ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ರಾಮಧಾನ್ಯ ಚರಿತೆಯೆಂಬ ಅವರ ಈ ಸರಳವಾದ ಮತ್ತು ವಿಶಿಷ್ಟವಾದ ಸಾಹಿತ್ಯವನ್ನು ಬಹಳ ಜನ ಅವರವರಿಗೆ ತಿಳಿದಂತೆ ವಿಶ್ಲೇಷಣೆ ಮಾಡಿದ್ದಾರೆ. ಬಹುಶೃತ ವಿದ್ವಾಂಸರಾಗಿದ್ದ ಡಾ.ಕೆ/ ಎಸ್. ನಾರಾಯಣಾಚಾರ್ಯರು ‘ಕನಕ ದರ್ಶನ’ ಎಂಬ ಸರಣಿ ಪ್ರವಚನವನ್ನೂ ಮಾಡಿದ್ದಾರೆ ಮತ್ತು ಅದು ಅಂತರ್ಜಾಲದಲ್ಲಿ ಲಭ್ಯವಿದೆ. ಆ ಪ್ರವಚನ ಮಾಲಿಕೆಯಲ್ಲಿ ಅವರು ಈ ರಾಮಧಾನ್ಯಚರಿತ್ರೆ ಯನ್ನೂ ಸಮನ್ವಯದ ಮೂಸೆಯಿಂದ ವಿಶ್ಲೇಷಣೆ ಮಾಡಿದ್ದಾರೆ.

ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ವಿದ್ಯಮಾನ

(ಭಾಗ-4)

ಕನಕದಾಸರು ಕೀರ್ತನೆಗಳ ದೃಷ್ಟಿಯಿಂದ ಮಹಾದೊಡ್ಡ ಕೀರ್ತನಕಾರರಾಗಿಯೂ, ಕಾವ್ಯಗಳ ದೃಷ್ಟಿಯಿಂದ ಕವಿಯಾಗಿಯೂ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಹರಿಭಕ್ತರಾಗಿಯೂ ಮಾನವತಾವಾದಿಯಾಗಿಯೂ ನಮಗೆ ಕಂಡುಬರುತ್ತಾರೆ. ‘ಮೋಹನ ತರಂಗಿಣಿ’, ‘ನಳ ಚರಿತ್ರೆ’, ‘ರಾಮಧಾನ್ಯ ಚರಿತೆ’, ‘ಹರಿಭಕ್ತಿ ಸಾರ’, ವೇದೋಪನಿಷತ್ತುಗಳ ಸಾರವನ್ನು ಸಾರುವ ಭಕ್ತಿ ಪುರಸ್ಸರ ವಾದ ಕೀರ್ತನೆಗಳು ಅವರ ಕವಿತ್ವವನ್ನು ಸಾರುತ್ತವೆ. ಶ್ರೀಹರಿಯ ಬಗೆಗಿನ ತೀವ್ರ ಭಕ್ತಿಯೇ ಅಲ್ಲದೆ, ಕನಕದಾಸರ ಹಲವಾರು ಕೀರ್ತನೆಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಮಾಜದ ಡೊಂಕನ್ನು ತಿದ್ದಬಹುದಾದ ವಿಮರ್ಶೆ, ವಿಡಂಬನೆಗಳು ನಮಗೆ ಕಂಡುಬರುತ್ತವೆ.

ಅವರ ಕಾಲಕ್ಕೆ ಪ್ರಚಲಿತವಿದ್ದ ಹಲವು ಮೂಢ ನಂಬಿಕೆಗಳನ್ನೂ, ಕಂದಾಚಾರಗಳನ್ನೂ, ಜಾತಿ-ವರ್ಗ ಭೇದಗಳನ್ನೂ ಕನಕದಾಸರು ಅವರ ಕೀರ್ತನೆಗಳಲ್ಲಿ ಖಂಡಿಸಿರುವುದು ನಮಗೆ ಕಂಡು ಬರುತ್ತದೆ. ಹಾಗೆಯೇ, ಅಂದಿನ ಸಮಾಜದಲ್ಲಿದ್ದ ಬಡವ ಶ್ರೀಮಂತ ಎಂಬ ಎರಡು ವರ್ಗಗಳನ್ನು ಪ್ರತಿನಿಧಿಸುವ ರಾಗಿ ಮತ್ತು ಭತ್ತಗಳೆಂಬ ಆಹಾರ ಧಾನ್ಯಗಳನ್ನು ಬಳಸಿಕೊಂಡು ಶ್ರೀರಾಮ ಚರಿತ್ರೆಯನ್ನು ರಚಿಸಿ, ಸಮಾಜಕ್ಕೆ ಒಂದು ಸಾತ್ವಿಕ ಸಂದೇಶವನ್ನು ವೈಜ್ಞಾನಿಕವಾಗಿ ಸಾರುವ ಉದ್ದೇಶದಿಂದ ‘ರಾಮಧಾನ್ಯ ಚರಿತೆಯಲ್ಲಿ’ ರಾಗಿಯನ್ನು ಅವರು ಬಳಸಿಕೊಂಡಿರಲು ಸಾಕು ಎನಿಸುತ್ತದೆ.

