Vinayak V Bhat Column: ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ
ಒಳ್ಳೆಯ ಅನುಭವಿ ಚಾಲಕನಾತ. ಆದರೆ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ. ಡ್ರೈವರು ಗಳೇ ಹಾಗೆ, ಒಂದೋ ಮಾತೇ ಆಡುವುದಿಲ್ಲ, ಇಲ್ಲದಿದ್ದರೆ ಮಾತು ನಿಲ್ಲಿಸುವುದೇ ಇಲ್ಲ. ಈತ ಸ್ವಲ್ಪ ವಾಚಾಳಿ ಎಂತಲೇ ಹೇಳಬಹುದಾದಷ್ಟು ಮಾತುಗಾರನಾಗಿದ್ದ. ಅವನ ಮಾತು ನಿಧಾನಕ್ಕೆ ತಮಿಳು ನಾಡು-ಕರ್ನಾಟಕ, ಕನ್ನಡ-ತಮಿಳು ಎನ್ನುವಲ್ಲಿಗೆ ಹೊರಳಿತು.


ವಿದ್ಯಮಾನ
ಭಾಷೆ ಬಗ್ಗೆ ಮಾತಾಡಲು ಕಮಲ್ ಹಾಸನ್ ಏನು ಭಾಷಾ ಪಂಡಿತರೇ? ಅವರೊಬ್ಬ ಸಿನಿಮಾ ನಟ ಹಾಗೂ ರಾಜಕೀಯದಲ್ಲಿ ಸೋತು ಸುಣ್ಣವಾದ ಎಳಸು ನಾಯಕ. ಫುಲ್ ಸ್ಟಾಪ್. ತೆಂಡೂಲ್ಕರ್, ಅಜರುದ್ದೀನ್ ಕೃಷಿ ಬಗ್ಗೆ ಮಾತಾಡಿದರೆ ಹೇಗೋ, ಕಮಲ್ ಭಾಷೆ ಬಗ್ಗೆ ಮಾತಾಡಿದರೂ ಹಾಗೇ. ಅದಕ್ಕೆಲ್ಲ ಬಹಳ ತಲೆಕೆಡಿಸಿಕೊಳ್ಳಬಾರದು. ಇಂಥ ಅಹಂಕಾರದ ರೋಗಗಳಿಗೆ ಉದಾಸೀನವೇ ಔಷಧ ಎಂದು ಕಮಲ್ ಅವರ ಇತ್ತೀಚಿನ ಹೇಳಿಕೆಗೆ ವಿಶ್ವೇಶ್ವರ ಭಟ್ಟರು ತಮ್ಮ ಅಂಕಣದಲ್ಲಿ ಪ್ರೌಢಿಮೆಯಿಂದ ಪ್ರತಿಸ್ಪಂದಿಸಿದ್ದಾರೆ. ಅಷ್ಟೇ ಅಲ್ಲದೆ, ಕಮಲ್ ಅಂಥವರ ಹೇಳಿಕೆಯಿಂದ ಪೆಟ್ಟಾಗು ವಷ್ಟು ಕನ್ನಡಿಗರ ಸ್ವಾಭಿಮಾನ ದುರ್ಬಲವಾಗಿಲ್ಲ,
ನಮ್ಮ ಅಸ್ತಿತ್ವ, ಅಸ್ಮಿತೆ, ಶುಂಠಿ ಕೊಂಬು ಕಮಲ್ ಹೇಳಿಕೆಯಿಂದ ನಿರ್ಧಾರವಾಗುವುದಲ್ಲ ಎಂದು ಕನ್ನಡ ಮನಸ್ಸುಗಳಿಗೆ ಸ್ವಲ್ಪ ಸಾಂತ್ವನವನ್ನೂ ಮತ್ತು ನಿಜವಾದ ಕನ್ನಡದ ಅಸ್ಮಿತೆ ಯಾವುದು ಎನ್ನುವುದನ್ನೂ ಮಾರ್ಮಿಕವಾಗಿ ಭಟ್ಟರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ಆದರೂ, ಎಲ್ಲಿಂದಲೋ ಬಂದವರೊಬ್ಬರು ನಮ್ಮ ಕನ್ನಡ ಭಾಷೆಗೆ, ತಮ್ಮ ತಮಿಳು ಭಾಷೆ ತಾಯಿ ಎಂದು ನಮ್ಮವರ ಮುಂದೆಯೇ, ನಮ್ಮ ನೆಲದ ನಿಂತು ಹೇಳುತ್ತಿದ್ದರೂ, ಶಿವರಾಜ್ ಕುಮಾರ್ ಅವರನ್ನೂ ಸೇರಿ, ಅಲ್ಲಿರುವ ಯಾರೂ ಏನೂ ಮಾಡಲಾಗಲಿಲ್ಲವ ಎನ್ನುವ ನೋವು ನಿಜವಾದ ಕನ್ನಡಿಗರಿಗೆ ಇದ್ದೇ ಇದೆ. ಪಾಪ! ಕಮಲ್ ಏನೋ ಬಾಯಿ ತಪ್ಪಿ ಹೇಳಿರಬಹುದು ಎನ್ನುವ ಹಾಗೂ ಇಲ್ಲ, “ನಾನು ಸರಿಯಾಗೇ ಹೇಳಿದ್ದೇನೆ, ಹೇಳಿರುವು ದನ್ನು ಪ್ರೀತಿಯಿಂದ ಹೇಳಿದ್ದೇನೆ, ಹಾಗಾಗಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ" ಎಂದು ಹತ್ತು ಬಾರಿ ಹೇಳಿದ್ದಾರೆ ಕಮಲ.

