Vinay Sahasrabuddhe Column: ತುರ್ತು ಪರಿಸ್ಥಿತಿಯಿಂದ ನಾವು ಕಲಿಯಬೇಕಾದ್ದೇನು ?
ಅದು 1977ರ ಮಾರ್ಚ್ 21ರ ದಿನ. ಆ ವರ್ಷದ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಸದರಿ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲು ಇಂದಿರಾ ಗಾಂಧಿಯವರು ನಿರ್ಧರಿಸಿದರು. ಆ ಚುನಾವಣೆಯಲ್ಲಿ ಹೊಮ್ಮಿದ ಜನತಾ ಜನಾರ್ದನನ ತೀರ್ಪು ಕಾಂಗ್ರೆಸ್ನ ಭವಿಷ್ಯದ ಶವಪೆಟ್ಟಿಗೆಗೆ ಬಿದ್ದ ಕೊನೆಯ ಮೊಳೆಯಾದರೂ, ಇಂದಿರಾ ಅವರು ತಮ್ಮ ನಿರ್ಧಾರ ದಿಂದ ಹಿಂದೆ ಸರಿಯಲು ಇನ್ನೂ ಅನೇಕ ಅಂಶಗಳು ಪ್ರಮುಖ ಕಾರಣಗಳಾಗಿವೆ, ಈ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ ಎಂಬು ದನ್ನು ಮರೆಯಲಾಗದು.


ಮೆಲುಕು
ವಿನಯ್ ಸಹಸ್ರಬುದ್ಧೆ
ಇಂದು ಜೂನ್ 25. ಬರೋಬ್ಬರಿ 50 ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಮೇಲೆ ಆದ ‘ಕೊಲೆಗಡುಕ ದಾಳಿ’ಗೆ 50 ವರ್ಷಗಳು ತುಂಬಿರುವುದನ್ನು ಭಾರತವು ಇಂದು ನೆನಪಿಸಿಕೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷದ ಜುಲೈನಲ್ಲಿ ಈ ಕುರಿತಾದ ಸಚಿವ ಸಂಪುಟದ ನಿರ್ಣಯವನ್ನು ಪ್ರಕಟಿಸುತ್ತಾ, “ತುರ್ತು ಪರಿಸ್ಥಿತಿಯ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯವರು,
ಏನೂ ತಪ್ಪನ್ನೇ ಮಾಡಿರದ ಲಕ್ಷಾಂತರ ಜನರನ್ನು ಹೇಗೆ ಜೈಲಿಗೆ ಅಟ್ಟಿದರು ಹಾಗೂ ಆ ಕಾಲ ಘಟ್ಟದಲ್ಲಿ ಮಾಧ್ಯಮಗಳ ದನಿಯನ್ನು ಹೇಗೆ ಹತ್ತಿಕ್ಕಲಾಗಿತ್ತು ಎಂಬುದರ ಸ್ಮರಣಾರ್ಥವಾಗಿ ಪ್ರತಿ ವರ್ಷದ ಜೂನ್ 25ರ ದಿನವನ್ನು ‘ಸಂವಿಧಾನ ಹತ್ಯಾ ದಿವಸ’ ಎಂಬುದಾಗಿ ಆಚರಿಸಲು ಸರಕಾರವು ನಿರ್ಧರಿಸಿದೆ" ಎಂದು ಹೇಳಿದ್ದು ನಿಮಗೆ ನೆನಪಿರಬಹುದು.
ಅಷ್ಟೇ ಅಲ್ಲ, “1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನವೀಯ ಎನ್ನಬಹುದಾದ ನೋವುಗಳನ್ನು ಅನುಭವಿಸಿದ ಜನರ ಅಗಾಧ ಕೊಡುಗೆಗಳನ್ನೂ ಈ ದಿನದಂದು ಸ್ಮರಿಸಲಾಗುತ್ತದೆ" ಎಂದು ಕೂಡ ಅಮಿತ್ ಶಾ ಅಂದು ಹೇಳಿದ್ದರು.
