#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kolar News: ಫೇಕ್ ನ್ಯೂಸ್‌ಗಳ ಕಾರಣಕ್ಕೆ 'ಫ್ಯಾಕ್ಟ್ ಚೆಕ್' ಆರಂಭಿಸುವ ಸ್ಥಿತಿ ಬಂದಿದೆ: ಕೆ.ವಿ.ಪ್ರಭಾಕರ್

Kolar News: ಸುಳ್ಳುಸುದ್ದಿಗಳನ್ನು ತಡೆಯುವ ಸವಾಲು ಮತ್ತು ನಿಖರತೆ ಹಾಗೂ ವಾಸ್ತವಾಂಶಗಳ ಪರಿಶೀಲನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಕ್ಕಾಗಿ ಫ್ಯಾಕ್ಟ್‌ ಚೆಕ್‌ (Fact Check) ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಫೇಕ್ ನ್ಯೂಸ್‌ಗಳ ಕಾರಣಕ್ಕೆ 'ಫ್ಯಾಕ್ಟ್ ಚೆಕ್' ಆರಂಭಿಸುವ ಸ್ಥಿತಿ ಬಂದಿದೆ

ಮಾಧ್ಯಮ‌ ಅಕಾಡೆಮಿ ಆಯೋಜಿಸಿದ್ದ ʼಪತ್ರಿಕೋದ್ಯಮ ಇಂದು-ಮುಂದುʼ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿದರು.

Profile Siddalinga Swamy Feb 13, 2025 7:30 PM

ಕೋಲಾರ: ಜಗತ್ತು AI (Artificial Inteligence) ಹಿಂದೆ ಓಡುವಾಗ ನಾವು FI (Fake Intelligence) ಹಿಂದೆ ಓಡ್ತಾ ಇದೀವಿ. ಫೇಕ್ ನ್ಯೂಸ್‌ಗಳ ಕಾರಣಕ್ಕೆ ಈಗ ಫ್ಯಾಕ್ಟ್ ಚೆಕ್ ಆರಂಭಿಸುವ ಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು. ಮಾಧ್ಯಮ‌ ಅಕಾಡೆಮಿ ಆಯೋಜಿಸಿದ್ದ ʼಪತ್ರಿಕೋದ್ಯಮ ಇಂದು-ಮುಂದುʼ ಒಂದು ದಿನದ ಕಾರ್ಯಾಗಾರವನ್ನು (Kolar News) ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ಅಧ್ಯಯನಶೀಲತೆ ಕಡಿಮೆ ಆಗುತ್ತಿದೆ. ಕೈಯಲ್ಲಿ ಲೋಗೋ ಹಿಡಿದು ಪ್ರಶ್ನೆ ಕೇಳುವ ಪತ್ರಕರ್ತರಿಗೆ ವಾಪಸ್ ಅದೇ ವಿಚಾರದ ಬಗ್ಗೆ ನಾವೇ ಒಂದು ಪ್ರಶ್ನೆ ಕೇಳಿದರೆ ಅವರಲ್ಲಿ ಉತ್ತರ ಇರುವುದಿಲ್ಲ. ಇದಕ್ಕೆ ಅಧ್ಯಯನಶೀಲತೆಯ ಕೊರತೆಯೇ ಕಾರಣ ಎಂದರು.

ಮತ್ತೊಂದು ಊಹಾ ಪತ್ರಿಕೋದ್ಯಮ‌ ಅತಿಯಾಗುತ್ತಿದೆ. ನಡೆಯದ ಸಂಗತಿಗಳನ್ನು ಅವರಿಗೆ ಅವರೇ ಊಹೆ ಮಾಡಿಕೊಂಡು ಬ್ರೇಕಿಂಗ್ ಸುದ್ದಿ ಕೊಡುವ ಹಾವಳಿ ಹೆಚ್ಚಾಗಿದೆ ಎಂದು ತಿಳಿಸಿದ ಅವರು, ಮಾಧ್ಯಮ ಅಕಾಡೆಮಿ ಇಂದು ಆಯೋಜಿಸಿರುವ ʼಪತ್ರಿಕೋದ್ಯಮ ಇಂದು-ಮುಂದುʼ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಅತ್ಯಂತ ಅರ್ಥಪೂರ್ಣ ಮತ್ತು ಅಗತ್ಯವಾದದ್ದು. ಪತ್ರಿಕಾ ವೃತ್ತಿಗೆ, ಮಾಧ್ಯಮ ಕ್ಷೇತ್ರಕ್ಕೆ ಬಂದೊದಗಬಹುದಾದ ಸವಾಲುಗಳನ್ನು ಮೊದಲೇ ಗ್ರಹಿಸಿ ಆ ಸವಾಲುಗಳನ್ನು ಗೆಲ್ಲಲು ಅಗತ್ಯವಾದ ಬೌದ್ಧಿಕ ಕಸರತ್ತು ನಡೆಸುವುದು ಅತ್ಯಗತ್ಯ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪತ್ರಿಕೋದ್ಯಮವನ್ನು ಸಮಾಜದ ಪ್ರಾಣವಾಯು ಅಂತ ಕರೆದಿದ್ದಾರೆ. ಆದರೆ ಈ ಮಾತು ಈಗ ಪತ್ರಿಕೋದ್ಯಮದಲ್ಲಿ ಉಳಿದಿದೆಯಾ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದರು.