ಅಲ್ಲಿಗೆ, ಇದು ಉದ್ದೇಶಪೂರ್ವಕವಾಗಿ ಆಡಿರುವ ಮಾತು ಎನ್ನುವುದು ಸಾಬೀತಾದಂತಾ ಯಿತು. ಕನ್ನಡದ ನೆಲದಲ್ಲಿ ನಿಂತು ಮಾತನಾಡಿದರೆ, ಅದರಲ್ಲೂ ಕನ್ನಡಕ್ಕಾಗಿ ಸಾಕಷ್ಟು ದುಡಿದ ಡಾ. ರಾಜ್ಕುಮಾರ್ ಕುಟುಂಬದಿಂದ ಬಂದ ಹಿರಿಯ ನಟ ಶಿವರಾಜ್ ಕುಮಾರ್ ಅವರು ‘ಹೌದು’ ಎಂದು ತಲೆಯಾಡಿಸುವಂತೆ ಮಾಡಿದರೆ, ತಮ್ಮ ಉದ್ದೇಶ ಈಡೇರಿದಂತಾ ಯ್ತು ಎನ್ನುವಂತಿತ್ತು ಕಮಲ್ ಧೋರಣೆ.
ಅಂತೂ, ಎಲ್ಲಿ ಮಾತನಾಡಬಾರದೋ ಅಲ್ಲಿ ಮಾತನಾಡಿ ಕಮಲ್ ಕೆಟ್ಟವರಾದರೆ, ಎಲ್ಲಿ ಮಾತ ನಾಡಬೇಕಾಗಿತ್ತೋ ಅಲ್ಲಿ ಮಾತನಾಡದೇ ಶಿವರಾಜ್ಕುಮಾರ್ ಕೆಟ್ಟವರಾದರು. ಕೆಲ ದಿನಗಳ ಹಿಂದೆ ನಾನು ಕುಟುಂಬದ ಜತೆಗೆ ತಮಿಳುನಾಡು ಪ್ರವಾಸದಲ್ಲಿದ್ದೆ. ಸುತ್ತಾಡಲು ಅಲ್ಲಿನದೇ ವಾಹನವನ್ನು ಬಾಡಿಗೆ ಪಡೆದಿದ್ದೆ.
ಒಳ್ಳೆಯ ಅನುಭವಿ ಚಾಲಕನಾತ. ಆದರೆ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ. ಡ್ರೈವರುಗಳೇ ಹಾಗೆ, ಒಂದೋ ಮಾತೇ ಆಡುವುದಿಲ್ಲ, ಇಲ್ಲದಿದ್ದರೆ ಮಾತು ನಿಲ್ಲಿಸುವುದೇ ಇಲ್ಲ. ಈತ ಸ್ವಲ್ಪ ವಾಚಾಳಿ ಎಂತಲೇ ಹೇಳಬಹುದಾದಷ್ಟು ಮಾತುಗಾರನಾಗಿದ್ದ. ಅವನ ಮಾತು ನಿಧಾನಕ್ಕೆ ತಮಿಳು ನಾಡು-ಕರ್ನಾಟಕ, ಕನ್ನಡ-ತಮಿಳು ಎನ್ನುವಲ್ಲಿಗೆ ಹೊರಳಿತು.
ಯಾವುದು ಶ್ರೇಷ್ಠ, ಯಾವುದು ನಿಕೃಷ್ಟ ಎನ್ನುವುದನ್ನು ನಿಧಾನವಾಗಿ ನನಗೆ ವಿವರಿಸುತ್ತಾ, ಅದಕ್ಕೆ ನನ್ನ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದನ್ನು ಆತ ಪರೀಕ್ಷಿಸುತ್ತಿದ್ದಂತೆ ನನಗೆ ಭಾಸವಾಯಿತು. “ನೋಡಿ ಶಾರ್, ಒಂದುಕಾಲದಲ್ಲಿ ಶ್ರೀರಂಗಪಟ್ಟಣ, ನಂಜನಗೂಡು, ಮೈಸೂರು ಮತ್ತು ಬೆಂಗಳೂರು ಎಲ್ಲ ತಮಿಳುನಾಡಿಗೇ ಸೇರಿತ್ತು, ಅಲ್ಲಿನ ದೇವಸ್ಥಾನಗಳಲ್ಲಿ ತಮಿಳಿನಲ್ಲಿ ಬರೆದ ಫಲಕಗಳಿವೆ ಗೊತ್ತಾ?" ಎಂದ.
