Gururaj Gantihole Column: ಯೋಧನನ್ನೂ ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು !
ಭಾರತೀಯ ಸೈನಿಕರು ಈ ಭಾಗದಲ್ಲಿ ಆಪತ್ಕಾಲ ದಲ್ಲಿದ್ದಾಗ, ಬಾಬಾ ಅಲ್ಲಿಗೆ ಬಂದು ರಕ್ಷಿಸಿದ ಹಲವು ಪ್ರತ್ಯಕ್ಷ, ಅಪ್ರತ್ಯಕ್ಷ ಘಟನೆಗಳು ನಡೆದಿವೆ. ಈ ಘಟನೆಗಳು ಬಾಯಿಯಿಂದ ಬಾಯಿಗೆ ಹರಯ, ಸೇನೆಯು ಅವರು ಮರಣಾನಂತರವೂ ಗಡಿಯ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ನಂಬಿಕೆಗೆ ಕಾರಣವಾಯಿತು. ಬಾಬಾ ಅವರ ಪವಿತ್ರ ಆತ್ಮವು ನಮ್ಮ ಸೈನ್ಯಕ್ಕೆ ನೆರವಾಗುತ್ತಿದೆ ಎಂಬ ಭಾವಕ್ಕೆ ಧಾರ್ಮಿಕ ರೂಪ, ಗೌರವ ಕೊಟ್ಟು ಅವರ ಗೌರವಾರ್ಥ ಬಾಬಾ ಮಂದಿರ ದೇವಾಲಯವನ್ನು ಭಾರತೀಯ ಸೇನೆಯು ನಾಥುಲಾ ಪಾಸ್ ಹತ್ತಿರ ನಿರ್ಮಿಸಿತು.


ಗಂಟಾಘೋಷ
ನದಿಗಳೂ ಸಹ ಮಂಜೇರಿ ಹರಿಯುತ್ತಿದ್ದ ಶೀತಲ ಸಮಯ. ಅಕ್ಟೋಬರ್ 1968ರಲ್ಲಿ, ನಾಥುಲಾ ಪಾಸ್ ಸಮೀಪ ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಆಕಸ್ಮಾತ್ ನದಿಗೆ ಬಿದ್ದು ವೀರಮರಣ ವನ್ನಪ್ಪುತ್ತಾರೆ. ಯಾರ ದೇಹವೂ ಪತ್ತೆಯಾಗಿರುವುದಿಲ್ಲ. ಮೂರು ದಿನಗಳ ಬಳಿಕ, ಅಧಿಕಾರಿ ಯೊಬ್ಬರ ಕನಸಿನಲ್ಲಿ ಹರ್ಭಜನ್ ಸಿಂಗ್ ಬಂದು, ಶವ ಬಿದ್ದ ಸ್ಥಳವನ್ನು ಹೇಳುತ್ತಾರೆ.
ಸೇನಾಧಿಕಾರಿಗಳು ಹುಡುಕಿದಾಗ ಅವರ ದೇಹ ಪತ್ತೆಯಾಗುತ್ತದೆ. ಸೇನೆಯ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಹೀಗೆ ಅಂತ್ಯವಾಗಬೇಕಿದ್ದ ಇವರ ಘಟನೆಯು ಇಲ್ಲಿಂದ ಹೊಸ ಆರಂಭಕ್ಕೆ ಮುನ್ನುಡಿ ಬರೆಯುತ್ತದೆ.
ಭಾರತೀಯ ಸೇನೆಯ ವೀರಯೋಧನೊಬ್ಬ ದೈವತ್ವ ಸ್ಥಾನ ಪಡೆದು, ಮರಣದ ನಂತರವೂ ‘ಜೀವಂತ ಬಾಬಾ’ ಆದ ಅಪರೂಪದ ಘಟನೆಯಿದು. ಇಂದಿಗೂ, ಪೂರ್ವ ಹಿಮಾಲಯದ ಎತ್ತರದ ಪರ್ವತಗಳಲ್ಲಿ, ಗಡಿಗಳನ್ನು ಕಾಪಾಡುವ ಹೆಮ್ಮೆಯ ಗಾಥೆಗಳು ಈ ಪ್ರದೇಶದಲ್ಲಿ ವ್ಯಾಪಕ. ಇಂತಹ ಒಂದು ವಿಶಿಷ್ಟ ವ್ಯಕ್ತಿತ್ವ ಬಾಬಾ ಹರ್ಭಜನ್ ಸಿಂಗ್ ಅವರದ್ದು.
