DK Shivakumar: ಮೆಟ್ರೋ ಪ್ರಯಾಣ ದರ, ನೀರಿನ ದರ ಹೆಚ್ಚಳವಾಗುತ್ತ? ಈ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ ಎಂದು ತಿಳಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ʼʼಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್ಸಿಎಲ್ (BMRCL) ತೀರ್ಮಾನ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜತೆ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್ಸಿಎಲ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಗುರುವಾರ ಮಾತನಾಡಿದರು.
ʼʼಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲʼʼ ಎಂದು ಹೇಳಿದರು.
ನೀರಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ
ʼʼಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು. ನೀರಿನ ದರ ಏರಿಕೆಯಾಗಿ 14 ವರ್ಷಗಳಾಗುತ್ತಾ ಬಂದಿದೆ. ಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತಿರುವ ಕಾರಣಕ್ಕೆ ದರ ಏರಿಕೆ ಅನಿವಾರ್ಯವಾಗಿದೆ. ಬಿಡ್ಲ್ಯುಎಸ್ಎಸ್ಬಿ ಅವರು ಈಗಾಗಲೇ ವರದಿ ನೀಡಿದ್ದು ಇದನ್ನು ಕ್ಯಾಬಿನೆಟ್ ಮುಂದೆ ಇಡಲಾಗುವುದುʼʼ ಎಂದರು.
ʼʼಕಳೆದ ಬಾರಿ ವಿದ್ಯುತ್ ದರ ಕಡಿಮೆ ಮಾಡಿದ್ದೇವೆ. ಇದನ್ನು ಒಮ್ಮೆಯೂ ಮಾಧ್ಯಮಗಳು ತೋರಿಸುವುದಿಲ್ಲ. ಕೇವಲ ದರ ಏರಿಕೆ ಬಗ್ಗೆ ಮಾತ್ರ ಸುದ್ದಿ ಮಾಡುತ್ತವೆʼʼ ಎಂದರು.
ಸಂಚಾರ ದಟ್ಟಣೆ ನಿವಾರಣೆಗೆ, ಡಬಲ್ ಡೆಕ್ಕರ್ ನಿರ್ಮಾಣ, ನಗರ ಸೌಂದರ್ಯೀಕರಣಕ್ಕೆ ಒತ್ತು
ʼʼಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ, ನೂತನ ಮೆಟ್ರೋ ಮಾರ್ಗಗಳು ಹೋಗುವ ಕಡೆ ಡಬಲ್ ಡೆಕ್ಕರ್ ನಿರ್ಮಾಣ ಸೇರಿದಂತೆ ನಗರ ಸೌಂದರ್ಯೀಕರಣಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆʼʼ ಎಂದು ಡಿಸಿಎಂ ತಿಳಿಸಿದರು.
ʼʼಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಕಡೆಯ ರಸ್ತೆ, ಲೊಟ್ಟೆಗೊಲ್ಲಹಳ್ಳಿ, ಸುಮ್ಮನಹಳ್ಳಿ ಭಾಗದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಎಂಆರ್ಸಿಎಲ್, ಬಿಡಿಎ ಕಮಿಷನರ್ಗಳು ಒಟ್ಟಿಗೆ ನಗರ ಪ್ರದಕ್ಷಿಣೆ ಹಾಕಿ ಸಂಚಾರ ದಟ್ಟಣೆ ಹೆಚ್ಚಿರುವ ಕಡೆ ಅನುಕೂಲವಾಗುವಂತೆ ಎಲ್ಲೆಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ಗಳು, ಸುರಂಗ ರಸ್ತೆಗಳು ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆʼʼ ಎಂದು ವಿವರಿಸಿದರು.
ʼʼಈ ಹಿಂದೆಯೇ ಅಧಿಕಾರಿಗಳಿಗೆ ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅವರು ವರದಿ ತಯಾರು ಮಾಡಿದ್ದರು. ಆದರೆ ನಾನೇ ಖುದ್ದಾಗಿ ಕಣ್ಣಾರೇ ನೋಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಜತೆ ನಗರ ಪ್ರದಕ್ಷಿಣೆ ಮಾಡಿದೆ. ಈ ವೇಳೆ ಎಲ್ಲೆಲ್ಲಿ ಭೂ ಸ್ವಾಧೀನ ಮಾಡಬೇಕು ಎನ್ನುವ ಬಗ್ಗೆಯೂ ಚರ್ಚೆ ಮಾಡಿದ್ದೇನೆʼʼ ಎಂದರು.
