Weather Forecast: ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಲಿದೆ ಬಿಸಿಲಿ ತಾಪ; ಮನೆಯಿಂದ ಹೊರಗಿಳಿಯುವಾಗ ಇರಲಿ ಎಚ್ಚರ
Karnataka Weather: ರಾಜ್ಯಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದ್ದು, ಶುಕ್ರವಾರವೂ ಇದೇ ವಾತಾವರಣ ಮುಂದುವರಿಯಲಿದೆ. ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಗುರುವಾರ ಒಣ ಹವೆಯ ವಾತಾವರಣ ಇತ್ತು. ಇಂದು (ಶುಕ್ರವಾರ) ಕೂಡ ಇದೇ ಪರಿಸ್ಥಿತಿ ಮುಂದುವರಿಯಲಿದೆ (Karnataka Weather). ಮುಂದಿನ 5 ದಿನಗಳವರೆಗೆ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಮಾ. 21ರಂದು ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ (Weather Forecast). ಇನ್ನು ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋದ ಕವಿದ ಆಕಾಶ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 35°C ಮತ್ತು 22°C ಇರುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಮಳೆ ಬರುವ ಸಾಧ್ಯತೆ ಇಲ್ಲದ ಕಾರಣ ಮೀನುಗಾರರಿಗೆ ಯಾವುದೇ ಮುನ್ನಚ್ಚರಿಕೆ ನೀಡಲಾಗಿಲ್ಲ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು (1-4 ಡಿಗ್ರಿ ಸೆಲ್ಸಿಯಸ್) ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ (1-2 ಡಿಗ್ರಿ ಸೆಲ್ಸಿಯಸ್), ಕರ್ನಾಟಕದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ (1-4 ಡಿಗ್ರಿ ಸೆಲ್ಸಿಯಸ್) ಇರಲಿದೆ.
ಈ ಸುದ್ದಿಯನ್ನೂ ಓದಿ: PES University: ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಪ್ರೊ. ಜವಾಹರ್ ದೊರೆಸ್ವಾಮಿ ನೇಮಕ
ಹವಾಮಾನ ಇಲಾಖೆಯಿಂದ ಎಚ್ಚರಿಕೆ
ರಾಜ್ಯಾದ್ಯಂತ ಬಿಸಿಲಿನ ವಾತಾವರಣ ಇರುವುದರಿಂದ ಮನೆಯಿಂದ ಹೊರಗಿಳಿಯುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕೆಲವೊಂದು ಸೂಚನೆ ನೀಡಿದೆ.
ಸಾರ್ವಜನಿಕರಿಗೆ:
* ಮಧ್ಯಾಹ್ನ 12ರಿಂದ ಅಪರಾಹ್ನ 3ರವರೆಗೆ ನೇರ ಸೂರ್ಯನ ಬೆಳೆಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.
* ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು, ತಾಜಾ ಹಣ್ಣಿನ ರಸ ಕುಡಿಯಿರಿ.
* ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತು ಬಟ್ಟೆಗಳನ್ನು ಧರಿಸಿ.
* ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ / ಟೋಪಿ, ಬೂಟುಗಳು ಅಥವಾ ಚಪ್ಪಲಿ ಧರಿಸಿ.
* ತಲೆತಿರುಗುವಿಕೆ ಅಥವಾ ಅನಾರೋಗ್ಯ ಸಂಭವಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
* ಒಆರ್ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಮಜ್ಜಿಗೆ ನೀರು, ನಿಂಬೆ ನೀರು ಆಗಾಗ ಕುಡಿಯಿರಿ. ಇದು ದೇಹವನ್ನು ಮತ್ತೆ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
* ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಸಾಕಷ್ಟು ನೀರು ನೀಡಿ.
ರೈತರಿಗೆ:
* ಟೋಪಿ ಅಥವಾ ಛತ್ರಿ ಬಳಸಿ ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆ ಬಟ್ಟೆ ಉಪಯೋಗಿಸಿ.
ಕ್ರೀಡಾಪಟುಗಳಿಗೆ:
* ಮಧ್ಯಾಹ್ನ 12ರಿಂದ ಅಪರಾಹ್ನ 3ರವರೆಗೆ ಕಠಿಣ ಚಟುವಟಿಕೆ ಮತ್ತು ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ
ಪ್ರಯಾಣಿಕರಿಗೆ:
* ಪ್ರಯಾಣ ಮಾಡುವಾಗ ನೀರು / ಜ್ಯೂಸ್ / ಮಜ್ಜಿಗೆ ಕೊಂಡೊಯ್ಯಿರಿ.
* ಮಧ್ಯಾಹ್ನ 12ರಿಂದ ಅಪರಾಹ್ನ 3ರವರೆಗೆ ಸೂರ್ಯನ ನೇರ ಬೆಳಕಿಗೆ ಮೈ ಒಡ್ಡುವುದನ್ನು ತಪ್ಪಿಸಿ.