'ಕಲರ್ಸ್ ಕನ್ನಡ' ವಾಹಿನಿಯಲ್ಲಿ 'ಸಂಪೂರ್ಣ ಮಂತ್ರಾಲಯ ದರ್ಶನ'; ʼನೂರು ಜನ್ಮಕೂʼ ಧಾರಾವಾಹಿ ತಂಡದಿಂದ ಹೊಸ ಪ್ರಯತ್ನ
Nooru Janmaku: ಕಲರ್ಸ್ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ʼನೂರು ಜನ್ಮಕೂ' ಮಂತ್ರಾಲಯ ದರ್ಶನ ಮಾಡಿಸಲಿದೆ. ಹೌದು, ಧಾರಾವಾಹಿಯ ಸಂಚಿಕೆ ಮಂತ್ರಾಲಯದಲ್ಲೇ ಚಿತ್ರೀಕರಣವಾಗಿದ್ದು, ಮಂತ್ರಾಲಯದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವದಿಸಿದ್ದಾರೆ.


ಬೆಂಗಳೂರು: ಕಲರ್ಸ್ ಕನ್ನಡ (Colors Kannada) ವಾಹಿನಿ ಮೊದಲಿನಿಂದಲೂ ಅನೇಕ ಪ್ರಥಮಗಳನ್ನು ಮಾಡುತ್ತಾ ಬಂದಿದೆ. ಆ ಪಟ್ಟಿಗೆ ಈಗ ಎರಡೆರಡು ಹೊಸ 'ಪ್ರಥಮ'ಗಳು ಸೇರಿವೆ. ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿ ಮಂತ್ರಾಲಯದೊಳಗೆ ಚಿತ್ರೀಕರಣ ಮಾಡಿದೆ. ಜತೆಗೆ ಪ್ರಪ್ರಥಮ ಬಾರಿಗೆ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಸೀರಿಯಲ್ನಲ್ಲಿ ತಾವೇ ಆಗಿ ಹರಸಿ ಆಶೀರ್ವದಿಸಿದ್ದಾರೆ. ಹೌದು, ಇದುರೆಗೆ ಯಾವುದೇ ಮನರಂಜನಾ ವಾಹಿನಿಯಲ್ಲಿ ಮಂತ್ರಾಲಯವನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಇದೀಗ ಕಲರ್ಸ್ ಕನ್ನಡ ವಾಹಿನಿ ತನ್ನ ಜನಪ್ರಿಯ ಧಾರಾವಾಹಿ ʼನೂರು ಜನ್ಮಕೂ' (Nooru Janmaku) ಚಿತ್ರೀಕರಣವನ್ನು ಮಂತ್ರಾಲಯದೊಳಗೆ ಮಾಡಿ ಪ್ರೇಕ್ಷಕರಿಗೆ ಮಂತ್ರಾಲಯದ ದರ್ಶನವನ್ನು ಮಾಡಿಸಲಿದೆ.
ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರೂ ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವ ರಾಘವೇಂದ್ರ ಸ್ವಾಮಿಯ ದರ್ಶನ ಮಾಡಲು 'ನೂರು ಜನ್ಮಕೂ' ಧಾರಾವಾಹಿಯ ಕಥಾನಾಯಕಿ ಮೈತ್ರಿ ಮತ್ತು ಕಥಾನಾಯಕ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಹೋಗಲು ಮುಖ್ಯ ಕಾರಣ ಏನು ಗೊತ್ತಾ? ಒಂದು ಹಳೆಯ ಹರಕೆ!
'ನೂರು ಜನ್ಮಕೂ' ಧಾರಾವಾಹಿಯ ಮಂತ್ರಾಲಯ ಪ್ರೋಮೋ ನೋಡಿ
ಈ ಸುದ್ದಿಯನ್ನೂ ಓದಿ: Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?
'ನೂರು ಜನ್ಮಕೂ' ಧಾರಾವಾಹಿ ಕಥಾನಾಯಕಿ ಮೈತ್ರಿಯ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ತುಂಬಿದೆ. ಅವಳ ತಂದೆ ತಾಯಿ - ರಮೇಶ್ - ರಾಣಿ . ಅವರಿಬ್ಬರೂ ಇದಕ್ಕೆಲ್ಲ ಏನು ಕಾರಣ ಎಂದು ಯೋಚಿಸುತ್ತ ಕೂತಾಗ ಅವರಿಗೆ ಮೈತ್ರಿ ಹುಟ್ಟುವ ಮುನ್ನ ತಾವು ಹೊತ್ತ ಹರಕೆ ನೆನಪಾಗುತ್ತದೆ. ಆ ಕಾರಣಕ್ಕೆ ಮೈತ್ರಿಗೆ ಕೆಟ್ಟದ್ದು ಆಗ್ತಿರಬಹುದು ಅಂತ ನಿರ್ಧರಿಸಿ ಮಂತ್ರಾಲಯಕ್ಕೆ ಮಗಳು ಹಾಗೂ ಅಳಿಯ ಚಿರಂಜೀವಿಯನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ.
ಯಾವ ಜನ್ಮದ ಮೈತ್ರಿ?