ʼʼಭವಿಷ್ಯದಲ್ಲಿ ಮೆಟ್ರೋ ನಿಲ್ದಾಣಗಳು ಇರುವ ಕಡೆ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ ಅನೇಕ ಕಡೆ ರಸ್ತೆ ಬದಿ, ಖಾಸಗಿ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ. 3ನೇ ಹಂತದ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ ಡಬಲ್ ಡೆಕ್ಕರ್ ವ್ಯವಸ್ಥೆ ಇರಲೇಬೇಕು ಎನ್ನುವ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ. ದಿನ ಕಳೆದಂತೆ ಮುಂದಕ್ಕೆ ರಸ್ತೆಗಳನ್ನು ಅಗಲ ಮಾಡಲು ಕಷ್ಟವಾಗುತ್ತದೆ. ಜತೆಗೆ ಭೂ ಸ್ವಾಧೀನ ಪರಿಹಾರವು ಹೆಚ್ಚಳವಾದ ಕಾರಣಕ್ಕೆ ಈ ಪ್ರಮುಖ ತೀರ್ಮಾನ ಮಾಡಲಾಗಿದೆ. ನನಗೆ ಏರ್ಪೋರ್ಟ್ ರಸ್ತೆಯ ಮೆಟ್ರೋ ಮಾರ್ಗವನ್ನು ಈ ರೀತಿ ಮಾಡಬೇಕು ಎನ್ನುವ ಆಲೋಚನೆಯಿತ್ತು. ಈಗಾಗಲೇ ಪಿಲ್ಲರ್ಗಳನ್ನು ಹಾಕಿರುವ ಕಾರಣಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರು.
ಮೆಟ್ರೋ ಪಿಲ್ಲರ್ಗಳಲ್ಲಿ ಜಾಹೀರಾತಿಗೆ ಅವಕಾಶ
ʼʼಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ನಗರವನ್ನು ಸೌಂದರ್ಯೀಕರಣ ಮಾಡುವ ಸಲುವಾಗಿ ಬಿಬಿಎಂಪಿ, ಬಿಎಂಆರ್ಸಿಎಲ್ ಒಟ್ಟಿಗೆ ಸೇರಿ ತೀರ್ಮಾನ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜತೆಗೆ ಮೆಟ್ರೋ ಪಿಲ್ಲರ್ಗಳಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡಬೇಕು. ಎರಡೂ ಸಂಸ್ಥೆಗಳು ಶೇ. 50:50 ಅನುಪಾತದಲ್ಲಿ ಕೆಲಸ ಮಾಡಬೇಕು, ಆದಾಯವನ್ನು ಇದೇ ಮಾದರಿಯಲ್ಲಿ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆʼʼ ಎಂದು ವಿವರಿಸಿದರು.
ಬೆಂಗಳೂರು ಅಭಿವೃದ್ಧಿ; ಅನುದಾನದ ಬಗ್ಗೆ ಸಿಎಂಗೆ ವರದಿ ಸಲ್ಲಿಕೆ
ʼʼಹೆಬ್ಬಾಳ ಮೇಲ್ಸೇತುವೆ ಬಳಿ ಇರುವ ಬಿಡಿಎ ಜಾಗದಲ್ಲಿ ಅಲ್ಲಿ ಪರ್ಯಾಯ ರಸ್ತೆ ಮಾಡಲಾಗುತ್ತಿದೆ. ಇದು ಏಪ್ರಿಲ್ 30ಕ್ಕೆ ಕಾಮಗಾರಿ ಮುಗಿಸಬೇಕು, ಮೇ ಹೊತ್ತಿಗೆ ಉದ್ಘಾಟನೆಯಾಗಬೇಕು ಎಂದು ಸೂಚಿಸಲಾಗಿದೆ. ಈ ಕಾರಣಕ್ಕೆ ಗುತ್ತಿಗೆದಾರರನ್ನು ಕರೆಸಿ ಸೂಚನೆ ನೀಡಲಾಗಿದೆ. ತುಮಕೂರಿನಿಂದ ಕೆ.ಆರ್.ಪುರಂಗೆ ಹೋಗುವ ರಸ್ತೆ ಬಳಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಾಣಕ್ಕೆ ಬಿಡಿಎ, ಮೆಟ್ರೋ, ಬಿಬಿಎಂಪಿ ಸೇರಿ ಅಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಈ ಕಾಮಗಾರಿಯನ್ನು ಬಿಡಿಎ ನಿರ್ವಹಿಸಲಿದೆ. ರಾಜ್ಯ ಬಜೆಟ್ ಇರುವ ಕಾರಣಕ್ಕೆ ಬೆಂಗಳೂರು ಅಭಿವೃದ್ದಿ ಹಾಗೂ ನೀರಾವರಿ ಇಲಾಖೆಗೆ ಬೇಕಾದ ಅನುದಾನಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಶುಕ್ರವಾರ ಮುಖ್ಯಮಂತ್ರಿಗೆ ನೀಡಲಾಗುವುದುʼʼ ಎಂದು ಡಿಕೆಶಿ ಹೇಳಿದರು.
