Israel-Iran War: ಇರಾನ್ನಲ್ಲಿ ಸಿಲುಕಿಕೊಂಡಿದ್ದ 110 ಭಾರತೀಯ ವಿದ್ಯಾರ್ಥಿಗಳು ತವರಿಗೆ
Israel-Iran War: ಈ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಇರಾನ್ನಿಂದ ಅರ್ಮೇನಿಯಾ ಮತ್ತು ದೋಹಾಗೆ ಸ್ಥಳಾಂತರಿಸಲಾಗಿತ್ತು. ಇಂದು ಅವರ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು (90) ಜಮ್ಮು ಮತ್ತು ಕಾಶ್ಮೀರದವರು. ಇವರೆಲ್ಲ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.


ನವದೆಹಲಿ: ಯುದ್ಧಪೀಡಿತ ಇರಾನ್ನಲ್ಲಿ (Israel-Iran War) ಸಿಲುಕಿಕೊಂಡಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು (Indian Students) ಇಂದು ಭಾರತಕ್ಕೆ ಕರೆತರಲಾಗಿದೆ. ಅಲ್ಲಿಂದ ಸ್ಥಳಾಂತರಿಸಲಾದ (Evacuation) ಮೊದಲ ಗುಂಪಿನ ವಿದ್ಯಾರ್ಥಿಗಳು ನಿನ್ನೆ ಸಂಜೆ ತಡವಾಗಿ ದೆಹಲಿಗೆ ವಿಮಾನ ಹತ್ತಿದ್ದು, ಇಂದು ಮುಂಜಾನೆ ಬಂದಿಳಿದಿದ್ದಾರೆ. ವಿಮಾನ ಮೂರು ಗಂಟೆಗಳ ಕಾಲ ವಿಳಂಬವಾಗಿ ಹೊರಟಿತ್ತು.
ಈ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಇರಾನ್ನಿಂದ ಅರ್ಮೇನಿಯಾ ಮತ್ತು ದೋಹಾಗೆ ಸ್ಥಳಾಂತರಿಸಲಾಗಿತ್ತು. ಇಂದು ಅವರ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು (90) ಜಮ್ಮು ಮತ್ತು ಕಾಶ್ಮೀರದವರು. ಇವರೆಲ್ಲ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.
ಇರಾನ್ ಪ್ರಸ್ತುತ ಇಸ್ರೇಲ್ನೊಂದಿಗೆ ಯುದ್ಧದಲ್ಲಿ ತೊಡಗಿರುವುದರಿಂದ ಭಾರತೀಯ ವಿದ್ಯಾರ್ಥಿಗಳ ಕುಟುಂಬಗಳು ಸರ್ಕಾರದಿಂದ ಕ್ಷಿಪ್ರ ಸಹಾಯವನ್ನು ಬಯಸುತ್ತಿವೆ. ಕಾಶ್ಮೀರದಲ್ಲಿ ಇದರ ಬಗ್ಗೆ ಭಾರಿ ಪ್ರತಿಭಟನೆಗಳು ನಡೆದಿವೆ. ಇಲ್ಲಿಂದಲೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಇರಾನ್ಗೆ ಕಲಿಕೆಗೆ ಹೋಗುತ್ತಿದ್ದಾರೆ. ಇರಾನ್ನಲ್ಲಿ 13,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿಗಳು ಹೇಳುತ್ತವೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಪದವಿ ಕಲಿಯುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಒಂದು ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಸಕಾಲಿಕ ತೆರವು ಪ್ರಯತ್ನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ. ಉಳಿದವರನ್ನು ಶೀಘ್ರದಲ್ಲೇ ಕರೆತರುವ ಬಗ್ಗೆ ವಿಶ್ವಾಸವಿದೆ ಎಂದು ಅದು ಹೇಳಿದೆ. ದೆಹಲಿಯಿಂದ ಶ್ರೀನಗರಕ್ಕೆ ಹೋಗುವ ವಿಮಾನ ಟಿಕೆಟ್ಗಳು ಸೇರಿದಂತೆ ಎಲ್ಲಾ ವಿಮಾನ ಟಿಕೆಟ್ಗಳನ್ನು ಕೇಂದ್ರ ಸರ್ಕಾರ ಉಚಿತವಾಗಿ ವ್ಯವಸ್ಥೆ ಮಾಡಿದೆ ಎಂದು ವಿದ್ಯಾರ್ಥಿ ಸಂಘ Xನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳಲ್ಲದೆ, ಯಾತ್ರಿಕರು ಸೇರಿದಂತೆ ಅನೇಕ ಭಾರತೀಯ ಪ್ರಜೆಗಳು ಇರಾನ್ನಲ್ಲಿ ಸಿಲುಕಿಕೊಂಡಿದ್ದಾರೆ. ಭಾನುವಾರ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿಯನ್ನು ಸ್ಥಾಪಿಸಿತು ಮತ್ತು ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಒತ್ತಾಯಿಸಿತು.