ರಾಮಧಾನ್ಯ ಚರಿತೆಯೆಂಬ ಅವರ ಈ ಸರಳವಾದ ಮತ್ತು ವಿಶಿಷ್ಟವಾದ ಸಾಹಿತ್ಯವನ್ನು ಬಹಳ ಜನ ಅವರವರಿಗೆ ತಿಳಿದಂತೆ ವಿಶ್ಲೇಷಣೆ ಮಾಡಿದ್ದಾರೆ. ಬಹುಶೃತ ವಿದ್ವಾಂಸರಾಗಿದ್ದ ಡಾ.ಕೆ/ ಎಸ್. ನಾರಾಯಣಾಚಾರ್ಯರು ‘ಕನಕ ದರ್ಶನ’ ಎಂಬ ಸರಣಿ ಪ್ರವಚನವನ್ನೂ ಮಾಡಿದ್ದಾರೆ ಮತ್ತು ಅದು ಅಂತರ್ಜಾಲದಲ್ಲಿ ಲಭ್ಯವಿದೆ. ಆ ಪ್ರವಚನ ಮಾಲಿಕೆಯಲ್ಲಿ ಅವರು ಈ ರಾಮಧಾನ್ಯಚರಿತ್ರೆ ಯನ್ನೂ ಸಮನ್ವಯದ ಮೂಸೆಯಿಂದ ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿ: Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ಇನ್ನು ಕೆಲವರು, ಈ ಕೃತಿಯನ್ನು ಜಾತಿ ವರ್ಗಗಳ ಸಂಘರ್ಷದ ದೃಷ್ಟಿಕೋನದಿಂದಲೂ ವಿಚಾರಿಸಿ ಬರೆದಿದ್ದಿದೆ. ಯಾವುದೇ ಕಾವ್ಯವನ್ನು ನಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳಲು ಅವಕಾಶವಿರುತ್ತದೆ. ಆದರೆ, ಅಧ್ಯಯನ ಮಾಡುವವನಿಗೆ ಕವಿಯ ಹೃದಯ ಎನ್ನುವಂಥದ್ದು ಅರ್ಥವಾದಾಗ ಮಾತ್ರ ಓದು ಸಾರ್ಥಕವಾಗುತ್ತದೆ. ಆ ಪ್ರಯತ್ನವಿಲ್ಲದೇ, ನಮಗೆ ತಿಳಿದಂತೆ ಅಪವ್ಯಾಖ್ಯಾನ ಮಾಡಿದರೆ, ಕವಿಗೂ ಮತ್ತು ಕೃತಿಗೂ ಅಪಚಾರ ಮಾಡಿದಂತಾಗುತ್ತದೆ.

ಕಳೆದ 3 ಸಂಚಿಕೆಗಳಲ್ಲಿ ಕನಕರ ‘ರಾಮಧಾನ್ಯ ಚರಿತೆ’ಯ ಸಾರಸಂಗ್ರಹವನ್ನು ನೋಡಿಯಾಯಿತು. ಈ ವಾರ ಕೃತಿಕಾರ ಕನಕರ ಹೃದಯವನ್ನು ಸ್ವಲ್ಪ ಅರ್ಥಮಾಡಿಕೊಳ್ಳುವ ಪ್ರಯತ್ನಮಾಡೋಣ. ‘ರಾಮಧಾನ್ಯದ ಕೃತಿಯನೀ ಜನದಾಮವೆದರಿಸು ವಂದದಿ ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ’ ಎಂದು ಶಾಂಡಿಲ್ಯರು ಹೇಳುತ್ತಿದ್ದರೆ, ‘ರಾಮ ಚರಿತ್ರೆಯನು ನೀವೆಮಗೆ ಪೇಳಿದ ಡಾಲಿಸುವೆ’ ಎಂದು ಕೇವಲ ರಾಗಿ ಮತ್ತು ಭತ್ತದ ಕಥೆಯ, ಸಂಪೂರ್ಣ ರಾಮಚರಿತ್ರೆಯನ್ನು ಹೇಳಿದರೆ ಕೇಳುವ ಇಚ್ಛೆಯಿದೆ ಎನ್ನುವ ಅರ್ಥದಲ್ಲಿ ಧರ್ಮರಾಜ ಮಾತಾಡುತ್ತಾನೆ.

