India-Canada Deal: ಭಾರತ-ಕೆನಡಾ ಮಹತ್ವದ ಒಪ್ಪಂದ- ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಬಿಗ್ ಶಾಕ್!
ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಂತರ, ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತ ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನಲೆ ಭಾರತ ಮತ್ತು ಕೆನಡಾ ನಡುವಿನ ಬಾಂದವ್ಯ ಕಡಿದು ಬಿದ್ದಿತ್ತು. ಇದೀಗ ಹಾಳಾಗಿರುವ ಸಂಬಂಧವನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಉಭಯ ದೇಶಗಳು ಗಡಿಯಾಚೆಗಿನ ಅಪರಾಧಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮಹತ್ವದ ಒಪ್ಪಂದವನ್ನು ಮಾಡಿಕೊಂಡಿವೆ.


ಕೆನಡಾ: ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಮುನಿಸಿಕೊಂಡಿದ್ದ ಭಾರತ ಮತ್ತು ಕೆನಡಾ ಇದೀಗ ಮಹತ್ವದ ಒಪ್ಪಂದವೊಂದಕ್ಕೆ(India-Canada Deal) ಮುಂದಾಗಿವೆ. ಇದೀಗ ಭಾರತ ಮತ್ತು ಕೆನಡಾ ಸರ್ಕಾರಗಳು ಗಡಿಯಾಚೆಗಿನ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದು, ಇದು ಕೆನಡಾವನ್ನು ತಮ್ಮ ಮೂಲ ನೆಲಯನ್ನಾಗಿಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಮರ್ಮಾಘಾತ ನೀಡಿದೆ.
ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಂತರ, ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತ ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನಲೆ ಭಾರತ ಮತ್ತು ಕೆನಡಾ ದೇಶಗಳು ತಮ್ಮ ನಡುವಿನ ಸಂಬಂಧವನ್ನು ಪರಸ್ಪರ ಕಳೆದುಕೊಂಡಿದ್ದವು. ಭಾರತ ಈ ಆರೋಪವನ್ನು ಖಂಡಿಸಿ, ಖಲಿಸ್ತಾನ್ ಸಮಸ್ಯೆಗೆ ಕೆನಡಾ ಸರ್ಕಾರ ಸ್ಪಂದಿಸದೆ ಇರುವುದನ್ನು ತೀವ್ರವಾಗಿ ಟೀಕೆ ಮಾಡಿತ್ತು. ಇದೀಗ ಕೆನಡಾದಲ್ಲಿ ಮಾರ್ಕ್ ಕಾರ್ನಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭಾರತದತ್ತ ಸ್ನೇಹ ಹಸ್ತ ಚಾಚಿದೆ.
ಏನಿದು ಒಪ್ಪಂದ?
ಭಯೋತ್ಪಾದನೆ, ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಪರಸ್ಪರ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲು ಉಭಯ ರಾಷ್ಟ್ರಗಳು ಮುಂದಾಗಿವೆ. ಒಪ್ಪಂದದ ಸಂಪೂರ್ಣ ವಿವರಗಳು ಇನ್ನೂ ಕೂಡ ಅಂತಿಮವಾಗಿ ಹೊರಬಿದ್ದಿಲ್ಲ. ಮುಂದಿನ G-7 ಶೃಂಗಸಭೆಯಲ್ಲಿ ಈ ಒಪ್ಪಂದವನ್ನು ಸಾರ್ವಜನಿಕವಾಗಿ ಘೋಷಿಸುವ ಸಾಧ್ಯತೆ ಇದೆ. ಈ ಸಭೆಗೆ ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಿದ್ದಾರೆ. ಈ ಒಪ್ಪಂದದಲ್ಲಿ ಕೆನಡಾ ಎಕ್ಸ್ಟ್ರಾ ಜುಡೀಷಿಯಲ್ ಕಿಲ್ಲಿಂಗ್'ಗಳ ತನಿಖೆಗೂ ಆದ್ಯತೆ ನೀಡಲಿದೆ ಎನ್ನಲಾಗುತ್ತಿದೆ. ಇಬ್ಬರು ನಾಯಕರು ಸಭೆಯಲ್ಲಿ ಮುಖಾಮುಖಿಯಾಗಿ ಒಪ್ಪಂದದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಈ ಸುದ್ದಿಯನ್ನೂ ಓದಿ: Protest against Modi: ಕೆನಡಾದಲ್ಲಿ ಭಾರತ, ಮೋದಿ ವಿರೋಧಿ ಪ್ರತಿಭಟನೆ- ಪಾಕ್ನ ISI ಕೈವಾಡ?
ಈ ಒಪ್ಪಂದ ಪ್ರಕ್ರಿಯೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು, ಉಭಯ ರಾಷ್ಟ್ರಗಳ ಪೊಲೀಸ್ ಇಲಾಖೆಗಳ ನಡುವೆ ನಡೆಯಲಿರುವ ಸಭೆಯಾಗಿದೆ. ಬಳಿಕ ಇತರ ತನಿಖಾ ಸಂಸ್ಥೆಗಳನ್ನು ಕೂಡ ಒಳಗೊಂಡು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಅವರು ಕೆನಡಾದ ನೂತನ ಪ್ರಧಾನಿ ಕಾರ್ನಿ ಗೆಲುವಿಗೆ ಶುಭಾಶಯ ಕೋರಿದ್ದರು. ಇದು ಎರಡು ದೇಶಗಳ ನಡುವೆ ಹಾಳಾಗಿರುವ ಸಂಬಂಧವನ್ನು ಮತ್ತೆ ಸ್ಥಾಪಿಸುವ ಮುನ್ಸೂಚನೆಯನ್ನು ನೀಡಿತ್ತು. ಇದೀಗ ಇದರ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ಮಾತುಕತೆ ಕೂಡ ಆರಂಭವಾಗಿದೆ. ಮತ್ತೊಂದೆಡೆ ನಿಜ್ಜರ್ ಹತ್ಯೆಗೆ ಸಂಬಂಧಿಸಿ ತನಿಖೆ ನಡೆಯುತ್ತಿರುವಾಗಲೇ ಕೆನಡಾ ಪ್ರಧಾನಿ ಕಾರ್ನಿ ಮೋದಿಯವರನ್ನು G-7 ಶೃಂಗಸಭೆಗೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ.