ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

False Medical Report: ತಪ್ಪು ವೈದ್ಯಕೀಯ ವರದಿಯಿಂದ ತಪ್ಪಿತು ಸೌದಿ ಕಂಪನಿ ಕೆಲಸ; ಉಡುಪಿ ನರ್ಸ್‌ಗೆ 13.49 ಲಕ್ಷ ಪರಿಹಾರ

Medical Report: ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಸ್ಟಾಫ್ ನರ್ಸ್ ಆಗಿದ್ದ ವ್ಯಕ್ತಿಯೊಬ್ಬರು ತಪ್ಪು ವೈದ್ಯಕೀಯ ವರದಿಯಿಂದ, ಸೌದಿ ಅರೇಬಿಯಾ ಕಂಪನಿಯ ಕೆಲಸ ಕಳೆದುಕೊಂಡಿದ್ದರು. ಹೀಗಾಗಿ ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಮೊರೆ ಹೋಗಿದ್ದರು. ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್‌, ನರ್ಸ್‌ಗೆ ಪರಿಹಾರ ನೀಡುವಂತೆ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸೂಚಿಸಿದೆ.

ತಪ್ಪು ವೈದ್ಯಕೀಯ ವರದಿಯಿಂದ ತಪ್ಪಿದ ಕೆಲಸ; ನರ್ಸ್‌ಗೆ 13.49 ಲಕ್ಷ ಪರಿಹಾರ

Profile Prabhakara R Jun 23, 2025 10:18 PM

ಉಡುಪಿ: ತಪ್ಪು ವೈದ್ಯಕೀಯ ವರದಿಯಿಂದ ಸೌದಿ ಅರೇಬಿಯಾ ಕಂಪನಿಯ ಕೆಲಸ ಕಳೆದುಕೊಂಡಿದ್ದ ಉಡುಪಿಯ ಹಿರಿಯ ನರ್ಸ್ ಒಬ್ಬರಿಗೆ 13.49 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಸ್ಟಾಫ್ ನರ್ಸ್ ಆಗಿರುವ 43 ವರ್ಷದ ಶಿವಕುಮಾರ್ ಶೆಟ್ಟಿಗಾರ್ ಅವರು ಫೆಬ್ರವರಿಯಲ್ಲಿ ಗಲ್ಫ್ ರಾಷ್ಟ್ರದ ಯುನೈಟೆಡ್ ಮೆಡಿಕಲ್ ರೆಸ್ಪಾನ್ಸ್ ಕಂಪನಿಯಲ್ಲಿ ಇಂಡಸ್ಟ್ರಿಯಲ್ ನರ್ಸ್ ಆಗಿ ಆಯ್ಕೆಯಾಗಿದ್ದರು. ಆದರೆ, ತಪ್ಪು ವೈದ್ಯಕೀಯ ವರದಿಯಿಂದ (False Medical Report) ಕೆಲಸ ಕಳೆದುಕೊಂಡಿದ್ದರು.

ಉದ್ಯೋಗ ಪ್ರಕ್ರಿಯೆ ನಿಮಿತ್ತ ಮಂಗಳೂರಿನ ರಾಷ್ಟ್ರೀಯ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಹೆಪಟೈಟಿಸ್ ಸಿ ಪಾಸಿಟಿವ್ ಇದೆ ಎಂದು ತಪ್ಪಾಗಿ ವರದಿ ನೀಡಲಾಗಿತ್ತು. ಇದು ಗಲ್ಫ್ ಸಹಕಾರ ಮಂಡಳಿ(GCC) ವೈದ್ಯಕೀಯ ಮಾನದಂಡಗಳ ಅಡಿಯಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಕಾರಣವಾಗಿತ್ತು. ಇದರಿಂದ ವಿದೇಶಕ್ಕೆ ಹೋಗಲು ಸಾಧ್ಯವಾಗದ ಶೆಟ್ಟಿಗಾರ್ ಅವರು, ಮಣಿಪಾಲದ ಖಾಸಗಿ ಪ್ರಯೋಗಾಲಯ ಮತ್ತು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಪರೀಕ್ಷೆ ಮಾಡಿಸಿದ್ದಾರೆ. ಇವೆರಡೂ ಪರೀಕ್ಷೆಯಲ್ಲಿ ಅವರಿಗೆ ಹೆಪಟೈಟಿಸ್ ಸಿ ನೆಗೆಟಿವ್ ಎಂದು ಬಂದಿದೆ.

ಬಳಿಕ ತಪ್ಪು ವರದಿ ನೀಡಿದ ಮಂಗಳೂರಿನ ರಾಷ್ಟ್ರೀಯ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ ವಿರುದ್ಧ ಶೆಟ್ಟಿಗಾರ್ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ, ಪ್ರಯೋಗಾಲಯದ ತಪ್ಪು ವರದಿಯಿಂದ ತಮ್ಮ ಕೆಲಸಕ್ಕೆ ಮಾತ್ರವಲ್ಲದೆ, ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೂ ಕಾರಣವಾಯಿತು ಎಂದು ವಾದಿಸಿದ್ದರು.

ಈ ಸುದ್ದಿಯನ್ನೂ ಓದಿ | ವಾಲ್ಮೀಕಿ ನಿಗಮದಂತೆ ಜಿಲ್ಲೆಯ ಭೋವಿ ನಿಗಮದಲ್ಲೂ ಹಗರಣ: ಸಂಸದ ಡಾ.ಕೆ.ಸುಧಾಕರ್

ನ್ಯಾಯಾಲಯ ಸಾಕ್ಷ್ಯಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ನಂತರ ಶೆಟ್ಟಿಗಾರ್ ಪರವಾಗಿ ತೀರ್ಪು ನೀಡಿದೆ. ಡಯಾಗ್ನೋಸ್ಟಿಕ್ ಸೆಂಟರ್‌ ವತಿಯಿಂದ ನರ್ಸ್‌ಗೆ 45 ದಿನಗಳಲ್ಲಿ 13.49 ಲಕ್ಷ ರೂ.ಗಳ ಪಾವತಿಸಲು ಸೂಚಿಸಲಾಗಿದ್ದು, ತಪ್ಪಿದಲ್ಲಿ ವಾರ್ಷಿಕ ಶೇ. 6 ರಷ್ಟು ಬಡ್ಡಿ ಅನ್ವಯಿಸುವುದಾಗಿ ಕೋರ್ಟ್ ಹೇಳಿದೆ.