ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Chalavadi Narayanaswamy: ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸದಿರಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಗ್ಯಾರಂಟಿ ಕೊಡಲು ನಮ್ಮ ಅಭ್ಯಂತರವಿಲ್ಲ. ಆದರೆ ಪರಿಶಿಷ್ಟ ಜಾತಿ, ವರ್ಗಗಳಿಗೆ, ದಲಿತರು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೇ ಬಳಸದೆ ಇರುವುದು ದೊಡ್ಡ ಮೋಸ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸದಿರಿ: ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ .

Profile Siddalinga Swamy Feb 27, 2025 8:49 PM

ಬೆಂಗಳೂರು: ಈ ವರ್ಷ ಮಂಡಿಸುವ ಬಜೆಟ್‍ನಲ್ಲಿ ದಲಿತರಿಗೆ ಮೀಸಲಾಗಿಡುವ ಎಸ್.ಸಿ.ಪಿ., ಟಿ.ಎಸ್.ಪಿ.ಗೆ ಸೇರಿದ ಒಂದು ರೂಪಾಯಿ ಹಣವನ್ನು ಕೂಡ ಗ್ಯಾರಂಟಿಗಳಿಗೆ ಬಳಸಬಾರದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಎಸ್.ಸಿ.ಪಿ., ಟಿ.ಎಸ್.ಪಿ. ಹಣದಲ್ಲಿ ಮೊದಲು ಅಂಬೇಡ್ಕರ್ ನಿಗಮ, ಆದಿ ಜಾಂಬವ ನಿಗಮ, ಬೋವಿ, ವಾಲ್ಮೀಕಿ ನಿಗಮ ಸೇರಿ ವಿವಿಧ ನಿಗಮಗಳ ಮೂಲಕ ಜಮೀನು ಇಲ್ಲದವರಿಗೆ ಜಮೀನುಗಳನ್ನು ಕೊಡಲಾಗುತ್ತಿತ್ತು. ಆದರೆ ಈಗ ಭೂಮಿ ಕೊಟ್ಟಿಲ್ಲ. 39 ಸಾವಿರ ಕೋಟಿ ರೂ. ಮೀಸಲಿಟ್ಟರೂ ಎಲ್ಲ ನಿಗಮಗಳಿಗೆ ಸೇರಿ 500 ಕೋಟಿ ರೂ. ಕೊಡಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

ದಲಿತರ ಹಣ ಗ್ಯಾರಂಟಿಗೆ ಕೊಡುವುದೇಕೆ?

ದಲಿತರಿಗೆ ಇಟ್ಟ ಹಣವನ್ನು ಅವರಿಗಲ್ಲದೇ ಇನ್ನೊಬ್ಬರಿಗೆ ಖರ್ಚು ಮಾಡುವುದಿಲ್ಲ ಎನ್ನುತ್ತಾರೆ. ಆದರೆ ಗ್ಯಾರಂಟಿಗಳಿಗೆ ಬಳಸುವುದು ತಪ್ಪು. ಸಾರ್ವಜನಿಕವಾಗಿ ಕೊಡುವ ಗ್ಯಾರಂಟಿಗೆ ದಲಿತರಿಗೆ ಮೀಸಲಿಟ್ಟ ಹಣ ಬಳಸುವುದು ತಪ್ಪು ಎಂದು ತಿಳಿಸಿದ ಅವರು, ದಲಿತ ಪದವೀಧರರಿಗೆ ಕೆಲಸ ಸಿಗುವಂತೆ ಮಾಡಿಲ್ಲ. ಕಾರ್ಖಾನೆ ಆರಂಭಿಸಲು ಸ್ವ ಉದ್ಯೋಗ ಆರಂಭಕ್ಕೆ ಸಾಲ ಮತ್ತಿತರ ಸೌಲಭ್ಯ ಕೊಟ್ಟಿಲ್ಲ. ಚಾಲನೆ ಕಲಿತವರಿಗೆ ಒಂದೇ ಒಂದು ಕಾರು ಕೊಡದವರು ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದ ಅವರು, ಕೇವಲ ನೀವು ಕಾರು ತೆಗೆದುಕೊಳ್ಳುತ್ತೀರಿ. ನೀವು ಲ್ಯಾಂಬೊರ್ಗಿನಿ ಕೂಡ ತೆಗೆದುಕೊಳ್ಳುತ್ತೀರಿ ಎಂದು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರವು ದಲಿತರಿಗೆ ಮನೆ ನಿರ್ಮಾಣ, ಜಮೀನು ನೀಡುವುದು, ಕಾರು ತೆಗೆದು ಕೊಡುವ ಕಾರ್ಯವನ್ನು ಮಾಡಿಲ್ಲ. ಗಂಗಾ ಕಲ್ಯಾಣದಡಿ ಪಂಪ್ ಸೆಟ್‍ಗೆ ಹಣ ಕೊಟ್ಟಿಲ್ಲ. ಎಸ್.ಸಿ.ಪಿ., ಟಿ.ಎಸ್.ಪಿ. ಸಂಬಂಧ ತಂದ ಕಾಯಿದೆಗೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಗ್ಯಾರಂಟಿ ಎಂಬುದು ಚುನಾವಣಾ ಗಿಮಿಕ್

