ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಪರೀಕ್ಷೆಗಳೇ ಫೇಲ್‌ ಆಗುತ್ತಿವೆಯಲ್ಲಾ...?!

ಬಹುತೇಕರಿಗೆ ಗೊತ್ತಿರುವಂತೆ, ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸುವುದರಿಂದ ಮೊದಲ್ಗೊಂಡು, ವಿದ್ಯಾರ್ಥಿಗಳಿಗೆ ಸರಿಯಾದ ಅಂಕಪಟ್ಟಿಯನ್ನು ನೀಡುವವರೆಗೂ ಗೊಂದಲಗಳು ಕಾಣಬರುವುದಿದೆ. ವಿವಿಧ ಪರೀಕ್ಷೆಗಳ ದಿನಾಂಕಗಳು ಎಷ್ಟೋ ಬಾರಿ ಪರಸ್ಪರ ‘ಕ್ಲ್ಯಾಷ್’ ಆಗುತ್ತವೆ. ಶಾಲಾ-ಕಾಲೇಜುಗಳ ಪರೀಕ್ಷೆಯಲ್ಲಿ ಇದು ಗೋಚರವಾಗದಿದ್ದರೂ, ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇದು ಸಾಮಾನ್ಯವಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಯಾವ ಪರೀಕ್ಷಾ ಆಯೋಜಕರೂ ಹೊಂದಾಣಿಕೆಗೆ ಬಾರದ ಕಾರಣ, ಕೆಲವಷ್ಟು ಪ್ರತಿಭಾವಂತರು ತಮ್ಮದಲ್ಲದ ತಪ್ಪಿಗೆ ಹಲವು ಪರೀಕ್ಷೆಗಳನ್ನು ತಪ್ಪಿಸಿಕೊಳ್ಳು ವಂತಾಗುತ್ತಿದೆ.

ಪರೀಕ್ಷೆಗಳೇ ಫೇಲ್‌ ಆಗುತ್ತಿವೆಯಲ್ಲಾ...?!

Profile Ashok Nayak Jun 11, 2025 7:57 AM

ಯಕ್ಷ ಪ್ರಶ್ನೆ

ರಮಾನಂದ ಶರ್ಮಾ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಆಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇತ್ತೀಚೆಗೆ ಪರೀಕ್ಷೆಗಳೇ ಫೇಲ್ ಆಗುತ್ತಿರುವುದು ಮಾತ್ರ ವಿಪರ್ಯಾಸ. ಇಂದು ಬಹುತೇಕ ಪರೀಕ್ಷೆಗಳು (ಶಾಲಾ-ಕಾಲೇಜು, ಸ್ಪರ್ಧಾತ್ಮಕ ಅಥವಾ ನೇಮಕಾತಿ ಹೀಗೆ ಯಾವುದೇ ಇರಲಿ) ಗೊಂದಲದಲ್ಲಿ ಆರಂಭವಾಗಿ, ಗೊಂದಲದಲ್ಲಿ ನಡೆದು, ಫಲಿತಾಂಶವೂ ಗೊಂದಲದಲ್ಲೇ ಪ್ರಕಟವಾಗುವ ಪ್ರಮೇಯ ಗಳೇ ಹೆಚ್ಚು. ಹೀಗಾಗಿ ಅಭ್ಯರ್ಥಿಗಳು ನ್ಯಾಯ ಕೇಳಿ ಕೋರ್ಟ್ ಮೆಟ್ಟಿಲೇರುವುದೂ ಅಷ್ಟೇ ಸಾಮಾನ್ಯವಾಗುತ್ತಿದೆ.