ಇದನ್ನೂ ಓದಿ: Vinayak V Bhat Column: ಈ ನೆತ್ತರಿಗೆ ಉತ್ತರಿಸುವ ದಾಯಿತ್ವ ನಮ್ಮ ಮೇಲಿದೆ
ಯಾಕೋ ಇದು ಜಾಸ್ತಿಯಾಯಿತು ಎನಿಸಿ, “ಅಲಹಾಬಾದು ಮತ್ತು ಅಹಮದಾಬಾದೂ ತಮಿಳು ನಾಡಿಗೇ ಸೇರಿತ್ತು ಎಂದು ಎಲ್ಲೋ ಕೇಳಿದ್ದೆ, ಹೌದಾ?" ಎಂದೆ. ಅವನಿಗೆ ಅರ್ಥವಾಗಿ ಹೋಯಿತು ನನ್ನ ಮಾತಿನ ವ್ಯೂಹ. ನಾನು ಅಲ್ಲಿಗೇ ಬಿಡದೇ, “ನಿಮ್ಮ ಪುರುಚ್ಚಿ ತಲೈವಿ ಜಯಲಲಿತಾ ಅವರ ಊರು ಯಾವುದು ನಿಮಗೆ ಗೊತ್ತಾ?" ಎಂದೆ.
ಆತ ಮಾತನ್ನಾಡುವುದನ್ನು ನಿಲ್ಲಿಸದಿದ್ದರೂ, ಅಲ್ಲಿಂದ ಮುಂದೆ ಅವನಿಂದ ಮೈಮೇಲೆ ಬರುವ ಮಾತುಗಳಿರಲಿಲ್ಲ. ಅದು ‘ನಾವೇ ಶ್ರೇಷ್ಠರು, ನಮ್ಮಿಂದಲೇ ಪ್ರಪಂಚದ ಆದಿಯಾಗಿದ್ದು’ ಎನ್ನುವ ವ್ಯಾಧಿ. ಇದು ಕಮಲ್ ಅಂತಲ್ಲ, ಬಹುತೇಕ ತಮಿಳರಿಗೆ ಇರುವಂಥ ವ್ಯಾಧಿ ಎನ್ನುವುದಕ್ಕಾಗಿ ಡ್ರೈವರ್ನ ವೃತ್ತಾಂತವನ್ನು ಹೇಳಬೇಕಾಯಿತು.
ಈ ಥರದ ಆಧಾರ ರಹಿತ ಕಥೆ ಕಟ್ಟುವಲ್ಲಿ ಮೊದಲಿನಿಂದಲೂ ಎತ್ತಿದ ಕೈ ಆದ ತಮಿಳು ತಲೆಗಳ (ತಲೈ) ಕುರಿತು, ಮದ್ರಾಸಿನ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಹಳ ಕಾಲ ಕೆಲಸಮಾಡಿ, ಕೊನೆಗೆ ಪ್ರಾಚಾರ್ಯರಾಗಿ ನಿವೃತ್ತರಾದ ನಮ್ಮವರೇ ಆದ ಡಾ.ಬಿ.ಜಿ.ಎಲ್ ಸ್ವಾಮಿಯವರು ‘ತಮಿಳು ತಲೆಗಳ ನಡುವೆ’ ಎನ್ನುವ ವಿನೋದಶೈಲಿಯ ಪುಸ್ತಕ ಬರೆದು, ಅದರಲ್ಲಿ ತಮಿಳರ ಮನೋಧೋರಣೆ, ಭಾಷಾಂಧತ್ವ, ಇತಿಹಾಸ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಕುರಿತು ಅವರು ಹರಡಿದ ಸುಳ್ಳುಗಳು, ಸಂಶೋಧನೆಯಲ್ಲಿ ಅವರಿಗೆ ಇಲ್ಲದ ನಂಬಿಕೆ ಮುಂತಾದವುಗಳ ಕುರಿತು ಕಟುವಾಗಿ ದಾಖಲಿಸಿ ದ್ದಾರೆ.
ಈ ಸಂದರ್ಭದಲ್ಲಿ, ಸ್ವಾಮಿಯವರ ಈ ಪುಸ್ತಕವನ್ನು ಓದಿದರೆ, ಯಾವ ಕನ್ನಡಿಗರಿಗೂ ಕಮಲ್ ಅವರ ಹೇಳಿಕೆಯಿಂದ ನೋವಾಗುವುದಿಲ್ಲ, ನಗುಬರುತ್ತದೆ ಅಷ್ಟೇ. 20 ವರ್ಷಗಳ ಹಿಂದೆ, ನನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಮೈಸೂರಿನ ಎಂ.ಎಸ್. ಕೃಷ್ಣ ಅವರ ಪ್ರೇರಣೆಯಂತೆ ಈ ಪುಸ್ತಕ ಓದಿ ಆನಂದಿಸಿದ್ದೆ, ಈಗ ಮತ್ತೊಮ್ಮೆ ಓದುವ ಮನಸ್ಸಾಯಿತು. ನೀವೂ ಓದಿದರೆ ಖುಷಿ ಪಡಬಹುದು.
