Jamal Siddiqui: ಸನಾತನ ಧರ್ಮ ಇಸ್ಲಾಂಗಿಂತ ಮೊದಲೇ ಇತ್ತು...ಮುಸ್ಲಿಮರೆಲ್ಲರೂ ರಾಮನ ವಂಶಸ್ಥರು: ಜಮಾಲ್ ಸಿದ್ದಿಕಿ
ಸನಾತನ ಧರ್ಮ ಇಸ್ಲಾಂಗಿಂತ ಮೊದಲೇ ಇತ್ತು. ಮುಸ್ಲಿಮರೆಲ್ಲ ರಾಮನ ವಂಶಸ್ಥರು. ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ.


ನವದೆಹಲಿ: ಸನಾತನ ಧರ್ಮ (Sanatan Dharma) ಇಸ್ಲಾಂಗಿಂತ (Islam) ಮೊದಲೇ ಇತ್ತು. ಮುಸ್ಲಿಮರೆಲ್ಲ ರಾಮನ (Ram) ವಂಶಸ್ಥರು. ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ (BJP's Minority Morcha) ರಾಷ್ಟ್ರೀಯ ಅಧ್ಯಕ್ಷ (National President) ಜಮಾಲ್ ಸಿದ್ದಿಕಿ (Jamal Siddiqui) ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಸನಾತನ ಧರ್ಮ ಮತ್ತು ಇಸ್ಲಾಂ ನಡುವೆ ಇರುವ ಸಂಬಂಧ ಮತ್ತು ಸಾಂಸ್ಕೃತಿಕ ಸಮಾನತೆ ಹಾಗೂ ಇಸ್ಲಾಮಿಕ್ ಸಂಪ್ರದಾಯದಲ್ಲಿ ಹಿಂದೂ ದೇವತೆಗಳ ಸ್ಥಾನಮಾನ ಹಾಗೂ ಭಾರತದ ವೈವಿಧ್ಯಮಯ ಸಮುದಾಯಗಳ ಹೆಣೆದುಕೊಂಡಿರುವ ಪರಂಪರೆಯ ಬಗ್ಗೆ ವರ್ಣಿಸಿದ್ದಾರೆ.
ಸನಾತನ ಧರ್ಮವು ಇಸ್ಲಾಂಗಿಂತ ಬಹಳ ಹಿಂದೆಯೇ ಬಂದಿತು ಎಂದು ಹೇಳಿರುವ ಸಿದ್ದಿಕಿ, ಅದು ನಾಗರಿಕತೆಯ ಅಡಿಪಾಯ. ಎಲ್ಲ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ.
ಭಾರತೀಯ ಸಂಸ್ಕೃತಿಯ ಆಳವಾದ ಐತಿಹಾಸಿಕ ಬೇರುಗಳ ಬಗ್ಗೆ ವರ್ಣಿಸಿರುವ ಅವರು, ರಾಮ ಮತ್ತು ಕೃಷ್ಣನಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ. ಈ ಇಬ್ಬರು ಪೂಜ್ಯ ವ್ಯಕ್ತಿಗಳು ಇಸ್ಲಾಮಿಕ್ ಆಧ್ಯಾತ್ಮಿಕ ವಂಶಾವಳಿಯಲ್ಲಿ ಸ್ಥಾನ ಹೊಂದಿರಬಹುದು ಎಂದು ಪ್ರತಿಪಾದಿಸಿದ್ದಾರೆ.
ಇಸ್ಲಾಮಿಕ್ ದೇವತಾಶಾಸ್ತ್ರದಲ್ಲಿ ಆಧಾರವಾಗಿಟ್ಟುಕೊಂಡು ಇಸ್ಲಾಂ ಒಬ್ಬ ಪ್ರವಾದಿಯನ್ನು ಮಾತ್ರವಲ್ಲ ಅನೇಕ ಪ್ರವಾದಿಗಳನ್ನು ಅಂಗೀಕರಿಸುತ್ತದೆ ಎಂದು ವಿವರಿಸಿದ್ದಾರೆ.
ಕುರಾನ್ನಲ್ಲಿ 25 ಪ್ರವಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಹದೀಸ್ ಮತ್ತು ಸಂಪ್ರದಾಯದ ಪ್ರಕಾರ ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಭಗವಾನ್ ರಾಮ ಮತ್ತು ಶ್ರೀಕೃಷ್ಣ ಅವರಲ್ಲಿ ಇದರಲ್ಲಿ ಸೇರಿಲ್ಲ ಎಂದು ನಾವು ಹೇಗೆ ಹೇಳಬಹುದು? ಅವರು ದೇವರ ಸಂದೇಶವಾಹಕರಾಗಿರಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದ ಸಿದ್ದಿಕಿ, ಇದು ಭಾರತದಲ್ಲಿ ಮುಸ್ಲಿಂ ಸಮುದಾಯದ ಬೇರುಗಳು ಪ್ರಾಚೀನ ಹಿಂದೂ ಸಂಪ್ರದಾಯದೊಂದಿಗೆ ಹೆಣೆದುಕೊಂಡಿವೆ ಎಂದು ಸೂಚಿಸುತ್ತದೆ. ಪೂಜಾ ವಿಧಾನಗಳು ಬದಲಾಗಿರಬಹುದು. ಆದರೆ ಆಧಾರವಾಗಿರುವ ಸಂಸ್ಕೃತಿ ಸ್ಥಿರವಾಗಿ ಉಳಿದಿದೆ. ನಮ್ಮ ಗುರುತು ಇನ್ನೂ ಸನಾತನವಾಗಿದೆ ಎಂದು ಅವರು ತಿಳಿಸಿದ್ದಾರೆ.