ಅಲ್ಲಿಂದ 29 ಪದ್ಯಗಳಲ್ಲಿ ದಶರಥ ರಾಜನಿದ್ದ, ಅವನಿಗೆ ನಾಲ್ವರು ಮಡದಿಯರಿದ್ದರು ಎನ್ನುವಲ್ಲಿ ಯಿಂದ ರಾವಣನ ವಧೆಯಾಗಿ ವಿಭೀಷಣನಿಗೆ ಪಟ್ಟವಾಗಿ, ಶ್ರೀರಾಮನು ಅಯೋಧ್ಯೆಗೆ ಪ್ರಯಾಣ ಬೆಳೆಸುವಲ್ಲಿಯವರೆಗೆ ರಾಮಾಯಣದ ಸುಂದರವಾದ ವರ್ಣನೆಯೇ ಇದೆಯೇ ಹೊರತು ಇನ್ನೇ ನಿಲ್ಲ.

kanakadasaru ok

ಮುಂದಿನ 25 ಪದ್ಯಗಳು ರಾಗಿ ಮತ್ತು ಭತ್ತದ ಕುರಿತು ಇರುವಂಥದ್ದಾಗಿವೆ. ಎರಡೂ ಧಾನ್ಯಗಳನ್ನು ಸೆರೆಯಲ್ಲಿ ಇಡುವಂತೆ ಆಜ್ಞಾಪಿಸಿ ಶ್ರೀರಾಮನು ತನ್ನ ಪರಿವಾರದ ಜತೆಗೆ ಅಯೋಧ್ಯೆಯತ್ತ ಪ್ರಯಾಣವನ್ನು ಮುಂದುವರಿಸಿದನು ಎಂಬಲ್ಲಿಗೆ 75 ಪದ್ಯಗಳನ್ನು ರಾಮಾಯಣವೇ ಆವರಿಸುತ್ತದೆ. ಮುಂದಿನ 25 ಶ್ಲೋಕಗಳು ಧಾನ್ಯ ಚರಿತ್ರೆಯಲ್ಲಿನ ನಿರ್ಣಯವನ್ನು ತೋರಿಸುತ್ತವೆ. ಕೊನೆಯ 8 ಪದ್ಯಗಳಲ್ಲಿ ಶಾಂಡಿಲ್ಯರ ರಾಮ ಕಥೆಯ ಉಪಸಂಹಾರದ ಭಾಗವಿದೆ.

‘ಅರಸ ನೀ ಮನವೊಲಿದು ಕೇಳದ ಚರಿತೆ ತಾನೊಂದಿಲ್ಲ ಲೋಕದಿ, ಪರಮ ಪುಣ್ಯದ ರಾಮ ಕಥೆಯಿದ ಕೇಳ್ದೆ ನೀನಿಂದು’ ಎನ್ನುವ ಕೊನೆಯ ಶ್ಲೋಕದಲ್ಲಿಯೂ ನಾನು ಇಲ್ಲಿಯವರೆಗೆ ಹೇಳಿರು ವುದು ಪ್ರಧಾನವಾಗಿ ರಾಮ ಕಥೆಯನ್ನೇ ಎನ್ನುವುದನ್ನು ದಾಸರೇ ಸ್ಪಷ್ಟವಾಗಿ ಸಾರುತ್ತಾರೆ. ಅಂದರೆ, ಶ್ರೀರಾಮನ ಚರಿತ್ರೆಯನ್ನು, ಅದರಲ್ಲಿ ಅವನ ನ್ಯಾಯನಿಷ್ಠುರತೆಯನ್ನು ಪ್ರಧಾನವಾಗಿ ತೋರಿಸುವ ಉದ್ದೇಶದಿಂದ ರಚಿತವಾದ ಕಾವ್ಯ ಇದು ಎನ್ನುವುದು ಕಂಡುಬರುತ್ತದೆ.

ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳಿಗೂ ಸಮಾನವಾಗಿ ನ್ಯಾಯದಾನ ನೀಡುವ ರಾಜಾ ರಾಮನ ಇಂಥದ್ದೇ ಕಥೆಯೊಂದು, ಪ್ರಸಿದ್ಧವಾದ ಆನಂದ ರಾಮಾಯಣದಲ್ಲೂ ಬರುತ್ತದೆ ಎಂದು ಕೇಳಿದ್ದೇವೆ. ಒಬ್ಬ ಸನ್ಯಾಸಿ ಮತ್ತು ನಾಯಿಯ ಜಗಳವನ್ನು ಪರಿಹರಿಸುವ ಪ್ರಸಂಗದಲ್ಲಿ, ಸನ್ಯಾಸಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ಶ್ರೀರಾಮನು ನಾಯಿಯನ್ನೇ ಕೇಳಲಾಗಿ, ಇವರನ್ನು ಹತ್ತಿರದ ಶಿವ ಮಂದಿರದ ಪೂಜಾರಿಯನ್ನಾಗಿಸಬೇಕು ಅವನಿಗೆ ಅದೇ ಶಿಕ್ಷೆ ಎನ್ನುತ್ತದೆ ಆ ನಾಯಿ. ಇದು ಒಳ್ಳೇ ಚೋದ್ಯವಾಯಿತ!

