Kamal Haasan Controversy: ಕಮಲ್ ಕ್ಷಮೆ ಕೇಳಲೇಬೇಕು... ಫಿಲ್ಮ್ ಚೇಂಬರ್ಗೆ ನುಗ್ಗಿ ಕರವೇ ಕಾರ್ಯಕರ್ತರ ಆಕ್ರೋಶ
Karave protest: ರಾಜ್ಯದಲ್ಲಿ ಕಮಲ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳು ತಮ್ಮ ಪ್ರತಿಭಟನೆ ಮುಂದುವರೆಸಿವೆ. ಇಂದು(ಮೇ 29) ಕೂಡ ಕರವೇ ಕಾರ್ಯಕರ್ತರು ಫಿಲ್ಮ್ ಚೇಂಬರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ.


ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಹಿರಿಯ ನಟ ಕಮಲ್ ಹಾಸನ್(Kamal Haasan) ಅವರ ವಿವಾದಾತ್ಮಕ ಹೇಳಿಕೆ(Kamal Haasan Controversy) ಬಗ್ಗೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಜ್ಯದಲ್ಲಿ ಕಮಲ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳು ತಮ್ಮ ಪ್ರತಿಭಟನೆ ಮುಂದುವರೆಸಿವೆ. ಇಂದು(ಮೇ 29) ಕೂಡ ಕರವೇ ಕಾರ್ಯಕರ್ತರು ಫಿಲ್ಮ್ ಚೇಂಬರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ. ಕಮಲ್ ತಮ್ಮ ಹೇಳಿಕೆ ಹಿಂಪಡೆಯಬೇಕು, ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು ನೇರವಾಗಿ ಫಿಲಂ ಚೇಂಬರ್ ಒಳಗೆ ನುಗ್ಗಿ ಕಮಲ್ ಹಾಸನ್ ಕ್ಷಮೆಯಾಚಿಸುವವರೆಗೆ ಅವರ ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಆಗ್ರಹಿಸಿದರು.
ಇನ್ನು ಈ ವಿವಾವಾದಾತ್ಮಕ ಹೇಳಿಕೆ ಬಗ್ಗೆಕ್ಷಮೆಯಾಚಿಸಲು ಕಮಲ್ ಹಾಸನ್ ನಿರಾಕರಿಸಿರುವುದು ಕನ್ನಡ ಪರ ಹೋರಾಟಗಾರರನ್ನು ಮತ್ತಷ್ಟು ಕೆಣಕಿದೆ. ಹೀಗಾಗಿ ಕಮಲ್ ಹಾಸನ್ ಹಾಗೂ ಶಿವಣ್ಣನ ಸ್ಪಷ್ಟನೆಗೆ ಕನ್ನಡ ಪರ ಸಂಘಟನೆಗಳು ಒಪ್ಪುತ್ತಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಮತ್ತೆ ಎಚ್ಚರಿಕೆ ಕೊಟ್ಟಿದ್ದಾರೆ.
ಥಗ್ಲೈಫ್ ಕರ್ನಾಟಕದಲ್ಲಿ ಬ್ಯಾನ್?
ಇನ್ನು ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಫಿಲಂ ಚೇಂಬರ್ ಮಣಿದಿದೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ಮುಂಬರುವ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅವಕಾಶ ಕೊಡುವುದಿಲ್ಲ ಎಂದು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೆ ಕಮಲ್ ಹಾಸನ್ ನಾಳೆಯೊಳಗೆ ಕ್ಷಮೆಯಾಚಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.