Honeymoon Murder Case: ರಾಜಾ ರಘುವಂಶಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಪತ್ತೆ!
Honeymoon Murder Case: ಮೇಘಾಲಯ ಹನಿಮೂನ್ ವೇಳೆ ಪತ್ನಿಯಿಂದಲೇ ಹತ್ಯೆಗೀಡಾದ ಇಂದೋರ್ ಮೂಲದ ರಾಜಾ ರಘುವಂಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಲಭಿಸಿದೆ. ರಾಜಾ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಪತ್ತೆಯಾಗಿದ್ದು, ಪೊಲೀಸ್ ತನಿಖೆಗೆ ಇದು ಮತ್ತಷ್ಟು ಬಲ ನೀಡಿದೆ.


ಶಿಲ್ಲಾಂಗ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಂದೋರ್ ಮೂಲದ ರಾಜಾ ರಘುವಂಶಿ(Raja Raghuvanshi) ಹತ್ಯೆ ಪ್ರಕರಣಕ್ಕೆ(Honeymoon Murder Case) ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಲಭಿಸಿದೆ. ರಾಜಾ ಹತ್ಯೆಗೆ ಆತನ ಪತ್ನಿ ಸೋನಂ ನೇಮಿಸಿದ್ದ ಹಂತಕರು ಬಳಸಿದ್ದ ಮಾರಕಾಸ್ತ್ರ ಪತ್ತೆಯಾಗಿದೆ. ಇದೇ ಕತ್ತಿಯಿಂದಲೇ ರಘುವಂಶಿಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಬಲವಾಗಿ ಚುಚ್ಚಿದ್ದಾರೆ ಎನ್ನಲಾಗಿದೆ.
ಇನ್ನು ಬಂಧಿತ ಆರೋಪಿ ವಿಶಾಲ್ ಚೌಹಾಣ್ ಮಾರಕಾಸ್ತ್ರದಿಂದ ರಘುವಂಶಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಚಾಕುವನ್ನು ಆರೋಪಿಗಳು ಗುವಾಹಟಿಯ ರೈಲ್ವೆ ನಿಲ್ದಾಣದ ಬಳಿ ಖರೀದಿಸಿದ್ದಾರೆ ಎಂದು ತನಿಖೆಯಲ್ಲಿ ಹೊರಬಂದಿದೆ. ಇನ್ನೊಬ್ಬ ಆರೋಪಿ ಆಕಾಶ್ ಟೀ ಶರ್ಟ್ನಲ್ಲಿ ರಘುವಂಶಿಯ ರಕ್ತದ ಕಲೆಗಳು ಕಂಡುಬಂದಿವೆ ಎಂದು ಪೋಲಿಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ರಘುವಂಶಿಯ ತಲೆಯ ಹಿಂದೆ ಮುಂದೆ ಎರಡೂ ಕಡೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸದ್ಯದ ಮಾಹಿತಿಯ ಪ್ರಕಾರ, ಈ ಹತ್ಯೆ ಮಾಡಲು ಅರೋಪಿಗಳು ಮದುವೆಗೂ ಮುಂಚೆಯೇ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಸೋನಂ ಮತ್ತುಅವಳ ಪ್ರಿಯಕರ ರಾಜ್ ಕುಶ್ವಾಹಾ ಸೇರಿ ಈ ಹತ್ಯೆಯ ಸಂಚು ರೂಪಿಸಿದ್ದರು. ಸೋನಂ ವಿವಾಹವಾದ ನಂತರವೂ ರಾಜ್ ಜೊತೆಗೆ ಕಾಮಾಖ್ಯಾ ದೇವಾಲಯಕ್ಕೆ ಭೇಟಿ ನೀಡಿದ್ದಳು. ನಂತರ ಆರೋಪಿಗಳು ಗುವಾಹಟಿಗೆ ಬಂದಿದ್ದು,ಗುವಾಹಟಿಯಲ್ಲಿಯೇ ಹತ್ಯೆ ನಡೆಸುವ ಪ್ಲ್ಯಾನ್ ಮಾಡಿದ್ದಾರೆ. ನಂತರ ಕೆಲವು ಕಾರಣಗಳಿಂದ ಶಿಲ್ಲಾಂಗ್ನಲ್ಲಿ ರಾಜಾನನ್ನು ಹತ್ಯೆ ಮಾಡುವ ಬಗ್ಗೆ ಪ್ಲ್ಯಾನ್ ಮಾಡಲಾಗಿತ್ತು.
