Dr Ammasandra Suresh Column: ಹೇಮಾವತಿ ಹೋರಾಟದ ಹಿಂದಿನ ಆತಂಕಗಳು
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಹೇಮಾವತಿ ನಾಲೆಯ ಮೂಲಕ ನೀರು ತೆಗೆದು ಕೊಂಡು ಹೋಗುವುದಕ್ಕೆ ಜಿಯ ಉಳಿದ ತಾಲೂಕುಗಳಿಂದ ವಿರೋಧ ವ್ಯಕ್ತವಾಗಿಲ್ಲ. ವಿರೋಧವಿರುವುದು, ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಠಾನಕ್ಕೆ ತಂದು ನಾಲೆಯ ಬದಲಾಗಿ ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಗೆ ಮಾತ್ರ. ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಯನ್ನು ಕೈಬಿಟ್ಟು, ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ಆಧುನೀಕರಣ ಮಾಡಿ ರುವ ನಾಲೆಯ ಮೂಲಕ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.


ಕಳಕಳಿ
ಡಾ.ಅಮ್ಮಸಂದ್ರ ಸುರೇಶ್
ಹೇಮಾವತಿ ಕಾಲುವೆ ಕರ್ನಾಟಕದ ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದು. ತುಮಕೂರು ಜಿಲ್ಲೆಯ ಕೃಷಿ ಭೂಮಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳಿಗಾಗಿ ನೀರು ಪೂರೈಸುವ ಉದ್ದೇಶದಿಂದ ಹೇಮಾವತಿ ಕಾಲುವೆ ಯೋಜನೆ ಆರಂಭವಾಯಿತು. ಈ ಯೋಜನೆಯ ಫಲವಾಗಿ ತಿಪಟೂರು ತಾಲೂಕಿನ ಈಚನೂರು ಕೆರೆಗೆ 2014ರ ಆಗ ತಿಂಗಳಿನಲ್ಲಿ ಹಾಗೂ ತುಮಕೂರಿನ ಬುಗಡನಹಳ್ಳಿ ಕೆರೆಗೆ 2017ರ ಆಗ ತಿಂಗಳಿನಲ್ಲಿ ಮೊದಲ ಬಾರಿಗೆ ಹೇಮಾವತಿ ನೀರು ತಲುಪಿತು.
ಪಶ್ವಿಮ ಘಟ್ಟಗಳ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟುವ ಹೇಮಾವತಿ, ಹಾಸನದ ಮೂಲಕ ಹರಿದು ಯಗಚಿ ನದಿಯೊಂದಿಗೆ ಸೇರಿ ಕೃಷ್ಣರಾಜಸಾಗರದ ಬಳಿ ಕಾವೇರಿಯನ್ನು ಸೇರುತ್ತದೆ. ಹಾಸನ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ 2,65,079 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನದಿಗೆ 1979ರಲ್ಲಿ ಹಾಸನ ಜಿಲ್ಲೆಯ ಗೊರೂರು ಬಳಿ ಅಣೆಕಟ್ಟೆಯನ್ನು ನಿರ್ಮಿಸಲಾಯಿತು.
1860ರ ದಶಕದಲ್ಲಿ ಫ್ರೆಂಚ್ ಮಿಷನರಿಗಳು ನಿರ್ಮಿಸಿದ ಶೆಟ್ಟಿಹಳ್ಳಿಯ ರೋಸರಿ ಚರ್ಚ್ ಸೇರಿದಂತೆ 28 ಹಳ್ಳಿಗಳು ಅಣೆಕಟ್ಟೆಯ ನಿರ್ಮಾಣದಿಂದ ಮುಳುಗಡೆಯಾದವು. ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕು ಹೊರತುಪಡಿಸಿ, ಉಳಿದ ಒಂಬತ್ತು ತಾಲೂಕುಗಳಲ್ಲಿ ಹೇಮಾವತಿ ನದಿ ನೀರು ಹರಿಯುತ್ತದೆ. ಜಿಲ್ಲೆಯಲ್ಲಿ ಕುಡಿಯುವ ನೀರು, ಕೃಷಿ, ಮತ್ತು ತೋಟಗಾರಿಕೆಗೆ ಹೇಮಾವತಿ ನೀರೇ ಆಧಾರ. ಯೋಜನೆ ಆರಂಭವಾದಾಗಿನಿಂದ ಇದುವರೆಗೂ ಕುಡಿಯುವ ಅಗತ್ಯಗಳಿಗಾಗಿ ಮಾತ್ರ ನೀರು ಹೆಚ್ಚು ಬಳಕೆಯಾಗುತ್ತಿದೆ.