ಅದು 1977ರ ಮಾರ್ಚ್ 21ರ ದಿನ. ಆ ವರ್ಷದ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟ ವಾದ ನಂತರ ಸದರಿ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲು ಇಂದಿರಾ ಗಾಂಧಿಯವರು ನಿರ್ಧರಿಸಿ ದರು. ಆ ಚುನಾವಣೆಯಲ್ಲಿ ಹೊಮ್ಮಿದ ಜನತಾ ಜನಾರ್ದನನ ತೀರ್ಪು ಕಾಂಗ್ರೆಸ್ನ ಭವಿಷ್ಯದ ಶವಪೆಟ್ಟಿಗೆಗೆ ಬಿದ್ದ ಕೊನೆಯ ಮೊಳೆಯಾದರೂ, ಇಂದಿರಾ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಇನ್ನೂ ಅನೇಕ ಅಂಶಗಳು ಪ್ರಮುಖ ಕಾರಣಗಳಾಗಿವೆ, ಈ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ ಎಂಬುದನ್ನು ಮರೆಯಲಾಗದು.
ಇದನ್ನೂ ಓದಿ: Actor Vinayakan: ಜೈಲರ್’ ಖ್ಯಾತಿಯ ವಿನಾಯಕನ್ ಮತ್ತೆ ಬಂಧನ; ಕಾರಣವೇನು?
ಅವುಗಳಲ್ಲಿ ಎದ್ದು ಕಾಣುವಂಥದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ‘ಸಂಘ-ಪ್ರೇರಿತ’ ಸಂಘಟನೆಗಳು ಪ್ರಾರಂಭಿಸಿದ ‘ಸತ್ಯಾಗ್ರಹ’ ಚಳವಳಿ. ನಿಮಗೆ ಇಲ್ಲೊಂದು ಅಂಶ ವನ್ನು ನೆನಪಿಸಬೇಕು. ಸದರಿ ಸತ್ಯಾಗ್ರಹ ಚಳವಳಿಯನ್ನು ಸಜ್ಜುಗೊಳಿಸುವಲ್ಲಿ ಆರೆಸ್ಸೆಸ್ ವಹಿಸಿದ ಪಾತ್ರವನ್ನು ಅನೇಕರು ಮೆಚ್ಚಿಕೊಂಡರು ಮತ್ತು ಆರೆಸ್ಸೆಸ್ನ ಸಿದ್ಧಾಂತಗಳ ಕಟ್ಟಾ ವಿರೋಧಿಗಳೂ ಇವರಲ್ಲಿ ಸೇರಿದ್ದರು.
ಖ್ಯಾತ ಸಮಾಜವಾದಿ ನಾಯಕ ಅಚ್ಯುತರಾವ್ ಪಟವರ್ಧನ್ ಅವರು ಆ ಸಂದರ್ಭದಲ್ಲಿ ಹೇಳಿದ್ದ ಮಾತುಗಳು ಇಲ್ಲಿ ಉಲ್ಲೇಖನೀಯ: “ತುರ್ತು ಪರಿಸ್ಥಿತಿಯ ಹೇರಿಕೆಯನ್ನು ವಿರೋಧಿಸಿದವರಿಗೆ ಸಹಕರಿಸಲು ಮತ್ತು ಮುಕ್ತ ಸಹಯೋಗವನ್ನು ನೀಡಲು ಆರೆಸ್ಸೆಸ್ನ ಸ್ವಯಂಸೇವಕರು ಮತ್ತು ಬೇರಾವುದೇ ರಾಜಕೀಯ ಎದುರಾಳಿ ಗುಂಪಿನವರು ಸಿದ್ಧರಿದ್ದಾರೆ; ಸುಸ್ಪಷ್ಟವಾಗಿರುವ ದಮನಕಾರಿ ನೀತಿಯನ್ನು ಹಾಗೂ ಸುಳ್ಳುಗಳನ್ನೇ ನೆಚ್ಚಿರುವ ‘ಪೈಶಾಚಿಕ ಆಡಳಿತ’ದ ವಿರುದ್ಧ ಉತ್ಸಾಹಭರಿತ ರಾಗಿಯೂ ಒಗ್ಗಟ್ಟಿನಿಂದಲೂ ಕೆಲಸ ಮಾಡಲು ಇವರೆಲ್ಲಾ ಸಮರ್ಥರಾಗಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತಸವಾಗಿದೆ".
