Panchamasali Trust: ಪಂಚಮಸಾಲಿ ಟ್ರಸ್ಟ್ ಅಸಮಾಧಾನ; ಏ.20ಕ್ಕೆ ರಾಜ್ಯಮಟ್ಟದ ಸಭೆ ಕರೆದ ಜಯ ಮೃತ್ಯುಂಜಯ ಸ್ವಾಮೀಜಿ
Panchamasali Trust: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ನಿಂತ ಕಾರಣ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದರು. ಇದೀಗ ಭಿನ್ನಮತ ಶಮನಗೊಳಿಸಲು, ಜಯ ಮೃತ್ಯುಂಜಯ ಸ್ವಾಮೀಜಿ ಅವರು ಏ. 20ಕ್ಕೆ ಸಭೆ ಕರೆದಿದ್ದಾರೆ.


ಬಾಗಲಕೋಟೆ: ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ನಿಂತ ಕಾರಣ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಬಗ್ಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಮಠ, ಮಂದಿರಗಳಲ್ಲಿ ಗೊಂದಲಗಳಿರುವುದು ಸಹಜ. ಕೆಲವು ಶಿಷ್ಯರು ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೀಗಾಗಿ ಏಪ್ರಿಲ್ 20ಕ್ಕೆ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ಸಭೆ ಕರೆದಿದ್ದು, ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಿಂಗಾಯತ ಪಂಚಮಸಾಲಿ ಸಮಾಜ, ಜಗತ್ತಿನಾದ್ಯಂತ ಒಗ್ಗಟ್ಟಾಗಿದೆ ಎಂದರೆ ಅದಕ್ಕೆ 2ಎ ಮೀಸಲಾತಿ ಹೋರಾಟವೇ ಕಾರಣ. ನಮ್ಮ ಉದ್ದೇಶ ಸಮಾಜಕ್ಕೆ ನ್ಯಾಯ ಕೊಡಿಸುವಂತಹುದು. ಕೂಡಲಸಂಗಮ ಬಯಲು ಜಾಗೆಯಲ್ಲಿ ಪೀಠ ಆರಂಭವಾಯಿತು. ಭಕ್ತರ ಹೃದಯ ಪೀಠವೇ ನಮ್ಮ ಸಿಂಹಾಸನ. ಸಂಘಟನೆ ಮಾಡುವ ಸಂದರ್ಭದಲ್ಲಿ ಕೆಲವು ಶಿಷ್ಯರು ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರೆಲ್ಲ ನಮ್ಮವರೇ, ನಾನು ಅವರನ್ನು ವಿರೋಧ ಮಾಡಲ್ಲ. ಅವ್ರ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಸವಣ್ಣನವರ ತತ್ವದಂತೆ ನಿಂದಿಸುವವರೂ ನಮ್ಮವರೇ, ಹೊಗಳುವವರೂ ನಮ್ಮವರೇ. ಕೆಲವರು ಅಜ್ಞಾನ ಹಾಗೂ ಆಸೆ, ಆಮಿಷಗಳಿಗೆ ಒಳಪಟ್ಟು ಟೀಕೆ ಟಿಪ್ಪಣಿ ಮಾಡುತ್ತಾರೆ. ಸಮಾಜದ ಯಾವುದೇ ವ್ಯಕ್ತಿ ಪರ ನಾನು ಧ್ವನಿ ಎತ್ತುತ್ತೇನೆ. ಯಾರನ್ನೋ ಮಂತ್ರಿ ಮಾಡಲು, ಶಾಸಕರನ್ನಾಗಿ ಮಾಡಲು ಶ್ರೀ ಪೀಠಗಳನ್ನು ಕಟ್ಟಿದ್ದಲ್ಲ. ನಾನು ಯಾವುದೇ ಭೌತಿಕತೆ ಆಸೆಗಳಿಗೆ ಒಳಗಾಗಿಲ್ಲ. ಮನಸ್ಸುಗಳನ್ನು ಕಟ್ಟುವಂತಹ ಕೆಲಸ ಮಾಡಿರುವೆ. ಜನರನ್ನು ಕಟ್ಟುವಂತಹ ಕೆಲಸ ಮಾಡಿದ್ದೇನೆ. ನನ್ನು ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ.
