Bengaluru News: ಹೋಟೆಲ್ಗೆ ಬೀಗ ಹಾಕಿಸಿದ ಜಿರಳೆ! ಆಗಿದ್ದೇನು?
ಇತ್ತೀಚೆಗೆ ಬೆಂಗಳೂರಿನ ಹಲವು ಹೋಟೆಲ್ಗಳಲ್ಲಿ ನೀಡಲಾಗುವ ಇಡ್ಲಿ ಸ್ಯಾಂಪಲ್ಗಳನ್ನು ಪರಿಶೀಲಿಸಲಾಗಿ, ಅವುಗಳಲ್ಲಿ ಕ್ಯಾನ್ಸರ್ಕಾರಕ ಕೆಮಿಕಲ್ ಅಂಶ ಕಂಡುಬಂದಿತ್ತು. ಹೀಗಾಗಿ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಕೆ ಬ್ಯಾನ್ ಮಾಡಲಾಗಿದೆ. ಇದೀಗ ಒಂದು ಜಿರಳೆ ಹೋಟೆಲ್ ಮಾಲಿಕರಿಗೆ ಕುತ್ತು ತಂದಿದೆ.


ಬೆಂಗಳೂರು: ಬೆಂಗಳೂರಿನ (Bengaluru News) ಹೋಟೆಲ್ಗಳಲ್ಲಿ ತಯಾರಿಸಿ ನೀಡುವ ಇಡ್ಲಿಯಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಕಂಡುಬಂದಿರುವ ಹಾಗೂ ಅದನ್ನನುಸರಿಸಿ ಆರೋಗ್ಯ ಸಚಿವಾಲಯ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಕೆ ಬ್ಯಾನ್ (Plastic ban)ಮಾಡಿರುವ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಇದೀಗ ಇಡ್ಲಿ ಸಾಂಬಾರ್ನಲ್ಲಿ (Idly Sambar) ಕಂಡುಬಂದಿರುವ ಜಿರಳೆಯೊಂದು (Cockroach) ಹೋಟೆಲ್ಗೆ ಬೀಗ ಹಾಕಿಸಿದೆ!
ಬೆಂಗಳೂರಿನ ಬೊಮ್ಮಸಂದ್ರದ ಬ್ರಾಹ್ಮಿನ್ಸ್ ವೆಜ್ ಕೆಫೆ ಹೋಟೆಲ್ನ (Brahmins Veg Cafe Hotel) ಇಡ್ಲಿ ಸಾಂಬಾರ್ನಲ್ಲಿ ಜಿರಳೆ (Cockroach) ಸಿಕ್ಕಿದೆ. ಇದನ್ನು ನೋಡಿ ಗ್ರಾಹಕ ಬೆಚ್ಚಿಬಿದ್ದಿದ್ದಾನೆ. ನಾರಾಯಣ ಹೃದಯಾಲಯದಲ್ಲಿ ಸ್ನೇಹಿತನ ಆರೋಗ್ಯ ವಿಚಾರಿಸಲು ಬಂದಿದ್ದ ಗ್ರಾಹಕ ಸ್ನೇಹಿತರ ಜೊತೆ ಹೋಟೆಲ್ಗೆ ಬಂದಿದ್ದರು. ಈ ವೇಳೆ ಇಡ್ಲಿ ಸಾಂಬಾರ್ ತೆಗೆದುಕೊಂಡು ಸೇವಿಸುವಾಗ ಜಿರಳೆ ಪತ್ತೆಯಾಗಿದೆ ಎನ್ನಲಾಗಿದೆ.
ಇಡ್ಲಿ ಸಾಂಬಾರ್ನಲ್ಲಿ ಜಿರಳೆ ಪತ್ತೆಯಾಗಿರುವ ಬಗ್ಗೆ ಗ್ರಾಹಕ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದು, ವಿಷಯ ತಿಳಿದ ತಕ್ಷಣ ಬೊಮ್ಮಸಂದ್ರ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆಯೇ ಮಾಲೀಕರು ಹೋಟೆಲ್ ನಡೆಸುತ್ತಿದ್ದರೆಂದು ತನಿಖೆ ವೇಳೆ ಬಯಲಾಗಿದ್ದು, ಹೋಟೆಲ್ಗೆ ಬೀಗ ಜಡಿದಿದ್ದಾರೆ.
ಪ್ರತಿಷ್ಠಿತ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೊಂದಿಕೊಂಡಿರುವ ಬ್ರಾಹ್ಮಿನ್ಸ್ ವೆಜ್ ಕೆಫೆಯಲ್ಲಿ ಜಿರಳೆ ಅವಾಂತರದ ಬಗ್ಗೆ ಗ್ರಾಹಕರು ಪ್ರಶ್ನಿಸಿದಾಗ ಮಾಲಿಕರು ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಹಕ ಮನು ಆಗ್ರಹಿಸಿದ್ದಾರೆ. ಹೋಟೆಲ್ಗೆ ಸದ್ಯ ಪುರಸಭೆ ಅಧಿಕಾರಿಗಳು ಬೀಗ ಜಡಿದಿದ್ದು, ಪುರಸಭೆ ವತಿಯಿಂದ ಯಾವುದೇ ಅನುಮತಿ ಪಡೆಯದೆಯೇ ಅಕ್ರಮವಾಗಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ. ಪೊಲೀಸ್ ಹಾಗೂ ಆಹಾರ ಅಧಿಕಾರಿಗಳ ಸಮ್ಮುಖದಲ್ಲಿ ಹೋಟೆಲ್ ಸೀಲ್ ಮಾಡಲಾಗಿದೆ.
ಇದನ್ನೂ ಓದಿ: shocking news: ಬೆಂಗಳೂರಿಗರೇ ಹುಷಾರ್, ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್!