Roopa Gururaj Column: ಶಂಕರರ ನಾಲಿಗೆಯಿಂದ ಬಂದ ಶಾರದಾಂಬೆಯ ಆದೇಶ
ಸ್ವಲ್ಪ ಬೇಸರದಿಂದ ಆಚಾರ್ಯರು ತಾವೇ ಸ್ವತಃ ಪುಸ್ತಕ ಬಂಡಾರಕ್ಕೆ ಹೋಗಿ ಲಲಿತಾಸಹಸ್ರನಾಮ ಪುಸ್ತಕವನ್ನು ಕೈಯಲ್ಲಿ ಎತ್ತಿಕೊಳ್ಳುತ್ತಿರುವಾಗ, ಪುಸ್ತಕ ಬಂಡಾರದಲ್ಲಿದ್ದ ಶಾರದಾಂಬೆಯ ವಿಗ್ರಹದಿಂದ ಧ್ವನಿ ಬಂತು. ‘ಶಂಕರ, ಸಮಸ್ತ ಮಾನವಕೋಟಿಯ ಉದ್ಧಾರಕ್ಕೆ ಇರುವ ಸ್ತೋತ್ರ ವಿಷ್ಣುಸಹಸ್ರನಾಮ. ಕಲಿಯುಗದ ಜನರಿಗೆ ವಿಷ್ಣು ಸಹಸ್ರನಾವದ ಅಗತ್ಯವು, ಲಲಿತಾಸಹಸ್ರ ನಾಮಕ್ಕಿಂತಲೂ ಹೆಚ್ಚಾಗಿ ಇದೆ, ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ ಮಾಡುವುದೇ ತಪಸ್ಸು.


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಆದಿ ಶಂಕರಾಚಾರ್ಯರು ಪ್ರಪ್ರಥಮವಾಗಿ ಲಲಿತಾಸಹಸ್ರನಾಮಕ್ಕೆ ಭಾಷ್ಯ ಬರೆಯುವ ಸಂಕಲ್ಪ ಮಾಡಿ ತಮ್ಮ ಶಿಷ್ಯನಿಗೆ ಲಲಿತಾಸಹಸ್ರನಾಮ ಪುಸ್ತಕ ತರಲು ಹೇಳಿದರು. ಶಿಷ್ಯ ಬಹಳ ಶೃದ್ಧೆಯಿಂದ ಪುಸ್ತಕ ತಂದು ಗುರುಗಳಿಗೆ ಕೊಟ್ಟರೆ, ಅದು ಲಲಿತಾ ಸಹಸ್ರನಾಮವಾಗಿರಲಿಲ್ಲ, ಬದಲಿಗೆ ವಿಷ್ಣುಸಹಸ್ರನಾಮವಾಗಿತ್ತು.
ಅವರು ಪುನಃ ಶಿಷ್ಯನನ್ನು ಕರೆದು, ನಾನು ಹೇಳಿದ್ದು ಲಲಿತಾಸಹಸ್ರನಾಮ, ನೀನು ತಂದದ್ದು ವಿಷ್ಣು ಸಹಸ್ರನಾಮ! ಯಾಕೆ ಹೀಗೆ ಮಾಡಿದೆ ಅನ್ನುತ್ತಾ ವಿಷ್ಣುಸಹಸ್ರನಾಮ ಪುಸ್ತಕ ಅವನಿಗೆ ಹಿಂತಿರುಗಿಸಿ ದರು. ಶಿಷ್ಯ ಪುನಃ ಹೋಗಿ ಸರಿಯಾಗಿ ಪರೀಕ್ಷೆ ಮಾಡಿ ಲಲಿತಾಸಹಸ್ರನಾಮ ಅಂತ ಖಾತ್ರಿಯಾದ ಮೇಲೆ ಪುಸ್ತಕ ತಂದು ಆಚಾರ್ಯರ ಕೈಗೆ ಕೊಟ್ಟ. ಆದರೆ ಆಚಾರ್ಯರು ಪುಸ್ತಕ ತೆರೆದು ನೋಡಿದರೆ ಪುನಃ ವಿಷ್ಣುಸಹಸ್ರನಾಮವಾಗಿತ್ತು.
