Mysuru Dasara: ಐತಿಹಾಸಿಕ ಮೈಸೂರು ದಸರಾ ಈ ಬಾರಿ ಭರ್ತಿ 11 ದಿನ! ಕಾರಣ ಇಲ್ಲಿದೆ
Mysuru Dasara: ಮೈಸೂರು ದಸರಾ 1399ರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಿಂದ ಆರಂಭವಾಗಿ, 1410ರಲ್ಲಿ ಮೈಸೂರು ಸಂಸ್ಥಾನದ ಯದುವಂಶದ ರಾಜವಂಶಸ್ಥರಿಂದ ವೈಭವದಿಂದ ಆಚರಣೆಗೊಂಡು ಬಂದಿದೆ. 400 ವರ್ಷಗಳ ಇತಿಹಾಸದಲ್ಲಿ ಯಾವತ್ತೂ 11 ದಿನಗಳು ಕಾಲ ಆಚರಣೆ ನಡೆದದ್ದು ಕಂಡುಬಂದಿಲ್ಲ.

ಸಂಗ್ರಹ ಚಿತ್ರ

ಮೈಸೂರು: ಈ ಬಾರಿ ʼನವರಾತ್ರಿʼ (Navaratri) ʼಏಕಾದಶರಾತ್ರಿʼಯಾಗಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಈ ಬಾರಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ 10 ದಿನಗಳ ಬದಲು 11 ದಿನಗಳ ಕಾಲ ವಿಜೃಂಭಿಸಲಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2, 2025 ರವರೆಗೆ ನಡೆಯಲಿರುವ ಈ ಮಹೋತ್ಸವವು 400 ವರ್ಷಗಳ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ದಸರಾ ಆಚರಣೆ (Mysore dasara celebration) 10 ದಿನಗಳ ಕಾಲದ್ದಾಗಿದ್ದು, ಈ ಬಾರಿ ಮಾತ್ರ ಒಂದು ದಿನ ಹೆಚ್ಚುವರಿಯಾಗಿ ಬಂದು ವಿಶೇಷವಾಗಿದೆ.
ಮೈಸೂರು ದಸರಾ 1399ರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಿಂದ ಆರಂಭವಾಗಿ, 1410ರಲ್ಲಿ ಮೈಸೂರು ಸಂಸ್ಥಾನದ ಯದುವಂಶದ ರಾಜವಂಶಸ್ಥರಿಂದ ವೈಭವದಿಂದ ಆಚರಣೆಗೊಂಡು ಬಂದಿದೆ. ಚಾಮುಂಡೇಶ್ವರಿ ದೇವಿಯು ರಾಕ್ಷಸ ಮಹಿಷಾಸುರನನ್ನು ಸಂಹರಿಸಿದ, ದುಷ್ಟ ಶಿಕ್ಷೆ- ಶಿಷ್ಟ ರಕ್ಷೆಯ ಕಥೆಯನ್ನು ಈ ಆಚರಣೆ ಸಂಕೇತಿಸುತ್ತದೆ. ಸಾಮಾನ್ಯವಾಗಿ, ದಸರಾ ಎಂದರೆ 'ದಶ+ಹರ' ಅಂದರೆ ಹತ್ತು ದಿನಗಳ ಆಚರಣೆ. ನವರಾತ್ರಿಯ ಒಂಬತ್ತು ರಾತ್ರಿಗಳು ಕಳೆದು, ಹತ್ತನೇ ದಿನದ ವಿಜಯದಶಮಿ ಹಾಗೂ ಆ ದಿನ ಜಂಬೂಸವಾರಿ ವಿಶೇಷ ಆಕರ್ಷಣೆ.