ತುಮಕೂರು ಜಿಲ್ಲೆಯ ಕೃಷಿ ಭೂಮಿಗೆ ನೀರಾವರಿ ಒದಗಿಸುವಲ್ಲಿ ಹೇಮಾವತಿ ಯೋಜನೆ ಇಂದಿಗೂ ಸಂಪೂರ್ಣವಾಗಿ ಸಫಲವಾಗಿಲ್ಲ. ಹೇಮಾವತಿ ಜಲಾಶಯದಿಂದ ನೀರು ಹರಿಸುವಾಗ ಪ್ರತಿ ವರ್ಷ ಕೆರೆಗಳಿಗೆ ನೀರು ತುಂಬಿಸುವಂತೆ ತುರುವೇಕೆರೆ, ಗುಬ್ಬಿ ತಾಲೂಕುಗಳ ರೈತರ ಹೋರಾಟ ಮಾಡಿಯೇ ತಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸಿ ಕೊಳ್ಳುತ್ತಿದ್ದಾರೆ.
ತುಮಕೂರು ಜಿಯ ತುರುವೇಕೆರೆ, ಗುಬ್ಬಿ, ತುಮಕೂರು ತಾಲೂಕುಗಳಿಗೆ ಹೋಲಿಸಿದರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ, ಕಳ್ಳಂಬೆಳ್ಳ ಮತ್ತು ಕುಣಿಗಲ್ ತಾಲೂಕುಗಳು ಹೇಮಾವತಿ ನಾಲೆಯ ಕಡಿಮೆ ನೀರಿನ ಪಾಲು ಪಡೆದಿವೆ. ಜಿಲ್ಲೆಯ ಪಕ್ಕದ ತಾಲೂಕುಗಳಾದ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ, ಮಂಡ್ಯ ಜಿಲ್ಲೆಯ ನಾಗಮಂಗಲ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಚಿಕ್ಕಮಗ ಳೂರು ಜಿಲ್ಲೆಯ ಕಡೂರು ತಾಲೂಕುಗಳು ಕೂಡ ಅಲ್ಪ ಪ್ರಮಾಣದ ನೀರಿನ ಪಾಲನ್ನು ಹೊಂದಿವೆ.
ಜಲಾಶಯದಿಂದ ತುಮಕೂರು ಜಿಲ್ಲೆಗೆ 25.31 ಟಿಎಂಸಿ ನೀರು ಹಂಚಿಕೆ ಆಗಿದೆ. ಆದರೆ ಯೋಜನೆ ಆರಂಭದಿಂದ ಇದುವರೆಗೂ ಯಾವ ವರ್ಷವೂ ಇಷ್ಟು ಟಿಎಂಸಿ ನೀರು ಹರಿದೇ ಇಲ್ಲ. ಹೇಮಾವತಿ ನದಿ ನಾಲಾ ವಲಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ತಾಲೂಕುಗಳಿಗೆ ನೀರು ಹಂಚಿಕೆ ಮಾಡಿ, 2019ರಲ್ಲಿಯೇ ರಾಜ್ಯ ಸರಕಾರ ಹೊಸ ಆದೇಶವನ್ನು ಹೊರಡಿಸಿತ್ತು.
ಇದಕ್ಕೂ ಮೊದಲು 10 ವರ್ಷಗಳ ಹಿಂದೆಯೇ ಕುಣಿಗಲ್ ಮೂಲಕ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲು ತೆರೆದ ನಾಲೆ ಕಾಮಗಾರಿ ಶುರುವಾಗಿತ್ತು. ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಈ ನಾಲೆ ಮೂಲಕ ನೀರು ಹರಿಯಲೇ ಇಲ್ಲ. 218ರಲ್ಲಿ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ನೀರು ಹರಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು.
ಇದನ್ನೂ ಓದಿ: Dr Ammasandra Suresh: ಹೊಣೆಗಾರಿಕೆ ಮರೆತರೆ ಕಾನೂನು ಕ್ರಮ ಖಾತ್ರಿ !