ಪೊಲೀಸರ ದೌರ್ಜನ್ಯ, ನಿರ್ದಯತೆ ಹಾಗೂ ಕ್ರೌರ್ಯದ ನಡುವೆಯೂ ಸದರಿ ಚಳವಳಿಯನ್ನು ಮುನ್ನಡೆಸುವಲ್ಲಿ ಈ ಸತ್ಯಾಗ್ರಹಿಗಳು ತೋರಿದ ಶೌರ್ಯದಿಂದ ಗಾಢವಾಗಿ ಪ್ರಭಾವಿತರಾದ ಸಿಪಿಐ(ಎಂ) ಪಕ್ಷದ ನಾಯಕ ಎ.ಕೆ. ಗೋಪಾಲನ್ ಅವರು, “ಇಂಥದೊಂದು ಧಿರೋದಾತ್ತ ಕಾರ್ಯ ಮತ್ತು ತ್ಯಾಗವನ್ನು ಕೈಗೊಳ್ಳುವಂತಾಗುವುದಕ್ಕೆ ಈ ಸತ್ಯಾಗ್ರಹಿಗಳಿಗೆ ಅದಮ್ಯ ಧೈರ್ಯವನ್ನು ನೀಡುವ ಅದ್ಯಾವುದೋ ಒಂದು ‘ಉದಾತ್ತ ಆದರ್ಶ’ವು ಅಲ್ಲಿ ಕೆನೆಗಟ್ಟಿರಬೇಕು" ಎಂದು ಪ್ರಶಂಸಿಸಿ ದ್ದರು (1979 ಜೂನ್ 9ರ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆ).
ನಿಮಗೆ ಗೊತ್ತಿದೆಯೇ, ಸ್ವತಂತ್ರ ಭಾರತವು ಹಿಂದೆಂದೂ ಕಂಡಿರದಷ್ಟು ಕ್ರೂರ ರೀತಿಯಲ್ಲಿ ನಿರ್ವಹಿಸಲ್ಪಟ್ಟಂಥದ್ದು ತುರ್ತು ಪರಿಸ್ಥಿತಿಯ ವಿದ್ಯಮಾನ. ಇದರ ಇತಿಹಾಸವು ನಮಗೆ ಒಂದಷ್ಟು ಪಾಠಗಳನ್ನೂ ಹೇಳುತ್ತದೆ. ಅವುಗಳ ಪೈಕಿಯ ಮೂರು ಮುಖ್ಯ ಪಾಠಗಳನ್ನು ಇಲ್ಲಿ ಅವಲೋಕಿ ಸೋಣ.
ಮೊದಲನೆಯದಾಗಿ, ವಂಶಾಡಳಿತದ ಒಲವಿರುವ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ. ನೆನಪಿಡಿ, ಇಂಥ ಹೆಚ್ಚಿನ ರಾಜಕೀಯ ಪಕ್ಷಗಳು ಭಾರತದ ರಾಜಕೀಯ ಅಖಾಡದಲ್ಲಿ 1970ರ ದಶಕದ ಆಸುಪಾಸಿನಲ್ಲಿ ಕಾಣಿಸಿಕೊಂಡವು. ತಮ್ಮದೇ ಆದ ತತ್ವ-ಸಿದ್ಧಾಂತ ಗಳನ್ನು ನೆಚ್ಚಿದ್ದ ಮಿಕ್ಕ ಪಕ್ಷಗಳ ಮೇಲಿನ ತಮ್ಮ ಹಿಡಿತವನ್ನು ಇಂಥ ವಂಶಾಡಳಿತಗಳು ಬಿಗಿಗೊಳಿಸಿ, ಅವನ್ನು ‘ಕೌಟುಂಬಿಕ ವ್ಯವಹಾರ’ವನ್ನಾಗಿ ಪರಿವರ್ತಿಸಿದ್ದೂ ಈ ದಶಕದಲ್ಲಿಯೇ!