ನಾವು ಮರೆತಿರಬಹುದು! ಆದರೆ, ಹಸಿರು ಮತ್ತು ಹಾಸ್ಯದ ಹೊನಲಿನ ಮೇಧಾವಿ ವಿಜ್ಞಾನಿ ಡಾ.ಬಿ.ಜಿ.ಎಲ್.ಸ್ವಾಮಿಯವರು ನಾವು ಮರೆಯಬಾರದ ಕನ್ನಡಿಗ. ಪೂಜ್ಯ ಡಿವಿಜಿಯವರ ಮಗ ಎನ್ನುವುದು ಅವರಿಗೆ ಹೆಮ್ಮೆಯ ವಿಷಯವಾದರೂ, ಸಾಹಿತ್ಯ ಮತ್ತು ಸಸ್ಯಶಾಸ್ತ್ರ ಗಳಲ್ಲಿನ ತಮ್ಮ ಕೆಲಸಗಳಿಂದಾಗಿ ತಮ್ಮ ತಂದೆಯವರಿಗೂ ನಾಡಿಗೂ ಹೆಸರು ತಂದ ಸಾಧಕರವರು. ವಿಜ್ಞಾನಿ, ಸಾಹಿತಿ, ವಿಮರ್ಶಕ ಹಾಗೂ ಸಂಶೋಧಕರಾಗಿದ್ದ ಅವರು, ಕನ್ನಡ ಮತ್ತು ತಮಿಳು ಭಾಷೆಗಳ ಇತಿಹಾಸ ಹಾಗೂ ಸಾಹಿತ್ಯವನ್ನು ವ್ಯಾಪಕವಾಗಿ ಅಧ್ಯಯನ ಮಾಡಿದವರು.
ತಮ್ಮ ‘ತಮಿಳು ತಲೆಗಳ ನಡುವೆ’ ಪುಸ್ತಕದಲ್ಲಿ ಅವರು, ತಮಿಳು ಭಾಷಾಶಾಸ್ತ್ರಜ್ಞರು ಮತ್ತು ಇತಿಹಾಸಕಾರರಾದ ಐರಾವತಂ ಮಹಾದೇವನ್, ನೀಲಕಂಠ ಶಾಸ್ತ್ರೀ ಮುಂತಾದವರು ಮಂಡಿಸಿದ ಕೆಲವು ಸಿದ್ಧಾಂತಗಳನ್ನು ಸುಳ್ಳು ಎಂದು ಸಾಕ್ಷಿಸಮೇತ ಸಾಬೀತುಪಡಿಸುತ್ತಾರೆ. ತಮಿಳು ಭಾಷಿಕರು ನೆಟ್ಟು ನೀರೆರೆದಿದ್ದ ಕಲ್ಪನೆಯ ಕಾಡನ್ನು ತಮ್ಮ ತೀಕ್ಷ್ಣ ವಿಮರ್ಶೆ ಗಳಿಂದ ಸುಟ್ಟು ಬೂದಿ ಮಾಡುತ್ತಾರೆ.
“ಭಾರತದಲ್ಲ ಸಂಸ್ಕೃತವನ್ನು ಅನುಕರಿಸದೆ ತಲೆಯೆತ್ತಿ ನಿಂತಿರುವ ಭಾಷೆಯೇ ತಮಿಳು; ಸಂಸ್ಕೃತ ವನ್ನೂ ಪ್ರತಿಭಾಹೀನವಾಗಿಸಿದವರು ತಮಿಳರು" ಎಂದು ಪ್ರಚಾರ ಮಾಡುತ್ತಿದ್ದ ಕಾಲದಲ್ಲಿ, ಬ್ರಾಹ್ಮಣರಿಂದಲೂ ಹಾಗೂ ಸಂಸ್ಕೃತದ ಮಾತುಗಳಿಂದಲೂ ಭಾವನೆಗಳಿಂದಲೂ ಸೂತಕಕ್ಕೊಳ ಗಾಗಿದ್ದ ತಮಿಳನ್ನು ಶುದ್ಧ ಮಾಡಿ, ಆರ್ಷೇಯವಾದ ಅಪ್ಪಟ ತಮಿಳನ್ನು ಸ್ಥಾಪಿಸುವುದಕ್ಕೆ ತಮಿಳುನಾಡಿನ ನಿಂತು ಹೋರಾಡಿದವರು ಹೆಮ್ಮೆಯ ಕನ್ನಡಿಗ ಡಾ.ಸ್ವಾಮಿಯವರು.
ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ ಡಾ.ಸ್ವಾಮಿ, ಇಂಗ್ಲಿಷ್, ಸ್ಪ್ಯಾನಿಷ್, ಜರ್ಮನ್, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳಲ್ಲೂ ನೂರಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. 1979ರಲ್ಲಿ ಐಬಿಎಚ್ ಪ್ರಕಾಶನದವರು ಹೊರತಂದ ಈ ‘ತಮಿಳು ತಲೆಗಳ ನಡುವೆ’ ಪುಸ್ತಕವನ್ನು ಅವರ ಗೆಳೆಯರಾದ ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ ಯವರೂ ಹಾಗೂ ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರೂ ಓದಿ ಹುರಿದುಂಬಿಸಿ ದ್ದಾರೆ.
ಡಾ.ಎಸ್.ಎಲ್.ಭೈರಪ್ಪನವರೂ ಸ್ವಾಮಿಯವರ ಕುರಿತು (ನಾ ಕಂಡಂತೆ ಡಾ.ಬಿಜಿಎಲ್ ಸ್ವಾಮಿ) ಬರೆದಿದ್ದಾರೆ. ನಮ್ಮ ಕರುನಾಡಿನ ಅನೇಕ ಮಂತ್ರಿಗಳಿಗೆ, ತಮಿಳುನಾಡಿನ ಸರಕಾರದಲ್ಲಿ ಮಿತ್ರರು ಅನೇಕರಿರುವುದರಿಂದ, ಈ ಪುಸ್ತಕ ಈಗ ಪ್ರಕಟವಾಗಿದ್ದಿದ್ದರೆ, ಅವರ ಭಾವನೆಗಳಿಗೆ ಧಕ್ಕೆಯಾಗ ಬಹುದು ಎನ್ನುವ ಕಾರಣಕ್ಕೆ ಮುಟ್ಟುಗೋಲು ಹಾಕಿ ಬಿಡುತ್ತಿದ್ದ ರೇನೋ!
ಇರಲಿ, ಪುಸ್ತಕದಲ್ಲಿ ಸ್ವಾಮಿಯವರು ದಾಖಲಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನೋಡಿ ಬರೋಣ. ತೀರಾ ಹಿಂದಿನ ಕಾಲದಲ್ಲಿ (ಎಷ್ಟು ಹಿಂದೆ ಎಂಬುದನ್ನು ಯಾರೂ ತಿಳಿಸಿಲ್ಲ), ಈಗಿನ ಕನ್ಯಾಕುಮಾರಿ ಭೂಶಿರದ ಪೂರ್ವ-ಪಶ್ಚಿಮ-ದಕ್ಷಿಣ ಭಾಗಗಳನ್ನು ಅಂಟಿಕೊಂಡಂತೆ ವಿಸ್ತಾರವಾದ ಭೂ ಪ್ರದೇಶವಿತ್ತಂತೆ. ಅದಕ್ಕೆ ‘ಲೆಮೂರಿಯಾ’ ಎಂದೂ ಕುಮರಿನಾಡು ಎಂದೂ ಹೆಸರಿತ್ತಂತೆ. ಆ ಭೂಮಿ ಯಾವಾಗಲೋ ಸಮುದ್ರದೊಳಕ್ಕೆ ಮುಳುಗಿ ಹೋಯಿತಂತೆ.
ಅಳಿದುಳಿದ ತಮಿಳರು ಉತ್ತರ ದಿಕ್ಕಿಗಿದ್ದ ಭೂಭಾಗಕ್ಕೆ ವಲಸೆ ಬಂದು ನಂತರ ಭಾರತ ವನ್ನು ಪೂರಾ ಆಕ್ರಮಿಸಿಕೊಂಡರಂತೆ. ಈಗಿನ ಭಾರತದ ಹೊರಗಿರುವ ಪಾಕಿಸ್ತಾನ, ಅಫ್ಘಾನಿಸ್ತಾನಗಳನ್ನು ತಮ್ಮ ದಾಗಿಸಿಕೊಂಡರಂತೆ. ಅಂದು ಅವರು ಮಾತನಾಡುತಿದ್ದ ಭಾಷೆಯೇ ಇಂದು ‘ಬ್ರಾಹುಯಿ’ ನುಡಿ ಯಾಗಿ ಪರಿವರ್ತನೆ ಹೊಂದಿದೆಯೆಂದು ತಮಿಳರು ಹೇಳುತ್ತಾರೆ.