ಹರಕೆಯ ಕಾರಣಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡುವ ಮೈತ್ರಿಗೂ ಹಾಗೂ ಮಂತ್ರಾಲಯಕ್ಕೂ ಇರುವ ʼಆ ಜನ್ಮ ಸಂಬಂಧ' ಇಲ್ಲಿ ಬಯಲಾಗುತ್ತದೆ. ಮೈತ್ರಿ ಮಂತ್ರಾಲಯದಲ್ಲಿ ಹೆಜ್ಜೆ ಇಡುತ್ತಿದ್ದ ಹಾಗೆ ಅಲ್ಲಿದ್ದ ಸಾಧು ಒಬ್ಬರಿಗೆ ಮೈತ್ರಿ ಬಂದಳು ಅನ್ನೋ ಸೂಚನೆ ಸಿಗುತ್ತದೆ. ಮೈತ್ರಿಗೂ ಮಂತ್ರಾಲಯಕ್ಕೂ ಒಂದು 'ಪೂರ್ವ ಜನ್ಮದ ಪುಣ್ಯ' ಇರುವ ಹಾಗೆ ಕತೆ ಸಾಗುತ್ತದೆ. ನಂತರ ಗುರುರಾಯರ ಪವಾಡಗಳು ನಡೆಯುತ್ತಾ ಹೋಗಿ, ಮೈತ್ರಿ ಮತ್ತು ಚಿರಂಜೀವಿಯ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂದು ಕಿರುತೆರೆಯಲ್ಲಿಯೇ ನೋಡಬೇಕು.
ಆಶೀರ್ವದಿಸಿದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು
ಈ ಸನ್ನಿವೇಶದಲ್ಲಿ ಮಂತ್ರಾಲಯದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಚಿರಂಜೀವಿ ಹಾಗೂ ಮೈತ್ರಿಗೆ ಆಶೀರ್ವಾದ ಮಾಡುತ್ತಾರೆ. ಸುಬುಧೇಂದ್ರ ತೀರ್ಥರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಮಂತ್ರಾಲಯಕೆ ಹೋಗೋಣ
ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ಇದೆ. ಇಲ್ಲಿ ನಾಯಕಿ ಮಾಡುವ ಪ್ರಾರ್ಥನೆಯ ದೊಡ್ಡ ಸನ್ನಿವೇಶವೊಂದರ ಚಿತ್ರೀಕರಣವಾಗಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರಭಾವಿ ಸಂತರಾಗಿದ್ದರು. ಅವರು ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವಶಾಸ್ತ್ರವನ್ನು ಪ್ರತಿಪಾದಿಸಿದರು. ಅವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹ್ಲಾದನ ಪುನರ್ಜನ್ಮವೆಂದು ಪರಿಗಣಿಸಲಾಗಿದೆ. 'ಭವರೋಗ ಕಳೆಯುವ ರಾಘವೇಂದ್ರ ಸ್ವಾಮಿಯಂತಹ ಮಹಾಮಹಿಮರ ಸನ್ನಿಧಾನದಲ್ಲಿ ನೂರು ಜನ್ಮಕೂ ಧಾರಾವಾಹಿ ಚಿತ್ರಿತವಾಗಿದ್ದು ನಮ್ಮ ಭಾಗ್ಯ' ಎನ್ನುತ್ತಾರೆ ಧಾರಾವಾಹಿಯ ನಿರ್ಮಾಪಕ ಗುರುದಾಸ್ ಶೆಣೈ.
ಮಂತ್ರಾಲಯದ ಪ್ರಮುಖ ಆಕರ್ಷಣೆ ದೇವಾಲಯ ಮತ್ತು ಮಠ ಸಂಕೀರ್ಣ. ಈ ಭಾಗಗಳಲ್ಲಿ ಹಾಗೂ ಮಂತ್ರಾಲಯದ ಮೂಲೆ ಮೂಲೆಯಲ್ಲೂ ಒಳಗೂ ಹೊರಗೂ ಸತತ ಮೂರು ದಿನಗಳ ಕಾಲ ಧಾರಾವಾಹಿ ಚಿತ್ರೀಕರಣಗೊಂಡಿದ್ದು ಈ ಮೂರು ದಿನಗಳ ನೆನಪು 'ನೂರು ಜನ್ಮಕೂ ' ಉಳಿಯುವಂಥದ್ದು ಎನ್ನುವುದು ಧಾರಾವಾಹಿ ತಂಡದ ಅಭಿಮತ.
ಕರ್ನಾಟಕದ ಗಡಿಯ ಬಳಿ ಮತ್ತು ತುಂಗಾ ನದಿಯ ತೀರದಲ್ಲಿರುವ ಮಂತ್ರಾಲಯವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ. ಮತ್ತು ಹೈದರಾಬಾದ್ನಿಂದ 250 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಇಡೀ ಧಾರಾವಾಹಿ ತಂಡ ಪಯಣಿಸಿ ತುಂಗಾ ತೀರದಲ್ಲಿ ಮಿಂದು ಗುರು ರಾಯರ ದರ್ಶನ ಮಾಡಿದೆ. ರಾಯರು ಮತ್ತು ಅವರ ಭಕ್ತರ ಸೇವೆಗೆ ತನ್ನನ್ನು ಮುಡುಪಾಗಿಸಿಕೊಂಡಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯು ಕಲರ್ಸ್ ಕನ್ನಡದ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿತ್ತು.
ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ (ಮಾ. 22, 23) ಸಂಜೆ 6:30ಕ್ಕೆ 'ನೂರು ಜನ್ಮಕೂ' ಧಾರಾವಾಹಿ ನೋಡುವ ಮೂಲಕ ಮನೆಯಲ್ಲಿಯೇ ಕುಳಿತು ಮಂತ್ರಾಲಯದ ದರ್ಶನ ಮಾಡಬಹುದು.