ಇಂದಿರಾ ಗಾಂಧಿಯವರ ‘ರಾಜಕೀಯ ಶೈಲಿ’ಯೇ ಇಂಥ ಪಕ್ಷಗಳಿಗೆ ಸ್ಪೂರ್ತಿ ನೀಡಿತು ಎಂದು ನಂಬಲು ಒಂದು ಕಾರಣವಿದೆ. 1960ರ ದಶಕದ ಅಂತ್ಯದ ವೇಳೆಗೆ, ತಮ್ಮದೇ ಪಕ್ಷದಲ್ಲಿ ತಾವು ಬಹುತೇಕ ಏಕಾಂಗಿಯಾಗಿರುವ ಕಹಿವಾಸ್ತವವನ್ನು ಇಂದಿರಾ ಗಾಂಧಿ ಅರಿತುಕೊಂಡರು. ಈ ಬೆಳವಣಿಗೆಯಿಂದ ತೀವ್ರವಾಗಿ ವಿಚಲಿತರಾದ ಅವರು, ಅದಕ್ಕೆ ಕಾರಣವಾದ ‘ಅಂತರ’ವನ್ನು ತುಂಬಲು ಸೇತುವೆಯನ್ನು ಮರುನಿರ್ಮಿಸುವ ಬದಲು, ತಮ್ಮದೇ ಆದ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದರು; ಆದರೆ ಈ ಘಟ್ಟದಲ್ಲಿ ಅವರು, ತಮ್ಮ ಕುಟುಂಬದ ನಿಕಟ ಸದಸ್ಯರನ್ನು, ಅದರಲ್ಲೂ ವಿಶೇಷವಾಗಿ ತಮ್ಮ ಕಿರಿಯ ಮಗ ಸಂಜಯ್ ಗಾಂಧಿಯವರನ್ನು ಮಾತ್ರವೇ ಸಂಪೂರ್ಣವಾಗಿ ನೆಚ್ಚಬಹುದು ಎಂಬುದನ್ನು ಅರಿತುಕೊಂಡರು.
197ರ ದಶಕದ ಮಧ್ಯಭಾಗದಲ್ಲಿ, ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಇಂದಿರಾರ ಮೇಲಿನ ತಮ್ಮ ತೀಕ್ಷ್ಣ ವಾಗ್ದಾಳಿಯನ್ನು ತೀವ್ರಗೊಳಿಸಿದ್ದವು, ಮಾಧ್ಯಗಳಂತೂ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದವು. ಇಷ್ಟು ಸಾಲದೆಂಬಂತೆ, ಗುಜರಾತ್ ಮತ್ತು ಬಿಹಾರ ರಾಜ್ಯಗಳಲ್ಲಿ ಯುವಜನರು ಶುರುವಿಟ್ಟು ಕೊಂಡಿದ್ದ ‘ಭ್ರಷ್ಟಾಚಾರ- ವಿರೋಧಿ’ ಆಂದೋಲನಗಳು ತಾರಕಕ್ಕೆ ಏರಿದ್ದವು.
ಈ ಎಲ್ಲ ಬೆಳವಣಿಗೆಗಳನ್ನು ಕಂಡ ಇಂದಿರಾರನ್ನು ಸಹಜವಾಗಿಯೇ ಅಭದ್ರತೆಯ ಭಾವನೆ ಆವರಿಸಿತು. ಪಕ್ಷವು ಸಂಪೂರ್ಣವಾಗಿ ಇಂದಿರಾರ ನಿಯಂತ್ರಣದಲ್ಲಿದ್ದರೂ, ಉನ್ನತ ಸ್ಥಾನದಲ್ಲಿದ್ದ ಇಂದಿರಾ ಅಕ್ಷರಶಃ ಒಬ್ಬಂಟಿಯಾಗಿಬಿಟ್ಟಿದ್ದರು ಮತ್ತು ಸಾಲದೆಂಬಂತೆ ಪಕ್ಷದ ಸಹವರ್ತಿಗಳ ಬಗ್ಗೆ ಅವರಲ್ಲಿ ಸಣ್ಣಗೆ ಅನುಮಾನ ಹುಟ್ಟಿಕೊಂಡಿತ್ತು.