ಶಿವ ಮಂದಿರದ ಪೂಜಾರಿತನ ಎನ್ನುವುದು ಶಿಕ್ಷೆ ಹೇಗಾಗುತ್ತದೆ? ಎಂದು ರಾಮನು ನಾಯಿಯನ್ನು ಕೇಳಲಾಗಿ, ನಾನೂ ಹಿಂದಿನ ಜನ್ಮದಲ್ಲಿ ಇದೇ ಶಿವ ಮಂದಿರದಲ್ಲಿ ಪೂಜಾರಿಯಾಗಿ, ಮಾಡಬಾರ ದ್ದನ್ನು ಮಾಡಿದ್ದಕ್ಕೆ ಈಗ ನಾಯಿಯ ಜನ್ಮ ಒದಗಿದೆ. ಹಾಗಾಗಿ, ನನಗೆ ಒದಗಿದಂತೆ ಈತನಿಗೂ ಮುಂದೆ ನಾಯಿಯ ಜನ್ಮವಾಗಲಿ ಎನ್ನುವ ಕಾರಣದಿಂದ ಹಾಗೆ ಹೇಳಿದೆ ಎನ್ನುತ್ತದೆ ಆ ನಾಯಿ. ಹೀಗೆಯೇ, ಇದೇ ಆನಂದ ರಾಮಾಯಣದಲ್ಲಿ, ಗೂಬೆ ಕಟ್ಟಿದ್ದ ಗೂಡಿನಲ್ಲಿ, ಗೂಬೆ ಇಲ್ಲದಿದ್ದಾಗ ಹದ್ದೊಂದು ಬಂದು ಹಕ್ಕು ಸ್ಥಾಪಿಸಿ, ಒಂದು ಗೂಡಿಗಾಗಿ ಹದ್ದು ಮತ್ತು ಗೂಬೆ ಜಗಳವಾಡು ತ್ತಿದ್ದಾಗ, ಶ್ರೀರಾಮನು ಅದನ್ನು ಪರಿಹರಿಸುವ ಕಥೆಯೂ ಬರುತ್ತದೆ.

ಇದೇ ರೀತಿಯಲ್ಲಿ, ರಾಗಿ ಮತ್ತು ಭತ್ತಗಳ ಜಗಳವನ್ನು ಬಳಸಿಕೊಂಡು ಸಂಕ್ಷಿಪ್ತವಾಗಿ ರಾಮಾಯಣ ವನ್ನು ರಚಿಸುವ ಉದ್ದೇಶದಿಂದಲೇ ದಾಸರು ಈ ಕೃತಿಯನ್ನು ರಚಿಸಿದ ಹಾಗೆ ಕಾಣುತ್ತದೆ. ಅವರು ಬಹುವಾಗಿ ಹರಿಭಕ್ತಿಯನ್ನು ಸಾರುವ ಕೀರ್ತನೆಗಳನ್ನೇ ಹೆಚ್ಚಾಗಿ ಬರೆದಿದ್ದವರು, ಶ್ರೀರಾಮನ ಕುರಿತ ಕೀರ್ತನೆಗಳು ಕಡಿಮೆಯೇ; ಹಾಗಾಗಿ, ಆ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ರಾಮಕಥೆ ಯನ್ನು ಈ ಮೂಲಕ ಹೇಳಿದಂತೆ ತೋರುತ್ತದೆ.

ಆದರೆ, ಇಲ್ಲಿ ರಾಮನ ದೈವತ್ವದ ಹೊರತಾಗಿ, ರಾಜನಾಗಿ ರಾಮನು ಹೇಗೆ ಪಕ್ಷಪಾತವಿಲ್ಲದ ನ್ಯಾಯ ವನ್ನು ಒದಗಿಸುತ್ತಾನೆ ಎನ್ನುವುದನ್ನು ತೋರಿಸಲು, ರಾಗಿ ಮತ್ತು ಭತ್ತದ ಜಗಳದ ಸಂದರ್ಭವನ್ನು ಬಳಸಿಕೊಂಡಹಾಗೆ ಕಾಣಬರುತ್ತದೆ. ಇನ್ನು, ಭತ್ತ ಕೆಳಗಾಗದಂತೆ, ರಾಗಿಯನ್ನು ಮೇಲೆತ್ತಿದ ಶ್ರೀರಾಮನ ನ್ಯಾಯನಿರ್ಣಯದ ಬಗೆಯೇನಿದೆ, ಅದು ಕನಕದಾಸರ ಸಾಮರಸ್ಯದ ಮನೋಧರ್ಮ ವನ್ನು ಎತ್ತಿ ತೋರಿಸುತ್ತದೆ. ಶ್ರೀರಾಮನಿಗೆ ಸಾರ್ವಭೌಮತೆ ಇರುವುದರಿಂದ ತಾನೊಬ್ಬನೇ ನಿರ್ಧಾರ ಮಾಡಬಹುದಾಗಿತ್ತಾದರೂ, ಋಷಿಗಳು, ದೇವತೆಗಳು ಸಮಾಜದ ಎಲ್ಲ ವರ್ಗದ ಜನರ ಅಭಿಪ್ರಾಯ ದನ್ವಯ collective decision ತೆಗೆದುಕೊಂಡತೆ ತೋರಿಸಿರುವುದು ಬಹಳ ವಿಶೇಷವಾಗಿದೆ.

