ಟ್ರಾನ್ಸ್ಫಾರ್ಮರ್ಗೆ ಪೂಜೆ ಮಾಡಿದ ಮಧ್ಯ ಪ್ರದೇಶದ ನಾಗರಿಕರು; ಕಾರಣವೇನು?
ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ಗಾಂಧಿನಗರ ಪ್ರದೇಶದ ಗ್ರಾಮಸ್ಥರು ಹೊಸ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಕೆಯನ್ನು ಹಬ್ಬದಂತೆ ಆಚರಿಸಿದ್ದಾರೆ. ಗ್ರಾಮಸ್ಥರು ಆರತಿ ಮಾಡಿ, ಸಿಹಿತಿಂಡಿಗಳನ್ನು ವಿತರಿಸಿ, ಅದರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು. ಸದ್ಯ ಈ ವಿಚಾರ ವೂರಲ್ ಆಗಿದೆ.


ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಭಿಂದ್ (Bhind) ಜಿಲ್ಲೆಯ ಗಾಂಧಿನಗರ ಪ್ರದೇಶದ ಗ್ರಾಮಸ್ಥರು 15 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಳೆಯ ವಿದ್ಯುತ್ ಟ್ರಾನ್ಸ್ಫಾರ್ಮರ್ (Electricity Transformer) ಸುಟ್ಟುಹೋದ ಬಳಿಕ ಹೊಸದರ ಅಳವಡಿಕೆಯನ್ನು ಹಬ್ಬದಂತೆ ಆಚರಿಸಿದ್ದಾರೆ. ಗ್ರಾಮಸ್ಥರು ಆರತಿ ಮಾಡಿ, ಸಿಹಿತಿಂಡಿಗಳನ್ನು ವಿತರಿಸಿ, ಹೊಸ ಟ್ರಾನ್ಸ್ಫಾರ್ಮರ್ನ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.
ಗಾಂಧಿನಗರದಲ್ಲಿ ಈ ಬೇಸಗೆಯಲ್ಲಿ ವಿದ್ಯುತ್ಗೆ ತೀವ್ರ ಸಂಕಷ್ಟ ಎದುರಾಗಿತ್ತು. ಹಳೆಯ ಟ್ರಾನ್ಸ್ಫಾರ್ಮರ್ ಸುಟ್ಟುಹೋದ ಕಾರಣ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯರು ಈ ಬಗ್ಗೆ ಶಾಸಕ ನರೇಂದ್ರ ಸಿಂಗ್ ಕುಶ್ವಾಹ ಅವರಿಗೆ ಮನವರಿಕೆ ಮಾಡಿದಾಗ, ಎರಡು ಗಂಟೆಗಳ ಒಳಗೆ ಹೊಸ ಟ್ರಾನ್ಸ್ಫಾರ್ಮರ್ ತಂದು ಅಳವಡಿಸಲು ಕ್ರಮ ಕೈಗೊಳ್ಳಲಾಯಿತು. ಈ ಕ್ಷಿಪ್ರ ಕ್ರಮಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistan National Symbol Balloon: ಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆ
ಸ್ಥಳೀಯರ ಪ್ರಕಾರ, ವಿದ್ಯುತ್ ಕಂಪನಿಯ ಮೇಲಿನ ಭರವಸೆ ಕಡಿಮೆಯಾಗಿದೆ. “ವಿದ್ಯುತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರಾನ್ಸ್ಫಾರ್ಮರ್ ಹಾಳಾದರೆ, ಅದನ್ನು ಬದಲಾಯಿಸಲು 10-15 ದಿನಗಳು ಬೇಕಾಗುತ್ತವೆ. ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ” ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ ಈ ಹಿನ್ನೆಲೆಯಲ್ಲಿ, ಹೊಸ ಟ್ರಾನ್ಸ್ಫಾರ್ಮರ್ ದೀರ್ಘ ಕಾಲ ಕಾರ್ಯನಿರ್ವಹಿಸಲಿ ಎಂದು ದೇವರಲ್ಲಿ ಪೂಜೆ ಸಲ್ಲಿಸಲಾಯಿತು.
ಗ್ರಾಮಸ್ಥರು ಟ್ರಾನ್ಸ್ಫಾರ್ಮರ್ಗೆ ಆರತಿ ಬೆಳಗಿ, ಪ್ರಸಾದ ವಿತರಿಸಿದರು. ಈ ಟ್ರಾನ್ಸ್ಫಾರ್ಮರ್ ಗ್ರಾಮಕ್ಕೆ ಹೊಸ ಬೆಳಕು ತಂದಿದೆ. ಇದು ವರ್ಷಗಟ್ಟಲೆ ಕೆಡದೇ ಇರಲಿ ಎಂದು ದೇವರಲ್ಲಿ ಬೇಡಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ಈ ಘಟನೆಯು ವಿದ್ಯುತ್ ಕಂಪನಿಗಳ ನಿರ್ವಹಣೆಯ ಕೊರತೆಯನ್ನು ಎತ್ತಿಹಿಡಿದಿದೆ.