ಈ ಎಲ್ಲ ಕಾರಣಗಳಿಂದ ಅವರು ತಮ್ಮ ಪುತ್ರ ಸಂಜಯರನ್ನು ಮಾತ್ರವೇ ‘ವಿಶ್ವಾಸಾರ್ಹ ಬೆಂಬಲಿಗ’ ಎಂದು ಪರಿಗಣಿಸುವಂತಾಯಿತು. ಸಂಜಯರ ಮೇಲಿನ ಇಂದಿರಾರ ಅವಲಂಬನೆ ಅದೆಷ್ಟು ಗಟ್ಟಿಯಾಗಿತ್ತೆಂದರೆ, ‘ಮಾಧ್ಯಮ ಸಂಸ್ಥೆಗಳಿಗೆ ಇರುವ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬೇಕು ಮತ್ತು ಹೈಕೋರ್ಟ್ ಕೊಠಡಿಗಳಿಗೆ ಬೀಗಹಾಕಬೇಕು’ ಎಂಬುದಾಗಿ 1975 ಜೂನ್ 25ರಂದು ಸಂಜಯ್ ನೀಡಿದ ನಿರ್ದೇಶನಗಳನ್ನು ಇಂದಿರಾ ರದ್ದುಗೊಳಿಸಿದರು ಕೂಡ, ತಮ್ಮ ಮಗನನ್ನು ನೇರವಾಗಿ ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ದಿನಗಳು ಉರುಳುತ್ತಿದ್ದಂತೆ, ದೇಶದ ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ‘ಮಕ್ಕಳು ಉತ್ತರಾಧಿಕಾರಿ ಗಳಾಗಿ ಮುನ್ನೆಲೆಗೆ ಬರುವಂಥ’ ರೂಢಿಯು ಚಾಲ್ತಿಗೆ ಬರುವುದಕ್ಕೆ ಇಂದಿರಾ- ಸಂಜಯ್ ಜೋಡಿಯು ಮಾದರಿಯಾಗಿಬಿಟ್ಟಿತು. ಇದು ತೇಲಿಸಿ ಆಡುತ್ತಿರುವ ಮಾತಲ್ಲ, ತುರ್ತು ಪರಿಸ್ಥಿತಿಯ ನಂತರದ ಕಾಲಘಟ್ಟವನ್ನೊಮ್ಮೆ ನೆನಪಿಸಿಕೊಂಡರೆ ನಿಮಗೇ ಅದರ ಅರಿವಾಗುತ್ತದೆ. ಅಂದರೆ, ತುರ್ತುಸ್ಥಿತಿಯ ಕಾಲಘಟ್ಟದ ತರುವಾಯದಲ್ಲಿ ‘ಠಾಕ್ರೆಗಳ’, ‘ಸ್ಟಾಲಿನ್ಗಳ’, ಅಬ್ದುಲ್ಲಾಗಳ’ ವಂಶದ ತರುಣ ಪೀಳಿಗೆಯು ರಾಜಕೀಯದಲ್ಲಿ ಮುನ್ನೆಲೆಗೆ ಬರುವಂತಾಯಿತು.
ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನಂತೂ ಕೇಳುವುದೇ ಬೇಡ, ಅಲ್ಲಿ ‘ಯಾದವ’ ಹಣೆಪಟ್ಟಿಯ ಯುವನಾಯಕರು, ತಂತಮ್ಮ ಜನಕರು ಜನ್ಮನೀಡಿದ ರಾಜಕೀಯ ಪಕ್ಷಗಳ ಚುಕ್ಕಾಣಿಯನ್ನು ಹಿಡಿದು ಹಿಡಿತ ಸಾಧಿಸಲು ಮುಂದೆ ಬರುವಂತಾಯಿತು. ಇನ್ನೂ ಸ್ಪಷ್ಟವಾಗಿ-ನೇರವಾಗಿ ಹೇಳುವುದಾದರೆ, ಅನೇಕ ಪುಢಾರಿಗಳು ತಂತಮ್ಮ ರಾಜಕೀಯ ಪಕ್ಷಗಳನ್ನು ‘ಕುಟುಂಬದ ಊಳಿಗಮಾನ್ಯದ ಉಂಬಳಿ’ಗಳಾಗಿ ರೂಪಾಂತರಿಸುವುದಕ್ಕೆ ಸದರಿ ತುರ್ತು ಪರಿಸ್ಥಿತಿಯ ಬೆಳವಣಿಗೆಯೇ ಅವರಿಗೆ ಧೈರ್ಯ ತುಂಬಿತು.