ಬಾಬಾ ಅವರು ಭಾರತೀಯ ಸೇನೆಯ ಯೋಧರಾಗಿದ್ದು, ಮರಣಾನಂತರವೂ ತಮ್ಮ ಕರ್ತವ್ಯ ತ್ಯಜಿಸದೆ ಗಡಿ ರಕ್ಷಣೆಗೆ ಸದಾ ಮುಂದಿರುವ ‘ದೇವಸ್ವರೂಪ ಯೋಧ’ ಎನ್ನಿಸಿಕೊಂಡವರು. ಹರ್ಭ ಜನ್ ಸಿಂಗ್ ಅವರಿಗೆ ಸಾಮಾನ್ಯವಾಗಿ ನಾಥುಲಾದ ಯೋಧ ಅಥವಾ ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಾರೆ. ಅವರ ಕಥೆ ಧೈರ್ಯದ ಜೊತೆಗೆ ಭಕ್ತಿ ಮತ್ತು ಅತೀಂದ್ರಿಯ ಶಕ್ತಿಯ ಸಮನ್ವಯ ವಾಗಿದೆ. ಇದು ಭಾರತೀಯ ಸೇನೆಯಲ್ಲಿ ನಡೆದ ಸತ್ಯಘಟನೆಯು ಪೌರಾಣಿಕ ಕತೆಗಳಲ್ಲಿ ಒಂದು ಎಂಬಂತೆ ಅಪೂರ್ವವಾಗಿದೆ.
ಇದನ್ನೂ ಓದಿ: Gururaj Gantihole Column: ಬೆಳ್ಳಿಹಬ್ಬದ ಸಾರ್ಥಕತೆ ಕಂಡ ಸರಕಾರಿ ಶಿಕ್ಷಣ ಯೋಜನೆ !
ಸಿಖ್ ಕುಟುಂಬದಲ್ಲಿ ಆಗಸ್ಟ್ 30, 1946ರಂದು ಜನಿಸಿದ ಹರ್ಭಜನ್ ಸಿಂಗ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸದ್ರಾನಾ ಗ್ರಾಮದಲ್ಲಿ (ಇಂದು ಪಾಕಿಸ್ತಾನದಲ್ಲಿದೆ) ಮುಗಿಸಿ, 1965ರಲ್ಲಿ ಪಟ್ಟಿ, ಪಂಜಾಬ್ನಲ್ಲಿ ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದರು. ಅಮೃತಸರದಲ್ಲಿ ಸೇನೆಗೆ ಸಿಪಾಯಿ ಯಾಗಿ ಆಯ್ಕೆಯಾಗುವ ಮೂಲಕ, ಭಾರತೀಯ ಸೈನ್ಯದ ಅತ್ಯಂತ ಹಳೆಯ ಎರಡನೇ ರೆಜಿಮೆಂಟ್ ಆಗಿರುವ 23ನೇ ಪಂಜಾಬ್ ರೆಜಿಮೆಂಟ್ಗೆ ಸೇರಿದರು. ಸೇವೆಗಾಗಿ ಅವರನ್ನು 1966ರಲ್ಲಿ ಪೂರ್ವ ಸಿಕ್ಕಿಂನ ನಾಥುಲಾ ಪಾಸ್ ಹತ್ತಿರ ನಿಯೋಜಿಸಲಾಯಿತು.
