ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhupendra Yadav: ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡಿದ ಕಾಂಗ್ರೆಸ್ ಪಕ್ಷ: ಭೂಪೇಂದ್ರ ಯಾದವ್

Bhupendra Yadav: ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಬಿಸಿಗೆ ಮೋಸ ಮಾಡುವ ಕೆಲಸ ಆಗುತ್ತಿದೆ ಎಂಬುದನ್ನು ಜನರೂ ಅರಿತಿದ್ದಾರೆ. ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತಂದಿಲ್ಲ. ಒಬಿಸಿ ಸಮುದಾಯದ ಜಾಗದಲ್ಲಿ ಮುಸ್ಲಿಮರ ತುಷ್ಟೀಕರಣಕ್ಕಾಗಿ ಮೀಸಲಾತಿ ಜಾರಿ ಮಾಡಿರುವುದು, 165 ಕೋಟಿ ವೆಚ್ಚದ ವರದಿಯನ್ನು ಮೂಲೆಗೆ ಎಸೆದಿರುವುದು, ನಮ್ಮ ಸರ್ಕಾರದಲ್ಲಿ ಜಾರಿಗೊಳಿಸಿದ ನೀತಿಗಳನ್ನು ರದ್ದು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರಿತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ನಿಂದ ಒಬಿಸಿಗೆ ನಿರಂತರ ಮೋಸ: ಭೂಪೇಂದ್ರ ಯಾದವ್

Profile Siddalinga Swamy Jun 28, 2025 8:05 PM

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರಿತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ (Bhupendra Yadav) ಆರೋಪಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ಒಬಿಸಿ ಸಮುದಾಯಕ್ಕೆ ಮೀಸಲಾತಿ ಲಭಿಸಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಮೂಲೆಗೊತ್ತಿತಲ್ಲದೆ, ಅದನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ದೂರಿದರು.

ದೇಶವು ತುರ್ತು ಪರಿಸ್ಥಿತಿಯಿಂದ ಸ್ವತಂತ್ರವಾದ ಬಳಿಕ, ಕಾಂಗ್ರೆಸ್ಸೇತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಅಲ್ಲದೇ, ಮಂಡಲ್ ಆಯೋಗ ರಚಿಸಿತು. ಜನತಾ ಪಕ್ಷ ಅಧಿಕಾರಕ್ಕೆ ಬಾರದೆ ಇದ್ದರೆ ಮಂಡಲ್ ಆಯೋಗದ ರಚನೆ ಆಗುತ್ತಿರಲಿಲ್ಲ ಎಂದು ತಿಳಿಸಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಂಡ ಬಳಿಕ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಅವರ ಸರ್ಕಾರವು ಮಂಡಲ್ ಆಯೋಗದ ವರದಿ ಜಾರಿಯಾಗಿ ಒಬಿಸಿಗೆ ಮೀಸಲಾತಿಯ ಪ್ರಯೋಜನ ಲಭಿಸಿತು. ವಿ.ಪಿ.ಸಿಂಗ್ ಅವರ ಸರ್ಕಾರವು ಅಧಿಕಾರ ಗಳಿಸದೆ ಇದ್ದರೆ ಮಂಡಲ್ ವರದಿಯೂ ಅನುಷ್ಠಾನಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.

ಬಿಜೆಪಿಯು ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜಾತಿ ಗಣತಿ ಮಾಡಿಸಲು ಮುಂದಾಗಿದೆ. ನಮ್ಮ ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯಿಂದ ಸಮಾಜದ ಎಲ್ಲ ವರ್ಗಗಳ ವೈಜ್ಞಾನಿಕ ಅಂಕಿಅಂಶದ ಆಧಾರದಲ್ಲಿ ಅವರ ಜೀವನದಲ್ಲಿ ಪರಿವರ್ತನೆ ತರಲಿದ್ದೇವೆ ಎಂದರು. ಕಳೆದ 11 ವರ್ಷಗಳಲ್ಲಿ ಮೋದಿಜೀ ಅವರ ನೇತೃತ್ವದಲ್ಲಿ ಸಮಾಜದ ಪ್ರತಿ ವರ್ಗದ ವಿಕಾಸಕ್ಕಾಗಿ ಅಭಿವೃದ್ಧಿ ಕಾರ್ಯಗಳು, ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಕಾಂತರಾಜು ವರದಿ ಅನುಷ್ಠಾನ ಇಲ್ಲ

ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಬಿಸಿಗೆ ಮೋಸ ಮಾಡುವ ಕೆಲಸ ಆಗುತ್ತಿದೆ ಎಂಬುದನ್ನು ಜನರೂ ಅರಿತಿದ್ದಾರೆ. ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಆರೋಪಿಸಿದ ಅವರು, ಒಬಿಸಿ ಸಮುದಾಯದ ಜಾಗದಲ್ಲಿ ಮುಸ್ಲಿಮರ ತುಷ್ಟೀಕರಣಕ್ಕಾಗಿ ಮೀಸಲಾತಿ ಜಾರಿ ಮಾಡಿರುವುದು, 165 ಕೋಟಿ ವೆಚ್ಚದ ವರದಿಯನ್ನು ಮೂಲೆಗೆ ಎಸೆದಿರುವುದು, ನಮ್ಮ ಸರ್ಕಾರದಲ್ಲಿ ಜಾರಿಗೊಳಿಸಿದ ನೀತಿಗಳನ್ನು ರದ್ದು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿದೆ ಎಂದು ಟೀಕಿಸಿದರು.

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬಳಿಕ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೆಲ್ಲ ಒಬಿಸಿಗೆ ಏನೂ ಲಭಿಸಿಲ್ಲ. ಇದೇ ಕಾರಣಕ್ಕಾಗಿ ಒಬಿಸಿ ವರ್ಗೀಕರಣವನ್ನು ಸಿದ್ದರಾಮಯ್ಯ ಅವರ ಸರ್ಕಾರವು ಶೀತಲ ಕೊಠಡಿಯಲ್ಲಿ ಇಟ್ಟಿತ್ತು ಎಂದು ಟೀಕಿಸಿದ ಅವರು, ಇದಕ್ಕೆ ಹೈಕಮಾಂಡ್ ಸೂಚನೆ ಇದ್ದು, ಅವರು ಯಾವತ್ತೂ ಇದಕ್ಕೆ ನ್ಯಾಯ ಕೊಡಲಾರದು ಎಂದು ಆರೋಪಿಸಿದರು.

ದೇಶದ ರಿಜಿಸ್ಟ್ರಾರ್ ಅವರು ಜಾತಿಗಣತಿ ಅಧಿಕಾರ ಹೊಂದಿದ್ದಾರೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜಾತಿಗಣತಿ ನಡೆಸುತ್ತಿದ್ದೇವೆ. ಸಾಮಾಜಿಕ, ಆರ್ಥಿಕ, ಜಾತಿ, ಶೈಕ್ಷಣಿಕ ಕ್ಷೇತ್ರದ ಮಾಹಿತಿಯನ್ನು ಜವಾಬ್ದಾರಿಯಿಂದ ಸಂಗ್ರಹಿಸಲಾಗುತ್ತದೆ. ಕಾಂಗ್ರೆಸ್ಸಿಗೆ ಸಂವಿಧಾನದ ಪುಸ್ತಕವು ಕಿಸೆಯಲ್ಲಿ ಇಟ್ಟುಕೊಳ್ಳುವಂಥದ್ದು. ಆದರೆ, ನಮಗೆ ಹಾಗಲ್ಲ, ನಾವು ಡಾ.ಅಂಬೇಡ್ಕರರ ಚಿಂತನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಮೂಲಕ ಸಂವಿಧಾನದ ಹತ್ಯೆ ಮಾಡಲು ಯತ್ನ

ದೇಶದಲ್ಲಿ ತುರ್ತು ಪರಿಸ್ಥಿತಿಯ 50 ವರ್ಷಗಳು ಪೂರ್ಣಗೊಂಡಿದೆ. ಇವತ್ತು ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು, ಇದರ ಪ್ರಸ್ತಾವನೆಯನ್ನು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜೀ ಅವರು ಗುಜರಾತ್‍ನಲ್ಲಿ ಯುವ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಆಗ ಅವರು ತುರ್ತು ಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಮೂಲಕ ಸಂವಿಧಾನದ ಹತ್ಯೆ ಮಾಡಲು ಯತ್ನಿಸಿತ್ತು ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರಿತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಟೀಕಿಸಿದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಒಬಿಸಿ ಮೋರ್ಚಾ ನಿಕಟಪೂರ್ವ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಉಪಸ್ಥಿತರಿದ್ದರು.