Couple leaves Bangalore: ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ; ಉದ್ಯಮಿ ದಂಪತಿ ರಾಜಧಾನಿ ಬಿಡಲು ಕಾರಣವೇನು? ಇಲ್ಲಿದೆ ವಿಡಿಯೋ
Couple leaves Bangalore: ತಾವು ಯಾಕೆ ಬೆಂಗಳೂರು ಬಿಡುತ್ತಿದ್ದೇವೆ ಎಂದು 2 ದಿನಗಳ ಹಿಂದೆ ಈ ಜೋಡಿ ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದೆ. ಉದ್ಯಮ ದಂಪತಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬ್ಯುಸಿನೆಸ್ ಕೂಡ ಇದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಇವರು ಇದೀಗ ನಗರ ತೊರೆಯಲು ಕಾರಣವೇನು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.


ಬೆಂಗಳೂರು: ರಾಜಧಾನಿಯಲ್ಲಿ ಎರಡು ವರ್ಷಗಳ ಕಾಲ ವಾಸ ಮಾಡಿದ ಬಳಿಕ ಯುವ ಜೋಡಿಯೊಂದು ನಗರವನ್ನು ತೊರೆಯಲು (Couple leaves Bangalore) ನಿರ್ಧರಿಸಿದ್ದು, ಇದಕ್ಕೆ ಅವರು ನೀಡಿರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉದ್ಯಮಿ ಅಶ್ವಿನ್ ಮತ್ತು ಅಪರ್ಣ ದಂಪತಿ ನಗರದಿಂದ ಹೊರಗೆ ಹೋಗಲು ನಿರ್ಧಾರ ಮಾಡಿದ್ದಾರೆ. ನಮಗೆ ಬೆಂಗಳೂರು ನಗರದ ವಾತಾವರಣ, ಹವಾಮಾನ, ಜನರು ಇಷ್ಟವಾಯಿತು. ಆದರೆ ಈಗ ಬೆಂಗಳೂರನ್ನು ತೊರೆಯಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಯಾಕೆ ಬೆಂಗಳೂರು ಬಿಡುತ್ತಿದ್ದೇವೆ ಎಂಬಗ್ಗೆ ಈ ಜೋಡಿ ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದೆ. ಅಶ್ವಿನ್ ಮತ್ತು ಅಪರ್ಣ ಇಬ್ಬರಿಗೂ ಈಗ 27 ವರ್ಷ. ಇವರು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಬ್ಬರೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಬ್ಯುಸಿನೆಸ್ ಕೂಡ ಇದೆ.
ಈ ಯುವ ಜೋಡಿ ಬೆಂಗಳೂರು ನಗರ ತೊರೆಯಲು ಪ್ರಮುಖ ಕಾರಣ ಬೆಂಗಳೂರಿನ ವಾತಾವರಣ. ಕ್ಷೀಣಿಸುತ್ತಿರುವ ವಾಯು ಗುಣಮಟ್ಟದಿಂದ ಇಬ್ಬರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರಂತೆ. “ಬೆಂಗಳೂರು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿದೆ. ಈ ವಿಷಯಕ್ಕೆ ನೀವು ನಮ್ಮನ್ನು ದ್ವೇಷಿಸಬಹುದು. ನಮ್ಮ ಬೆಂಗಳೂರು ಅದ್ಭುತವಾಗಿದೆ. ವ್ಯಾಪಾರ ಪ್ರಾರಂಭಿಸಲು ಇದು ಅತ್ಯುತ್ತಮ ಸ್ಥಳ, ಇದಕ್ಕಾಗಿಯೇ ನಾವು ಈ ಸ್ಥಳ ಆಯ್ಕೆಮಾಡಿಕೊಂಡಿದ್ದೆವು. ಆದರೆ, ಆದರೆ ನಾವು ಸಾಧ್ಯವಾದಷ್ಟು ಬೇಗ ಬೇರೆ ಆಯ್ಕೆ ಮಾಡಬೇಕಾಯಿತು. ನಗರವು ನಮ್ಮನ್ನು ಮುಳುಗಿಸುವ ಮೊದಲು, ನಾವು ಬೆಂಗಳೂರು ತೊರೆದಿದ್ದೇವೆ ಎಂದು ದಂಪತಿ ಹೇಳಿದ್ದಾರೆ.