ಬಹುತೇಕರಿಗೆ ಗೊತ್ತಿರುವಂತೆ, ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸುವುದರಿಂದ ಮೊದಲ್ಗೊಂಡು, ವಿದ್ಯಾರ್ಥಿಗಳಿಗೆ ಸರಿಯಾದ ಅಂಕಪಟ್ಟಿಯನ್ನು ನೀಡುವವರೆಗೂ ಗೊಂದಲಗಳು ಕಾಣಬರುವುದಿದೆ. ವಿವಿಧ ಪರೀಕ್ಷೆಗಳ ದಿನಾಂಕಗಳು ಎಷ್ಟೋ ಬಾರಿ ಪರಸ್ಪರ ‘ಕ್ಲ್ಯಾಷ್’ ಆಗುತ್ತವೆ. ಶಾಲಾ-ಕಾಲೇಜುಗಳ ಪರೀಕ್ಷೆಯಲ್ಲಿ ಇದು ಗೋಚರವಾಗದಿದ್ದರೂ, ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇದು ಸಾಮಾನ್ಯವಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಯಾವ ಪರೀಕ್ಷಾ ಆಯೋಜಕರೂ ಹೊಂದಾಣಿಕೆಗೆ ಬಾರದ ಕಾರಣ, ಕೆಲವಷ್ಟು ಪ್ರತಿಭಾವಂತರು ತಮ್ಮದಲ್ಲದ ತಪ್ಪಿಗೆ ಹಲವು ಪರೀಕ್ಷೆಗಳನ್ನು ತಪ್ಪಿಸಿಕೊಳ್ಳುವಂತಾಗುತ್ತಿದೆ.

ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವಾಗ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೋಡಿ ಕೊಳ್ಳಬೇಕು ಎಂಬ ನಿಯಮವಿದ್ದರೂ, ಮನಸ್ಸಿಗೆ ತೋಚಿದಂತೆ ಇಂಥ ಕೇಂದ್ರಗಳನ್ನು ನಿಗದಿ ಪಡಿಸಲಾಗುತ್ತದೆ. ಹೀಗಾಗಿ ಪರೀಕ್ಷಾರ್ಥಿಗಳು ತಮ್ಮದಲ್ಲದ ದೂರದ ಊರುಗಳಿಗೆ ಬಸ್-ಟ್ರೇನು ಹಿಡಿದು ಪ್ರಯಾಣಿಸಬೇಕಾಗುತ್ತದೆ, ವಾಸ್ತವ್ಯಕ್ಕೆ ನೆಂಟರಿಷ್ಟರ/ಸ್ನೇಹಿತರ ಮೊರೆಹೋಗಬೇಕಾಗುತ್ತದೆ ಅಥವಾ ವಸತಿಗೃಹಗಳಲ್ಲಿ ದುಬಾರಿ ಬೆಲೆ ತೆತ್ತು ಠಿಕಾಣಿ ಹೂಡಬೇಕಾಗುತ್ತದೆ.

ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ನವರು ಜನರನ್ನು ಸುಲಿಯುವಂತೆ, ಅರ್ಥಶಾಸ್ತ್ರದಲ್ಲಿ ಬರುವ ‘ಬೇಡಿಕೆ ಮತ್ತು ಪೂರೈಕೆ’ಯ ನೀತಿಯನುಸಾರ ವಸತಿಗೃಹದವರೂ ವಿದ್ಯಾರ್ಥಿಗಳನ್ನು ಸುಲಿ ಯುತ್ತಾರೆ. ಇನ್ನು ಪರೀಕ್ಷೆಯ ದಿನ ಪ್ರಶ್ನೆಪತ್ರಿಕೆಯ ಕಟ್ಟುಗಳು ಪರೀಕ್ಷಾ ಕೇಂದ್ರಗಳನ್ನು ತಡವಾಗಿ ತಲುಪುವುದು ಅಥವಾ ತಲುಪದೆಯೇ ಇರುವುದು, ಇಲ್ಲವೇ ತಪ್ಪು ಪ್ರಶ್ನೆಪತ್ರಿಕೆಗಳು ತಲುಪುವುದು, ನಿಗದಿತ ಸಂಖ್ಯೆಗಿಂತ ಕಡಿಮೆ ಅಥವಾ ಹೆಚ್ಚು ಪ್ರಶ್ನೆಪತ್ರಿಕೆಗಳು ತಲುಪುವುದು, ಅವುಗಳ ಕಟ್ಟುಗಳು ಒಡೆದುಹೋಗಿರುವುದು ಇವೆಲ್ಲಾ ಆಗಾಗ ಕಾಣಬರುತ್ತವೆ.