ನಾಥುಲಾ ಪಾಸ್ ದ್ವಾರವು ಸಮುದ್ರಮಟ್ಟದಿಂದ 14140 ಅಡಿಗಳಷ್ಟು ಎತ್ತರದಲ್ಲಿದ್ದು, ಸದಾ ಮಂಜಿನಿಂದ ಕೂಡಿರುತ್ತದೆ. ಸಹಜವಾಗಿಯೇ ಪರ್ವತಶ್ರೇಣಿಯಲ್ಲಿ ಎತ್ತರದ ಸ್ಥಾನದಲ್ಲಿ ರುವುದರಿಂದ, ಸಾಮಾನ್ಯ ಜನರಿಗೆ ಉಸಿರಾಡಲು ಸ್ವಲ್ಪ ಕಷ್ಟವೆನಿಸುವಂತಹ ಪ್ರದೇಶವಾಗಿದೆ. ದೇಶದ ರಕ್ಷಣಾತ್ಮಕ ವಿಚಾರದಲ್ಲಿ ಬಹುಸೂಕ್ಷ್ಮತೆ ಹೊಂದಿರುವ, ಸೇನಾ ನೆಲೆಗಳ ತಾಣವಾಗಿರುವ ಸಿಕ್ಕಿಂ ರಾಜ್ಯದಲ್ಲಿ ಈ ನಾಥುಲಾ ಪಾಸ್ ಬರುತ್ತದೆ. ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಬಹಳಷ್ಟು ಪಾಸ್ (ಪರ್ವತ ಹಾದಿ) ಗಳು ಹಾಗೂ ಸುರಂಗಗಳು ಬರುತ್ತವೆ.
ಅವುಗಳಲ್ಲಿ, ಪ್ರಮುಖ ಪರ್ವತಹಾದಿಗಳಲ್ಲಿ ರೋಹ್ಟಾಂಗ್ ಪಾಸ್, ನಾಥುಲಾ ಪಾಸ್ ಮತ್ತು ಝೋಜಿಲಾ ಪಾಸ್ ಸೇರಿವೆ. ರೋಹ್ಟಾಂಗ್ ಪಾಸ್ ಎಂಬುದು ಹಿಮಾಚಲ ಪ್ರದೇಶದಲ್ಲಿದ್ದು, ಮನಾಲಿ ಯನ್ನು ಲಾಹೌಲ್ ಮತ್ತು ಸ್ಪಿತಿ ಕಣಿವೆಗಳಿಗೆ ಸಂಪರ್ಕಿಸುತ್ತದೆ. ಆಗಾಗ್ಗೆ ಭಾರೀ ಹಿಮಪಾತ ಗಳುಂಟಾಗುವ ಜಾಗವೂ ಆಗಿದೆ. ಶ್ರೀನಗರ ಮತ್ತು ಲೇಹ್ ನಡುವೆ ಮಹತ್ತರ ಸಂಪರ್ಕ ವ್ಯವಸ್ಥೆ ಯಾಗಿದೆ ಝೋಜಿಲಾ ಪಾಸ್.
ಲಡಾಖ್ ನಲ್ಲಿನ ಸಿಂಧೂ ಕಣಿವೆಯನ್ನು ಪ್ಯಾಂಗೊಂಗ್ ಸರೋವರಕ್ಕೆ ಸಂಪರ್ಕಿಸುವ ಮತ್ತು ವಿಶ್ವದ ಅತಿ ಎತ್ತರದ ಮೋಟಾರು ಪಾಸ್ ಗಳಲ್ಲಿ ಒಂದಾಗಿದೆ ಚಾಂಗ್ಲಾ ಪಾಸ್. ಭಾರತವನ್ನು ಟಿಬೆಟ್ ನೊಂದಿಗೆ ಸಂಪರ್ಕಿಸುವ ಮನ ಪಾಸ್ ಎಂಬುದು ಉತ್ತರಾಖಂಡದಲ್ಲಿದೆ. ಶಿಪ್ಕಿಲಾ ಪಾಸ್, ಹಿಮಾಚಲವನ್ನು ಟಿಬೆಟ್ ನೊಂದಿಗೆ ಸಂಪರ್ಕಿಸುತ್ತದೆ. ಜೆಲೆಪ್ಲಾ ಪಾಸ್ ಸಿಕ್ಕಿಂ ನಲ್ಲಿದ್ದು, ಲ್ಹಾಸಾ, ಟಿಬೆಟ್ನೊಂದಿಗೆ ಸಂಪರ್ಕಿಸುತ್ತದೆ. ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯೆಂದು ಕರೆಯ ಲ್ಪಡುವ ಉಮ್ಲಿಂಗ್ ಲಾ ಪಾಸ್ ಲಡಾಖ್ನಲ್ಲಿದೆ.