ಸ್ವಲ್ಪ ಬೇಸರದಿಂದ ಆಚಾರ್ಯರು ತಾವೇ ಸ್ವತಃ ಪುಸ್ತಕ ಬಂಡಾರಕ್ಕೆ ಹೋಗಿ ಲಲಿತಾಸಹಸ್ರನಾಮ ಪುಸ್ತಕವನ್ನು ಕೈಯಲ್ಲಿ ಎತ್ತಿಕೊಳ್ಳುತ್ತಿರುವಾಗ, ಪುಸ್ತಕ ಬಂಡಾರದಲ್ಲಿದ್ದ ಶಾರದಾಂಬೆಯ ವಿಗ್ರಹದಿಂದ ಧ್ವನಿ ಬಂತು. ‘ಶಂಕರ, ಸಮಸ್ತ ಮಾನವಕೋಟಿಯ ಉದ್ಧಾರಕ್ಕೆ ಇರುವ ಸ್ತೋತ್ರ ವಿಷ್ಣುಸಹಸ್ರನಾಮ. ಕಲಿಯುಗದ ಜನರಿಗೆ ವಿಷ್ಣು ಸಹಸ್ರನಾವದ ಅಗತ್ಯವು, ಲಲಿತಾಸಹಸ್ರ ನಾಮಕ್ಕಿಂತಲೂ ಹೆಚ್ಚಾಗಿ ಇದೆ, ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ ಮಾಡುವುದೇ ತಪಸ್ಸು.
ಇದನ್ನೂ ಓದಿ: Roopa Gururaj Column: ಕಾಯಕವೇ ಕೈಲಾಸ ಎಂದು ಬದುಕಿದ ನಕ್ಕೀರ
ವಿಷ್ಣುಸಹಸ್ರನಾಮಕ್ಕೆ ಗಂಡಸು- ಹೆಂಗಸು-ಆ ಜಾತಿ- ಈ ಪಂಥ ಎನ್ನುವ ಭೇದವಿಲ್ಲ. ಹಾಗೆ ಪಠಣ ಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಪಠಿಸಬಹುದು. ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲ ವಯಸ್ಸಿನವರು ಪಠಿಸಬಹುದಾಗಿದೆ.
ಆದ್ದರಿಂದ ಶಂಕರ, ನೀನು ಮೊದಲು ವಿಷ್ಣುಸಹಸ್ರನಾಮಕ್ಕೆ ಭಾಷ್ಯ ಬರೆಯುವುದೇ ಸೂಕ್ತ’ ಎಂದು ಆದೇಶ ನೀಡಿದಾಗ, ಶಂಕರರ ಕಣ್ಣಿನಲ್ಲಿ ಆನಂದ ಭಾಷ್ಪ ಸುರಿಯಿತು. ಅದಕ್ಕಾಗಿಯೇ ಶಂಕರಾ ಚಾರ್ಯರು ಗೇಯಂ ಗೀತಾ, ನಾಮ ಸಹಸ್ರಂ ಎಂದರು. ವೇದದ ಪ್ರತಿ ಮಾತಿಗೆ ಮೂರು ಮೂರು ಅರ್ಥವಿದ್ದರೆ, ಮಹಾ ಭಾರತದ ಪ್ರತಿ ಮಾತಿಗೆ ಹತ್ತು ಹತ್ತು ಅರ್ಥವಿರುತ್ತದೆ.
