ಒಂದೇ ಕಾಮಗಾರಿಗೆ ಮತ್ತೆ ಭೂಮಿ ಪೂಜೆ; ಶಾಸಕ ಎನ್.ಶ್ರೀನಿವಾಸ್ ವಿರುದ್ಧ ಬಿಜೆಪಿ ಮುಖಂಡರ ವಾಗ್ದಾಳಿ
ನೆಲಮಂಗಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು, ಶಾಸಕ ಎನ್.ಶ್ರೀನಿವಾಸ್ ವಿರುದ್ಧ ಕಿಡಿಕಾರಿದ್ದಾರೆ. ಡಿಸಿಎಂ ಶಂಕು ಸ್ಥಾಪನೆ ಮಾಡಿದ ಯೋಜನೆಗೆ ಮತ್ತೆ ಭೂಮಿ ಪೂಜೆ ಮಾಡುತ್ತಿರುವುದು ಸಿಎಂ ಹಾಗೂ ಡಿಸಿಎಂಗೆ ಮಾಡಿದ ಅವಮಾನ. ಶಾಸಕರು ಪ್ರಚಾರಕ್ಕಾಗಿ, ಜನರನ್ನು ಶಾಸಕರು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.


ನೆಲಮಂಗಲ: ಶಾಸಕ ಎನ್.ಶ್ರೀನಿವಾಸ್ ಅವರು ಪ್ರಚಾರಕ್ಕಾಗಿ ಒಂದೇ ಕಾಮಗಾರಿಗೆ ಮತ್ತೆ ಭೂಮಿ ಪೂಜೆ ಮಾಡಿ, ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಸಪ್ತಗಿರಿ ಶಂಕರ್ ನಾಯಕ್ ವಾಗ್ದಾಳಿ ನಡೆಸಿದ್ದಾರೆ. ನೆಲಮಂಗಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡಿ, 2024ರ ಮಾರ್ಚ್ನಲ್ಲಿ ಸಿಎಂ, ಡಿಸಿಎಂ ಶಂಕು ಸ್ಥಾಪನೆ ಮಾಡಿದ ಯೋಜನೆಗೆ ಮತ್ತೆ ಭೂಮಿ ಪೂಜೆ ಮಾಡುತ್ತಿರುವುದು ಸಿಎಂ ಹಾಗೂ ಡಿಸಿಎಂಗೆ ಮಾಡಿದ ಅವಮಾನ. ಇನ್ನು ಕಾರ್ಯಕ್ರಮಕ್ಕೆ ಬಿಜೆಪಿ ಸಂಸದರನ್ನು ಕರೆಯದೆ ಪ್ರಚಾರಕ್ಕಾಗಿ, ಜನರನ್ನು ಶಾಸಕರು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಸಪ್ತಗಿರಿ ಶಂಕರ್ ನಾಯಕ್ ಶಾಸಕ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಅರಿಶಿನಕುಂಟೆಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡಿದ್ದಾರೆ. ಶಾಸಕರು ಕೇವಲ ಪ್ರಚಾರಕ್ಕಾಗಿ ಅಧಿಕಾರಿಗಳನ್ನು ಬಳಸಿಕೊಂಡು 220 ಕೆವಿ ವಿದ್ಯುತ್ ಸ್ಥಾವರದ ಭೂಮಿ ಪೂಜೆ ಮಾಡುತ್ತಿದ್ದಾರೆ. ಒಂದೇ ಯೋಜನೆಗೆ ಎರಡು ಭಾರಿ ಶಂಕು ಸ್ಥಾಪನೆ ಮಾಡುವ ಅವಶ್ಯಕತೆ ಏನಿದೆ? ಈ ಹಿಂದೆ ಸಂಸದರಿಗೆ ಆಹ್ವಾನ ನೀಡಲಾಗಿತ್ತು. ಈ ಬಾರಿ ಸಂಸದ ಡಾ.ಕೆ. ಸುಧಾಕರ್ ಅವರನ್ನು ಕರೆಯದೆ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಂದಿದ್ದ 250 ಕೋಟಿ ಅನುದಾನದ ಕಾಮಗಾರಿಗೆ ಶಾಸಕರು ಪೂಜೆ ಮಾಡುತ್ತಿದ್ದಾರೆ. ಮಾಡಿದ ಕೆಲಸಕ್ಕೆ ಪದೇ ಪದೆ ಪೂಜೆ ಮಾಡುತ್ತಿದ್ದಾರೆ. ಈಗಿನ ಶಾಸಕರು ಎಲ್ಲಾ ಕಡೆ ಓಡಾಡುವಾಗ ಗುದ್ದಲಿ, ಸನಿಕೆ , ಪಿಕಾಸಿ ಇಟ್ಟುಕೊಂಡು, ಹೋಗುವ ಕಡೆ ಪೂಜೆ ಮಾಡಿ ಕಾಮಗಾರಿ ಮಾಡಿದೆ ಎನ್ನುತ್ತಾರೆ. ತಾಲೂಕಿಗೆ ಎಷ್ಟು ಅನುದಾನ ಬಂದಿದೆ ಎಂದು ಬಹಿರಂಗಪಡಿಸಲಿ ಎಂದರು.