ಕಾಮ್ಯಕಾ ವನದಲ್ಲಿ ವನವಾಸದಲ್ಲಿರುವ ಪಾಂಡವರನ್ನು ಕಂಡು ಅವರಿಗೆ ಧೈರ್ಯಗೆಡದಂತೆ ಉತ್ಸಾಹ ತುಂಬಿದ ಶಾಂಡಿಲ್ಯ ಮಹರ್ಷಿಗಳಲ್ಲಿ ಧರ್ಮರಾಜನು ನಮಗೆ ಏನು ಸುವಿಚಾರಗಳನ್ನು ಹೇಳಲಿಕ್ಕಿದ್ದೀರಿ? ಎಂದು ಕೇಳಿದಾಗ ಶಾಂಡಿಲ್ಯರು ನೇರವಾಗಿ ಶ್ರೇಷ್ಠರಾದ ಮತ್ತು ಗುಣಭೂಯಿಷ್ಠ ರಾದ, ನಳ, ಶ್ರೀರಾಮ, ಧರ್ಮರಾಜ ಹಾಗೂ ಸತ್ಯಹರಿಶ್ಚಂದ್ರ ಎಂಬ ನಾಲ್ವರು ಸತ್ಯನಿಷ್ಠ ರಾಜರು ಗಳನ್ನು ಹೆಸರಿಸುತ್ತಾ, ಅವರುಗಳಲ್ಲಿ ಶ್ರೀರಾಮನು ಅತ್ಯಂತ ಗುಣಶೀಲನಾಗಿದ್ದಾನೆ ಎಂದೂ ನುಡಿಯುತ್ತಾರೆ.

ಆದಿಕಾವ್ಯ ರಾಮಾಯಣವನ್ನು ಅಥವಾ ಶ್ರೀರಾಮನನ್ನು ಉಲ್ಲೇಖಿಸುವ (ಮಹಾಭಾರತದಲ್ಲಿ) ವ್ಯಾಸರೂ ಮಾಡಿರದ ಕೆಲಸವನ್ನು ಕನಕದಾಸರು ಮಾಡುತ್ತಾರೆ. ಅದಲ್ಲದಿದ್ದರೆ, ಶ್ರೀರಾಮನ ಕಥೆ ಹೇಳ ಹೊರಟ ಕನಕದಾಸರಿಗೆ, ಶಾಂಡಿಲ್ಯರು ಮತ್ತು ಧರ್ಮರಾಜನ ನಡುವಿನ ಸಂಭಾಷಣೆಯಿಂದ ಕಥೆಯನ್ನು ಪ್ರಾರಂಭಿಸಬೇಕಾಗಿರಲಿಲ್ಲ.

ನೇರವಾಗಿ ಚರಿತ್ರೆಯನ್ನು ಪ್ರಾರಂಭಿಸಬಹುದಿತ್ತು. ಇನ್ನು, ನಳ, ಧರ್ಮರಾಜ ಹಾಗೂ ಸತ್ಯ ಹರಿಶ್ಚಂದ್ರ ಈ ಮೂವರು ರಾಜರುಗಳ ಜತೆಗೆ ಅವತಾರ ಪುರುಷನಾಗಿದ್ದ ಶ್ರೀರಾಮನನ್ನೂ ದಾಸರು ಸೇರಿಸಿಬಿಟ್ಟರ! ಎನ್ನುವ ರಾಮಭಕ್ತರ ಆಕ್ಷೇಪಕ್ಕೆ ಸಮಾಧಾನವಾಗಿ, ಅವರುಗಳಲ್ಲಿ ಕಥೆ ಕೇಳುತ್ತಿದ್ದ ಧರ್ಮರಾಜನನ್ನೂ ಸೇರಿ ಉಳಿದ ರಾಜರುಗಳು ಶ್ರೇಷ್ಠರಾಗಿದ್ದರೂ, ಕಥಾನಾಯಕ ಶ್ರೀರಾಮನ ಗುಣಾಗ್ರಗಣ್ಯತ್ವವನ್ನು ದಾಸರು ಎತ್ತಿ ಹೇಳುತ್ತಾರೆ.