ʼʼಹೊಸದಾಗಿ ನಿರ್ಮಾಣ ಮಾಡುವ ಎಲ್ಲ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಸುಮಾರು 40 ಕಿ.ಮೀ. ಮಾರ್ಗದಲ್ಲಿ ನಿರ್ಮಾಣ ಮಾಡುವ ಆಲೋಚನೆಯಿದೆ. ನಾವು ಇಂದಿಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ಮುಂದಿನ 30 – 40 ವರ್ಷದ ಭವಿಷ್ಯವನ್ನು ಇಟ್ಟುಕೊಂಡು ಆಲೋಚನೆ ಮಾಡಲಾಗುವುದು. ಇದರ ಖರ್ಚು ವೆಚ್ಚವನ್ನು ಶೇ. 50: 50 ಅನುಪಾತದಲ್ಲಿ ಬಿಬಿಎಂಪಿ, ಬಿಎಂಆರ್ಸಿಎಲ್ ವಹಿಸಿಕೊಳ್ಳಲಿದೆʼʼ ಎಂದರು.
ಡಬಲ್ ಡೆಕ್ಕರ್ಗೆ 9,800 ಕೋಟಿ ರೂ. ವೆಚ್ಚ
ʼʼಡಬಲ್ ಡೆಕ್ಕರ್ ಮಾಡಲು ಹೆಚ್ಚುವರಿ 9,800 ಕೋಟಿ ರೂ. ವೆಚ್ಚವಾಗುತ್ತದೆ. ಈಗ ಪಶ್ಚಿಮ ಭಾಗದಲ್ಲಿ ಮಾತ್ರ ಮಾಡಲಾಗುತ್ತಿದೆ. ಈಗಾಗಲೇ ರಾಗಿಗುಡ್ಡ ಭಾಗದಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ. ಇನ್ನೂ ಒಂದಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ಎಲ್ಲವನ್ನು ಬಗೆಹರಿಸಿ ಮುಂದುವರಿಯಲಾಗುವುದುʼʼ ಎಂದು ತಿಳಿಸಿದರು.
ಬಜೆಟ್ ಅಲ್ಲಿ ಗ್ರೇಟರ್ ಬೆಂಗಳೂರು ಘೋಷಣೆ ಮಾಡಲಾಗುವುದೇ ಎಂದು ಕೇಳಿದಾಗ, ʼʼಬಿಡದಿ ಬಳಿ ಟೌನ್ ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಸಚಿವರು ತಿಳಿಸಿದ್ದಾರೆ. ಈಗಾಗಲೇ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಪಡೆಯಲು ಆಹ್ವಾನ ನೀಡಲಾಗಿದೆ. ರಿಜ್ವಾನ್ ಅವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ಬೆಂಗಳೂರಿನ ಎಲ್ಲ ಶಾಸಕರ ಸಲಹೆ ಪಡೆಯಿರಿ ಎಂದು ನಾನೇ ಹೇಳಿದ್ದೇನೆ. ಮಾಧ್ಯಮಗಳ ಸಲಹೆಯನ್ನೂ ಸಹ ಪಡೆಯಲಾಗುವುದುʼʼ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | KSDA Recruitment 2025: ಗಮನಿಸಿ; ಕೃಷಿ ಇಲಾಖೆಯಲ್ಲಿನ 945 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
2ನೇ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, ''ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ನನಗೆ ಮತ್ತು ಮುಖ್ಯಮಂತ್ರಿಗೆ ವರದಿ ಸಲ್ಲಿಕೆಯಾಗುತ್ತದೆ. ನಂತರ ವಿಮಾನ ನಿಲ್ದಾಣ ಪ್ರಾಧಿಕಾರದ ಅಭಿಪ್ರಾಯ ಕೇಳಲಾಗುವುದು. ಅವರ ತೀರ್ಮಾನ ನಂತರ ಮಾಹಿತಿ ನೀಡಲಾಗುವುದು'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.