ಮವಾಗಬಲ್ಲದು ಎಂಬ ಸ್ಪಷ್ಟತೆಯನ್ನು ತನ್ನ ‘ಬಸವ ಮಂಟಪ’ ಸರಣಿಯ ಮೂಲಕ ಕಟ್ಟಿಕೊಟ್ಟಿದೆ.

ಇದನ್ನಾಧರಿಸಿ ವೀರಶೈವ ಮಹಾಸಭಾ ತನ್ನ ಹೋರಾಟವನ್ನು ಪುನರುಜ್ಜೀವಗೊಳಿಸುವುದೇ ಅಥವಾ ನಿಸ್ತೇಜ ಶವವಾಗಿ ಲೋಭಿಗರಡಿಯಲ್ಲಿ ಬಿದ್ದಿರುವುದೇ ಎಂಬುದು ಮಹಾಸಭಿಗರಿಗೆ ಬಿಟ್ಟ ವಿಷಯ. ಏಕೆಂದರೆ ಅದಿನ್ನೂ ತನ್ನ ರಾಷ್ಟ್ರಾಧ್ಯಕ್ಷರ ಅಂಗಸೇವಕನ ಮರ್ದನದ ಕೃಪೆಯಲ್ಲಿ ನಿಸ್ತೇಜವಾಗಿದೆ.

(ಲೇಖಕರು ಶಿಕಾಗೊ ನಿವಾಸಿ ಸಾಹಿತಿ)