ಇದನ್ನೂ ಓದಿ: Ramanand Sharma Column: ಬ್ಯಾಂಕಿಂಗ್‌ ಉದ್ಯಮದಲ್ಲಿ ಹೀಗೊಂದು ಗ್ರಾಹಕ-ಸ್ನೇಹಿ ಬೆಳವಣಿಗೆ

ಪರೀಕ್ಷೆಯ ಹಿಂದಿನ ದಿನ ಅಥವಾ 3 ತಾಸು ಮೊದಲು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿ ಶರವೇಗ ದಲ್ಲಿ ಅಭ್ಯರ್ಥಿಗಳ ಕೈಸೇರುವುದು, ಈ ಪ್ರಕ್ರಿಯೆಯಲ್ಲಿ ಕೆಲವರ ಬ್ಯಾಂಕ್ ಬ್ಯಾಲೆನ್ಸ್ ಏರುವುದು ಕೂಡಾ ತೀರಾ ಸಾಮಾನ್ಯವಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡುವುದಾದರೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವಾಗ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕ ಅನುಭವ ವಾಗುತ್ತದೆ. ಅವರ ಜನಿವಾರ, ಶಿವದಾರ, ಕಾಶೀದಾರ, ಉಡುದಾರ, ಕಿವಿಯೋಲೆ, ಮಾಂಗಲ್ಯ, ತುಂಬುತೋಳಿನ ಅಂಗಿ ಇತ್ಯಾದಿಗಳನ್ನು ತೆಗೆಸುವ ಅಮಾನವೀಯ ಬೆಳವಣಿಗೆ ಗಳಾಗುತ್ತಿವೆ (ವಿದ್ಯಾರ್ಥಿಗಳ ಜನಿವಾರ ತೆಗೆಸುವ ಕಸರತ್ತು ದೇಶಾದ್ಯಂತ ಭಾರಿ ಸುದ್ದಿಮಾಡಿ ಪ್ರತಿರೋಧದ ದನಿ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು).

ಈ ಸಂಬಂಧದ ತಪಾಸಣೆಯಿಂದಾಗಿ ವಿದ್ಯಾರ್ಥಿಗಳು ಹೈರಾಣಾಗಿ, ಗೊಂದಲದ ಮನಸ್ಥಿತಿಯಲ್ಲಿ, ಭಯದ ನೆರಳಲ್ಲೇ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಪರೀಕ್ಷೆಗಳಲ್ಲಿ ನಕಲು/ಸಾಮೂಹಿಕ ನಕಲು, ಆಪ್ತರು ಹೊರಗಿನಿಂದ ನೆರವಾಗುವುದು, ನಕಲು ಮಾಡಲು ಇಲೆಕ್ಟ್ರಾನಿಕ್ ಸಾಧನಗಳ ಬಳಕೆ, ಕೆಲವೊಮ್ಮೆ ಇನ್ ವಿಜಿಲೇಟರ್‌ಗಳು ಕೂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಇತ್ಯಾದಿ ಕಸರತ್ತುಗಳು ಇಲ್ಲದಿಲ್ಲ!

ನಿಗದಿತ ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳುವುದು ಮತ್ತು ಆ ತಪ್ಪಿಗಾಗಿ ಎಲ್ಲರಿಗೂ ‘ಗ್ರೇಸ್ ಅಂಕ’ಗಳನ್ನು ನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ‘ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ನಾಡು’ ಎಂದು ನಾವೆಲ್ಲಾ ಸಂಭ್ರಮಿಸುವ ಕನ್ನಡ ನಾಡಿನಲ್ಲಿ, ಕನ್ನಡದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲು ಕನ್ನಡ ಬಲ್ಲವರು ಇಲ್ಲವೇನೋ ಎನ್ನುವಂತೆ ಗೂಗಲ್ ಸಹಾಯದಿಂದ ತರ್ಜುಮೆ ಮಾಡಿಸಿ ಅಧ್ವಾನ ಮಾಡಿದ್ದನ್ನು ಕಂಡಿದ್ದೇವೆ.