ವಂಶಾಡಳಿತದ ರಾಜಕೀಯ ಪಕ್ಷಗಳಲ್ಲಿ ತತ್ವ- ಸಿದ್ಧಾಂತ ಆಧರಿತ ನೀತಿ-ನಿರೂಪಣೆಯ ಕೊರತೆಯಿರುವುದು ಮಾತ್ರವಲ್ಲದೆ, ‘ಜನ್ಮಾಧಾರಿತ ತಾರತಮ್ಯ’ವನ್ನು ಉತ್ತೇಜಿಸುವ ಪರಿಪಾಠವೂ ಅವುಗಳಲ್ಲಿ ಢಾಳಾಗಿರುತ್ತದೆ. ಅಂದರೆ, ನಮ್ಮ ಸಂವಿಧಾನವು ಸಂಪೂರ್ಣವಾಗಿ ಅಥವಾ ಸಾರಾಸಗಟಾಗಿ ತಿರಸ್ಕರಿಸುವ ಪರಿಪಾಠವನ್ನು ವಂಶಾಡಳಿತದ ಪಕ್ಷಗಳು ಬಿಗಿಯಾಗಿ ಅಪ್ಪುತ್ತವೆ.
ಇಂಥ ರಾಜಕೀಯ ಪಕ್ಷಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವತ್ತಿಗೂ ಹಾನಿಕಾರಕವೇ ಎಂಬುದು ಇಲ್ಲಿ ಹೊಮ್ಮುವ ಮೊದಲ ಪಾಠ. ಅಷ್ಟಕ್ಕೂ, ಕಾಂಗ್ರೆಸ್ನಲ್ಲಿನ ಯಾರೊಬ್ಬರೂ ಇಂದಿರಾ ಗಾಂಧಿಯವರ ಧೋರಣೆಗಳ ವಿರುದ್ಧ ದನಿಯೆತ್ತಲಿಲ್ಲವೇಕೆ, ಅವರನ್ನು ವಿರೋಧಿಸಲು ಮುಂದೆ ಬರಲಿಲ್ಲವೇಕೆ? ಎಂಬ ಪ್ರಶ್ನೆಯಿಲ್ಲಿ ಮೂಡುತ್ತದೆ. ಅದಕ್ಕಿರುವ ಕಾರಣವನ್ನು ವಿಶ್ಲೇಷಿ
ಸುವುದಾದರೆ, 1970ರ ದಶಕದ ಮಧ್ಯಭಾಗದ ವೇಳೆಗೆ, ತನ್ನ ಸಿದ್ಧಾಂತದ ಹೊದಿಕೆಯನ್ನು ಸಂಪೂರ್ಣವಾಗಿ ಝಾಡಿಸಿ ಹೊರಗೆಸೆದಿತ್ತು ಕಾಂಗ್ರೆಸ್ ಪಕ್ಷ! ಪಕ್ಷದ ನಾಯಕತ್ವವನ್ನು ಸಂಪೂರ್ಣ ವಾಗಿ ಭಟ್ಟಂಗಿಗಳೇ ಸುತ್ತುವರಿದಿದ್ದರು. ಪಕ್ಷದೊಳಗೆ ‘ಆಂತರಿಕ ಪ್ರಜಾಪ್ರಭುತ್ವ’ ಎಂಬ ಪರಿಕಲ್ಪ ನೆಯು ಭೂತಕಾಲವನ್ನು ಸೇರಿತ್ತು. ಈ ಎಲ್ಲದರ ಪರಿಣಾಮವಾಗಿ, ಪಕ್ಷದೊಳಗಿನ ಯಾರಿಗೂ ಇಂದಿರಾರನ್ನು ಪ್ರಶ್ನಿಸುವ ಧೈರ್ಯವಿರಲಿಲ್ಲ, ಹೀಗಾಗಿ ತುರ್ತು ಪರಿಸ್ಥಿತಿಯನ್ನು ಹೇರುವ ಇಂದಿರಾರ ನಿರ್ಧಾರವನ್ನು ಅವರು ಪ್ರಶ್ನಿಸಲೂ ಇಲ್ಲ.