ವಿಷ್ಣುಸಹಸ್ರನಾಮ ಪ್ರತಿ ನಾಮಕ್ಕೆ ನೂರು ನೂರು ಅರ್ಥವಿರುತ್ತದೆ. ಹಾಗಾಗಿಯೇ ಒಮ್ಮೆ ವಿಷ್ಣು ಸಹಸ್ರನಾಮವನ್ನು ಶ್ರದ್ಧಾಪೂರ್ವಕವಾಗಿ ಹೇಳಿದರೆ ಪರಮಾತ್ಮನ ಒಂದು ಲಕ್ಷನಾಮಗಳನ್ನು ಜಪ ಮಾಡಿದರೆ ಬರುವಷ್ಟು ಪುಣ್ಯ ಲಭಿಸುತ್ತದೆ ಎಂಬ ಅಭಿಪ್ರಾಯವಿದೆ. ಸತ್ಸಂಗ ಸಂಗ್ರಹ ದಲ್ಲಿ ಸಿಗುವ ಈ ಮಾಹಿತಿ ನಮ್ಮೆಲ್ಲರಿಗೂ ತಿಳಿದಿರಲೇ ಬೇಕಾದ ಸತ್ಯ. ಅನೇಕ ಬಾರಿ ಹಿರಿಯರು ಕೆಲವು ಆಚರಣೆ ಗಳನ್ನು ನಮ್ಮ ಮೇಲೆ ಹೇರುತ್ತಾರೆ ಎಂದು ಭಾವಿಸಿ ಮಕ್ಕಳು ಅದನ್ನು ಮಾಡದೆ ಹೋಗುತ್ತಾರೆ.
ಆದರೆ ಯಾವುದೇ ಆಚರಣೆಗೆ ಇರುವ ಅರ್ಥವನ್ನು ಮಕ್ಕಳಿಗೆ ವಿವರಿಸಿದಾಗ, ಅವರು ಖಂಡಿತ ಅದನ್ನು ಸರಿಯಾದ ರೀತಿಯಲ್ಲಿ ಮಾಡಿ ಅದರ ಪ್ರಯೋಜನವನ್ನು ಪಡೆಯುತ್ತಾರೆ. ಎಳೆಯ ಮನಸ್ಸುಗಳಿಗೆ ನಾವು ಸರಿಯಾದ ರೀತಿಯಲ್ಲಿ ವಿವರಿಸಿದಾಗ, ಅವರು ಅದನ್ನು ಖಂಡಿತ ಅರ್ಥ ಮಾಡಿಕೊಳ್ಳುವ ಶಕ್ತಿ ಅವರಿಗಿರುತ್ತದೆ. ಆದರೆ ಅದನ್ನು ಪದ್ಧತಿಯ ಹೆಸರಲ್ಲಿ ಸೇರಿದಾಗ ಅದರ ಹಿನ್ನೆಲೆ ಗೊತ್ತಿಲ್ಲದೆ ಅವರು ಹೆಚ್ಚು ದಿನ ಅದನ್ನು ಆಚರಿಸದೆ ಹೋಗಬಹುದು.
ಹೀಗಾಗಿ ನಮ್ಮ ಸನಾತನ ಪದ್ಧತಿಯ ಹಿಂದಿನ ಆಚರಣೆಗಳ ಎಲ್ಲಾ ಮಹತ್ವವನ್ನು ನಾವು ಮೊದಲು ತಿಳಿದುಕೊಂಡು ನಂತರ ಅದನ್ನು ಹಂತ ಹಂತವಾಗಿ ನಮ್ಮ ಮಕ್ಕಳಿಗೆ ದಾಟಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿಯಲ್ಲಿರುವ ಅದ್ಭುತ ಆಚರಣೆಗಳ ಸಂಪೂರ್ಣ ಮಹತ್ವವನ್ನ ಮತ್ತು ಅದರ ಪ್ರಯೋಜನವನ್ನು ನಮ್ಮ ಮುಂದಿನ ಪೀಳಿಗೆ ಯವರು ಪಡೆಯಲು ಸಾಧ್ಯ. ಇಂತಹ ವಿಷಯ ಗಳನ್ನು ಇನ್ನು ಹೆಚ್ಚಿನ ಜನರಿಗೆ ತಲುಪಿಸಿ ಅವ ರಿಗೂ ಇವೆಲ್ಲವುಗಳ ಮಹತ್ವ ತಿಳಿಯುವಂತೆ ಮಾಡೋಣ.