IPL 2025 Final: 18 ವರ್ಷ; ಇಬ್ಬರು ವರ್ಜಿನ್ಗಳು: ಐಪಿಎಲ್ ಫೈನಲ್ಗೂ ಮುನ್ನ ಗಮನ ಸೆಳೆದ ಕಾಂಡೋಮ್ ಕಂಪನಿಯ ಪೋಸ್ಟ್
RCB V/S PBKS: ಐಪಿಎಲ್ 18ನೇ ಸೀಸನ್ನ ಫೈನಲ್ಗೆ ಕ್ಷಣಗಣನೆ ಆರಂಭವಾಗಿದೆ. ಚೊಚ್ಚಲ ಕಪ್ಗಾಗಿ ಬೆಂಗಳೂರು ಮತ್ತು ಪಂಜಾಬ್ ತಂಡಗಳು ಸೆಣಸಾಟ ನಡೆಸಲಿವೆ. ಈ ಮಧ್ಯೆ ಕಾಂಡೋಮ್ ಕಂಪನಿ ಡ್ಯೂರೆಕ್ಸ್ ಇಂಡಿಯಾ ಹಂಚಿಕೊಂಡ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಅದರಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಅಹಮದಾಬಾದ್: ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿರುವ ಘಳಿಗೆ ಬಂದೇ ಬಿಟ್ಟಿದೆ. ಐಪಿಎಲ್ 18ನೇ ಸೀಸನ್ನ ಫೈನಲ್ಗೆ ಕ್ಷಣಗಣನೆ ಆರಂಭವಾಗಿದೆ (IPL 2025 Final). ಕನ್ನಡಿಗರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮತ್ತು ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಚೊಚ್ಚಲ ಐಪಿಎಲ್ ಕಿರೀಟಕ್ಕಾಗಿ ಮಂಗಳವಾರ (ಜೂ. 3) ಪೈಪೋಟಿ ನಡೆಸಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 7.30ಕ್ಕೆ ಈ ರೋಚಕ ಹಣಾಹಣಿ ರಂಗೇರಲಿದೆ. ರಜತ್ ಪಾಟೀದಾರ್ (Rajat Patidar) ನೇತೃತ್ವದ ಆರ್ಸಿಬಿ ಮತ್ತು ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಪಂಜಾಬ್ ಪೈಕಿ ಯಾರು ಚಾಂಪಿಯನ್ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿರುವ ಮಧ್ಯೆ ಕಾಂಡೋಮ್ ಕಂಪನಿ ಡ್ಯೂರೆಕ್ಸ್ ಇಂಡಿಯಾ (Durex India) ಹಂಚಿಕೊಂಡ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.
ಆರ್ಸಿಬಿ ಮತ್ತು ಪಂಜಾಬ್ ಇತ್ತಂಡಗಳು ಇದುವರೆಗೆ ಕಪ್ ಗೆದ್ದುಕೊಂಡಿಲ್ಲ. ಹೀಗಾಗಿ ಯಾರು ಜಯಗಳಿಸಿದರೂ ಇತಿಹಾಸ ನಿರ್ಮಾಣವಾಗಲಿದೆ. ಪ್ರತಿ ತಂಡಕ್ಕೂ ಇದು ಮೊದಲ ಕಪ್ ಆಗಲಿದೆ. ಇದೇ ಕಾರಣಕ್ಕೆ ಡ್ಯೂರೆಕ್ಸ್ ಇಂಡಿಯಾ, ʼʼ18 ವರ್ಷ. ಇಬ್ಬರು ವರ್ಜಿನ್ಗಳು. ಇಂದು ರಾತ್ರಿ ಯಾರಿಗೆ ಅದೃಷ್ಟ ಒಲಿಯಲಿದೆ?ʼʼ ಎಂದು ಬರೆದುಕೊಂಡಿದೆ. ಹಿನ್ನೆಲೆಯಲ್ಲಿ 2 ಸಿಂಹಗಳು ಮುಖಾಮುಖಿಯಾಗುತ್ತಿರುವುದು ಕಂಡು ಬಂದಿದೆ. ಸದ್ಯ ಡ್ಯುರೆಕ್ಸ್ ಇಂಡಿಯಾದ ಈ ಪೋಸ್ಟ್ ಗಮನ ಸೆಳೆದಿದ್ದು, ಕ್ರಿಯೇಟಿವಿಟಿಗೆ ನೆಟ್ಟಿಗರು ತಲೆದೂಗಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: IPL 2025 Final: ಆರ್ಸಿಬಿ-ಪಂಜಾಬ್ ಫೈನಲ್ ಪಂದ್ಯಕ್ಕೂ ಮುನ್ನ ನಿರ್ದೇಶಕ ರಾಜಮೌಳಿ ಭಾವನಾತ್ಮಕ ಪೋಸ್ಟ್
