Tourism Alert: ಪ್ರವಾಸಿಗರ ಗಮನಕ್ಕೆ: ಈ ವಾರಾಂತ್ಯದಲ್ಲಿ ದತ್ತಪೀಠಕ್ಕೆ ಬರಬೇಡಿ
ಬೆಂಗಳೂರಿನಿಂದ ವೀಕೆಂಡ್ನಲ್ಲಿ ಸಾವಿರಾರು ಪ್ರವಾಸಿಗರು ಚಿಕ್ಕಮಗಳೂರಿನ ಹಿಲ್ ಸ್ಟೇಶನ್ಗಳಿಗೆ ಲಗ್ಗೆಯಿಡುತ್ತಾರೆ. ಆದರೆ ಈ ವಾರಾಂತ್ಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಇಲ್ಲಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮ.

ಮುಳ್ಳಯ್ಯನಗಿರಿ

ಚಿಕ್ಕಮಗಳೂರು: ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Datthapeetha) ಮಾರ್ಚ್ 15ರಿಂದ 17 ರವರೆಗೆ ಮೂರು ದಿನಗಳ ಉರೂಸ್ ನಡೆಯಲಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ ಈ ಉರೂಸ್ಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ (Tourism Alert) ವಿಧಿಸಲಾಗಿದೆ.
ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ಇಂದಿನಿಂದ (ಮಾರ್ಚ್ 15) ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾಡಳಿತದ ನೇತೃತ್ವದಲ್ಲಿ ಉರೂಸ್ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 15 ರಿಂದ 17 ರ ವರೆಗೂ ಚಂದ್ರದ್ರೋಣ ಪರ್ವತ (Chandradrona Hills) ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಸಾವಿರಾರು ಜನರು ಆಗಮಿಸುತ್ತಾರೆ. ಉರೂಸ್ ಆಚರಣೆಯಲ್ಲಿ ಸೂಫಿ ಸಂತರು ಭಾಗಿಯಾಗಲಿದ್ದಾರೆ. ಉರೂಸ್ ಆಚರಣೆ ಹಿನ್ನೆಲೆಯಲ್ಲಿ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ (ದತ್ತಪೀಠ) ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಒಂದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಶಾಖಾದ್ರಿ ಕುಟುಂಬದಿಂದ ಉರೂಸ್ ಆಚರಣೆಗೆ ಪಟ್ಟು
ನಮ್ಮ ನೇತೃತ್ವದಲ್ಲಿ ಉರೂಸ್ ಆಚರಣೆ ನಡೆಯಬೇಕೆಂದು ಶಾಖಾದ್ರಿ ಕುಟುಂಬ ಪಟ್ಟು ಹಿಡಿದಿದೆ. ವಿವಾದಿತ ಗುಹೆಯೊಳಗಿನ ಗೋರಿಗಳಿಗೆ ಗಂಧ ಲೇಪನಕ್ಕೆ ಶಾಖಾದ್ರಿ ಕುಟುಂಬ ಅವಕಾಶ ಕೇಳಿದೆ. ಆದರೆ, ಶಾಖಾದ್ರಿ ಕುಟುಂಬದ ನೇತೃತ್ವದ ಉರೂಸ್ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಉರೂಸ್, ಗಂಧ ಲೇಪನಕ್ಕೆ ಅವಕಾಶ ಕೇಳಿ ಶಾಖಾದ್ರಿ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಯಾವ ಸ್ಥಳಗಳು ಬಂದ್?
ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಧಾರಾ ಜಲಪಾತಗಳನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ. ಕುದುರೆಮುಖ, ಕೆಮ್ಮಣ್ಣುಗುಂಡಿ, ಹೆಬ್ಬೆ ಫಾಲ್ಸ್, ಹಿರೇಕೊಳಲೆ ಸರೋವರ, ಶೃಂಗೇರಿ, ಕಳಸ, ಹೊರನಾಡು ಮುಂತಾದ ತಾಣಗಳು ಮುಕ್ತವಾಗಿವೆ.
ಇದನ್ನೂ ಓದಿ: ರೈಲಿನಲ್ಲಿ ಟೀ-ಕಾಫಿ ಕುಡಿಯುದಕ್ಕೂ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ!