Karun Nair: ವಿದರ್ಭ ತೊರೆದು ಮತ್ತೆ ರಾಜ್ಯ ತಂಡಕ್ಕೆ ಮರಳಲು ಸಜ್ಜಾದ ಕರುಣ್ ನಾಯರ್
ಮೂಲಗಳ ಮಾಹಿತಿ ಪ್ರಕಾರ ಜಿತೇಶ್ ಅವರು ಬರೋಡಾಗೆ ಮತ್ತು ಕರುಣ್ ನಾಯರ್ ಮತ್ತೆ ತಮ್ಮ ತವರು ರಾಜ್ಯವಾದ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ಋತುವಿನಲ್ಲಿ ವಿದರ್ಭದ ತಂಡದ ಪರ ಉಭಯ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡವನ್ನು ಹಲವು ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.


ಮುಂಬೈ: ಕಳೆದ ದೇಶೀಯ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದರ್ಭ(Vidarbha) ತಂಡವು ಮುಂಬರುವ ಅಭಿಯಾನಕ್ಕೆ ಮುಂಚಿತವಾಗಿ ತನ್ನ ಇಬ್ಬರು ಸ್ಟಾರ್ ಆಟಗಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ತಂಡದ ಬ್ಯಾಟಿಂಗ್ ಪ್ರಮುಖ ಆಟಗಾರರಾದ ಕರುಣ್ ನಾಯರ್(Karun Nair) ಮತ್ತು ಜಿತೇಶ್ ಶರ್ಮಾ(Jitesh Sharma) ತಂಡದಿಂದ ಹೊರನಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿದರ್ಭ ರಣಜಿ ಟ್ರೋಫಿಯಲ್ಲಿ ಚಾಂಪಿಯನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ನರ್-ಅಪ್ ಮತ್ತು 2024-25 ಪಂದ್ಯಾವಳಿಗಳಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಯಲ್ಲಿ ಕ್ವಾರ್ಟರ್-ಫೈನಲಿಸ್ಟ್ ಆಗಿತ್ತು.
ಮೂಲಗಳ ಮಾಹಿತಿ ಪ್ರಕಾರ ಜಿತೇಶ್ ಅವರು ಬರೋಡಾಗೆ ಮತ್ತು ಕರುಣ್ ನಾಯರ್ ಮತ್ತೆ ತಮ್ಮ ತವರು ರಾಜ್ಯವಾದ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ಋತುವಿನಲ್ಲಿ ವಿದರ್ಭದ ತಂಡದ ಪರ ಉಭಯ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡವನ್ನು ಹಲವು ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ನಾಯರ್ ರಣಜಿ ಟ್ರೋಫಿಯಲ್ಲಿ 863 ರನ್, ವಿಜಯ್ ಹಜಾರೆ ಏಕದಿನ ಸ್ಪರ್ಧೆಯಲ್ಲಿ 779 ರನ್ ಬಾರಿಸಿದ್ದರು. 2023-24ರ ಋತುವಿಗೆ ಮುಂಚಿತವಾಗಿ ಕರ್ನಾಟಕ ತಂಡ ತೊರೆದು ವಿದರ್ಭ ತಂಡ ಸೇರಿದ್ದರು. ಆದರೆ ಈಗ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಗಾಗಿ ಕರ್ನಾಟಕಕ್ಕೆ ಮರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ನಾಯರ್ ಮರಳುವ ಸಾಧ್ಯತೆ ಹೆಚ್ಚು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮೂಲಗಳು ದೃಢಪಡಿಸಿವೆ. ಕಳೆದ ಋತುವಿನಲ್ಲಿ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ನಾಯರ್ ವಿದರ್ಭವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
ಏತನ್ಮಧ್ಯೆ, ಜಿತೇಶ್ ಅವರು ಬರೋಡಾಗೆ ತೆರಳುವುದು ಬಹುತೇಕ ಖಚಿತವಾಗಿದೆ. ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಮೂಲಗಳು ಒಂದು ಅಥವಾ ಎರಡು ದಿನಗಳಲ್ಲಿ ಜಿತೇಶ್ ವರ್ಗಾವಣೆ ಪೂರ್ಣಗೊಳ್ಳಲಿದೆ ಎಂದು ದೃಢಪಡಿಸಿವೆ. ಜಿತೇಶ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕರಾಗಿದ್ದರು.