ಆದರೆ, ಈ ಬಾರಿ ಸೆಪ್ಟೆಂಬರ್ 26 ಮತ್ತು 27 ರಂದು ಎರಡು ದಿನಗಳ ಕಾಲ ಪಂಚಮಿ ತಿಥಿಯ ಆಗಮನವಾಗುತ್ತಿರುವುದರಿಂದ, ದಸರಾ 11 ದಿನಗಳ ಕಾಲ ಆಚರಣೆಗೊಳ್ಳಲಿದೆ. ತಿಥಿಗಳ ವ್ಯತ್ಯಾಸದಿಂದ ಹೀಗಾಗುತ್ತಿದೆ. ಸಾಮಾನ್ಯವಾಗಿ, ನವರಾತ್ರಿಯ ಒಂಬತ್ತು ದಿನಗಳ ಆಚರಣೆಯ ನಂತರ ಹತ್ತನೇ ದಿನ ವಿಜಯದಶಮಿಯಾಗಿರುತ್ತದೆ. ಆದರೆ 2025ರಲ್ಲಿ, ಸೆಪ್ಟೆಂಬರ್ 26 ಮತ್ತು 27ರಂದು ಎರಡು ದಿನಗಳ ಕಾಲ ಪಂಚಮಿ ತಿಥಿಯು ಆಗಮಿಸುತ್ತಿರುವುದರಿಂದ, ಒಟ್ಟು ಆಚರಣೆಯ ದಿನಗಳ ಸಂಖ್ಯೆ 11ಕ್ಕೆ ಏರಿದೆ. ಈ ಅಪರೂಪದ ಖಗೋಳೀಯ ಸಂಗತಿಯು ವಿದ್ವಾಂಸರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಮೈಸೂರು ದಸರಾವನ್ನು 'ನಾಡಹಬ್ಬ'ವೆಂದು ಘೋಷಿಸಿ, ವೈಭವದಿಂದ ಆಚರಿಸುತ್ತದೆ. ಈ ಬಾರಿಯ ದಸರಾ ಆಚರಣೆಯು ಸೆಪ್ಟೆಂಬರ್ 22 ರಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಆರಂಭವಾಗಲಿದೆ. ಮುಖ್ಯಮಂತ್ರಿ, ಇತರ ಗಣ್ಯರು ಮತ್ತು ರಾಜವಂಶದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 11 ದಿನಗಳ ಕಾಲ, ಮೈಸೂರು ನಗರವು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಸ್ಪರ್ಧೆಗಳು, ಚಲನಚಿತ್ರೋತ್ಸವಗಳು, ಯುವ ದಸರಾ, ಮಹಿಳಾ ದಸರಾ ಮತ್ತು ಮಕ್ಕಳ ದಸರಾ ಮುಂತಾದ ಕಾರ್ಯಕ್ರಮಗಳಿಂದ ಕಳೆಗಟ್ಟಲಿದೆ.
ಮೈಸೂರು ಅರಮನೆಯನ್ನು 1 ಲಕ್ಷಕ್ಕೂ ಅಧಿಕ ದೀಪಗಳಿಂದ ಅಲಂಕರಿಸಲಾಗುತ್ತದೆ. ಇದು ಪ್ರವಾಸಿಗರಿಗೆ ಆಕರ್ಷಣೆಯುಂಟುಮಾಡುತ್ತದೆ. ಜಂಬೂ ಸವಾರಿಯ ದಿನದಂದು, ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ಇರಿಸಿ, ಆನೆಯ ಮೇಲೆ ಮೆರವಣಿಗೆ ಮಾಡಲಾಗುವುದು. ಈ ಮೆರವಣಿಗೆಯು ಮೈಸೂರು ಅರಮನೆಯಿಂದ ಆರಂಭವಾಗಿ, ಬನ್ನಿಮಂಟಪದವರೆಗೆ 6 ಕಿ.ಮೀ. ದೂರ ನಡೆಯಲಿದೆ. ಅಕ್ಟೋಬರ್ 2ರಂದು ವಿಜಯದಶಮಿಯ ರಾತ್ರಿಯಂದು ಬನ್ನಿಮಂಟಪದಲ್ಲಿ 'ಪಂಜಿನ ಕವಾಯತು' (ದೀಪೋತ್ಸವ) ನಡೆಯಲಿದೆ.
ಇದನ್ನೂ ಓದಿ: ನಮ್ಮ ನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಮೈಸೂರು ದಸರಾ