ಈ ವೇಳೆ ತಾಲೂಕು ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಾಬು, ಸತೀಶ್, ಮಹಿಳಾ ಘಟಕ ಅಧ್ಯಕ್ಷೆ ಮಂಜುಳ ಸುರೇಶ್, ಮುಖಂಡರಾದ ಹನುಮಂತರಾಜು, ಕಾಮೇಶ್, ರಾಜಮ್ಮ ಅರುಣ್ ಕುಮಾರ್, ಬಾಲಕೃಷ್ಣ ರವಿ. ಚಿಕ್ಕರಾಜು, ಸೌಮ್ಯ, ಶೀಲಾ ಮತ್ತಿತರರು ಇದ್ದರು.
ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ನವರು ಕಡಲ ಅಲೆ ಎಣಿಸುವಲ್ಲೂ ದುಡ್ಡು ಹೊಡೆಯುವಲ್ಲಿ ನಿಪುಣರು: ಜೋಶಿ ಆರೋಪ
ಗೃಹಲಕ್ಷ್ಮಿ ಹಣ ತಿಂಗಳ ಸಂಬಳ ಅಲ್ಲ ಎಂಬ ಹೇಳಿಕೆ ವಿಚಾರದಲ್ಲಿ ಸಚಿವ ಜಾಜ್೯ ಪ್ರತಿಕ್ರಿಯೆ
ನೆಲಮಂಗಲ: ರಾಜ್ಯದ ಜನರಿಗೆ ಗೃಹಲಕ್ಷ್ಮಿ ಹಣ ತಿಂಗಳ ಸಂಬಳ ಅಲ್ಲ ಎಂಬ ತಮ್ಮ ಹೇಳಿಕೆಗೆ ಸಾಕಷ್ಟು ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ 300 ಕೋಟಿ ರೂಪಾಯಿ ವೆಚ್ಚದ 220 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂಬಳ ಕೊಡುವುದಾದರೆ 31 ಅಥವಾ 1ನೇ ತಾರೀಖು ಕೊಡಬೇಕಾಗುತ್ತದೆ. ಸೋಶಿಯಲ್ ವೆಲ್ ಫೇರ್ ಕೆಲಸಗಳಲ್ಲಿ 15-20 ದಿನ ತಡ ಆಗಬಹುದು. ನಮಗೆ ತೆರಿಗೆ ಬಂದಾಗ ನಾವು ಕೊಡುತ್ತಿದ್ದೇವೆ. ಇಯರ್ ಎಂಡ್ ಸಮಯದಲ್ಲಿ ಎಲ್ಲಾ ಬರುತ್ತೆ. ಈ ವಿಚಾರದಲ್ಲಿ ಹೀಗಾಗಲೇ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಹೇಳಿದ್ದಾರೆ. ಮಾರ್ಚ್ 31ರೊಳಗೆ ಎಲ್ಲಾ ಕೊಡುತ್ತೇವೆ ಎಂದಿದ್ದಾರೆ.
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಬಳ ಕೊಡುವವರಿಗೆ ಇಂತಹ ಡೇಟ್ ಇರುತ್ತೆ. ವಿಜಯೇಂದ್ರ ಸೇರಿ ನಮ್ಮ ರಾಜ್ಯದ ಜನರು ಗೌರವಾನ್ವಿತರು. ಇನ್ನು ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲಿ ವಿದ್ಯುತ್ ಪೂರೈಕೆ ಬಗ್ಗೆ ಮಾತನಾಡಿ, ಹೀಗಾಗಲೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 19500 ಮೆಗಾವ್ಯಾಟ್ ತಲುಪಿದೆ. ಆದರೂ ಪವರ್ ಸಮಸ್ಯೆ ಇಲ್ಲ ಹಾಗೂ ಯಾವುದೇ ಲೋಡ್ ಶೆಡ್ಡಿಂಗ್ ಸಮಸ್ಯೆ ಕೂಡ ಇಲ್ಲ. 10 ಲಕ್ಷ ಕಿಲೋಮೀಟರ್ ಲೈನ್ ವ್ಯವಸ್ಥೆ ಇದೆ. 6 ಲಕ್ಷ ಟ್ರಾನ್ಸ್ ಫಾರ್ಮರ್ ಇವೆ. ಒಮ್ಮೊಮ್ಮೆ ಲೈನ್ ರಿಪೇರಿ ಬರುತ್ತೆ, ಆಗ ಜನ ಕರೆಂಟ್ ಇಲ್ಲ ಅಂತಾರೆ. ನಮಗೆ ಬೇಕಾದ ಕರೆಂಟ್ ಇದೆ ಎಂದರು. ಈ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.