ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎರಡನೇ ಟೆಸ್ಟ್‌ನಲ್ಲಿ ಶಾರ್ದುಲ್‌ ಠಾಕೂರ್‌ ಬದಲು ಕುಲ್ದೀಪ್‌ ಯಾದವ್‌ ಆಡಬೇಕೆಂದ ಬದ್ರಿನಾಥ್‌!

ಇಂಗ್ಲೆಂಡ್‌ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 2 ರಂದು ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯದ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಶಾರ್ದುಲ್‌ ಠಾಕೂರ್‌ ಅವರ ಬದಲು ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಆಗ್ರಹಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ಶಾರ್ದುಲ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ವಿಫಲರಾಗಿದ್ದರು.

ಶಾರ್ದುಲ್‌ ಠಾಕೂರ್‌ ಬದಲು ಕುಲ್ದೀಪ್‌ ಆಡಬೇಕೆಂದ ಬದ್ರಿನಾಥ್‌!

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ ಆಡಬೇಕೆಂದ ಬದ್ರಿನಾಥ್‌.

Profile Ramesh Kote Jun 28, 2025 6:17 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯಕ್ಕೆ(IND vs ENG) ಭಾರತ ತಂಡ ಸಜ್ಜಾಗುತ್ತಿದೆ. ಲೀಡ್ಸ್‌ ಹೆಡಿಂಗ್ಲೆಯಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ. ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಅವರು ಬೌಲಿಂಗ್‌ನಲ್ಲಿ ಉತ್ತಮವಾಗಿ ಕಂಡಿದ್ದರು. ಆದರೆ, ಇನ್ನುಳಿದ ಬೌಲರ್‌ಗಳು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಶಾರ್ದುಲ್‌ ಠಾಕೂರ್‌ (Shardul Thakur) ಅವರ ಬದಲು ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ಗೆ (Kuldeep Yadav) ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಆಗ್ರಹಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಎಸ್‌ ಬದ್ರಿನಾತ್‌, ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರು ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಶಾರ್ದುಲ್‌ ಠಾಕೂರ್‌ ಅವರ ಸ್ಥಾನವನ್ನು ತುಂಬಬೇಕೆಂದು ಸಲಹೆ ನೀಡಿದ್ದಾರೆ. ಇದರ ಜೊತೆಗೆ ಪ್ರಸಿಧ್‌ ಕೃಷ್ಣ ಅವರ ಸ್ಥಾನಕ್ಕೆ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಬರಬೇಕೆಂದು ಅವರು ಆಗ್ರಹಸಿದ್ದಾರೆ.

ENG vs IND: ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಹಿನ್ನೋಟ; ಐತಿಹಾಸಿಕ ಗೆಲುವಿಗೆ ಭಾರತ ಕಾತರ

"ಹೌದು ಒಂದು ಬದಲಾವಣೆಯನ್ನು ನಾನು ಸೂಚಿಸುತ್ತೇನೆ, ಶಾರ್ದುಲ್‌ ಠಾಕೂರ್‌ ಅವರ ಸ್ಥಾನದಲ್ಲಿ ಒಬ್ಬ ಬೌಲರ್‌ ಅನ್ನು ಆಡಿಸಲು ನಾನು ಬಯಸುತ್ತೇನೆ. ಮತ್ತೆ ಪ್ರಸಿಧ್‌ ಕೃಷ್ಣ ಬದಲಿಗೆ ಬೇರೆ ಬೌಲರ್‌ಗೆ ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ನನ್ನ ಬದಲಾವಣೆ ಎಂದರೆ ಕುಲ್ದೀಪ್‌ ಯಾದವ್‌ ಹಾಗೂ ಅರ್ಷದೀಪ್‌ ಸಿಂಗ್‌. ಆದರೆ, ಕಂಡೀಷನ್ಸ್‌ ನೋಡಿಕೊಂಡು ಪ್ಲೇಯಿಂಗ್‌ xi ನಿರ್ಧಾರವಾಗಲಿದೆ," ಎಂದು ಎಸ್‌ ಬದ್ರಿನಾಥ್‌ ಹೇಳಿದ್ದಾರೆ.

ಕುಲ್ದೀಪ್‌ ಯಾದವ್‌ ಪರ ಬ್ಯಾಟ್‌ ಬೀಸಿದ ಸಂಜಯ್‌ ಬಾಂಗರ್‌

ಇಂಗ್ಲೆಂಡ್ ತಂಡ ಸಾಂಪ್ರದಾಯಿಕವಾಗಿ ಮಣಿಕಟ್ಟಿನ ಸ್ಪಿನ್ ವಿರುದ್ಧ ದುರ್ಬಲವಾಗಿದೆ. ಈ ಕಾರಣದಿಂದ ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಕೂಡ ಈ ಹಿಂದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

IND vs ENG: ಜಸ್‌ಪ್ರೀತ್‌ ಬುಮ್ರಾ ಔಟ್‌, ಎರಡನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 4 ಬದಲಾವಣೆ ಸಾಧ್ಯತೆ!

"ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಹೇಗೆ ತರಬಹುದು? ಕುಲ್ದೀಪ್ ಯಾದವ್ ಅವರನ್ನು ಪ್ಲೇಯಿಂಗ್‌ XIಗೆ ಹೇಗೆ ತರಬಹುದು ಎಂಬುದರ ಕುರಿತು ತಂಡ ಸ್ವಲ್ಪ ಯೋಚಿಸಬೇಕಾಗುತ್ತದೆ, ಏಕೆಂದರೆ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಆಟದ ವಿಧಾನವನ್ನು ನಾವು ನೋಡಿದ್ದೇವೆ. ಮಣಿಕಟ್ಟಿನ ಸ್ಪಿನ್ ಬೌಲ್‌ ಮಾಡುವ ಕುಲ್ದೀಪ್ ಯಾದವ್‌ ಪರಿಣಾಮಕಾರಿಯಾಗಬಹುದು. ಐತಿಹಾಸಿಕವಾಗಿ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮಣಿಕಟ್ಟಿನ ಸ್ಪಿನ್ ಅನ್ನು ವಿಶೇಷವಾಗಿ ಚೆನ್ನಾಗಿ ಆಡಿಲ್ಲ. ಆದ್ದರಿಂದ ಅದು ಖಂಡಿತವಾಗಿಯೂ ಪರಿಗಣಿಸಬೇಕಾದ ವಿಷಯ," ಎಂದು ಸಂಜಯ್‌ ಬಾಂಗರ್‌ ಹೇಳಿದ್ದಾರೆ.