Pralhad Joshi: ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರುತ್ತಿದೆಯೇ ಕಾಂಗ್ರೆಸ್ ಸರ್ಕಾರ? ಪ್ರಲ್ಹಾದ್ ಜೋಶಿ
Pralhad Joshi: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ತುಷ್ಟೀಕರಣದ ಪರಾಕಾಷ್ಠೆ ಮೆರೆಯುತ್ತಿದ್ದು, ವಿಚಾರವಾದಿಗಳ, ಚಿಂತಕರ, ಉಪನ್ಯಾಸಕರ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಬೆಂಗಳೂರು: ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ನೋಟಿಸ್ ನೀಡಿ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಹೊರಟಿದೆಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಯುವ ಬ್ರಿಗೇಡ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸೂಲಿಬೆಲೆ ಉಪಸ್ಥಿತಿ, ಭಾಷಣ ತಡೆಯಲು ಕಾಂಗ್ರೆಸ್ ಸರ್ಕಾರ ಈ ಮಟ್ಟದ ಕೀಳು ರಾಜಕಾರಣಕ್ಕೆ ಇಳಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ತುಷ್ಟೀಕರಣದ ಪರಾಕಾಷ್ಠೆ ಮೆರೆಯುತ್ತಿದ್ದು, ವಿಚಾರವಾದಿಗಳ, ಚಿಂತಕರ, ಉಪನ್ಯಾಸಕರ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ʼಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದುʼ ಎಂದು ತಾಕೀತು ಮಾಡಿರುವ ಈ ಸರ್ಕಾರ, ಪೊಲೀಸರಿಂದ ನೋಟಿಸ್ ಕೊಡಿಸುವುದು ಸಂವಿಧಾನ ವಿರೋಧಿ ಚಟುವಟಿಕೆಯಲ್ಲವೇ? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ನಿಷೇಧಿತ PFI ನಂಟು ಹೊಂದಿರುವ SDPI ರಾಜಕೀಯ ಪಕ್ಷಕ್ಕೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು, ಇದು ದೇಶದ್ರೋಹದ ಕೆಲಸ. ಸಿಎಂ ಸಿದ್ದರಾಮಯ್ಯ ಅವರ ನಡೆ ಅಸಹಿಷ್ಣುತೆಯ ಪರಮಾವಧಿ ಮೀರಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಸಿ, ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತುರ್ತು ಪರಿಸ್ಥಿತಿ ಕಾಂಗ್ರೆಸ್ನ ಡಿಎನ್ಎ
ಕಾಂಗ್ರೆಸ್ ಆಡಳಿತದಲ್ಲಿ ತುರ್ತು ಪರಿಸ್ಥಿತಿ ಹೇರುವುದು ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ. ಹಿಂದೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದರೆ, ಈಗ ಸಿಎಂ ಸಿದ್ದರಾಮಯ್ಯ ಅವರು ಅದೇ ಹಾದಿ ತುಳಿದಂತೆ ಕಾಣುತ್ತಿದೆ. ತುರ್ತು ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಡಿಎನ್ಎ ಎನ್ನುವಂತೆ ಆಗಿ ಬಿಟ್ಟಿದೆ ಎಂದು ಅವರು ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Flight Cancelled: 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಏರ್ ಇಂಡಿಯಾ ಕಾರ್ಯಾಚರಣೆ ಕಡಿತ; ಮಹತ್ವದ ನಿರ್ಧಾರ ಘೋಷಿಸಿದ ಸಂಸ್ಥೆ
ಚಿಂತಕರ, ವಾಗ್ಮಿಗಳ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಸಿದ್ದರಾಮಯ್ಯ ಅವರ ಆಡಳಿತಕ್ಕೆ ಕಪ್ಪು ಚುಕ್ಕೆ ಆಗುಳಿಯಲಿದೆ ಎಂದಿರುವ ಸಚಿವರು, ದೇಶದ ಪರ ಮಾತನಾಡುವವರ ವಿರುದ್ಧ ಪ್ರಕರಣ ದಾಖಲು, ಅವರ ಮನೆಗಳಿಗೆ ರಾತ್ರೋರಾತ್ರಿ ನುಗ್ಗಿ ಬೆದರಿಸುವುದು, ಗಡಿಪಾರು ಅಸ್ತ್ರ ಬಳಸುವುದು, ಜಿಲ್ಲೆಗಳಿಗೆ ತೆರಳದಂತೆ ನಿರ್ಬಂಧ ಹೇರುವುದು, ಪೊಲೀಸರನ್ನು ಕೈಗೊಂಬೆಗಳಂತೆ ನಡೆಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ.