Chikkaballapur News: ಆಯೋಜಕರ ವಿರುದ್ಧ ಗರಂ ದೂರದೂರುಗಳಿಂದ ಬಂದಿದ್ದ ಸ್ವಸಹಾಯ ಸಂಘದ ಮಹಿಳೆಯರು
ಅಂಬೇಡ್ಕರ್ ಭವನದ ಆವರಣದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಸರಸ್ ಮೇಳ ಗ್ರಾಹಕ ರನ್ನು ನಿರೀಕ್ಷಿತ ಪ್ರಮಾಣದಲ್ಲಿ ಸೆಳೆಯುವಲ್ಲಿ ವಿಫಲವಾಗಿರುವಂತೆ ಊಟೋಪಚಾರದ ವಿಚಾರ ದಲ್ಲಿ ಬುಧವಾರ ಮಹಿಳೆಯರಿಂದ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಆಯೋಜಕರ ನಡೆಯ ವಿರುದ್ಧ ಕಿಡಿಕಾರಿದ ಘಟನೆಯೂ ನಡೆಯಿತು

ಟೋಕನ್ ಇಲ್ಲದೆ ಊಟವಿಲ್ಲದೆ ಅಡಿಗೆ ಬಡಿಸುವವರ ಜತೆ ವಾಗ್ವಾದಕ್ಕಿಳಿದಿರುವ ಮಹಿಳೆಯರು

ಚಿಕ್ಕಬಳ್ಳಾಪುರ : ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಸಂಜೀವಿನಿ-ಡೇ-ಎನ್.ಅರ್.ಎಲ್.ಎA, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಎರಡನೇ ದಿನ ಊಟಕ್ಕಾಗಿ ಪರದಾಡಿದ ಪ್ರಸಂಗ ನಡೆಯಿತು.