ಪ್ರಜಾಪ್ರಭುತ್ವಕ್ಕೆ ಆಗಬೇಕಿರುವ ಸುಧಾರಣೆಗಳಂಥ ವ್ಯಾಪಕ ವಿಷಯದ ಕುರಿತು ಮಾತ ನಾಡುವುದಾದರೆ, ಈ ಪರಿಪಾಠದಲ್ಲಿ ರಾಜಕೀಯ ಪಕ್ಷಗಳ ಸುಧಾರಣೆಗೆ ಹೆಚ್ಚಿನ ಗಮನವನ್ನು ನೀಡುವ ಅಗತ್ಯವಿದೆ. ಮಹಾರಾಷ್ಟ್ರದಂಥ ಅನೇಕ ರಾಜ್ಯಗಳಲ್ಲಿ, ದತ್ತಿ ಸಂಸ್ಥೆಗಳು ಹಾಗೂ ಸಾರ್ವಜನಿಕ ಟ್ರಸ್ಟ್ಗಳಂಥ ವ್ಯವಸ್ಥೆಗಳು, ಇಬ್ಬರು ಅಥವಾ ಹೆಚ್ಚಿನ ರಕ್ತಸಂಬಂಧಿಗಳು ಏಕಕಾಲ ದಲ್ಲಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ.
‘ವಂಶಾಡಳಿತದ ರಾಜಕೀಯ’ಕ್ಕೆ ಇನ್ನಾದರೂ ಒಂದು ಅಂತ್ಯವನ್ನು ಹಾಡಬೇಕೆಂದರೆ, ರಾಜಕೀಯ ಪಕ್ಷಗಳ ಸ್ಥಾಪನೆಗೆ ಸಂಬಂಧಿಸಿದ ನೀತಿ-ನಿಯಮಗಳಲ್ಲಿ ಇಂಥದೇ ನಿಬಂಧನೆಯನ್ನು ಸೇರ್ಪಡೆ ಮಾಡುವ ಅಗತ್ಯವಿದೆ. ಇದು ತುರ್ತು ಪರಿಸ್ಥಿತಿಯು ನಮಗೆ ತಿಳಿ ಹೇಳುವ ಎರಡನೇ ಪ್ರಮುಖ ಪಾಠ ಎನ್ನಲಡ್ಡಿಯಿಲ್ಲ.
ಇನ್ನು, ಮೂರನೆಯ ಪಾಠದ ಕಡೆಗೆ ಗಮನ ಹರಿಸೋಣ. ಇದು ತಥಾಕಥಿತ ಚಿಂತಕರು, ಸೃಜನಶೀಲ ಬರಹಗಾರರು ಮತ್ತು ಸಾಹಿತಿಗಳು ಎನಿಸಿಕೊಂಡವರು ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅತ್ಯಂತ ಕೊಳಕಾಗಿ ಆಡಿದ ‘ಸುರಕ್ಷಿತ ಆಟ’ದ ಕುರಿತಾದದ್ದು ಎನ್ನಿ! ಅಂದರೆ, ಧರ್ಮವೀರ್ ಭಾರತಿ, ಕಮಲೇಶ್ವರ್, ದುರ್ಗಾಬಾಯಿ ಭಾಗವತ್ ಮತ್ತು ವಿಷ್ಣು ಪಾಂಡ್ಯರಂಥ ಚಿಂತಕರು, ಸೃಜನಶೀಲ ಬರಹಗಾರರು ಮತ್ತು ವಿದ್ವಾಂಸರನ್ನು ಹೊರತುಪಡಿಸಿದರೆ ಹೆಚ್ಚಿನ ಬರಹಗಾರರು, ಕವಿಗಳು ಮತ್ತು ನಾಟಕಕಾರರು ಈ ಕಾಲಘಟ್ಟದಲ್ಲಿ ಮೌನಕ್ಕೆ ಶರಣಾದರು.
