ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maulana Abdul Aziz: ಭಾರತವನ್ನು ತುಂಡು ತುಂಡು ಮಾಡುವುದಾಗಿ ಹೇಳುತ್ತಿದ್ದ ಉಗ್ರ ಮುಖಂಡ ಮೌಲಾನಾ ಅಬ್ದುಲ್‌ ಅಜೀಜ್‌ ಫಿನಿಷ್‌

ಭಾರತವನ್ನು ತುಂಡು ತುಂಡಾಗಿ ವಿಭಜಿಸುವುದಾಗಿ ಹೇಳುತ್ತಿದ್ದ ಮೌಲಾನಾ ಅಬ್ದುಲ್‌ ಅಜೀಜ್‌ ನಿಗೂಢವಾಗಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹವಾಲ್ಪುರದಲ್ಲಿ ಸಾವನ್ನಪ್ಪಿದ್ದಾನೆ. ಅಬ್ದುಲ್‌ ಅಜೀಜ್‌ ಸಾವು ಜೈಶ್‌-ಎ-ಮೊಹಮ್ಮದ್‌ ಭಯೋತ್ಪಾದಕ ಗುಂಪಿಗೆ ಎದುರಾದ ಮತ್ತೊಂದು ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ.

ಉಗ್ರ ಮುಖಂಡ ಮೌಲಾನಾ ಅಬ್ದುಲ್‌ ಅಜೀಜ್‌ ನಿಗೂಢ ಸಾವು

Profile Ramesh B Jun 3, 2025 7:23 PM

ಇಸ್ಲಾಮಾಬಾದ್‌: ಭಾರತ ವಿರೋಧಿ ಚಟುವಟಿಕೆಯಲ್ಲಿ ಭಾಗಯಾಗಿದ್ದ ಭಯೋತ್ಪಾದಕ ಮುಖಂಡರ ಸಾವಿನ ಸರಣಿ ಪಾಕಿಸ್ತಾನದಲ್ಲಿ ಮುಂದುವರಿದಿದೆ. ಸೋಮವಾರ (ಜೂ. 2) ಜೈಶ್‌-ಎ-ಮೊಹಮ್ಮದ್‌ (JeM) ನಾಯಕ, ಭಾರತವನ್ನು ತುಂಡು ತುಂಡಾಗಿ ವಿಭಜಿಸುವುದಾಗಿ ಹೇಳುತ್ತಿದ್ದ ಮೌಲಾನಾ ಅಬ್ದುಲ್‌ ಅಜೀಜ್‌ (Maulana Abdul Aziz) ನಿಗೂಢವಾಗಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹವಾಲ್ಪುರದಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ತಿಂಗಳು ಈತ ಭಾರತವನ್ನು ಬಾಲ್ಕನೈಸೇಶನ್‌ (Balkanisation) ಮಾಡುವುದಾಗಿ ಬೆದರಿಕೆ ಹಾಕಿದ್ದ. ಒಂದು ದೇಶವನ್ನು ಸಣ್ಣ ಸಣ್ಣ ಪ್ರದೇಶಗಳಾಗಿ ವಿಭಜಿಸುವುದನ್ನು ಬಾಲ್ಕನೈಸೇಶನ್‌ ಎಂದು ಹೇಳಲಾಗುತ್ತದೆ.

ಅಬ್ದುಲ್‌ ಅಜೀಜ್‌ ಸಾವು ಜೈಶ್‌-ಎ-ಮೊಹಮ್ಮದ್‌ ಭಯೋತ್ಪಾದಕ ಗುಂಪಿಗೆ ಎದುರಾದ ಮತ್ತೊಂದು ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ. ಭಾರತ ಇತ್ತೀಚೆಗೆ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಮುಖಂಡ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಹತರಾದ ತಿಂಗಳೊಳಗೆ ಅಬ್ದುಲ್‌ ಅಜೀಜ್‌ ಕೂಡ ಸತ್ತಿದ್ದಾನೆ. ಇದರಿಂದ ಪ್ರಮುಖ ಉಗ್ರ ಸಂಘಟನೆಗೆ ಹಿನ್ನಡೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.