ಅಂಬೇಡ್ಕರ್ ಭವನದ ಆವರಣದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಸರಸ್ ಮೇಳ ಗ್ರಾಹಕ ರನ್ನು ನಿರೀಕ್ಷಿತ ಪ್ರಮಾಣದಲ್ಲಿ ಸೆಳೆಯುವಲ್ಲಿ ವಿಫಲವಾಗಿರುವಂತೆ ಊಟೋಪಚಾರದ ವಿಚಾರ ದಲ್ಲಿ ಬುಧವಾರ ಮಹಿಳೆಯರಿಂದ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಆಯೋಜಕರ ನಡೆಯ ವಿರುದ್ಧ ಕಿಡಿಕಾರಿದ ಘಟನೆಯೂ ನಡೆಯಿತು. ಊಟ ತಂದು ಬಡಿಸುವ ಸಿಬ್ಬಂದಿಯ ಬಳಿ ಮಹಿಳೆಯರ ಪ್ರಶ್ನೆಗೆ ಉತ್ತರವೇ ಇರಲಿಲ್ಲ.ನಮಗೆ ೧೦೦ ಮಂದಿಗೆ ರೈಸ್ಬಾಸ್ ವಡೆ ತರಲು ಹೇಳಿದ್ದಾರೆ.ನಾವು ಅದರಂತೆ ತಂದಿದ್ದೇವೆ ಎನ್ನುತ್ತಾರೆ. ಆದರೆ ೧೦೦ ಮಂದಿಗೆ ಆಗುವಷ್ಟು ತಟ್ಟೆ ಲೋಟಗಳನ್ನೂ ತಂದಿರಲಿಲ್ಲ ಎನ್ನುವುದನ್ನು ಮನಗಂಡ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು.
ಹೌದು ಜಿಲ್ಲೆಯಾದ್ಯಂತ ಇರುವ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರೇ ಉತ್ಪಾಧಿಸಿದ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶ ದಿಂದ ಸರಸ್ ಮೇಳ ಆಯೋಜಿಸಲಾಗಿದೆ.ಇಲ್ಲಿಗೆ ಜಿಲ್ಲೆಯಾದ್ಯಂತ ನೂರಾರು ಮಹಿಳಾ ಸಂಘದ ಸದಸ್ಯೆಯರನ್ನು ಆಹ್ವಾನಿಸಲಾಗಿದೆ. ಆದರೆ ಊಟದ ವಿಚಾರದಲ್ಲಿ ಒಂದು ಮಳಿಗೆಗೆ ೨ ಟೋಕನ್ ಮಾತ್ರ ವಿತರಣೆ ಮಾಡಲಾಗಿದೆ. ಹೀಗಾಗಿ ಉಳಿದ ಸದಸ್ಯರಿಗೆ ಊಟವಿಲ್ಲದೆ ಪರದಾಡುವಂತಾಗಿದ್ದು ಊಟ ದೊರೆಯದ ಮಹಿಳೆಯರು ಆಯೋಜಕರಿಗೆ ಹಿಡಿ ಶಾಪ ಹಾಕುತ್ತಿದ್ದರು.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಹೆಸರು ಹೇಳಲು ಇಚ್ಚಿಸದ ಮುರುಗಮಲ್ಲ ಭಾಗದ ಮಹಿಳೆಯೊಬ್ಬರು ಹಸಿದ ಹೊಟ್ಟೆಗೆ ಅನ್ನ ನೀಡದಷ್ಟು ಆಯೋಜಕರಿಗೆ ಬಡತನವಿದ್ದರೆ ನಮಗೆ ಮೊದಲೇ ಹೇಳಬಹುದಿತ್ತು. ನಾವು ಊರಿಂದ ಬರುವಾಗ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುತ್ತಿದ್ದೆವು. ಬೆಳಗ್ಗೆ ೬ ಗಂಟೆಗೇ ಬರಬೇಕು ಎಂದು ನಮ್ಮನ್ನು ಇಲ್ಲಿಗೆ ಕರೆಸಿ ಊಟ ಹಾಕದೆ ಉಪ ವಾಸದಲ್ಲಿ ಇರುವಂತೆ ಮಾಡಿರುವ ಕ್ರಮ ಸರಿಯಲ್ಲ.ಇನ್ಯಾವತ್ತೂ ಕೂಡ ಇವರ ಆಹ್ವಾನಕ್ಕೆ ನಾವು ಬರುವುದೇ ಇಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆ ಮಹಿಳಾ ಸಬಲೀಕರಣಕ್ಕೆ ಆಧ್ಯತೆ ನೀಡುವ ಉದ್ದೇಶದಲ್ಲಿ ಆಯೋಜನೆ ಮಾಡಿರುವ ನಮ್ಮ ಚಿಕ್ಕಬಳ್ಳಾಪುರ ಸರಸ್ ಮೇಳ ೨೦೨೫ ಮಹಿಳೆಯರಿಗೆ ಊಟ ಹಾಕುವಲ್ಲಿ ವಿಫಲವಾಗಿರು ವುದು ಸರಿಯಲ್ಲ. ಇನ್ನು ಸರಿಯಾದ ಪ್ರಚಾರವಿಲ್ಲದ ಕಾರಣ ನಗರವಾಸಿಗಳು ಜಿಲ್ಲಾಡಳಿತ ನಿರೀಕ್ಷೆ ಮಾಡಿದಷ್ಟು ಇತ್ತ ಬರದೆ ಮಾರಾಟಗಾರರು ಕೂಡ ಗ್ರಾಮಕರಿಲ್ಲದೆ ನೊಣ ಹೊಡೆಯುತ್ತಿದ್ದ ದೃಶ್ಯ ಗಳು ಕಂಡು ಬಂದವು.ಇಷ್ಟೆಲ್ಲಾ ಗದ್ದಲ ಗಲಾಟೆ ಆಗುತ್ತಿದ್ದರೂ ಕೂಡ ಆಯೋಜಕರು ಮಾತ್ರ ಇತ್ತ ತಲೆಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಲಕ್ಷ ಗಟ್ಟಲೆ ಕಾರ್ಯಕ್ರಮಕ್ಕೆ ವ್ಯಯ ಮಾಡುವ ಇಲಾಖೆ ಊಟದ ವಿಚಾರದಲ್ಲಿ ಎಡವಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು ಹಸಿ ದವರ ಶಾಪ ಇವರಿಗೆ ತಪ್ಪದಿರದು ಎನ್ನುವುದು ನೊಂದ ಜೀವದ ಮಾತಾಗಿತ್ತು.
ಕೋಣ ಈದಿದೆ ಎಂದರೆ ಕೊಟ್ಟಿಗೆಗೆ ಕಟ್ಟು ಎಂಬಂತಿರುವ ಸಂಜೀವಿನಿ ಡೇ, ಎನ್.ಆರ್.ಎಲ್.ಎಂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಅಧಿಕಾರಿಗಳು ವಾರ್ಷಿಕ ಕಾರ್ಯಕ್ರಮಗಳನ್ನು ಪೂರ್ಣ ಗೊಳಿಸುವ ಧಾವಂತದಲ್ಲಿ ಈ ಮೇಳ ಆಯೋಜನೆ ಮಾಡಿದಂತಿದೆ.ಯಾರ ಅಭ್ಯುದಯದ ಹೆಸರಿ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೋ ಅವರಿಗೇ ಊಟ ಹಾಕದಿರುವುದು ಸರಿಯಲ್ಲ, ಊಟಕ್ಕಾಗಿ ಅವರು ಪರದಾಟ ನಡೆಸುತ್ತಿದ್ದ ಸಂದರ್ಭವನ್ನು ಕಣ್ಣಾರೆ ಕಂಡ ಕೆಲವೊಂದಿಷ್ಟು ಗ್ರಾಹಕರು ಕೂಡ ಆಯೋಜಕರ ನಡೆಯನ್ನು ತೀವ್ರವಾಗಿ ಖಂಡಿಸಿ ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಆದರೂ ಈತರದ ಅಪಸವ್ಯಗಳಿಗೆ ಆಸ್ಪದ ಇಲ್ಲದಂತೆ ಕಾರ್ಯಕ್ರಮ ಆಯೋಜನೆ ಮಾಡಲಿ,ಇಲಾಖೆಯ ಸೂಚನೆಯ ಮೇಲೆ ಜಿಲ್ಲೆಯ ದೂರದೂರುಗಳಿಂದ ಮಕ್ಕಳು ಮರಿಗಳನ್ನು ಜತೆಗೆ ಕರೆದುಕೊಂಡು ಬಂದ ಮಹಿಳೆಯರ ಹೊಟ್ಟೆಗೆ ಅನ್ನ ನೀಡಿ ಆತಂತರ ಬೇಕಾದ ಉಪನ್ಯಾಸ ನೀಡಲಿ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.