ಆರು ತಿಂಗಳುಗಳ ಸೆರೆವಾಸದ ನಂತರ, ಸ್ವಾಭಾವಿಕವಾಗಿ ಭತ್ತ ಮುಗ್ಗಿರಲು ಸಾಕು ಮತ್ತು ರಾಗಿ ತನ್ನ ಗುಣಧರ್ಮಕ್ಕನುಗುಣವಾಗಿ ಇನ್ನೂ ಗಟ್ಟಿಯಾಗಿದ್ದು ಬಳಕೆಗೆ ಯೋಗ್ಯವಾಗಿತ್ತು. ರಾಗಿಯ ಬಾಳಿಕೆ ಬರುವ ಗುಣ ಮತ್ತು ಬಡವರಿಗೂ ಸಲ್ಲುವ ಗುಣಗಳು ರಾಗಿಯನ್ನು ಉತ್ತಮ ಧಾನ್ಯವೆಂದು ದೇವತೆ ಗಳು ಸಾರಲು ಕಾರಣವಾಯ್ತು. ನಮ್ಮ ದೇಶಕೆ ರಾಗಿಯೇ.. ಎನ್ನುವ ಮುನಿವರರ ಮಾತಿನ ಅರ್ಥ, ಕರ್ನಾಟಕ ದೇಶದ ಹವಾಮಾನಕ್ಕೆ ರಾಗಿಯೇ ಯೋಗ್ಯ, ಅಕ್ಕಿ ತಮಿಳುನಾಡಿಗೆ ಸಲ್ಲುವ ಧಾನ್ಯ ಎನ್ನುವ ವೈಜ್ಞಾನಿಕತೆಯನ್ನು ಸಾರುತ್ತಾರೆ ದಾಸರು.

ಕೊನೆಯಲ್ಲಿ, ಸಭೆಯಲ್ಲಿದ್ದ ಬ್ರಾಹ್ಮಣರು ನೆಲ್ಲಿನಿಂದಾದ ಅಕ್ಷತೆಯನ್ನೇ ರಾಗಿಯ ತಲೆಯ ಮೇಲೆ ಇಟ್ಟು ಹಾರೈಸಿದರು ಎಂದು ಬರೆಯುವ ಮೂಲಕ, ದಾಸರು ತಾವು ಬ್ರಾಹ್ಮಣ ದ್ವೇಷಿಗಳಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತಾರೆ. ಮುಂದೆ ಭತ್ತವನ್ನು ಸಮಾಧಾನಿಸಿ ನೀನು ಚೋಳದೇಶಕ್ಕೆ ಹೋಗು ಎಂದು ಆದೇಶಿಸಿದ್ದು, ಈ ದೇಶಕ್ಕೆ ಅಂದರೆ ಕರುನಾಡಿಗೆ ರಾಗಿಯೇ ಶ್ರೇಷ್ಠ ಧಾನ್ಯವಾಗಿದೆ, ನೀನು ಚೋಳದೇಶಕ್ಕೆ ಅಂದರೆ ತಮಿಳುನಾಡಿಗೆ ಹೋಗಿ ಅಲ್ಲಿನ ಜನರನ್ನು ಪೊರೆ ಎಂದಿರುವುದು ಈ ಪ್ರದೇಶಕ್ಕೆ ಅಂದರೆ ಕರ್ನಾಟಕ್ಕೆ ರಾಗಿಯೇ ಉತ್ತಮ ಆಹಾರ ಎಂದು ಕರೆದ ಹಾಗಾಯಿತೇ ವಿನಾ ಭತ್ತವನ್ನು ಹೀಗಳೆದ ಹಾಗಾಗಲಿಲ್ಲವಲ್ಲ!

ಹಾಗೆ ನೋಡಿದರೆ, ಯಾವ ಧಾನ್ಯವೂ ಹೆಚ್ಚಿನದಲ್ಲ, ಸತ್ವದಲ್ಲಿ ಅವವಕ್ಕೆ ಅವುಗಳ ಗುಣ ಇದ್ದೇ ಇರುತ್ತದೆ ಮತ್ತು ಬೇರೆ ಬೇರೆಪ್ರದೇಶಕ್ಕೆ ಅವು ಸಲ್ಲುತ್ತವೆ ಎಂದಷ್ಟೇ ದಾಸರು ಹೇಳಿದಂತಾಯಿತು.