ಆರು ತಿಂಗಳು ಮನುಷ್ಯರಿಗೆ ಸಂಪರ್ಕ ಹೊಂದಿದ್ದು, ಇನ್ನುಳಿದ ಆರು ತಿಂಗಳು ಈ ಭಾಗವು ಸಂಪರ್ಕ ರಹಿತವಾಗಿರುವ ಮೂಲಕ, ಬೇರೆಯದ್ದೇ ಪ್ರಪಂಚವೇನೋ ಎಂದೆನಿಸುತ್ತಿತ್ತು. 2014ರ ನಂತರ, ನರೇಂದ್ರ ಮೋದಿ ಸರಕಾರ ಬಂದ ಮೇಲೆ, ದೇಶದ ಈಶಾನ್ಯ ಭಾಗಕ್ಕೆ ಎಂದೂ ಸಿಗದಂತಹ ಪ್ರಾಶಸ್ತ್ಯ ನೀಡುತ್ತ ಬಂದಿದ್ದರಿಂದ, ಅಭಿವೃದ್ಧಿಯ ಜೊತೆಗೆ ಇಲ್ಲಿನ ಜನತೆ ವರ್ಷಪೂರ್ತಿ ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುವಂತಾಗಿದೆ.
ಅಟಲ್ ಸುರಂಗ, ಡಾ.ಶ್ಯಾಮಪ್ರಸಾದ್ ಮುಖರ್ಜಿ ಸುರಂಗ, ಪಿರ್ ಪಂಜಾಲ್ ರೈಲ್ವೆ ಸುರಂಗ, ಬನಿಹಾಲ್ ಸುರಂಗ, ಸೋನ್ ಮಾರ್ಗ್ ಸುರಂಗ ಸೇರಿದಂತೆ ಬಹುತೇಕ ಸುರಂಗಗಳು ಈಗ ಸರ್ವ ಋತುಮಾನದ ಅಹೋರಾತ್ರಿ ಸಂಚರಿಸಬಹುದಾದ ಸುರಂಗ ಮಾರ್ಗ ಮಾರ್ಗಗಳಾಗಿವೆ. ಈ ಪಾಸ್ ಗಳು ಮತ್ತು ಸುರಂಗಗಳು ಭಾರತದ ಮೂಲಸೌಕರ್ಯದಲ್ಲಿ, ದೇಶದಾದ್ಯಂತ ಸಂಪರ್ಕ, ವ್ಯಾಪಾರ ಮತ್ತು ಕಾರ್ಯತಂತ್ರದ ವಿಶೇಷವಾಗಿ ರಕ್ಷಣೆಯಂತಹ ಸವಾಲಿನ ಪರ್ವತ ಪ್ರದೇಶಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಹಿಮಾಲಯದ ಪರ್ವತಮಾಲೆಯ ನಡುವೆ ಒಂದು ಐತಿಹಾಸಿಕ ಮತ್ತು ರಕ್ಷಣಾ ಕಾರ್ಯತಂತ್ರಾತ್ಮಕ ದಾರಿಯಾಗಿ ನಿಂತಿರುವ ನಾಥುಲಾ ಪಾಸ್, ಭಾರತದ ಸಿಕ್ಕಿಂ ಮತ್ತು ಚೀನಾದ ಟಿಬೆಟ್ ಪ್ರದೇಶವನ್ನು ಸಂಪರ್ಕಿಸುತ್ತದೆ. ಪ್ರಾಚೀನ ಸಿಲ್ಕ್ ರೋಡ್ನ (Silk Route ) ಪ್ರಮುಖ ಮಾರ್ಗವಾಗಿತ್ತು.
ಇವತ್ತಿಗೆ ನಾಥುಲಾ ಪಾಸ್ ಒಂದು ಕೇವಲ ಸೇನೆಯ ಗಡಿ ಚೌಕಿಯಷ್ಟೆ ಅಲ್ಲದೆ, ವ್ಯಾಪಾರ, ಸಂಸ್ಕೃತಿ, ರಾಜಕೀಯ ಹಾಗೂ ಪ್ರವಾಸೋದ್ಯಮದ ತಾಣವೂ ಆಗಿದೆ. ಈ ಪಾಸ್ ಅನ್ನು 1873ರಲ್ಲಿ ಎಡ್ಗರ್ ಎಂಬಾತ ಆಧುನಿಕವಾಗಿ ಮೊದಲ ಬಾರಿಗೆ ಸಮೀಕ್ಷೆ ನಡೆಸಿದರು ಎನ್ನಲಾಗುತ್ತಿದೆ.