ಇವತ್ತಿನ ಈ ಕಾರ್ಯಾಗಾರಕ್ಕೆ ಎರಡು ಕಾರಣಗಳು ಇರಬಹುದು ಎಂದು ನಾನು ಭಾವಿಸುತ್ತೇನೆ. ಒಂದು AI (ಕೃತಕ‌ ಬುದ್ದಿ ಮತ್ತೆ) ಹಾಗೂ ಇತರೆ ತಂತ್ರಜ್ಞಾನ‌ ತಂದೊಡ್ಡುವ ಸವಾಲು. ಎರಡು ತಂತ್ರಜ್ಞಾನದ ಜತೆಗೆ Fake News ವೇಗವೂ ಹೆಚ್ಚಾಗುತ್ತಿರುವ ಸವಾಲು. ಇವೆರಡೂ ಸವಾಲುಗಳಿಂದ ಮಾಧ್ಯಮ ಕ್ಷೇತ್ರ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನಿದ್ದರೂ ಇವೆರಡನ್ನೂ ಮುಖಾಮುಖಿಯಾಗಿ ನಾವು ಎದುರಿಸಲೇಬೇಕು ಮತ್ತು ಜೀರ್ಣಿಸಿಕೊಳ್ಳಲೇಬೇಕಿದೆ ಎಂದರು.

ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಇಂತಹ ಹಲವಾರು ಸವಾಲುಗಳನ್ನು ಜೀರ್ಣಿಸಿಕೊಂಡಿರುವ ಉದಾಹರಣೆ ಕೂಡ ನಮ್ಮ‌ ಮುಂದಿದೆ. ಇದಕ್ಕೆ ಉತ್ತಮ‌ ಉದಾಹರಣೆ ಎಂದರೆ ಕೋವಿಡ್. ಕೋವಿಡ್ ಬಂದಾಗ ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮದ ಭವಿಷ್ಯವೇ ಮುಗಿದುಹೋಯ್ತು ಎನ್ನುವ ಆತಂಕ ಮನೆ ಮಾಡಿತ್ತು.‌ ಆದರೆ, FICCI (Federation of Indian Chambers of Commerce and Industry) ಸಂಸ್ಥೆ 2023 ರಲ್ಲಿ ಮುದ್ರಣ ಮಾಧ್ಯಮಗಳ ಸ್ಥಿತಿ ಗತಿಯ ವರದಿ ಬಿಡುಗಡೆ ಮಾಡಿದೆ. ಈ ವರದಿ ಬಹಳ ಭರವಸೆ ಮೂಡಿಸುವಂತಿದೆ. ಕೋವಿಡ್ ಸಂದರ್ಭದಲ್ಲಿ ಅಪಾರವಾಗಿ ನೆಲಕಚ್ಚಿದ್ದ ಮುದ್ರಣ ಮಾಧ್ಯಮ 2023 ರಲ್ಲಿ ಬಹಳ ಚೇತರಿಸಿಕೊಂಡಿದೆ ಎಂದರು.