ಹಾಗೆಯೇ, ರಾಗಿ ತನ್ನ ಅಪಮೌಲ್ಯೀಕರಣವನ್ನು ಮೆಟ್ಟಿನಿಲ್ಲುವ ಕತೆಯನ್ನು ಕೆಳಜಾತಿಗಳ ಕ್ರಿಯಾ ತ್ಮಕ ಹೋರಾಟದ ಪ್ರತೀಕವಾಗಿ ನೋಡಲು ಸಾಧ್ಯವಿದೆ ಎಂದು ಹಲವರು ವ್ಯಾಖ್ಯಾನಿಸಿರು ವುದು ಸರಿಬರುವುದಿಲ್ಲ. ರಾಮಧಾನ್ಯ ಚರಿತೆಯನ್ನು ತಳವರ್ಗದ ಹೋರಾಟಗಳ ಪ್ರತೀಕವಾಗಿ ನೋಡುವು ದರಲ್ಲಿ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ರಾಗಿಯನ್ನು ಅದರ ಸತ್ವದ ಆಧಾರದಲ್ಲಿ ರಾಘವತ್ವಕ್ಕೆ ಏರಿಸುವ ಕನಕದಾಸರ ಕ್ರಮವನ್ನು ಬಂಡಾಯದ ಮಾದರಿಯಾಗಿ ಸ್ವೀಕರಿಸುವುದರಲ್ಲಿದೆ ಮತ್ತು ರಾಗಿ ಹಾಗೂ ಭತ್ತಗಳನ್ನು ಜಾತಿಸೂಚಕವಾದ ಧಾನ್ಯಗಳು ಎಂದು ವಿಮರ್ಶೆ ಮಾಡುವುದರಲ್ಲಿದೆ. ಇದನ್ನು ಕನಕ ಸಾಹಿತ್ಯದ ಅತಿರೇಕದ ವಿಮರ್ಶೆ ಎಂತಲೇ ಹೇಳಬೇಕಾಗುತ್ತದೆ.

ಈಗಿನಂತೆ ಆಗಲೂ ಎಲ್ಲ ವರ್ಗದ ಜನರೂ ರಾಗಿಯನ್ನು ಆಹಾರವಾಗಿ ಬಳಸುತ್ತಿದ್ದರು. ಬಡವರು ರಾಗಿಯನ್ನು ಹೆಚ್ಚಾಗಿ ಬಳಸುತ್ತಿದ್ದರು ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ ಮೇಲ್ವರ್ಗದ ಜನರು ರಾಗಿಯನ್ನು ಬಳಸದೇ ಕೇವಲ ಅಕ್ಕಿಯನ್ನು ಮಾತ್ರ ಬಳಸುತ್ತಿದ್ದರು ಎನ್ನುವುದನ್ನು ಒಪ್ಪಲಾಗದು. ರಾಗಿಯಾಗಲೀ ಭತ್ತವಾಗಲೀ ಭಾರತದಾದ್ಯಂತ ಪೂರ್ಣವಾಗಿ ಸಾರ್ವತ್ರಿಕ ಆಹಾರದ ಧಾನ್ಯವಾಗಿರಲಿಲ್ಲ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅಕ್ಕಿ, ರಾಗಿ ಮತ್ತು ಜೋಳಗಳನ್ನು ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಆಹಾರವಾಗಿ ಬಳಸುವ ಪರಿಪಾಠವಿರುವಾಗ, ಅವುಗಳನ್ನು ಎರಡು ಜಾತಿಗಳಿಗೆ ಅನ್ವಯಿಸಿ ವಿಮರ್ಶಿಸುವುದು ಕ್ಷುಲ್ಲಕವೆನಿಸುತ್ತದೆ.

ಹಾಗೆ ಮಾಡಿದರೆ ಅದು ಕನಕರಿಗೆ ಮಾಡುವ ದೊಡ್ಡ ಅವಮಾನವಾಗುತ್ತದೆಯಷ್ಟೆ. ಮಹಾ ಮಾನವತಾವಾದಿ ಕನಕದಾಸರನ್ನು, ಭಕ್ತಿ ಭಂಡಾರಿ ಬಸವಣ್ಣನನ್ನು ಹಾಗೂ ಆದಿಕವಿ ವಾಲ್ಮೀಕಿ ಯಂಥವರನ್ನೇ ಒಂದು ಜಾತಿಗೆ ಸೀಮಿತಗೊಳಿಸಿ ಸಣ್ಣಬುದ್ಧಿ ಮೆರೆವ ನಮಗೆ, ಭತ್ತ ರಾಗಿಗಳಿಗೆ ಜಾತಿಯ ಬಣ್ಣ ಬಳಿಯುವುದು ದೊಡ್ಡ ಕೆಲಸವೇನಲ್ಲ ಬಿಡಿ!

