Mani Ratnam: ʼಥಗ್ ಲೈಫ್ʼ ಚಿತ್ರಕ್ಕೆ ಹೀನಾಯ ಸೋಲು; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ನಿರ್ದೇಶಕ ಮಣಿರತ್ನಂ
Thug Life: ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಪ್ಯಾನ್ ಇಂಡಿಯಾ ಚಿತ್ರ ಕಾಲಿವುಡ್ನ ʼಥಗ್ ಲೈಫ್ʼ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿ ಬಿದ್ದಿದೆ. ಸುಮಾರು ಮೂರೂವರೆ ದಶಕಗಳ ಬಳಿಕ ಕಮಲ್ ಹಾಸನ್ ಮತ್ತು ಮಣಿರತ್ನಂ ಒಂದಾಗುತ್ತಿರುವ ಕಾರಣಕ್ಕೆ ಕುತೂಹಲ ಮೂಡಿಸಿದ್ದ ಈ ಚಿತ್ರದ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಹೀಗಾಗಿ ಮಣಿರತ್ನಂ ಪ್ರೇಕ್ಷಕರ ಕ್ಷಮೆ ಕೋರಿದ್ದಾರೆ.


ಚೆನ್ನೈ: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ (Mani Ratnam) ಪ್ರೇಕ್ಷಕರ ಬಳಿ ಕ್ಷಮೆ ಕೋರಿದ್ದಾರೆ. ಅದಕ್ಕೆ ಕಾರಣವೂ ಇದೆ. ಮಣಿರತ್ನಂ ಮತ್ತು ಕಮಲ್ ಹಾಸನ್ (Kamal Haasan) ಸುಮಾರು 37 ವರ್ಷಗಳ ಬಳಿಕ ತೆರೆಮೇಲೆ ಒಂದಾದ ʼಥಗ್ ಲೈಫ್ʼ (Thug Life) ಚಿತ್ರ ಸೆಟ್ಟೇರಿದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಹೀಗೆ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಜೂ. 5ರಂದು ತೆರೆ ಮೇಲೆ ಬಂದ ಈ ಸಿನಿಮಾ ಇದೀಗ ಮಕಾಡೆ ಮಲಗಿದೆ. ಪ್ರೇಕ್ಷಕರ ನಿರೀಕ್ಷೆ ತಲುಪಲು ವಿಫಲವಾದ ʼಥಗ್ ಲೈಫ್ʼ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿದ್ದು, ಈ ಕಾರಣಕ್ಕೆ ಮಣಿರತ್ನಂ ಪ್ರೇಕ್ಷಕರ ಬಳಿ ಕ್ಷಮೆ ಕೋರಿದ್ದಾರೆ.
ದೇಶಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮಣಿರತ್ನಂ ಮತ್ತು ಕಮಲ್ ಹಾಸನ್ 1987ರಲ್ಲಿ ತೆರೆಕಂಡ ಕಾಲಿವುಡ್ ಚಿತ್ರ ʼನಾಯಗನ್ʼ ಮೂಲಕ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿತ್ತು. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಜಯಗಳಿಸಿದ್ದಷ್ಟೇ ಅಲ್ಲದೆ ವಿಮರ್ಶಕರ ಮೆಚ್ಚುಗೆಯನ್ನೂ ಇದು ಪಡೆದುಕೊಂಡಿತ್ತು. ಈ ಚಿತ್ರದ ಮೂಲಕ ಕಮಲ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಅದಾಗಿ ಇವರಿಬ್ಬರು ಜತೆಯಾಗಿ ಕೆಲಸ ಮಾಡಿರಲಿಲ್ಲ. ಹೀಗಾಗಿ ʼಥಗ್ ಲೈಫ್ʼಗಾಗಿ ಇವರು ಒಂದಾದಾಗ ಚಿತ್ರದ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇತ್ತು.