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಿಸಿತ್ತು. ಇದು ಕೇವಲ ಚುನಾವಣಾ ಗಿಮಿಕ್ ಆಗಿತ್ತು. ಕಳೆದೆರಡು ವರ್ಷಗಳಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ನಿಗದಿತ ಮೊತ್ತ ನೀಡಿದ್ದರು. ಕಳೆದ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಮೀಸಲಿಟ್ಟಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಗ್ಯಾರಂಟಿ ಕೊಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಪರಿಶಿಷ್ಟ ಜಾತಿ, ವರ್ಗಗಳಿಗೆ, ದಲಿತರು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೇ ಬಳಸದೆ ಇರುವುದು ದೊಡ್ಡ ಮೋಸ ಎಂದು ಆರೋಪಿಸಿದ್ದಾರೆ. ಒಂದೆಡೆ ಗ್ಯಾರಂಟಿ ಹಣ ಕೊಡದೆ ವಂಚನೆ ನಡೆದಿದೆ. ಮತ್ತೊಂದು ಕಡೆ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಿ ಇನ್ನೊಂದು ಕಡೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಅಂಬೇಡ್ಕರರಿಗೂ ಅನ್ಯಾಯ ಮಾಡಿದ್ದ ಕಾಂಗ್ರೆಸ್

ಕಾಂಗ್ರೆಸ್ ಅಂಬೇಡ್ಕರರಿಗೂ ಅನ್ಯಾಯ ಮಾಡಿತ್ತು. ಅದನ್ನು ಹಾಗೇ ಮುಂದುವರಿಸಿ ದಲಿತ ಸಮುದಾಯಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಅವರು ಬಡತನ ರೇಖೆಯಿಂದ ಮೇಲೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಒಂದು ಕೈಯಲ್ಲಿ ಕೊಟ್ಟ ಹಾಗೆ ಮಾಡಿ, ಮತ್ತೊಂದೆಡೆ ಕಿತ್ತುಕೊಳ್ಳುವುದನ್ನು ಮುಂದುವರಿಸಿದೆ. ಜನರಿಗೆ ತೋರಿಕೆಗೆ ಸ್ಕೀಂಗಳನ್ನು ಪ್ರಕಟಿಸುವುದು- ಇದೇ ಇವರ ತಂತ್ರಗಾರಿಕೆ ಎಂದು ದೂರಿದ್ದಾರೆ.

ಜನರ ಮುಂದೆ ನಿಂತು ಸುಳ್ಳು ಹೇಳುವ ಕಾಂಗ್ರೆಸ್‍ನವರಲ್ಲಿ ಎಷ್ಟು ವಂಚಕತನ ಇದೆ. ಹಿಂದೆ ಜನತಾದಳದಲ್ಲಿ ಇದ್ದಾಗ ಮುಖ್ಯಮಂತ್ರಿ ಬಹಳ ಖಡಕ್ಕಾಗಿ ಮಾತನಾಡುತ್ತಿದ್ದರು. ಈಗ ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯ್ಲಿ ಅವರನ್ನೇ ಮೀರಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ಆಸ್ತಿ ನಿರ್ಮಾಣ, ಸ್ವ ಉದ್ಯೋಗಕ್ಕೆ ನೆರವು ಕೊಡಬೇಕಿತ್ತು. 7 ಅಭಿವೃದ್ಧಿ ನಿಗಮದ ಮೂಲಕ ಸ್ವಾವಲಂಬಿತನಕ್ಕೆ ಅವಕಾಶ ಕೊಡಬೇಕಿತ್ತು. ಅದು ಆಗುತ್ತಿಲ್ಲ. 7 ಅಭಿವೃದ್ಧಿ ನಿಗಮಗಳ ಕೆಲಸ ಸ್ಥಗಿತವಾಗಿದೆ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Kalaburagi News: ದೇಶದ 28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; ಆರೋಪಿ ಬಂಧನ

ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್, ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಪಕ್ಷದ ಮುಖಂಡ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.