ಪ್ರಸ್ತುತ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸುಂಕಾಪರ ಗ್ರಾಮದ ಬಳಿಯಿಂದ ಕುಣಿಗಲ್ ದೊಡ್ಡ ಕೆರೆಗೆ 34.5 ಕಿ.ಮೀ ಉದ್ದ ಕೊಳವೆ ಮಾರ್ಗದ ಮೂಲಕ ನೀರು ಹರಿಸುವ 986 ಕೋಟಿ ರುಪಾಯಿಗಳ (ಯೋಜನಾ ವೆಚ್ಚ ಈಗ 1500 ಕೋಟಿ) ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಚಾಲನೆ ನೀಡಲಾಗಿದ್ದು ಈಗಾಗಲೇ ಯೋಜನೆಯ ಕಾಮಗಾರಿ ಆರಂಭವಾಗಿದೆ. ಈ ಯೋಜನೆಯೇ ತುಮಕೂರು ಜಿಲ್ಲೆಯಲ್ಲಿ ವ್ಯಕ್ತವಾಗಿರುವ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಹೇಮಾವತಿ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲೆಯ ಉಳಿದ ತಾಲೂಕುಗಳಿಂದ ವಿರೋಧ ವ್ಯಕ್ತವಾಗಿಲ್ಲ. ವಿರೋಧವಿರುವುದು, ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಠಾನಕ್ಕೆ ತಂದು ನಾಲೆಯ ಬದಲಾಗಿ ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಗೆ ಮಾತ್ರ. ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಯನ್ನು ಕೈಬಿಟ್ಟು ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ಆಧುನೀಕರಣ ಮಾಡಿರುವ ನಾಲೆಯ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ‘ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಲವು ರೂಪಗಳನ್ನು ಪಡೆದು ಕೊಂಡಿದೆ.
ಪ್ರಸ್ತುತ ತುಮಕೂರು ಜಿಲ್ಲೆಯ ಇತರೆ ಪ್ರದೇಶಗಳಿಗೂ ನಾಲೆಯ ಮೂಲಕವೇ ಹೇಮಾವತಿ ನೀರು ಬಿಡಲಾಗುತ್ತಿದ್ದು ಇದೇ ನಿಯಮವನ್ನು ಕುಣಿಗಲ್ ಭಾಗಕ್ಕೂ ಅನ್ವಯಿಸಬೇಕು; ಯಾವುದೇ ಕಾರಣ ಕ್ಕೂ ಪೈಪ್ ಲೈನ್ ಮೂಲಕ ನೀರು ಹರಿಸಬಾರದು ಎಂಬುದು ತುಮಕೂರು ಜಿಲ್ಲೆಯ ರೈತರು, ಕನ್ನಡಪರ ಹೋರಾಟಗಾರರು ಮತ್ತು ರಾಜಕೀಯ ನಾಯಕರುಗಳ ಪ್ರತಿಭಟನೆಯ ಮೂಲ ವಿಷಯವಾಗಿದೆ.
ಪೈಪ್ಲೈನ್ ಮೂಲಕ ನೀರು ಹರಿಸಿದರೆ ಹೆಚ್ಚಿನ ಪ್ರಮಾಣದ ನೀರು ಕುಣಿಗಲ್ ಭಾಗಕ್ಕೆ ಹರಿದು ಹೋಗುವ ಆತಂಕವಿರುವುದರಿಂದ ಉಳಿದ ತಾಲೂಕುಗಳಿಗೆ ನೀರಿನ ಕೊರತೆಯಾಗುತ್ತದೆ ಎಂಬುದು ಅವರ ವಾದ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಕುಣಿಗಲ್ ಭಾಗಕ್ಕೆ ಹೆಚ್ಚು ನೀರು ಹರಿಯುವಂತೆ ಮಾಡಿ ಕೊಂಡು, ಕುಣಿಗಲ್ ಹೆಸರು ಹೇಳಿಕೊಂಡು, ನೀರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಮತ್ತು ರಾಮನಗರ ಭಾಗಗಳಿಗೆ ಹರಿಸುವ ಹುನ್ನಾರ ನಡೆಯುತ್ತಿದೆ.
ಇದರಿಂದ ತುರುವೇಕೆರೆ, ಗುಬ್ಬಿ ಮತ್ತು ತುಮಕೂರು ಜನರಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂಬ ವಿಷಯ ರಾಜಕೀಯ ಕ್ಷೇತ್ರವನ್ನು ರಣಕಣವನ್ನಾಗಿ ಮಾಡಿದೆ. ಹೇಮಾವತಿ ನದಿಯ ನೀರನ್ನು ಕುಣಿಗಲ್ ದೊಡ್ಡ ಕೆರೆ ಮತ್ತು ಮಾಗಡಿ ತಾಲೂಕಿನ ಸಿರಂಗಾ ಕೆರೆಗೆ ಪೈಪ್ಲೈನ್ ಮೂಲಕ ಪೂರೈಸಿ ಕುಣಿಗಲ್ ಮತ್ತು ಮಾಗಡಿ ತಾಲೂಕುಗಳಿಗೆ ಕುಡಿಯುವ ನೀರನ್ನು ಪೂರೈಸುವ ಪ್ರಸ್ತಾಪವಿದೆ ಎಂದು ಕೆಲ ಹೋರಾಟಗಾರರು ಪ್ರತಿಪಾದಿಸುತ್ತಾರೆ.