ಈ ಎಡವಟ್ಟು ಸಾಲದೆಂಬಂತೆ ಪರೀಕ್ಷೆಗಳು ಮುಗಿದ ನಂತರ ಉತ್ತರ ಪತ್ರಿಕೆಗಳು ಕೇಂದ್ರ ಸ್ಥಾನ ವನ್ನು ತಲುಪದೆಯೇ ಮಾರ್ಗಮಧ್ಯದಲ್ಲಿಯೇ ಕಳೆದುಹೋಗುವುದು, ಶಿಕ್ಷಕರು/ಅಧ್ಯಾಪಕ ರುಗಳೇ ಮೌಲ್ಯಮಾಪನ ಮಾಡುತ್ತಾರೆ ಎಂಬ ಭರವಸೆ ಕೂಡಾ ಇಲ್ಲದಿರುವುದು ಮಾಮೂಲಾಗಿ ಬಿಟ್ಟಿದೆ.

ಇನ್ನು ಬೇಜವಾಬ್ದಾರಿಯಿಂದ ಮೌಲ್ಯಮಾಪನ ಮಾಡುವಿಕೆ, ಅಂಕಗಳನ್ನು ಕೂಡುವಲ್ಲಿ ಮತ್ತು ಅಂಕಪಟ್ಟಿಯಲ್ಲಿ ನಮೂದಿಸುವಲ್ಲಿ ಎಡವಟ್ಟು ಮಾಡುವಿಕೆ, ಅಂಕಪಟ್ಟಿಯಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಹೆಸರನ್ನು ತಪ್ಪಾಗಿ ನಮೂದಿಸುವಿಕೆಯೂ ಕಾಣಬರುತ್ತದೆ.

ಇತ್ತೀಚಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 75 ಅಂಕ ಪಡೆದಿದ್ದ ವಿದ್ಯಾರ್ಥಿನಿಯ ಅಂಕಪಟ್ಟಿಯಲ್ಲಿ ನಮೂದಾಗಿದ್ದು ಮಾತ್ರ 25 ಅಂಕಗಳು! ಆಕೆಯ ಹೆತ್ತವರ ಸಮಯೋಚಿತ ಕ್ರಮದಿಂದ ಸಂಭಾವ್ಯ ಅನಾ ಹುತವೊಂದು ತಪ್ಪಿತು ಎನ್ನಬೇಕು. ಇನ್ನು, ವಿಶ್ವವಿದ್ಯಾಲಯ ವೊಂದು ನೀಡಿದ ಪ್ರಮಾಣಪತ್ರಗಳೇ ನಕಲಿಯಂತೆ!

ಮೇಲೆ ಉಲ್ಲೇಖಿಸಿರುವ ಅಧ್ವಾನಗಳು, ಯುಪಿಎಸ್‌ಸಿ, ನೀಟ್, ಜೆಇಇ ಮತ್ತು ಕಾಮೆಡ್ ಪರೀಕ್ಷೆ ಗಳನ್ನು ಹೊರತುಪಡಿಸಿದರೆ ಬಹಳಷ್ಟು ಪರೀಕ್ಷೆಗಳಲ್ಲಿ ಕಂಡುಬರುತ್ತವೆ, ಪ್ರತಿವರ್ಷವೂ ಪುನರಾವರ್ತನೆಗೊಳ್ಳುತ್ತವೆ. ಆದರೂ ಸಂಬಂಧಪಟ್ಟವರು ಪರೀಕ್ಷೆಗಳನ್ನು ‘ಫುಲ್-ಪ್ರೂಫ್’ ಆಗಿ ನಡೆಸಲಿಕ್ಕೆ ಆಗದಿರುವುದು ಅಚ್ಚರಿಯ ಸಂಗತಿ. ‌

ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಹೆಚ್ಚು ಪಾರದರ್ಶಕವಾಗಿಸುವ ಮಾತುಗಳು ಆಗಾಗ ಕೇಳಿಬರುತ್ತವೆ, ಅಂಥ ಕಸರತ್ತುಗಳೂ ಕಾಣಬರುತ್ತವೆ; ಆದರೆ ನಿರೀಕ್ಷಿತ ಪರಿಣಾಮ ಮಾತ್ರ ಬಿಸಿಲ್ಗುದುರೆ! ಅಲ್ಲಿಗೆ, ಹಿಂದಿನ ಎಡವಟ್ಟುಗಳು ಮತ್ತು ಕಹಿ ಅನುಭವದ ಮೇಲೆ ವ್ಯವಸ್ಥೆಯನ್ನು ಸುಧಾರಿಸುವ ಗಂಭೀರ ಯತ್ನಗಳಾಗುತ್ತಿಲ್ಲ ಎಂಬುದು ಸ್ಪಷ್ಟ.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ಎರಡನೇ ಬಾರಿಗೆ ಕನ್ನಡ ಭಾಷಾಂತರದ ಗೊಂದಲ ಕಾಣಿಸಿದ್ದುಂಟು. ಒಟ್ಟಿನಲ್ಲಿ, ‘ಅದೇ ರಾಗ, ಅದೇ ಹಾಡು’ ಎನ್ನುವಂತೆ ಪರೀಕ್ಷಾ ವ್ಯವಸ್ಥೆಯು ಬದಲಾಗದೆ ನಡೆದುಕೊಂಡು ಹೋಗುತ್ತಿದೆ. ಇಂಥದೊಂದು ವ್ಯವಸ್ಥೆಯಲ್ಲಿ, ಫೇಲಾಗುವವ ಎನಿಸಿಕೊಂಡಾತ ಪಾಸಾಗುವ, ಉತ್ತಮ ಶ್ರೇಣಿ ನಿರೀಕ್ಷಿಸಿದವನು ಮಂಡಿಯೂರುವ ಬೆಳವಣಿಗೆ ಗಳನ್ನು ಕಂಡು ಪರಿಶ್ರಮಿ ವಿದ್ಯಾರ್ಥಿಗಳು, ‘ಫೇಲ್ ಆಗಿದ್ದು ನಾವಲ್ಲ; ಅದು ಪರೀಕ್ಷಾ ವ್ಯವಸ್ಥೆಯ ಸೋಲು’ ಎಂದು ನಿಟ್ಟುಸಿರಿಟ್ಟು ಸಮಾಧಾನ ಪಟ್ಟುಕೊಳ್ಳಬೇಕಾಗಿ ಬಂದಿದೆ.

ಮರುಮೌಲ್ಯಮಾಪನ, ಮರುತಪಾಸಣೆ ಮತ್ತು ಟೋಟಲಿಂಗ್ ಹೆಸರಿನಲ್ಲಿ ವಿದ್ಯಾರ್ಥಿಗಳ ಪಾಲಕರಿಂದ ಒಂದಷ್ಟು ಹಣ ಕೈಬಿಡುತ್ತದೆ. ಮರು ಮೌಲ್ಯಮಾಪನದ ಪರಿಣಾಮವಾಗಿ ಫಲಿತಾಂಶ ಬದಲಾಗುವುದನ್ನು/ ಗಮನಾರ್ಹ ಸಂಖ್ಯೆಯ ಅಭ್ಯರ್ಥಿಗಳು ತೇರ್ಗಡೆಯಾ ಗುವುದನ್ನು, ಉನ್ನತ ಶ್ರೇಣಿ ಪಡೆಯುವುದನ್ನು ಕಂಡಾಗ, ‘ಒಮ್ಮೆ ಮೌಲ್ಯ ಮಾಪನವಾದ ಉತ್ತರ ಪತ್ರಿಕೆಗಳ ಮರುಮೌಲ್ಯ ಮಾಪನವನ್ನು ಕಡ್ಡಾಯವಾಗಿಸಬೇಕೇನೋ?!’ ಎನಿಸುತ್ತದೆ.