ಆರ್ಯರು ಭರತ ವರ್ಷದೊಳಕ್ಕೆ ದಿಗ್ವಿಜಯ ಮಾಡಿ ಬಂದದ್ದರ ಫಲವಾಗಿ, ಉತ್ತರ ಭಾರತದಲ್ಲಿದ್ದ ತಮಿಳರು ಅಳಿದು ಹೋದರೆಂದೂ, ದಕ್ಷಿಣದಲ್ಲಿ ಅರ್ಯರ ದಾಳಿ ಯಶಸ್ವಿಯಾಗಲಿಲ್ಲವಾದ್ದರಿಂದ ತಮಿಳು ಕುಲ ಈ ಪ್ರದೇಶದಲ್ಲಿ ಸುಖ ಶಾಂತಿಗಳಿಂದ ಉಳಿಯಲು ಸಾಧ್ಯವಾಯಿತೆಂದೂ, ಇವರೇ ಇಂದಿನ ತಮಿಳರ ಪಿತೃಗಳೆಂದೂ ಇಂದಿನ ತಮಿಳರು ಹೇಳುತ್ತಾರೆ.
ಲೆಮೂರಿಯ ಖಂಡ ಯಾವಾಗ ಇತ್ತು, ಯಾವಾಗ ಮುಳುಗಿಹೋಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದು. ತಮಿಳರ ಕಲ್ಪನೆಯಲ್ಲಿ ಅದು ಇತ್ತು ಅಷ್ಟೆ. ತಮಿಳರು ಕಟ್ಟಿದ ಇಂಥದ್ದೇ ಇನ್ನೊಂದು ಸುಳ್ಳು ಕಥೆ, ಕಳಭ್ರ (ಕಲಪ್ಪಿರ) ರೆಂಬ ದುಷ್ಟರು ತಮಿಳುನಾಡಿನೊಳಕ್ಕೆ ದಾಳಿಯಿಟ್ಟರು. ಚೇರ, ಚೋಳ, ಪಾಂಡ್ಯ ರಾಜ್ಯಗಳನ್ನೆಲ್ಲ ನಾಶ ಮಾಡಿ ನಾಡನ್ನು ಹಿಡಿದುಕೊಂಡರು.
300 ವರ್ಷಗಳು ರಾಜ್ಯವಾಳಿ, ತಮಿಳರ ಮೇಲೆ ದಾಂಧಲೆ ನಡೆಸಿದರು. ಹೀಗಾಗಿ, ತಮಿಳರ ಸರ್ವಸ್ವ ವನ್ನೂ ಕಳಭ್ರರು ದೋಚಿಕೊಂಡು, ಪ್ರಾಕೃತವನ್ನೂ ಸಂಸ್ಕೃತವನ್ನೂ ತಮಿಳರ ಮೇಲೆ ಹೇರಿ, ಹಳೆಯ ಸಂಸ್ಕೃತಿಯನ್ನು ಅಳಿಸಿ, ತಮ್ಮದೇ ಆದ ಹೊಸದೊಂದು ಅಸ್ತಿಭಾರ ವನ್ನು ಹಾಕಿದರು ಎಂದು ನಂಬಿಸಲು ಯತ್ನಿಸುತ್ತಾರೆ. ತಮಿಳರ ಸರ್ವಸ್ವವನ್ನೂ ಲಪಟಾಯಿಸಿ ತಮಿಳು-ತನವನ್ನೇ ಅಪಹರಿಸಿದ ಕಳಭ್ರರು ಯಾರು ಎಂದು ಕೇಳಿದರೆ ನಮಗೆ ಸಲ್ಲುವ ಉತ್ತರ ಒಂದೇ ರೀತಿಯದು,
“ಅವರು ತಮಿಳರಲ್ಲ, ಮಹಾದುಷ್ಟರು, ಕಡುಪಾತಕಿಗಳು". ಅವರು ಎಲ್ಲಿಂದ ಬಂದರು? ಗೊತ್ತಿಲ್ಲ. ಆದರೆ ತಮಿಳುನಾಡಿನ ಹೊರಗಿನಿಂದ ಬಂದವರು ಎಂಬುದರಲ್ಲಿ ಸಂದೇಹ ವಿಲ್ಲ. ಅವರ ನಡೆನುಡಿಗಳು ಏನಾದರೂ ತಿಳಿದಿವೆಯೆ? “ಅವರು ಸಂಸ್ಕೃತವನ್ನೂ ಪ್ರಾಕೃತವನ್ನೂ ಮಾತೃಭಾಷೆ ಯಾಗಿಟ್ಟುಕೊಂಡಿದ್ದವರಂತೆ ಕಾಣುತ್ತದೆ. ಅಂತೂ ನಮ್ಮ ತಮಿಳನ್ನು ನಾಶಮಾಡಿದರು" ಎನ್ನುತ್ತಾರೆ.
ಭಾರತದ ಯಾವ ಇತಿಹಾಸಕಾರರೂ ದಾಖಲಿಸದ ಲೆಮುರಿಯಾ ಸಂಸ್ಕೃತಿ ಮತ್ತು ಕಳಭ್ರರ ಬಗ್ಗೆ ತಮಿಳರು ಕೊಚ್ಚಿಕೊಳ್ಳುತ್ತಾರೆ. ಕಳಭ್ರರ ಆಕ್ರಮಣ ಎಂಬ ಕಲ್ಪನೆ ತಮಿಳರಿಗೆ ಬಹು ಅನುಕೂಲ ವಾದ ಕೈಹಿಡಿಯಾಗಿ ಪರಿಣಮಿಸಿದೆ. ನಿಮ್ಮ ಸಾಹಿತ್ಯದಲ್ಲಿ ಇಂಥದು ಇತ್ತೆ, ನಿಮ್ಮ ಸಂಸ್ಕೃತಿಯಲ್ಲಿ ಅಂಥದು ಇತ್ತೆ? ಎಂದೇನಾದರೂ ಕೇಳಿದರೆ, ಗುಂಡುಹೊಡೆದಂತೆ ಜವಾಬು ಬರುತ್ತದೆ- “ಓಹೋ! ಅವೆಲ್ಲವೂ ಇತ್ತು.
ಆದರೆ ಆ ಕಳಭ್ರರು ಬಂದು ಎಲ್ಲವನ್ನು ಸರ್ವನಾಶ ಮಾಡಿಬಿಟ್ಟರು!" ಈ ಆಧಾರರಹಿತ ಕಲ್ಪನಾ ವಿಲಾಸದ ‘ಚರಿತ್ರೆ’ಯನ್ನು ತಮಿಳರು ಬಹು ಜಾಗರೂಕತೆಯಿಂದ ಕಾಪಾಡಿ ಕೊಂಡು ಬಂದಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಸಾಹಿತ್ಯಗಳ ಹುಟ್ಟನ್ನೂ, ಅವು ಮುಂದೆ ಸಾಗಿದ ಅವಿಚ್ಛಿನ್ನ ಮಾರ್ಗಗಳನ್ನೂ ಅರಿತವರಿಗೆ ತಮಿಳು ಸಾಹಿತ್ಯ ಚರಿತ್ರೆಯ ದಾರಿಯೇ ಬೇರೆ ಎಂಬುದು ಮನ ದಟ್ಟಾಗುತ್ತದೆ.
ತಮಿಳೇತರ ಸಾಹಿತ್ಯಗಳ ನಡೆ ಬಯಲುಸೀಮೆಯಲ್ಲಿ ಹರಿಯುತ್ತಿರುವುದೂ, ತಮಿಳು ಸಾಹಿತ್ಯ ತನ್ನ ಪ್ರಗತಿಯಲ್ಲಿ ಕಣಿವೆಯಿಂದ ಶಿಖರಕ್ಕೆ ಹಾರುವುದೂ ಶಿಖರದಿಂದ ಕಣಿವೆಗೆ ಧುಮ್ಮಿಕ್ಕುವುದೂ ಗೋಚರವಾಗುತ್ತದೆ. ಇದು ಏಕೆ ಹೀಗಾಗಿದೆ ಎಂದು ತಮಿಳರನ್ನು ಪ್ರಶ್ನಿಸುವುದು ವ್ಯರ್ಥ. “ಅದೇ ನಮ್ಮ ತಮಿಳು ಸಾಹಿತ್ಯದ ವೈಶಿಷ್ಟ್ಯ" ಎನ್ನುತ್ತಾರೆ.
“ತಮಿಳರು ಯಾವಾಗಲೂ ಪ್ರತ್ಯೇಕ ಕಣಯ್ಯ! ಸಂಸ್ಕೃತದ ಹುಚ್ಚುಹೊಳೆ ಹರಿದು ಬಂದಾಗ ಅದರಲ್ಲಿ ನಿಮ್ಮ ಹಾಗೆ ಮುಳುಗಿ ಹೋಗದೆ, ಆ ಹೊಳೆಗೆ ಎದುರುದಿಕ್ಕಿನಲ್ಲಿ ಈಸಿಕೊಂಡು ಹೋಗಿ ಬಾವುಟವನ್ನು ಹಾರಿಸಿದವರು ಕಣಯ್ಯ ನಾವು!" ಎನ್ನುತ್ತಾರೆ.
ಆರ್ಯ ಸಂಸ್ಕೃತಿಯಲ್ಲಿ ನಮ್ಮ ತಮಿಳು ಗೆಳೆಯರಿಗೆ ಏನೇನೋ ಕುಂದುಕೊರತೆಗಳು ಕಾಣುತ್ತವೆ. ಆರ್ಯರು (ಎಂದರೆ ಬ್ರಾಹ್ಮಣರು) ಇವರ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ವಂತೆ. ಈ ವೇದವನ್ನು ಅರ್ಥೈಸಲು ಹೊರಟ ಬ್ರಾಹ್ಮಣರು ಸರಿಯಾದ ದಾರಿಯಲ್ಲಿ ಕಾಲಿಟ್ಟಿಲ್ಲ ವಂತೆ.