ʼಥಗ್ ಲೈಫ್ʼ ಚಿತ್ರದ ಟ್ರೈಲರ್:
ಈ ಸುದ್ದಿಯನ್ನೂ ಓದಿ: Thug Life: ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಚಿತ್ರಕ್ಕೆ ಭದ್ರತೆ ನೀಡಲು ಸಿದ್ಧ; ಸುಪ್ರೀಂ ಕೋರ್ಟ್ಗೆ ತಿಳಿಸಿದ ರಾಜ್ಯ ಸರ್ಕಾರ
ನಡೆಯದ ಮ್ಯಾಜಿಕ್
ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದ್ದ ʼಥಗ್ ಲೈಫ್ʼ ಠುಸ್ ಪಟಾಕಿಯಂತಾಗಿದೆ. ಪ್ರೇಕ್ಷಕರು, ವಿಮರ್ಶಕರು ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಲೆಕ್ಷನ್ ಕುಂಟುತ್ತಾ ಸಾಗಿದೆ. ರಿಲೀಸ್ ಆಗಿ 2 ವಾರ ಕಳೆದಿದ್ದು, ಗಳಿಕೆ ಇನ್ನೂ 100 ಕೋಟಿ ರೂ. ತಲುಪಿಲ್ಲ. ರಿಲೀಸ್ ಆದ ಮೊದಲ ದಿನವೇ ಸೂಪರ್ ಸ್ಟಾರ್ಗಳ ಚಿತ್ರಗಳು 100 ಕೋಟಿ ರೂ. ಕ್ಲಬ್ ಸೇರುತ್ತವೆ. ಅಂತಹದರಲ್ಲಿ ʼಥಗ್ ಲೈಫ್ʼ ಇನ್ನೂ 90 ಕೋಟಿ ರೂ. ಗಟಿ ಮುಟ್ಟಿಲ್ಲ. ಕಥೆ, ಚಿತ್ರಕಥೆಯಲ್ಲಿ ಮಣಿರತ್ನಂ ಎಡವಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ನಿರೀಕ್ಷೆ ಮುಟ್ಟದ ಕಾರಣ ಅವರು ಇದೀಗ ಅಭಿಮಾನಿ ಕ್ಷಮೆ ಕೇಳಿದ್ದಾರೆ.
ಮಣಿರತ್ನಂ ಹೇಳಿದ್ದೇನು?
123 ತೆಲುಗು ವೆಬ್ಸೈಟ್ ಜತೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಣಿರತ್ನಂ, ʼʼನಾಯಗನ್ʼ ರೀತಿಯ ಚಿತ್ರವನ್ನು ನಿರೀಕ್ಷಿಸಿ ನಿರಾಸೆ ಹೊಂದಿದವರ ಬಳಿ ಕ್ಷಮೆ ಕೋರುತ್ತೇನೆ. ಅದೇ ರೀತಿಯ ಸಿನಿಮಾ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಹೊಸ ರೀತಿಯ ದೃಶ್ಯಾನುಭವವನ್ನು ಪ್ರೇಕ್ಷಕರ ಮುಂದೆ ಇಡಬೇಕೆಂದು ಚಿಂತಿಸಿದ್ದೆವು. ಆದರೆ ಪ್ರೇಕ್ಷಕರು ಇದಕ್ಕಿಂತ ಭಿನ್ನವಾಗಿರುವುದನ್ನು ಬಯಸಿದ್ದರು. ಇದರಿಂದ ತಮ್ಮ ನಿರೀಕ್ಷೆಗೆ ತಕ್ಕುದಾಗಿಲ್ಲ ಎಂದು ಅವರಿಗೆ ಬೇಸರವಾಗಿದೆʼʼ ಎಂದು ಹೇಳಿದ್ದಾರೆ.
ಸದ್ಯ ಅಭಿಮಾನಿಗಳು ಕಮಲ್ ಹಾಸನ್ ಮತ್ತು ಮಣಿರತ್ನಂ ಈ ಸೋಲಿನಿಂದ ಖಂಡಿತವಾಗಿಯೂ ಗ್ರೇಟ್ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಮಣಿರತ್ನಂ ಈಗಾಗಲೇ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ. ಅವರ ಮುಂದಿನ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಯೂ ಹರಡಿದೆ.