1936ರಲ್ಲಿ ಲಾಸಾಗೆ ಬೇಟಿ ನೀಡಲು ಬ್ರಿಟಿಷ್ ರಾಜತಾಂತ್ರಿಕ ನಿಯೋಗ ಈ ಮಾರ್ಗ ಬಳಸಿತು. ಐವತ್ತರ ದಶಕದಲ್ಲಿ ಸಿಕ್ಕಿಂ ಸಾಮ್ರಾಜ್ಯವು ವ್ಯಾಪಾರದ ಉದ್ದೇಶದಿಂದ ಇದನ್ನು ಬಳಸುತ್ತಿತ್ತು. ಸಂಪೂರ್ಣವಾಗಿ ಈ ಮಾರ್ಗ ಬಳಕೆಯಾದರೆ, ಕೈಲಾಸ ಮಾನಸ ಸರೋವರ ತೀರ್ಥಯಾತ್ರಗೆ ಪರ್ಯಾಯ ಮಾರ್ಗ ತೆರೆದಂತಾಗುತ್ತದೆ, ಈ ವಿಚಾರದಲ್ಲಿ ಒಳ್ಳೆಯ ದಿನಮಾನಗಳನ್ನು ಆಶಿಸೋಣ.
ಪಂಜಾಬ್ ರೆಜಿಮೆಂಟ್ಗೆ ಸೇರಿದ ಬಳಿಕ ಯೋಧ ಹರ್ಭಜನ್ ಸಿಂಗ್, ಗಡಿಯ ಹಿಮಯುಕ್ತ ಪ್ರದೇಶ ದಲ್ಲಿ ಮ್ಯೂಲ್ ದಳವನ್ನು ಕರೆದೊಯ್ಯುವ ಹೊಣೆ ಹೊತ್ತಿದ್ದರು, ಆಗ ಈ ದುರಂತ ಸಂಭವಿಸಿತು. ಅವರ ಸಾವಿನ ನಂತರ, ನಿಗೂಢ, ಆಶ್ಚರ್ಯಕರ ಘಟನೆಗಳು ಸಂಭವಿಸತೊಡಗಿದವು. ಹಲವಾರು ಯೋಧರು ಹರ್ಭಜನ್ ಸಿಂಗ್ ತಮ್ಮ ಸ್ವಪ್ನಗಳಲ್ಲಿ ಪ್ರತ್ಯಕ್ಷವಾಗಿ, ಶತ್ರುಗಳ ಚಲನೆಗಳ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಹೇಳುತ್ತಾರೆ.
ಭಾರತೀಯ ಸೈನಿಕರು ಈ ಭಾಗದಲ್ಲಿ ಆಪತ್ಕಾಲ ದಲ್ಲಿದ್ದಾಗ, ಬಾಬಾ ಅಲ್ಲಿಗೆ ಬಂದು ರಕ್ಷಿಸಿದ ಹಲವು ಪ್ರತ್ಯಕ್ಷ, ಅಪ್ರತ್ಯಕ್ಷ ಘಟನೆಗಳು ನಡೆದಿವೆ. ಈ ಘಟನೆಗಳು ಬಾಯಿಯಿಂದ ಬಾಯಿಗೆ ಹರಯ, ಸೇನೆಯು ಅವರು ಮರಣಾನಂತರವೂ ಗಡಿಯ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ನಂಬಿಕೆಗೆ ಕಾರಣವಾಯಿತು. ಬಾಬಾ ಅವರ ಪವಿತ್ರ ಆತ್ಮವು ನಮ್ಮ ಸೈನ್ಯಕ್ಕೆ ನೆರವಾಗುತ್ತಿದೆ ಎಂಬ ಭಾವಕ್ಕೆ ಧಾರ್ಮಿಕ ರೂಪ, ಗೌರವ ಕೊಟ್ಟು ಅವರ ಗೌರವಾರ್ಥ ಬಾಬಾ ಮಂದಿರ ದೇವಾಲಯವನ್ನು ಭಾರತೀಯ ಸೇನೆಯು ನಾಥುಲಾ ಪಾಸ್ ಹತ್ತಿರ ನಿರ್ಮಿಸಿತು.