ಏಕೆಂದರೆ, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾಗಿದ್ದ 66 ವಿದ್ಯಾರ್ಥಿಗಳು ಮರುಮೌಲ್ಯಮಾ ಪನದಿಂದಾಗಿ ಪಾಸಾಗಿದ್ದಾರೆ, ಅವರಲ್ಲಿ ಕೆಲವರು ತಮ್ಮ ‘ಸ್ಕೋರ್’ ಹೆಚ್ಚಿಸಿಕೊಂಡಿದ್ದಾರೆ/ರ‍್ಯಾಂಕ್ ಪಡೆದಿದ್ದಾರೆ. ಒಂದೊಮ್ಮೆ ಮರುಮೌಲ್ಯಮಾಪನ/ಮರು ಎಣಿಕೆ ವ್ಯವಸ್ಥೆ ಇಲ್ಲದಿದ್ದಿದ್ದರೆ ಇಂಥವರ ಭವಿಷ್ಯ ಏನಾಗುತ್ತಿತ್ತೋ, ಅದೆಷ್ಟು ಅನಾಹುತ ವಾಗುತ್ತಿತ್ತೋ?! ಪರೀಕ್ಷೆಗಳಲ್ಲಿ ಇಂಥ ಅಧ್ವಾನಗಳು ಹೊಸ ಬೆಳವಣಿಗೆಯೇನಲ್ಲ; ಅವು ಹಿಂದೆಯೂ ಇದ್ದವು, ಈಗಲೂ ಇವೆ, ಮುಂದೆಯೂ ಇರಬಹುದು.

ಇಂಥ ಅಧ್ವಾನಗಳನ್ನು ನೋಡಿ 70ರ ದಶಕದಲ್ಲಿ, ಖ್ಯಾತ ಹಾಸ್ಯ ಸಾಹಿತಿ ‘ಬೀಚಿ’ಯವರು, “ನಮ್ಮಲ್ಲಿ ಕೆಲವು ಶಿಕ್ಷಕರು ಮೌಲ್ಯಮಾಪನಕ್ಕೆಂದು ಉತ್ತರ ಪತ್ರಿಕೆಗಳನ್ನು ಮನೆಗೆ ಒಯ್ಯುತ್ತಿದ್ದಾರೆ; ಸಂಸಾರದ ಜಂಜಾಟದಲ್ಲಿ ಮೌಲ್ಯಮಾಪನ ಮಾಡಲಾಗದೆ, ಆ ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ರೂಮಿನ ಮಧ್ಯದಲ್ಲಿಟ್ಟು ಎಡಗಾಲಿನಲ್ಲಿ ಒದೆಯುತ್ತಾರೆ.

ಎಡಕ್ಕೆ ಬಿದ್ದವೆಲ್ಲಾ ಪಾಸು, ಬಲಕ್ಕೆ ಬಿದ್ದವೆಲ್ಲಾ ಫೇಲು ಆಗುತ್ತವೆ" ಎಂದು ಲೇವಡಿ ಮಾಡಿದ್ದರು. ಇದರ ವಿರುದ್ಧ ಹಲವು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರಂತೆ. ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿನ ಅಧ್ವಾನಗಳು/ ದೋಷಗಳಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿರುವ, ಸಾಕಷ್ಟು ಮಂದಿ ಬದುಕನ್ನೇ ಕೊನೆಗೊಳಿಸಿಕೊಂಡ ಉದಾಹರಣೆಗಳಿವೆ.

ಸುದೈವದಿಂದ ಮತ್ತು ಹೆತ್ತವರ ಸಮಯೋಚಿತ ಕ್ರಮದಿಂದ ಕೆಲವರು ಬಚಾವಾಗಿದ್ದೂ ಇದೆ. ಆದರೆ ಭ್ರಮನಿರಸನಗೊಂಡಿರುವವರ ಸಂಖ್ಯೆಯೇ ಹೆಚ್ಚು. ಪರೀಕ್ಷೆಗಳನ್ನೇ ‘ಪರೀಕ್ಷೆಗೆ ಒಳಪಡಿಸಬೇಕಾದ’ ಸಂದರ್ಭ ಅನಿವಾರ್ಯ ವಾಗಿರುವುದು ದುರ್ದೈವ, ಸರಕಾರವು ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕಿದೆ. ಉತ್ತೀರ್ಣರಾಗ ಬೇಕಾದವರು ಅನುತ್ತೀರ್ಣರಾದರೆ ಅದರ ನೋವನ್ನು ಸಹಿಸಲು ಅಸಾಧ್ಯ; ಅನುಭವಿಸಿದವರಿಗಷ್ಟೇ ಗೊತ್ತು ಆ ನೋವಿನ ತೀವ್ರತೆ...

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)