ಕಾಶಿ ಹಿಲ್ಸ್ ಜಿಲ್ಲೆಯ ಎಸ್ಪಿ ವಿವೇಕ್ ಸೈಯಂ ಮಾತನಾಡಿ, ಇಂದೋರ್ನಲ್ಲಿ ಫೆಬ್ರವರಿಯಲ್ಲಿಯೇ ಈ ಸಂಚು ರೂಪಿಸಲಾಗಿದೆ. ಈ ಹತ್ಯೆಗೆ 2 ಬ್ಯಾಕಪ್ ಪ್ಲಾನ್ ಮಾಡಿದ್ದು, ಒಂದು ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ನಂಬಿಸುವುದು, ಇನ್ನೊಂದು ಯಾವುದೋ ಮಹಿಳೆಯನ್ನು ಕೊಂದು ಬೆಂಕಿ ಹಚ್ಚಿ, ಅದು ಸೋನಂ ಎಂದು ನಂಬಿಸಲು ಪ್ರಯತ್ನ ಪಟ್ಟಿದ್ದು, ಯಾವುದೇ ಪ್ಲ್ಯಾನ್ ಸಕ್ಸಸ್ ಆಗಿಲ್ಲ. ರಾಜ್ ಈ ಹತ್ಯೆ ಮಾಡಲು ತನ್ನ ಗೆಳೆಯರಿಗೆ 50,000 ಹಣ ನೀಡಿದ್ದನು.
ಘಟನೆಯ ಹಿನ್ನೆಲೆ:
ಮೇ 11ರಂದು ಇಂದೋರ್ನಲ್ಲಿ ವಿವಾಹವಾಗಿದ್ದ ರಾಜಾ ಮತ್ತು ಸೋನಂ, ಹನಿಮೂನ್ಗೆಂದು ಮೆಘಾಲಯಕ್ಕೆ ತೆರಳಿದ್ದರು. ಮೇ 29ರಂದು ನಾಪತ್ತೆಯಾಗಿದ್ದ ಈ ದಂಪತಿಯನ್ನು ಹುಡುಕಲು ಪೋಲಿಸರು ಶೋಧ ನಡೆಸಿದ್ದರು. ಬಳಿಕ ರಘುವಂಶಿಯವರ ಶವ ಜೂನ್ 2ರಂದು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ವೈಸಾಡಾಂಗ್ ಜಲಪಾತದ ಬಳಿ ಹಳ್ಳದಲ್ಲಿದ ಪತ್ತೆಯಾಗಿತ್ತು. ಸೋನಂ ನಾಪತ್ತೆಯಾದ ನಂತರ ಜೂನ್ 9ರಂದು ಉತ್ತರಪ್ರದೇಶದ ಗಾಜಿಪುರದ ಡಾಭಾವೊಂದರಲ್ಲಿ ಪತ್ತೆಯಾಗಿದ್ದಳು. ಈ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾಜಾ ಅವರ ಪತ್ನಿ ಸೋನಂ ಹಾಗೂ ಇತರ ಮೂವರು ಆರೋಪಿಗಳಾದ ಆಕಾಶ್ ರಾಜ್ಪುತ್ (19), ವಿಶಾಲ್ ಸಿಂಗ್ ಚೌಹಾನ್ (22) ಮತ್ತು ರಾಜ್ ಸಿಂಗ್ ಕುಶ್ವಾಹಾ (20) ಜೊತೆಗೆ ಮೆಘಾಲಯ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.