ಬಾಬಾ ಮಂದಿರದಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಒಂದರಲ್ಲಿ ಅವರು ಬಳಸುತ್ತಿದ್ದ ಹಾಸಿಗೆ, ಬೂಟುಗಳು, ಪೋಷಾಕುಗಳನ್ನು ಇಡಲಾಗಿದೆ. ದಿನವೂ ಅವರ ಕೋಣೆಯನ್ನು ಶುಚಿಗೊಳಿಸ ಲಾಗುತ್ತದೆ. ಇನ್ನೊಂದರಲ್ಲಿ, ಅವರ ಭಾವಚಿತ್ರವನ್ನಿಟ್ಟು ನಿತ್ಯ ಪೂಜೆ ಕೈಗೊಳ್ಳಲಾಗುತ್ತಿದೆ. ಮತ್ತೊಂದು ಕೊಠಡಿಯಲ್ಲಿ, ಇಲ್ಲಿನ ಯೋಧರು ಬಂದು ತಮ್ಮ ಕೋರಿಕೆಗಳನ್ನು ಪುಸ್ತಕದಲ್ಲಿ ಬರೆದಿಟ್ಟು, ನೀರು ತುಂಬಿದ ಪಾತ್ರೆ, ಬಾಟಲಿಗಳನ್ನಿಟ್ಟು ಕೆಲ ದಿನಗಳ ಬಳಿಕ ಬಂದು ಆ ನೀರನ್ನು ಪವಿತ್ರ ಜಲವೆಂದು ತಮ್ಮ ಮನೆಗಳಲ್ಲಿಟ್ಟು ಪ್ರತಿನಿತ್ಯ ಸೇವಿಸುತ್ತಾರೆ.
ತಮ್ಮ ಕೋರಿಕೆಗಳನ್ನು ಬರೆದಿಟ್ಟಿದ್ದ ಪುಸ್ತಕಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ, ಹೀಗೆ ಮಾಡುವು ದರಿಂದ ಬಾಬಾ ತಮ್ಮ ಎಲ್ಲ ಕೋರಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇಲ್ಲಿನ ಸೈನಿಕರದು. ಇಲ್ಲಿನ ಸೈನಿಕರು ಮಂದಿರದಲ್ಲಿ ಆಶಿರ್ವಾದ ಪಡೆದು ಸೈನ್ಯದ ಕಾರ್ಯಾಚರಣೆಗೆ ಹೊರಡುತ್ತಾರೆ. ಇದು ಜಗತ್ತಿನ ಸೇನಾ ವಿಚಾರದ ಅತ್ಯಂತ ಅಪರೂಪದ ಘಟನೆ ಎನ್ನಬಹುದಾಗಿದೆ.
ಎಲ್ಲ ಸೈನಿಕರು ಮಾಡುವಂತಹ ನಿಯಮಿತ ಕರ್ತವ್ಯದ ಭಾಗವಾಗಿ, ನಾಥುಲಾದ ಸೈನಿಕರು ಇಂದಿಗೂ ಒಂದಿಷ್ಟು ಹಣ ಸಂಗ್ರಹಿಸಿ, ಬಾಬಾ ಅವರ ತಾಯಿಗೆ ಕಳುಹಿಸಿಕೊಡುವ ಮೂಲಕ, ಮಾತೃಪ್ರೇಮ ಮೆರೆಯುತ್ತಾರೆ. ಇಂದಿಗೂ, ಇಲ್ಲಿನ ಗಡಿಕಾವಲು ಯೋಧರು, ಗಡಿ ರಕ್ಷಣೆಯಲ್ಲಿ ಬಾಬಾ ಆತ್ಮವು ಸಹಕಾರ ನೀಡುತ್ತಿದೆ ಎಂದು ನಂಬುತ್ತಾರೆ.