ನಾವು ಆಗಾಗ ರೋಗಕ್ಕೆ ತುತ್ತಾದೆವು. ನನಗೆ ಉಸಿರಾಟದ ತೊಂದರೆ, ಅಲರ್ಜಿಗಳು ಶುರುವಾಯ್ತು. ಯಾವಾಗಲೂ ಶೀತ ಆಗದಿದ್ದ ನನಗೆ ನಿತ್ಯವೂ ಕೆಮ್ಮು, ಸೀನು ಬರುತ್ತಿದೆ. ಜೀವನಶೈಲಿಯನ್ನು ಸರಿ ಮಾಡಿಕೊಳ್ಳಬೇಕು ಎಂದು ಆರೋಗ್ಯಕರ ಆಹಾರ ಸೇವನೆ ಮಾಡುತ್ತ, ದೈನಂದಿನ ವ್ಯಾಯಾಮ ಶುರು ಮಾಡಿದೆವು. ಆದರೆ ಬೆಂಗಳೂರಿನ ವಾಯು ಗುಣಮಟ್ಟದಿಂದಲೇ ಅನಾರೋಗ್ಯ ಆಗಿದೆ. ಬೆಂಗಳೂರಿನಲ್ಲಿ ತಾಜಾ ಗಾಳಿ, ಉತ್ತಮ ಹವಾಮಾನವಿದೆ ಅಂತ ಜನರು ಹೇಳುತ್ತಾರೆ, ಆದರೆ ನಿಜವಾಗಿಯೂ ಇದೆಯೇ?” ಎಂದು ಅಪರ್ಣಾ ಅವರು ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.
ಫೆಬ್ರವರಿಯಲ್ಲಿ ಅವರು AQI (ವಾಯು ಗುಣಮಟ್ಟ ಸೂಚ್ಯಂಕ) ಪರಿಶೀಲಿಸಿದಾಗ, ಅದು 297 ರಷ್ಟಿತ್ತು ಎಂದು ಗೊತ್ತಾಗಿತ್ತು. ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲದೆ ಹಸಿರಾದ ಮತ್ತು ಶುದ್ಧವಾದ ಸ್ಥಳಕ್ಕೆ ಹೋಗಬೇಕು ಎಂದು ಈ ಜೋಡಿ ಬೆಂಗಳೂರು ತೊರೆಯಲು ನಿರ್ಧರಿಸಿದೆ.
ಈ ದಂಪತಿ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1 ಮಿಲಿಯನ್ ವೀಕ್ಷಣೆ ಕಂಡಿದೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. "ದಯವಿಟ್ಟು ಹೊರಡಿ, ಜನರು ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬರಲು ಮತ್ತು ನಗರದಲ್ಲಿ ಜನದಟ್ಟಣೆ ಹೆಚ್ಚಾಗುವ ಮೊದಲು ಬೆಂಗಳೂರು ಚೆನ್ನಾಗಿತ್ತು" ಎಂದು ವ್ಯಕ್ತಿಯೊಬ್ಬರು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
"ಎಲ್ಲರೂ ಬೆಂಗಳೂರನ್ನು ಖಾಲಿ ಮಾಡಿ. ಇದರಿಂದ ಈಗಾಗಲೇ ಇಲ್ಲಿ ವಾಸಿಸುತ್ತಿರುವ ಜನರು ಶಾಂತಿಯಿಂದ ಬದುಕಬಹುದು ಮತ್ತು ತಾಜಾ ಗಾಳಿಯನ್ನು ಮರಳಿ ಪಡೆಯಬಹುದು" ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.