ದೇಶದ ಮುದ್ರಣ ಮಾಧ್ಯಮದ ಆದಾಯ 4% ಹೆಚ್ಚಾಗಿ ವಾರ್ಷಿಕ 260 ಬಿಲಿಯನ್ ರೂಪಾಯಿಗೆ ತಲುಪಿದೆ. 2027ಕ್ಕೆ ಈ ಬೆಳವಣಿಗೆ ದರ ಇನ್ನೂ ಹೆಚ್ಚಾಗಿ 295.7 ಬಿಲಿಯನ್ ಗೆ ಏರಿಕೆ ಆಗಲಿದೆ ಎನ್ನುವ ಆಶಾ ಭಾವನೆ ವ್ಯಕ್ತವಾಗಿದೆ. ಇದರಲ್ಲಿ, ಜಾಹೀರಾತು ಆದಾಯ 4% ಹೆಚ್ಚಾಗಿದೆ, ಪತ್ರಿಕೆಗಳ ಪ್ರಸಾರದಿಂದ ಬರುವ ಆದಾಯ 3% ಹೆಚ್ಚಾಗಿದೆ. ದಿನಪತ್ರಿಕೆಗಳಲ್ಲದ ಮ್ಯಾಗಜೀನ್‌ಗಳ ಆದಾಯ 3% ಹೆಚ್ಚಾಗಿದೆ. ಜಾಹೀರಾತು insertion ಗಳ ಪ್ರಮಾಣ 4% ಹೆಚ್ಚಾಗಿದೆ. (ತ್ರಿಕೆಗಳ ಒಳಗೆ ಜಾಹೀರಾತು ಕರಪತ್ರಗಳನ್ನು ಹಾಕಿ ಕಳುಹಿಸುವುದು). ಇಂಗ್ಲಿಷ್ ಪತ್ರಿಕೆಗಳ circulation ಆದಾಯ 10% ಹೆಚ್ಚಾಗಿದ್ದರೆ, ಕನ್ನಡ ಮತ್ತು ಇತರೆ ರಾಜ್ಯ ಭಾಷಿಕ ಪತ್ರಿಕೆಗಳ circulation ಆದಾಯ 2% ಹೆಚ್ಚಾಗಿದೆ. ಸರ್ಕಾರಗಳ ಜಾಹೀರಾತು ಪ್ರಮಾಣ ಕೂಡ ಹೆಚ್ಚಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಜಾಹೀರಾತುದಾರರ ವಿಶ್ವಾಸಾರ್ಹತೆಯನ್ನು ಮುದ್ರಣ ಮಾಧ್ಯಮಗಳು ಉಳಿಸಿಕೊಂಡಿವೆ ಎಂದು FICCI ಹೇಳಿದೆ. 1,50000 ಜಾಹೀರಾತುದಾರರು, 185000 ಬ್ರಾಂಡ್ ಗಳು ಮುದ್ರಣ ಮಾಧ್ಯಮಗಳ ಮೇಲೆ ಅಪಾರ ಭರವಸೆ ವ್ಯಕ್ತಪಡಿಸಿವೆ. ಹೀಗಾಗಿ ಆದಾಯ, ಗಳಿಕೆಯ ಸವಾಲನ್ನು ಮುದ್ರಣ ಮಾಧ್ಯಮ ನಿರಂತರವಾಗಿ ಗೆಲ್ಲುತ್ತಲೇ ಇದೆ ಎಂದು ಅವರು ವಿಶ್ಲೇಷಿಸಿದರು.

ಅಚ್ಚುಮೊಳೆ ಕಾಲದಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವರೆಗೂ ಹಲವಾರು ತಂತ್ರಜ್ಞಾನದ ಸವಾಲುಗಳನ್ನು ಮಾಧ್ಯಮ ಲೋಕ ಜೀರ್ಣಿಸಿಕೊಳ್ಳುತ್ತಲೇ ಬೆಳೆದಿದೆ ಎಂದು ತಿಳಿಸಿದ ಅವರು, ಜಗತ್ತು AI (Artificial Inteligence) ಹಿಂದೆ ಓಡುವಾಗ ನಾವು FI (Fake Intelligence) ಹಿಂದೆ ಓಡ್ತಾ ಇದೀವಿ. ಪತ್ರಿಕೋದ್ಯಮ ತಂತ್ರಜ್ಞಾನದಲ್ಲಿ ಎಷ್ಟೇ ಉನ್ನತ ಮಟ್ಟಕ್ಕೇರಿದರೂ, ಅದರ ನೈತಿಕ ಗುಣಮಟ್ಟ ಪಾತಾಳ ಸೇರದಂತೆ ಕಾಪಾಡಿಕೊಳ್ಳುವ ನೈತಿಕ ಮತ್ತು ಸಾಮಾಜಿಕ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Karnataka State Awards: ಬಸವ ಪುರಸ್ಕಾರ ಪಡೆದ ಡಾ.ಗುಂಜಾಳ, ಚೌಡಯ್ಯ ಪುರಸ್ಕಾರ ಪಡೆದ ಬಸಪ್ಪ ಭಜಂತ್ರಿ ಪರಿಚಯ ಇಲ್ಲಿದೆ

ಸುಳ್ಳುಸುದ್ದಿಗಳನ್ನು ತಡೆಯುವ ಸವಾಲು ಮತ್ತು ನಿಖರತೆ ಹಾಗೂ ವಾಸ್ತವಾಂಶಗಳ ಪರಿಶೀಲನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಕ್ಕಾಗಿ fact check ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.