ಜೆಇಎಂ ಜತೆ ಸಂಪರ್ಕ ಹೊಂದಿರುವ ಸೋಶಿಯಲ್‌ ಮೀಡಿಯಾ ಖಾತೆಗಳು ಅಬ್ದುಲ್‌ ಅಜೀಜ್‌ ಸಾವನ್ನು ದೃಢಪಡಿಸಿದ್ದು, ಬಹಾವಲ್ಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಘೋಷಿಸಿವೆ. ಆದರೆ ಈ ಸಾವಿನ ಬಗ್ಗೆ ಪಾಕಿಸ್ತಾನಿ ಅಧಿಕಾರಿಗಳು ಮತ್ತು ಜೆಇಎಂನ ಉನ್ನತ ನಾಯಕತ್ವವು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ವೇಳೆ ಭಾರತ ದಾಳಿ ನಡೆಸಿದ 9 ಸ್ಥಳಗಳಲ್ಲಿ ಬಹವಾಲ್ಪುರ್ ಕೂಡ ಒಂದು.

ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೊಬ್ಬ ಡೇಂಜರಸ್‌ ಉಗ್ರ ಫಿನಿಷ್‌! ಬೆಂಗಳೂರು ದಾಳಿಯ ರುವಾರಿ ಲಷ್ಕರ್-ಎ-ತೊಯ್ಬಾದ ಟಾಪ್‌ ಲೀಡರ್‌ ಸೈಫುಲ್ಲಾ ಖಾಲಿದ್‌ ಹತ್ಯೆ

ಯಾರು ಈ ಮೌಲಾನಾ ಅಬ್ದುಲ್‌ ಅಜೀಜ್‌?

ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವ ಜೆಇಎಂನ ಹಿರಿಯ ಸದಸ್ಯನಾಗಿದ್ದ ಈ ಹತ ಅಬ್ದುಲ್ ಅಜೀಜ್. ಗುಪ್ತಚರ ಅಧಿಕಾರಿಗಳು ಆತನನ್ನು ಉಗ್ರ ಚಟುವಟಿಕೆಯ ಪ್ರಮುಖ ರೂವಾರಿ ಎಂದು ಪರಿಗಣಿಸಿದ್ದಾರೆ. ಆತ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ವ್ಯಾಪ್ತಿಗೆ ಬರುವ ಗಿಲ್ಗಿಟ್-ಬಾಲ್ಟಿಸ್ತಾನ್‌ನ ತಂಗಿರ್ ಪ್ರದೇಶದಲ್ಲಿ ಜೆಇಎಂನ ಪ್ರಾಥಮಿಕ ತರಬೇತಿ ಕೇಂದ್ರ ಮರ್ಕಜ್ ತಲೂಮ್‌ನ ಜಬಾಬ್ದಾರಿ ಹೊತ್ತುಕೊಂಡಿದ್ದ. ಈ ಶಿಬಿರವು ಜಿಹಾದಿ ಪ್ರಚಾರವನ್ನುಮಾಡುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಪಾಕಿಸ್ತಾನದ ಭಕ್ಕರ್ ಜಿಲ್ಲೆಯ ಅಶ್ರಫ್ವಾಲಾ ಗ್ರಾಮದ ಅಬ್ದುಲ್‌ ಅಜೀಜ್‌ 1990ರ ದಶಕದಲ್ಲಿ ಅಜರ್‌ನ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ. ಶೀಘ್ರದಲ್ಲಿಯೇ ಜೈಷ್-ಎ-ಮೊಹಮ್ಮದ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬ ಎನಿಸಿಕೊಂಡಿದ್ದ. ಕಾಶ್ಮೀರದಾದ್ಯಂತ ದಾಳಿಗಳನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಲಷ್ಕರ್-ಎ-ತೊಯ್ಬಾದ ಟಾಪ್‌ ಲೀಡರ್‌ ಸೈಫುಲ್ಲಾ ಖಾಲಿದ್‌ ಹತ್ಯೆ

ಭಾರತದಲ್ಲಿ ನಡೆದ ಹಲವು ಪ್ರಮುಖ ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೊಯ್ಬಾದ ಪ್ರಮುಖ ಕಾರ್ಯಕರ್ತ ಸೈಫುಲ್ಲಾ ಖಾಲಿದ್‌ನನ್ನು ಇತ್ತೀಚೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೊಡೆದುರುಳಿಸಲಾಗಿತ್ತು. ಕೆಲವು ಅಪರಿಚಿತರು ಆತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದರು. 2001ರ ಉತ್ತರ ಪ್ರದೇಶದ ರಾಂಪುರ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005ರ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (IISC) ಮೇಲಿನ ದಾಳಿ ಮತ್ತು 2006ರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಧಾನ ಕಚೇರಿಯ ಮೇಲಿನ ದಾಳಿಯನ್ನು ಈತನೇ ನಡೆಸಿದ್ದ.