ಮಾಗಡಿ, ರಾಮನಗರ ಹಾಗೂ ಕನಕಪುರ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿಪುಲ ಅವಕಾಶ ಗಳಿರುವಾಗ ಹೇಮಾವತಿ ನೀರಿಗೆ ಆಸೆಪಡುವುದು ಯಾಕೆ? ಎಂಬುದು ಹಲವರ ಪ್ರಶ್ನೆ. ಕುಣಿಗಲ್ ತಾಲೂಕು ಹೇಮಾವತಿ ಕಾಲುವೆಯ ಕೊನೆಯ ಭಾಗದಲ್ಲಿರುವುದರಿಂದ, ತಾಲೂಕಿಗೆ ನಿಗದಿಯಾಗಿ ರುವ ತನ್ನ ಪಾಲು 3 ಟಿಎಂಸಿ ಅಡಿಗಳಷ್ಟು ನೀರನ್ನು ಇದುವರೆಗೂ ಪಡೆಯಲು ಸಾಧ್ಯ ವಾಗಿಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದ ನೀರಿನ ಪಾಲಿನ ಶೇ.10ರಷ್ಟನ್ನು ಮಾತ್ರ ಪಡೆಯಲು ಸಾಧ್ಯ ವಾಗಿದೆ. ಆದ್ದರಿಂದ ಕುಣಿಗಲ್ ತಾಲೂಕಿನ ಜನರಿಗೆ ನ್ಯಾಯ ಒದಗಿಸಿ ಅವರ ಪಾಲಿನ ನೀರು ಅವರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಪೈಪ್ಲೈನ್ ಮೂಲಕ ನೀರು ಹರಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿಭಟನಾಕಾರರು ಹೇಳುವಂತೆ ರಾಮನಗರ ಭಾಗಕ್ಕೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವ ಯಾವುದೇ ರೀತಿಯ ಪ್ರಸ್ತಾಪವಿಲ್ಲ. ಎಂಬುದು ಯೋಜನೆಯ ಪರವಾಗಿರುವವರ ವಾದವಾಗಿದೆ.
ಯೋಜನೆಯ ಕುರಿತು ಸ್ಥಳೀಯ ಹೋರಾಟಗಾರರು ಮತ್ತು ರಾಜಕೀಯ ನಾಯಕರುಗಳೊಂದಿಗೆ, ಯೋಜನೆಯ ಕಾಮಗಾರಿಯನ್ನು ಆರಂಭಿಸುವುದಕ್ಕಿಂತ ಮೊದಲೇ ಚರ್ಚಿಸಿ, ಈ ಯೋಜನೆಯಿಂದ ತುಮಕೂರು ಜಿಲ್ಲೆಯ ನೀರಿನ ಪಾಲಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ನಂತರ ಯೋಜನೆಗೆ ಚಾಲನೆ ನೀಡಿದ್ದಿದ್ದರೆ ಹೋರಾಟದ ಕಿಚ್ಚು ಇಷ್ಟು ಹೆಚ್ಚುತ್ತಿರಲಿಲ್ಲ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ವಾಮೀಜಿಗಳು, ರೈತ ಮುಖಂಡರುಗಳು ಹಾಗೂ ರಾಜಕೀಯ ನಾಯಕರುಗಳ ವಿರುದ್ಧ ದೂರು ದಾಖಲಿಸಿರುವುದು ಪ್ರತಿಭಟನೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿಭಟನೆ ಇದೇ ರೀತಿ ಮುಂದುವರಿದರೆ ಅಂತರ ರಾಜ್ಯ ಜಲ ವಿವಾದಗಳಿರುವಂತೆ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ನಡುವೆ ಅಂತರಜಿ ಜಲ ವಿವಾದಗಳು, ಕಾಲುವೆಯಲ್ಲಿ ನೀರು ಹರಿಸುವಾಗ ಪ್ರತಿ ವರ್ಷ ಹೋರಾಟಗಳು ಆರಂಭವಾಗಬಹುದು.
ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯ ಜನ ಪ್ರತಿನಿಧಿಗಳು, ಮುಖಂಡರು ಮತ್ತು ನೀರಾವರಿ ತಜ್ಞರ ಸಭೆ ಕರೆದು ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅವಲೋಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ.
(ಲೇಖಕರು ಹಿರಿಯ ಪತ್ರಕರ್ತರು)