ʻಪಂದ್ಯವನ್ನು ಸೋತಿದ್ದೇವೆ, ಯುದ್ದವನ್ನಲ್ಲʼ: ಪಂಜಾಬ್ ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್!
Shreyas Iyer on PBKS vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಂಜಾಬ್ ಕಿಂಗ್ಸ್ ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ನಲ್ಲಿ 8 ವಿಕೆಟ್ಗಳಿಂದ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಪಂಜಾಬ್ ಸೋಲಿನ ಪ್ರಮುಖ ಕಾರಣವನ್ನು ವಿವರಿಸಿದ್ದಾರೆ.



ಫೈನಲ್ ಪ್ರವೇಶಿಸಿದ ಆರ್ಸಿಬಿ
ಮುಲ್ಲನ್ಪುರದಲ್ಲಿ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 8 ವಿಕೆಟ್ಗಳಿಂದ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಾಲ್ಕನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶ ಮಾಡಿದೆ.

ಬ್ಯಾಟಿಂಗ್ ವೈಫಲ್ಯದಿಂದ ಸೋತ ಪಂಜಾಬ್
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡ, ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ನಲುಗಿ 14.1 ಓವರ್ಗಳಿಗೆ 101 ರನ್ಗಳಿಗೆ ಆಲ್ಔಟ್ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಆರ್ಸಿಬಿ ತಂಡ, 10 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಗೆದ್ದು ಬೀಗಿತು. ಬ್ಯಾಟಿಂಗ್ ವೈಫಲ್ಯದಿಂದ ಪಂಜಾಬ್ ಪಂದ್ಯದಲ್ಲಿ ಸೋಲಬೇಕಾಯಿತು.

ಕಮ್ಬ್ಯಾಕ್ ಮಾಡುತ್ತೇವೆಂದ ಅಯ್ಯರ್
ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್,"ಮರೆಯುವ ದಿನ ಇದಲ್ಲ, ನಾವು ಡ್ರಾಯಿಂಗ್ ರೂಂಗೆ ಮರಳುತ್ತೇವೆ. ನಾವು ಪ್ರಥಮ ಇನಿಂಗ್ಸ್ ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ. ಇದರ ಬಗ್ಗೆ ನಾವು ಹೆಚ್ಚಿನ ಕೆಲಸ ಮಾಡಿ ಕಮ್ಬ್ಯಾಕ್ ಮಾಡಬೇಕಾಗಿದೆ," ಎಂದು ತಿಳಿಸಿದ್ದಾರೆ.

ನನ್ನ ನಿರ್ಧಾರ ಸರಿ ಇದೆ
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ನಿರ್ಧಾರದ ಬಗ್ಗೆ ನನಗೆ ಅನುಮಾನವಿಲ್ಲ. ಮೈದಾನದ ಹೊರಗಡೆ ನಾವು ಏನೆಲ್ಲಾ ಯೋಜನೆಗಳು ಮಾಡಿದ್ದೆವು. ಇದೆಲ್ಲವೂ ಸರಿ ಇದೆ. ಆದರೆ, ನಾವು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿಲ್ಲ. ಬೌಲರ್ಗಳನ್ನು ದೂರಬಾರದು, ಏಕೆಂದರೆ ನಮ್ಮ ಮೊತ್ತ ಕಡಿಮೆ ಇದೆ. ನಮ್ಮ ಬಾಟಿಂಗ್ ಮೇಲೆ ನಾವು ಕೆಲಸ ಮಾಡಬೇಕಾಗಿದೆ," ಎಂದಿದ್ದಾರೆ.

ಪಂದ್ಯವನ್ನು ಸೋತಿದ್ದೇವೆ, ಯುದ್ದವನ್ನಲ್ಲ
"ನಮ್ಮ ಎಲ್ಲಾ ಪಂದ್ಯಗಳನ್ನು ನಾವಿಲ್ಲ ಆಡಿದ್ದೇವೆ, ಇಲ್ಲಿ ಸ್ವಲ್ಪ ಬೌನ್ಸ್ ಇದೆ. ದಿನದ ಅಂತ್ಯದಲ್ಲಿ ನಾವು ವೃತ್ತಿಪರ ಆಟಗಾರರಾಗಿದ್ದೇವೆ, ಹಾಗಾಗಿ ನಾನು ಯಾವುದೇ ಕಾರಣ ನೀಡಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಾವು ಆಡಬೇಕು. ನಾವು ಪಂದ್ಯವನ್ನು ಸೋತಿದೇವೆ ಅಷ್ಟೆ, ಯುದ್ದವನ್ನಲ್ಲ," ಎಂದು ಪಂಜಾಬ್ ನಾಯಕ ತಿಳಿಸಿದ್ದರೆ.

ಎರಡನೇ ಕ್ವಾಲಿಫೈಯರ್ ಆಡಲಿರುವ ಪಂಜಾಬ್
ಟೂರ್ನಿಯ ಎಲಿಮಿನೇಟರ್ ಪಂದ್ಯ ಮೇ 30 ರಂದು ಇದೇ ಅಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆದ್ದ ತಂಡದ ವಿರುದ್ದ ಪಂಜಾಬ್ ಕಿಂಗ್ಸ್ ಜೂನ್ ಒಂದರಂದು ಎರಡನೇ ಕ್ವಾಲಿಫೈಯರ್ ಆಡಲಿದೆ.