Vishnu Manchu: ʼಕಣ್ಣಪ್ಪʼ ಸಿನಿಮಾ ರಿಲೀಸ್ಗೂ ಮುನ್ನ ನಟ ವಿಷ್ಣು ಮಂಚು ಟೆಂಪಲ್ ರನ್
ಬಹುನಿರೀಕ್ಷಿತ ‘ಕಣ್ಣಪ್ಪ’ ಟಾಲಿವುಡ್ನ ಬಿಗ್ ಬಜೆಟ್ ಸಿನಿಮಾವಾಗಿದ್ದು, ಖ್ಯಾತ ನಟ ವಿಷ್ಣು ಮಂಚು ನಾಯಕನಾಗಿ ಅಭಿನಯಿಸಿದ್ದಾರೆ. ಶಿವನ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ಅವರು ತೆರೆ ಮೇಲೆ ಮಿಂಚಲಿದ್ದಾರೆ. ಈ ಚಿತ್ರ ಜೂನ್ 27ರಂದು ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ವಿಷ್ಣು ಮಂಚು 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Vishnu Manchu


ʼಕಣ್ಣಪ್ಪʼ ಸಿನಿಮಾ ಬಿಡುಗಡೆಯಾಗುವ ಮೊದಲು12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವುದಾಗಿ ನಟ ವಿಷ್ಣು ಮಂಚು ಪ್ರತಿಜ್ಞೆ ಮಾಡಿದ್ದರು. ಅದನ್ನೀಗ ಅವರು ಪೂರ್ಣಗೊಳಿಸಿದ್ದಾರೆ. ಸಿನಿಮಾ ರಿಲೀಸ್ಗೂ ಮುನ್ನವೇ ಈ ಪ್ರವಾಸ ಕೈಗೊಂಡಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಮೇಲೆ ಕುತೂಹಲ ಹೆಚ್ಚುವಂತೆ ಮಾಡಿದೆ.

ವಿಷ್ಣು ಮಂಚು ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡುವ ಮೂಲಕ ತಮ್ಮ ಜ್ಯೋತಿರ್ಲಿಂಗ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅಂತೆಯೇ ಆಂಧ್ರ ಪ್ರದೇಶದ ಶ್ರೀ ಸೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು.

ʼಕಣ್ಣಪ್ಪʼ ಸಿನಿಮಾ ತಂಡವು ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಈ ಮೊದಲು ಭೇಟಿ ನೀಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಅಲ್ಲಿ ಘೋಷಣೆ ಮಾಡಿತ್ತು. ಬಳಿಕ ಚಿತ್ರತಂಡದ ಸದಸ್ಯರು ಮಧ್ಯ ಪ್ರದೇಶದ ಖಾಂಡ್ವಾದ ಓಂಕಾರೇಶ್ವರ ದೇವಸ್ಥಾನಕ್ಕೆ ಕೂಡ ಭೇಟಿ ನೀಡಿದ್ದರು.

ಗುಜರಾತ್ನ ವೆರಾವಲ್ನಲ್ಲಿರುವ ಸೋಮನಾಥ ದೇವಸ್ಥಾನ ಹಾಗೂ ಗುಜರಾತ್ನ ದ್ವಾರಕಾದಲ್ಲಿರುವ ನಾಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಕೊನೆಯದಾಗಿ ಶ್ರೀ ಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಪ್ರತಿಜ್ಞೆ ಪೂರ್ಣಗೊಳಿಸಿದ್ದರ ಬಗ್ಗೆ ವಿಷ್ಣು ಮಂಚು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಶಿವನ ಹನ್ನೆರಡು ಪೂಜ್ಯ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಚಿತ್ರತಂಡ ಪವಿತ್ರ ದರ್ಶನವನ್ನು ಪೂರ್ಣಗೊಳಿಸಿದೆ. ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಪ್ರಯಾಣ ಮುಕ್ತಾಯ ಕಂಡಿದ್ದು ನನ್ಮ ಹೃದಯ ತುಂಬಿತು ಎಂದು ವಿಷ್ಣು ಮಂಚು ಬರೆದುಕೊಂಡಿದ್ದಾರೆ.

ʼಕಣ್ಣಪ್ಪʼ ಸಿನಿಮಾವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದು, ಮೋಹನ್ ಬಾಬು ನಿರ್ಮಿಸಿದ್ದಾರೆ. ಆರ್.ಶರತ್ಕುಮಾರ್, ಅಕ್ಷಯ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಹುಲ್ ಮಾಧವ್, ದೇವರಾಜ್, ಅರ್ಪಿತ್ ರಂಕಾ, ಬ್ರಹ್ಮಾನಂದಂ, ಬ್ರಹ್ಮಾಜಿ, ಶಿವ ಬಾಲಾಜಿ, ಕೌಶಲ್, ಮುಖೇಶ್ ರಿಷಿ, ರಘು ಬಾಬು, ಪ್ರೀತಿ ಮುಖುಂದನ್, ಮಧು ಮತ್ತಿತರರು ನಟಿಸಿದ್ದಾರೆ.