ಇವತ್ತು ಬಯಲಲ್ಲೇ ಇದ್ದು, ಸಮಾಜ ಸಂಘಟನೆ ಮಾಡುತ್ತಿದ್ದೇನೆ. ಆಸ್ತಿ ಹಾಗೂ ಅಂತಸ್ತು ಯಾವುದೇ ನನಗೆ ಮುಖ್ಯ ಅಲ್ಲ. ನನ್ನ ಸಮಾಜದ ಕಟ್ಟಕಡೆಯ ವ್ಯಕ್ತಿ, ಯಾವ ರೀತಿ ಸಲಹೆ ಕೊಡ್ತಾನೋ, ಆ ರೀತಿ ನಡೆಯುತ್ತೇನೆ ಎಂದು ಹೇಳಿದ್ದಾರೆ.
ಎಲ್ಲ ಮಠ ಮಂದಿರಗಳಲ್ಲಿ ಗೊಂದಲಗಳಿರುವುದು ಸಹಜ. ಎಷ್ಟೇ ನೋವಾದರೂ, ಷಡ್ಯಂತ್ರವಾದರೂ ಸಹಿಸಿಕೊಂಡು ಬಂದಿದ್ದೇನೆ. ಭಕ್ತರ ಮೇಲೆ ನಂಬಿಕೆ ಇಟ್ಟಿದ್ದೇನೆ. ನನಗೆ ಸಮಾಜದ ಹಿತ ಮುಖ್ಯ. ಯಾರು ಟೀಕೆ ಮಾಡಿದ್ದಾರೋ, ಅವರೆಲ್ಲರೂ ನಮ್ಮವರೇ, ಅವರಿಗೆ ದೇವರು ಸದ್ಭುದ್ಧಿ ಕೊಡಲಿ. ಎಲ್ಲ ಗೊಂದಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏಪ್ರಿಲ್ 20 ರಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಮೀಸಲಾತಿ ಹೋರಾಟವನ್ನು ಮತ್ತೆ ಯಾವ ಅಂಶಗಳನ್ನು ಇಟ್ಟುಕೊಂಡು ಮುನ್ನಡೆಯಬೇಕು ಎಂಬ ಸಭೆ ಕರೆಯಲಾಗಿದೆ. ಗೊಂದಲಗಳಾದರೂ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ನಿರ್ಧಾರದಂತೆ ನಡೆಯುತ್ತೇನೆ. ಅಜ್ಞಾನಕ್ಕೆ ಒಳಪಟ್ಟಂತ ಹೇಳಿಕೆಗಳಿಗೆ ಸ್ಪಂದಿಸಲ್ಲ.
ಯಾರು ಎಷ್ಟು ದೊಡ್ಡವರಾಗಿದ್ದಾರೋ, ಅವರ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡರೆ ಸಾಕು. ಇವೆಲ್ಲವನ್ನು ಸಹಿಸಿಕೊಂಡು ನಾನು ಬೀದಿಗೆ ಬಂದು ಪಾದಯಾತ್ರೆ ಮಾಡಿದೆ. ನನಗೆ ಅರಮನೆಯಂತಹ ಮಠ ಕಟ್ಟುವ ಉದ್ದೇಶ ಇಲ್ಲ. ಭಕ್ತರು ಕೊಡುವ ಕೈತುತ್ತೇ ನನಗೆ ಮಹಾ ಪ್ರಸಾದ. ಏಪ್ರಿಲ್ 20ರ ಸಭೆಗೆ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರು, ವಕೀಲರು, ಭಕ್ತ ಗಣ, ಮಾಜಿ, ಹಾಲಿ ಶಾಸಕ ಸಚಿವರಿಗೆ ಸಭೆಗೆ ಬರಲು ವಿನಂತಿ ಮಾಡಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಆರ್ಎಸ್ಎಸ್, ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಿ: ಸಿಎಂ
ಕೂಡಲಸಂಗಮದ ಪಂಚಮಸಾಲಿ ಪೀಠದ ಎದುರು ಮೈದಾನದಲ್ಲಿ ಸಭೆ ನಡೆಸಲಾಗುವುದು. ಭಿನ್ನಾಭಿಪ್ರಾಯ ಮಾಡುವ ಕೆಲಸ ಬೇಡ. ಸಣ್ಣಪುಟ್ಟ ಜಗಳಗಳನ್ನು ಮನೆಯಲ್ಲೇ ಕೂತು ಬಗೆಹರಿಸಿಕೊಳ್ಳೋಣ ಎಂದು ಕೋರಿದ್ದಾರೆ.