ಕಳೆದ ವಾರ ಇರಾನ್ನ ಟೆಲ್ ಅವಿವ್ ಪರಮಾಣು ತಾಣಗಳ ವಿರುದ್ಧ 'ಆಪರೇಷನ್ ರೈಸಿಂಗ್ ಲಯನ್' ಎಂದು ಕರೆಯಲಾದ ದಾಳಿಯನ್ನು ಇಸ್ರೇಲ್ ಪ್ರಾರಂಭಿಸಿದೆ. ಆಗಿನಿಂದ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹಲವು ಪಟ್ಟು ಹೆಚ್ಚಾಗಿದೆ. ಇಸ್ರೇಲ್ನ ಹಲವಾರು ನಗರಗಳ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿಯೊಂದಿಗೆ ಪ್ರತಿಕ್ರಿಯಿಸಿದೆ. 20ಕ್ಕೂ ಹೆಚ್ಚು ಜನರನ್ನು ಕೊಂದು ನೂರಾರು ಜನರನ್ನು ಗಾಯಗೊಳಿಸಿದೆ.
ಬುಧವಾರ ಮುಂಜಾನೆ, ಇಸ್ರೇಲ್ ಯುದ್ಧ ವಿಮಾನಗಳು ಇರಾನ್ ರಾಜಧಾನಿಯ ಒಂದು ಜಿಲ್ಲೆಯನ್ನು ತೊರೆಯುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ ನಂತರ ಟೆಹ್ರಾನ್ ಮೇಲೆ ದಾಳಿ ಮಾಡಿದವು. ಯುದ್ಧ ಪ್ರಾರಂಭವಾದ ನಂತರದ ಆರನೇ ದಿನ - ಇಸ್ರೇಲ್ ತಾನು ಇರಾನ್ನ ಪರಮಾಣು ತಾಣವನ್ನು ನಾಶಗೊಳಿಸಿರುವುದಾಗಿ ಹೇಳಿದೆ. ಆದರೆ ಇರಾನ್ ತಾನು ಹೈಪರ್ಸಾನಿಕ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಹೇಳಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶರಣಾಗತಿಗೆ ನೀಡಿದ ಕರೆಗೆ ಪ್ರತಿಕ್ರಿಯಿಸಿ, "ಅಮೆರಿಕ ದಾಳಿ ಎಸಗಿದರೆ ಸರಿಪಡಿಸಲಾಗದ ಗಂಭೀರ ಪರಿಣಾಮ ಉಂಟಾಗಲಿದೆ" ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ನ ಬಾಂಬ್ ದಾಳಿಯಲ್ಲಿ ಅಮೆರಿಕ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದರೂ, ತಮ್ಮ ತಾಳ್ಮೆ ಕ್ಷೀಣಿಸುತ್ತಿದೆ ಎಂದು ಇರಾನನ್ನು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Israel-Iran Conflict: ಕ್ಷಿಪಣಿಗಳ ಮಳೆಯನ್ನೇ ಸುರಿಸಿದ ಇಸ್ರೇಲ್; ಇರಾನ್ನ ನತಾಂಜ್ ಭೂಗತ ಪರಮಾಣು ಕೇಂದ್ರಕ್ಕೆ ಹಾನಿ