ತನ್ಮೂಲಕ, ಜನರ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲರಾದರು. ಎಲ್ಲಕ್ಕಿಂತ ಖೇದಕರ ಸಂಗತಿ ಯೆಂದರೆ, ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಕೂಡ ತುರ್ತು ಪರಿಸ್ಥಿತಿಯನ್ನು ಬಹುರಂಗವಾಗಿ ಅನುಮೋದಿಸಿಬಿಟ್ಟರು ಮತ್ತು ಇನ್ನೂ ಅನೇಕ ಪತ್ರಕರ್ತರಲ್ಲೂ ಇಂಥದೊಂದು ಧೋರಣೆ ಕಂಡು ಬಂತು.
ಇಂಥ ವರ್ತನೆ ಮತ್ತು ಧೋರಣೆಗಳನ್ನು ಕಂಡೇ ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಆಡ್ವಾಣಿ ಅವರು, “ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ ಪತ್ರಕರ್ತರು ಸ್ವಲ್ಪ ಬಾಗಲಿ ಎಂದಷ್ಟೇ ಸರಕಾರವು ಬಯಸಿತ್ತು, ಆದರೆ ಈ ಪತ್ರಕರ್ತರು ತೆವಳಲು ಶುರುಹಚ್ಚಿಕೊಂಡರು" ಎಂದು ಟೀಕಿಸಿದ್ದುಂಟು. ವರ್ತಮಾನದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬ್ಯಾಡ್ಜುಗಳನ್ನು ತಮ್ಮ ತೋಳುಗಳ ಮೇಲೆ ಧರಿಸಿರುವ ಅನೇಕರು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಾಯಿಗೆ ಬೀಗಹಾಕಿಕೊಂಡಿದ್ದರು ಹಾಗೂ ಅಂದು ಹಮ್ಮಿಕೊಳ್ಳಲಾಗಿದ್ದ ಸತ್ಯಾಗ್ರಹದಲ್ಲೂ ಪಾಲ್ಗೊಳ್ಳಲಿಲ್ಲ ಎಂಬುದು ಕಹಿವಾಸ್ತವ!
ನ್ಯಾಯಾಂಗ ಮತ್ತು ಪತ್ರಿಕಾ ರಂಗದಂಥ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಿರ್ವಹಿಸುವ ಕೆಲವರು ಒತ್ತಡ ಎದುರಾದಾಗ ರಾಜಿಮಾಡಿಕೊಳ್ಳಲು ಹೇಗೆ ಸಿದ್ಧರಾಗಿರುತ್ತಾರೆ ಎಂಬುದನ್ನು, ಬರೋಬ್ಬರಿ 21 ತಿಂಗಳವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಇತಿಹಾಸವು ಸ್ಪಷ್ಟವಾಗಿ ನೆನಪಿಸುತ್ತದೆ.
ಆದ್ದರಿಂದ, ತಮ್ಮಲ್ಲಿ ಏನೇ ಎಷ್ಟೇ ಕೊರತೆಯಿದ್ದರೂ ಪ್ರಜಾಪ್ರಭುತ್ವದ ಮೂಲಭೂತ ಅಂಶಗಳ ನೆರವೇರಿಕೆಗೆ ಕಟಿಬದ್ಧರಾಗಿರುವ ಹಾಗೂ ಅದಕ್ಕಾಗಿ ಹೋರಾಡಲು ಸಿದ್ಧರಾಗಿರುವ ಪ್ರಾಮಾಣಿಕ ಜನರು, ಆದರ್ಶಕ್ಕೆ ಬಾಯಿಮಾತಿನ ಸೇವೆ ಸಲ್ಲಿಸುವವರಿಗಿಂತಲೂ ಮಿಗಿಲಾದ ಪ್ರಜಾಪ್ರಭುತ್ವದ ನಿಜವಾದ ರಕ್ಷಕರಾಗಿರುತ್ತಾರೆ ಎಂಬುದು ನಾವು ಕಲಿಯಬೇಕಾದ ಮೂರನೇ ಪಾಠ.
(ಲೇಖಕರು ಬಿಜೆಪಿಯ ಹಿರಿಯ ನಾಯಕರು)