Rakesh Poojary: ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ? ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್ ಶೆಟ್ಟಿ ವಿರುದ್ಧ ನೆಟ್ಟಿಗರು ಗರಂ
Rishab Shetty: ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮ ಸೀಸನ್ 3ರ ವಿನ್ನರ್, ನಟ ರಾಕೇಶ್ ಪೂಜಾರಿ ಧಿಡೀರ್ ಆಗಿ ಮೃತಪಟ್ಟಿದ್ದು, ಅವರ ಹುಟ್ಟೂರು ಉಡುಪಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಅವರ ಅಂತಿಮ ದರ್ಶನ ಪಡೆಯದ ರಿಷಬ್ ಶೆಟ್ಟಿ ವಿರುದ್ಧ ಇದೀಗ ಟೀಕೆ ಕೇಳಿ ಬಂದಿದೆ.

ರಾಕೇಶ್ ಪೂಜಾರಿ ಮತ್ತು ರಿಷಬ್ ಶೆಟ್ಟಿ.

ಉಡುಪಿ: ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮ ಸೀಸನ್ 3ರ ವಿನ್ನರ್, ನಟ ರಾಕೇಶ್ ಪೂಜಾರಿ (Rakesh Poojary) ಅವರ ದಿಢೀರ್ ಸಾವು ಸ್ಯಾಂಡಲ್ವುಡ್ಗೆ ಬಂದೆರಗಿದ ಅನಿರೀಕ್ಷಿತ ಆಘಾತ. ಅವರ ಅಂತ್ಯಕ್ರಿಯೆ ಹುಟ್ಟೂರು ಉಡುಪಿಯಲ್ಲಿ ನೆರವೇರಿದೆ. ಅವರ ಅಂತಿಮ ದರ್ಶನ ಪಡೆಯಲು ಸೆಲೆಬ್ರಿಟಿಗಳು, ಕಲಾವಿದರು ಬೆಂಗಳೂರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಆದರೆ ಉಡುಪಿ ಸಮೀಪದ ಕುಂದಾಪುರದಲ್ಲಿದ್ದರೂ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಆಗಮಿಸದೇ ಇದ್ದುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ರಿಷಬ್ ನಟಿಸಿ, ನಿರ್ದೇಶಿಸುತ್ತಿರುವ ʼಕಾಂತಾರ ಚಾಪ್ಟರ್ 1ʼ ಚಿತ್ರದಲ್ಲಿ ರಾಕೇಶ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದರು. ಅದಾಗ್ಯೂ ಅವರ ಅಂತಿಮ ದರ್ಶನ ಪಡೆಯಲು ರಿಷಬ್ ಬಂದಿಲ್ಲ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.
ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ನಿರ್ದೇಶಕ ಯೋಗರಾಜ್ ಭಟ್, ರಕ್ಷಿತಾ, ಅನುಶ್ರೀ, ಮಾಸ್ಟರ್ ಆನಂದ್, ನಯನಾ, ವಾಣಿ, ಸೂರಜ್, ಸೂರ್ಯ ಕುಂದಾಪುರ ಸೇರಿದಂತೆ ಹಲವು ಕಲಾವಿದರು ಬೆಂಗಳೂರಿನಿಂದ ಬಂದಿದ್ದರು. ಆದರೆ ಉಡುಪಿಗೆ ಸಮೀಪದಲ್ಲೇ ಇರುವ ರಿಷಬ್ ಶೆಟ್ಟಿ ರಾಕೇಶ್ ಪೂಜಾರಿಯ ಅಂತಿಮ ದರ್ಶನ ಪಡೆದಿಲ್ಲ. ಘಟನೆ ನಡೆದು 3 ದಿನವಾದವಾದರೂ ಅವರ ಕುಟುಂಬದವರನ್ನು ಭೇಟಿ ಆಗಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ: Rakesh Poojary: ಕಾಮಿಡಿ ಕಿಲಾಡಿಗಳು ಗೆದ್ದಾಗ ಸಿಕ್ಕಿದ 8 ಲಕ್ಷವನ್ನು ರಾಕೇಶ್ ಏನು ಮಾಡಿದ್ರು ಗೊತ್ತೇ?
ʼʼ500 ಕಿ.ಮೀ. ದೂರದಿಂದ ಹಲವರು ಬಂದಿದ್ದಾರೆ. ಆದರೆ ಕೇವಲ 30 ಕಿ.ಮೀ. ದೂರದಲ್ಲಿದ್ದರೂ ಬರಲು ಪುರಸೊತ್ತು ಇಲ್ಲವೆ?ʼʼ, ‘ʼಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ?ʼ’, ‘ʼಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ?ʼ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಕುರಿತಾಗಿ ಹಲವು ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದ ರಿಷಬ್ ಶೆಟ್ಟಿ
ರಾಕೇಶ್ ಪೂಜಾರಿ ಸಾವಿಗೆ ಸಂತಾಪ ಸೂಚಿಸಿ ಮೇ 12ರಂದು ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದರು. ʼʼನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ... ಮತ್ತೆ ಹುಟ್ಟಿ ಬಾ ಗೆಳೆಯ... ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿʼʼ ಎಂದು ಬರೆದುಕೊಂಡಿದ್ದರು.
ರಿಷಬ್ ಶೆಟ್ಟಿ ಅವರ ಎಕ್ಸ್ ಪೋಸ್ಟ್:
ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ ..
— Rishab Shetty (@shetty_rishab) May 12, 2025
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ… pic.twitter.com/x2Cev99kGi
ಬಹು ನಿರೀಕ್ಷಿತ ʼಕಾಂತಾರ ಚಾಪ್ಟರ್ 1ʼರಲ್ಲಿ ರಾಕೇಶ್ ಶೆಟ್ಟಿ ಬಹು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರು ತಿಂಗಳ ಹಿಂದೆಯೇ ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ರಾಕೇಶ್ಗೆ ʼಕಾಂತಾರ ಚಾಪ್ಟರ್ 1ʼರಲ್ಲಿ ಮುಖ್ಯ ಪಾತ್ರ ಲಭಿಸಿತ್ತು ಎನ್ನಲಾಗಿದೆ. ಹೀಗಾಗಿಯೇ ಅವರು ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.