ಭತ್ತ ರಾಗಿಗಳು ಭಾರತದ ಸಾಮಾಜಿಕ ರಚನೆಯಲ್ಲಿ ಮೇಲು ಕೀಳಿನ ಸಂಕೇತವಾಗಿರದೇ ಎರಡು ಭಿನ್ನ ಆಹಾರಕ್ರಮಗಳ, ಭಿನ್ನ ಪೋಷಕ ಸತ್ವಗಳ ಪ್ರತಿನಿಽಗಳಾಗಿವೆ. ಹಾಗಾಗಿ ರಾಗಿ ಭತ್ತಗಳ ನಡುವಿನ ಅಸಮಾನತೆಯನ್ನು ಪ್ರಶ್ನಿಸುವುದರ ಜತೆಗೆ ಅವುಗಳ ನಡುವಿನ ಗುಣ ವೈವಿಧ್ಯವನ್ನೂ ನಾವು ಗಮನಿಸಬೇಕಾಗುತ್ತದೆ. ಕನಕದಾಸರು ಈ ಕಾವ್ಯದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವು ದರ ಜತೆಗೆ, ಧಾನ್ಯಗಳಲ್ಲಿನ ವೈವಿಧ್ಯವನ್ನು ಗುರುತಿಸುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ.

ಹಾಗಾಗಿಯೇ, ರಾಗಿ ಭತ್ತಗಳ ನಡುವಿನ ಕೃತಕ ಶ್ರೇಷ್ಠತೆ-ಹೀನತೆಗಳನ್ನು ಕಟುವಾಗಿ ಪ್ರಶ್ನಿಸುತ್ತಲೇ ಅವುಗಳ ನಡುವಿನ ಸಾಮರಸ್ಯಕ್ಕೂ ಅವರು ಇಲ್ಲಿ ಜಾಗವಿಟ್ಟಿದ್ದಾರೆ. ಸಮಾಜದಲ್ಲಿ ಅಕ್ಕಿಯನ್ನು ಕೊಳ್ಳಲಾಗದ ಬಡವರಿಗೂ ಲಭ್ಯವಾಗುವ ಕಾರಣಕ್ಕೆ ಮತ್ತು ಕೂಡಿಟ್ಟರೂ ಬಹಳ ಕಾಲ ಕೆಡದೇ, ಬೆಳೆಬಾರದ ಬರಗಾಲದ ಸಮಯದಲ್ಲೂ ಉಪಯೋಗಕ್ಕೆ ಬರುವ ಕಾರಣಕ್ಕಾಗಿ ಮಾತ್ರ ರಾಗಿ ಯನ್ನು ಪುರಸ್ಕರಿಸಲಾಗಿದೆ ಎಂದು ದಾಸರು ಬಾರಿ ಬಾರಿ ಹೇಳುವುದು, ರಾಗಿಯನ್ನು ರಾಘವತ್ವಕ್ಕೆ ಉನ್ನತೀಕರಿಸಿದ ಮೇಲೆಯೂ ದಾಸರು ಅವುಗಳ ನಡುವೆ ಸಾಮರಸ್ಯವನ್ನು ಉಳಿಸಿರುವುದು ಬೆಣ್ಣೆಯಲ್ಲೂ ಕಲ್ಲು ಹುಡುಕುವ ತಥಾಕಥಿತ ವಿಮರ್ಶಕರುಗಳಿಗೆ ಕಾಣುವುದೇ ಇಲ್ಲ.

ಇಲ್ಲಿ ಕನಕದಾಸರಿಗೆ ಭತ್ತದ ಪಾರಮ್ಯವನ್ನು ಪ್ರಶ್ನಿಸಿ, ರಾಗಿಯನ್ನು ಮಾತ್ರ ಪತಿಕರಿಸಿ ಸಮಾಜದ ಎರಡು ಗುಂಪುಗಳ ನಡುವೆ ಶಾಶ್ವತ ವಿರೋಧವನ್ನು ಸೃಷ್ಟಿಸುವುದರಲ್ಲಿ ಆಸಕ್ತಿಯಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಸತ್ಯವನ್ನು ಕೃತಕವಾದ ‘ಕನಕನಕಿಂಡಿ’ಯಿಂದ ನೋಡಲು ಪ್ರಯತ್ನಿಸದೇ, ನೈಜವಾಗಿ ಕನಕರ ಕಣ್ಣಿನಿಂದ ನೋಡುವ ಪ್ರಯತ್ನಮಾಡಿದಾಗ ಮಾತ್ರ ನಮಗೆ ಈ ಕಾವ್ಯದಲ್ಲಿ ಕನಕದಾಸರು ಸಾಧಿಸಿದ ಸಮನ್ವಯವನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಕನಕದಾಸರನ್ನು ನಿಜವಾಗಿ ಗೌರವಿಸಿದ ಹಾಗಾಗುತ್ತದೆ.

(ಮುಗಿಯಿತು)