ಯಾಸ್ಕರ ಪ್ರಯತ್ನ ನಿಷ್ಫಲವಾಗಿದೆಯಂತೆ, ಸಾಯಣರ ಭಾಷ್ಯ ಅಲ್ಪಸ್ವಲ್ಪ ಹೊಸ ಬೆಳಕನ್ನು ಚೆಲ್ಲಿದೆಯಾದರೂ ಅದು ಕೇವಲ ಮತಕೇಂದ್ರಿತವಾಗಿದೆಯೇ ಹೊರತು ವಿಚಾರಪೂರಿತ ವಾಗಿಲ್ಲವಂತೆ. ಇದೇ ವೈಚಾರಿಕ ತಳಹದಿಯ ಮೇಲೆ ತಮಿಳುನಾಡಿನಲ್ಲಿ ಅನೇಕ ಸಾಂಸ್ಕೃತಿಕ ಸಂಘಗಳೂ, ಸಾಹಿತ್ಯ ಕೂಟಗಳೂ ಹಾಗೂ ರಾಜಕೀಯ ಪಕ್ಷಗಳೂ ಜನ್ಮ ತಾಳಿ ಸನಾತನ ಸಂಸ್ಕೃತಿಯನ್ನು ಡೇಂಘೀ ಮಲೇರಿಯಾಕ್ಕೆ ಹೋಲಿಸಲು ಶುರುವಿಟ್ಟುಕೊಂಡಿದ್ದು.
ಇನ್ನೊಂದು ಆಸಕ್ತಿಕರ ವಿಷಯವೆಂದರೆ, ತಮಿಳು ವರ್ಣಮಾಲೆಗೊಂದು ತೀರಿಸಲಾಗದ ಕೊರತೆ ಯಿದೆ. ತಮಿಳು ಅಕ್ಷರದಲ್ಲಿ ತಮಿಳನ್ನು ಮಾತ್ರ ಬರೆಯಬಹುದೇ ಹೊರತು ಬೇರಾವ ಭಾಷೆಯನ್ನೂ ಸುಟವಾಗಿ ಬರೆದು ಉಚ್ಚರಿಸಲಾಗದು. ‘ಸ್ವಚ್ಛವಾಗಿ ಉಚ್ಚರಿಸ ಲಾಗದು’ ಎಂಬುದನ್ನು ‘ಚುವಚ್ಚವಾಕಿ ಉಚ್ಚರಿಸಲಾಕತು’ ಎಂದೇ ಬರೆಯಬೇಕಾಗುತ್ತದೆ ಎಂದು ಡಾ.ಸ್ವಾಮಿ ತೋರಿಸುತ್ತಾರೆ.
ಇಷ್ಟಾದರೂ, ಅಲ್ಲಲ್ಲಿ ಸಂಸ್ಕೃತ ಪದಗಳ ಬಳಕೆ ಅನಿವಾರ್ಯವಾಗಿದೆಯಾದರೂ, ಅವು ಮೂಲತಃ ತಮಿಳಿನಿಂದ ಸಂಸ್ಕೃತಕ್ಕೆ ಎರವಲಾಗಿ ಹೋದವು ಎಂಬ ಹಟವಾದ ಕೇಳಿಬರುತ್ತದೆ. ಅಷ್ಟೇ ಅಲ್ಲ, ತಮಿಳಿನಿಂದ ಇಂಗ್ಲಿಷ್ ಭಾಷೆಗೆ ಎಷ್ಟೊಂದು ಪದಗಳು ರವಾನೆಯಾಗಿವೆ ಗೊತ್ತೆ? ಎನ್ನುತ್ತಾರೆ ತಮಿಳು ಭಾಷಾ ತಜ್ಞರು. ಹಿಂದೆ, ಕೆ.ಕೆ.ಷಾ ಅವರು ತಮಿಳುನಾಡಿನ ಗವರ್ನರಾಗಿದ್ದಾಗ, “ತಮಿಳು ತಾಯಿ,
ಆಕೆಯ ಗರ್ಭದಲ್ಲಿ ಜನಿಸಿದ್ದು ಸಂಸ್ಕೃತ, ತಮಿಳಿನಲ್ಲಿರುವ ನ್ಯೂನತೆಗಳನ್ನು ನೀಗಿಸಿ, ಡೊಂಕು ಗಳನ್ನು ತಿದ್ದಿ, ಪಾಲಿಷ್ ಮಾಡಿದ ಭಾಷೆಯೇ ಸಂಸ್ಕೃತ" ಎಂದು ವಾದಿಸಿದ್ದರು. ಇನ್ನೇನು ಬೇಕು ಹೇಳಿ? ತಮಿಳು ಭಾಷೆ ಸಂಸ್ಕೃತಕ್ಕೇ ತಾಯಿಯಾದ ಮೇಲೆ, ಕನ್ನಡವೇನು ಮಹಾ!