ಭಾರತ ಚೀನಾ ಧ್ವಜಸಭೆಗಳಲ್ಲಿ ( Flag Meetings) ಒಂದು ಖಾಲಿ ಕುರ್ಚಿಯನ್ನು ಬಾಬಾ ಅವರಿಗಾಗಿ ಇಡಲಾಗುತ್ತದೆ. ಜೊತೆಗೆ, ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಬಾಬಾ ಅವರಿಗೆ ಪತ್ರ ಬರೆಯುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿದ್ದಾರೆ.
ಪ್ರತಿವರ್ಷ, ಸೆಪ್ಟಂಬರ್ 11ರಂದು ಬಾಬಾ ಧರಿಸುತ್ತಿದ್ದ ಬಟ್ಟೆ ಮತ್ತು ಇತರೆ ವಸ್ತುಗಳನ್ನು ಹತ್ತಿರದ ರೈಲ್ವೆಯಾದ ನ್ಯೂಜಲ್ಪಾಯ್ ಗುರಿ ರೈಲು ನಿಲ್ದಾಣದ ಮೂಲಕ ಕಪುರ್ತಲ ಜಿಲ್ಲೆಯ ಕುಕ ಹಳ್ಳಿಗೆ ಕಳುಹಿಸಿಕೊಡಲಾಗುತ್ತದೆ. ಇವರಿಗಾಗಿ, ರೈಲಿನಲ್ಲಿ ಒಂದು ಸೀಟು ಖಾಲಿಯಾಗಿರಿಸಿ ಕಾದಿರಿಸಲಾ ಗಿರುತ್ತದೆ. ಈ ಒಂದು ಕಾರ್ಯಕ್ಕೆ ಮೂರು ಜನ ಸೈನಿಕರು ಸಹಾಯಕರಾಗಿ ನಿಂತಿರುತ್ತಾರೆ ಕೂಡ!
ಇದೊಂದು ಕಾರ್ಯವು ಸೇನೆಯ ಗೌರವ ಮಾತ್ರವಲ್ಲ, ಇದು ಈಗ ಆಧ್ಯಾತ್ಮಿಕ ನಂಬಿಕೆಗೆ ರೂಪಾಂತರಗೊಂಡಿದೆ. ಚೀನಾದ ಸೇನೆ ಕೂಡಾ ಬಾಬಾ ಅವರ ಆತ್ಮದ ಮಹತ್ವವನ್ನು ಗೌರವಿಸು ತ್ತಿದೆ ಎನ್ನಲಾಗುತ್ತದೆ. ನಾಥುಲಾ ಪಾಸ್ ಬಗ್ಗೆ, ನಮ್ಮ ವೀರಯೋಧರ ಬಲಿದಾನದ ಪೂರ್ಣ ಮಾಹಿತಿ ಕೇಳುತ್ತಿದ್ದಂತೆ, ನಾವೆಲ್ಲ ಭಾವೋದ್ವೇಗಕ್ಕೊಳಗಾದೆವು. ಇಂತಹ ಪುಣ್ಯಭೂಮಿ ಯಲ್ಲಿ ಬಾಬಾನಂತೆಯೇ ಸಾವಿರಾರು ಸೈನಿಕರು ದೇಶಕ್ಕಾಗಿ ತಮ್ಮ ಆತ್ಮತರ್ಪಣಗೈದಿದ್ದಾರೆ.
ಬಾಬಾ ಹರ್ಭಜನ್ ಸಿಂಗ್ ಅವರ ಕಥೆ ಮಾನವ ಸಾಮರ್ಥ್ಯ ಮತ್ತು ಭಕ್ತಿ ತುಂಬಿದ ಕಥೆಯಾಗಿದೆ. ಸಾವಿನ ನಂತರವೂ ಸೇವೆಯಲ್ಲಿ ಮುಂದಿರುವ ಇವರ ದೇಶಪ್ರೇಮಗಾಥೆ, ಪ್ರತಿಯೊಬ್ಬ ಭಾರತೀಯ ಯೋಧನಿಗೂ, ಪ್ರಜೆಗೂ ಪ್ರೇರಣೆಯಾಗಿದೆ. ಇಲ್ಲಿಗೆ ಬೇಟಿ ಕೊಟ್ಟವರಿಗೆ ರಾಷ್ಟ್ರಜಾಗೃತಿ, ರಾಷ್ಟ್ರಾ ಭಿಮಾನ ಇಮ್ಮಡಿಸದಿರದು!