ಕಾಮೆಂಟ್ಗಳ ಪ್ರವಾಹ
ಈ ಪೋಸ್ಟ್ಗೆ ತಹೇವಾರಿ ಕಾಮೆಂಟ್ಗಳು ಬರುತ್ತಿವೆ. ʼʼಮುಂಬೈ ಮತ್ತು ಚೆನ್ನೈ ತಂಡಗಳು ವಯಸ್ಸಿಗೆ ಬರುವ ಮುನ್ನವೇ 5 ಬಾರಿ ವರ್ಜಿನಿಟಿ ಕಳೆದುಕೊಂಡಿವೆʼʼ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಹಾಗಾದರೆ ರಾಜಸ್ಥಾನ ತಂಡ ಹುಟ್ಟುತ್ತಲೇ ವರ್ಜಿನಿಟಿ ಕಳೆಕೊಳ್ತಾ?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಹಲವರು ನಗುವಿನ ಇಮೋಜಿ ಹಚ್ಚಿಕೊಂಡಿದ್ದಾರೆ. ಕೆಲವರಂತೂ ಮಾರ್ಕೆಟಿಂಗ್ ಟೀಮ್ನ ಕ್ರಿಯೇಟಿವಿಟಿಗೆ ತಲೆದೂಗಿದ್ದಾರೆ.
ಪಿಚ್ ರಿಪೋರ್ಟ್ ಹೇಗಿದೆ?
ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಅಹಮದಾಬಾದ್ ಕ್ರೀಡಾಂಗಣ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಫೈನಲ್ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್ಗಳಲ್ಲಿ 200+ ರನ್ ದಾಖಲಾಗಿವೆ. ಅದರಲ್ಲೂ ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ. ಕಳೆದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ 200+ ಮೊತ್ತ ಪೇರಿಸಿದರೂ ಇದನ್ನು ಪಂಜಾಬ್ ಯಾವುದೇ ಒತ್ತಡವಿಲ್ಲದೆ 1 ಓವರ್ ಬಾಕಿ ಇರುವಂತೆಯೇ ಗುರಿ ತಲುಪಿ ಗೆದ್ದು ಬೀಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಅರ್ಧ ಪಂದ್ಯ ಗೆದ್ದಂತೆ.
ಅಭಿಮಾನಿಗಳಿಂದ ಪ್ರಾರ್ಥನೆ
ಆರ್ಸಿಬಿಯ ಚೊಚ್ಚಲ ಗೆಲುವಿಗಾಗಿ ಅಭಿಮಾನಿಗಳು ರಾಜ್ಯಾದ್ಯಂತ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ಅಭಿಮಾನಿಗಳು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಜೆರ್ಸಿಗೆ ಪುಣ್ಯ ಸ್ನಾನ ಮಾಡಿಸಿದ್ದರು. ತಂಡದ ಸಕಲ ಕಷ್ಟಗಳು ಕಳೆದು ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಫ್ರಾರ್ಥಿಸಿದ್ದರು.