Indore Couple Missing: ಮದುವೆಗೂ ಮೊದಲೇ ಹನಿಮೂನ್ ಪ್ಲೇಸ್ ಗೊತ್ತು ಮಾಡಿದ್ದಳು ಹಂತಕಿ; ಲವರ್ ಜೊತೆ ಸೇರಿ ಮಾಡಿದ್ದ ಪ್ಲಾನ್ ಹೇಗಿತ್ತು?
ಹನಿಮೂನ್ಗೆಂದು ಮೇಘಾಲಯಕ್ಕೆ ತೆರಳಿ ನಾಪತ್ತೆಯಾದ ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಹೊಸಹೊಸ ವಿಚಾರಗಳು ತನಿಖೆ ವೇಳೆ ಬೆಳಕಿಗೆ ಬರುತ್ತಿದೆ. ಇದರಲ್ಲಿ ಇದೀಗ ರಾಜಾ ರಘುವಂಶಿ ಕೊಲೆಗೆ (Raja Raghuvanshi murder) ಮದುವೆಯ ಮೊದಲೇ ಸೋನಮ್ ಮತ್ತು ಆಕೆಯ ಪ್ರಿಯಕರ ಯೋಜನೆ ಮಾಡಿಕೊಂಡಿದ್ದರು ಎನ್ನಲಾಗಿದೆ.


ಇಂದೋರ್: ಮೇಘಾಲಯದಲ್ಲಿ (Meghalaya) ನಡೆದ ಹನಿಮೂನ್ ಕೊಲೆ ಪ್ರಕರಣಕ್ಕೆ (Indore Couple missing) ಸಂಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮದುವೆಗೆ ಮೊದಲೇ ರಾಜಾ ರಘುವಂಶಿ (Raja Raghuvanshi) ಹತ್ಯೆಗೆ ಸೋನಮ್ (Sonam) ಸಂಚು ರೂಪಿಸಿದ್ದಳು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆತನನ್ನು ಹನಿಮೂನ್ (honeymoon) ವೇಳೆ ಕೊಲೆ ಮಾಡುವ ಯೋಜನೆಯನ್ನು ಮೊದಲೇ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂದೋರ್ ಮೂಲದ ನವ ದಂಪತಿ ಸೋನಮ್ ರಘುವಂಶಿ ಮತ್ತು ರಾಜಾ ರಘುವಂಶಿ ಮೇಘಾಲಯಕ್ಕೆ ಹನಿಮೂನ್ ಗೆಂದು ತೆರಳಿ ಬಳಿಕ ಮೇ 23 ರಂದು ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಮೃತದೇಹ ಪತ್ತೆಯಾದ ಬಳಿಕ ಸೋನಮ್ನನ್ನು ಉತ್ತರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು.
ರಾಜಾ ರಘುವಂಶಿ ಅವರ ಮೃತ ದೇಹವು ಕಮರಿನಲ್ಲಿ ಪತ್ತೆಯಾಗಿದ್ದು, ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಆತ ಸಾವನ್ನಪ್ಪಿದ ಐದು ದಿನಗಳ ಬಳಿಕ ಸೋನಮ್ ರಘುವಂಶಿಯನ್ನು ಪೊಲೀಸರು ಉತ್ತರಪ್ರದೇಶದ ಘಾಜಿಪುರದಲ್ಲಿ ಬಂಧಿಸಿದ್ದಾರೆ.
ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆಗೂಡಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿರುವ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿ ಯುಪಿಯ ಲಲಿತಪುರದ ಆಕಾಶ್ ರಜಪೂತ್, ಮಧ್ಯಪ್ರದೇಶದ ಸಾಗರ್ನ ಆನಂದ್ ಕುರ್ಮಿ ಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಮುದುವೆಗೂ ಮುನ್ನವೇ ಮರ್ಡರ್ ಪ್ಲಾನ್?
ರಾಜಾ ರಘುವಂಶಿ ಕೊಲೆಗೆ ಮದುವೆಗೆ ಮುನ್ನವೇ ಸೋನಮ್ ಸ್ಕೆಚ್ ಹಾಕಿದ್ದಳು ಎನ್ನಲಾಗಿದೆ. ಮೇ 11ರಂದು ಸೋನಮ್ ಮತ್ತು ರಾಜಾ ರಘುವಂಶಿ ವಿವಾಹವಾಗಿದ್ದು, ಇದಕ್ಕೂ ಮುಂಚೆಯೇ ಆತನನ್ನು ಹನಿಮೂನ್ ಗೆ ಕರೆದುಕೊಂಡು ಹೋಗಿ ಕೊಲೆ ಮಾಡುವ ಯೋಜನೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನಮ್ ಮತ್ತು ಕುಶ್ವಾಹ ಸಂಪರ್ಕದಲ್ಲಿದ್ದು,ಅವರು ಕೆಲವು ವಾರಗಳ ಮೊದಲು ಕೊಲೆಗಾರರನ್ನು ಸಂಪರ್ಕಿಸಿದ್ದರು. ಮೂವರು ಆರೋಪಿಗಳು ಮೇ 17 ರಂದು ಇಂದೋರ್ನಿಂದ ಮೇಘಾಲಯಕ್ಕೆ ತೆರಳಿ ಕುಶ್ವಾಹನಿಂದ 50,000 ರೂ. ನಗದು, ಮೊಬೈಲ್ ಫೋನ್ ಅನ್ನು ಪಡೆದಿದ್ದರು. ತನ್ನ ಮೇಲೆ ಯಾರಿಗೂ ಅನುಮಾನ ಬಾರದಿರಲಿ ಎಂದು ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಹನಿಮೂನ್ಗೂ ಮೊದಲು ಸೋನಮ್ ಒಂಬತ್ತು ಲಕ್ಷ, ಕೆಲವು ಆಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿ ರಾಜಾ ರಘುವಂಶಿ ಅವರ ತಾಯಿ ಉಮಾ ರಘುವಂಶಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Girl Death: ಬೆಸ್ಕಾಂ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕಿ ಬಲಿ, ವಿದ್ಯುತ್ ತಗುಲಿ ಸಾವು
ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ನಾಲ್ವರು ಆರೋಪಿಗಳನ್ನು ಏಳು ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ನೀಡಲಾಗಿದ್ದು, ಇದಕ್ಕಾಗಿ ಅವರನ್ನು ಶಿಲ್ಲಾಂಗ್ಗೆ ಶಿಲ್ಲಾಂಗ್ ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ರಾಜಾ ಕೊಲೆ ಹಿಂದೆ ಸೋನಮ್ ಕೈವಾಡವಿದೆ. ಇದಕ್ಕೆ ಹೆಚ್ಚಿನ ಪುರಾವೆಗಳು ಇವೆ ಎಂದು ಹೇಳಿದ್ದಾರೆ.