Monday, 20th May 2024

ರೈತ ಚಳವಳಿಗಳ ಹೆಸರಿನದ್ದು ಬರೀ ವಂಚನೆ !

Farmer Protest

ಸುಪ್ತ ಸಾಗರ

ರಾಧಾಕೃಷ್ಣ ಭಡ್ತಿ

rkbhadti@gmail.com

ಎಲ್ಲೋ ಒಂದು ಕಡೆ ಈ ಪದವೇ ಸವಕಲು ಎಂದೆನಿಸುತ್ತದಲ್ಲವೇ? ಹೌದು, ಚಳವಳಿಗಳ ಬಗ್ಗೆ ನಮ್ಮಲ್ಲಿ ಒಂದು ರೀತಿಯ ರೇಜಿಗೆ ಹುಟ್ಟಿಬಿಟ್ಟಿದೆ. ಚಳವಳಿಗಳಲ್ಲಿ ರುವ ಬಹುತೇಕ ಜನರು ಇದು ಕೇವಲ ತಮಗಾಗಿ ಸವಲತ್ತುಗಳನ್ನು ಬೇಡಿಕೊಳ್ಳುವ ಹಕ್ಕು ಮತ್ತು ಇತರರಿಗೆ ನಿರಾಕರಿಸಲು ಇರುವ ಮಾರ್ಗ ಎಂದುಕೊಂಡು ಬಿಟ್ಟಿದ್ದಾರೇನೋ?

ಹಾಗೆಂದು ಆತ ಆಂದೋಲನ, ಚಳವಳಿಗಳ ವಿರೋಧಿಯೇನೂ ಅಲ್ಲ. ವೆಂಡೆಲ್ ಬೆರ್ರಿ: ಹೆಸರಾಂತ ಕವಿ, ಚಿಂತಕ, ನಿಸರ್ಗದ ಆರಾಧಕ. ಹಾಗೆ ನೋಡಿದರೆ ಅವರ ಚಿಂತನಾರ್ಹ ಬರಹಗಳೆಲ್ಲವೂ ಸದ್ದಿಲ್ಲದೇ ಆಂದೋಲನವನ್ನು ಹುಟ್ಟು ಹಾಕಿದವುಗಳೇ. ಅವರ ‘In distrust of movements’ ಎನ್ನುವ ಪ್ರಬಂಧ ಕೋಟ್ಯಂತರ ಓದುಗ ಮನಸುಗಳಲ್ಲಿ ಚಿಂತನೆಯ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ್ದ ಪರಿ ಅಚ್ಚರಿ ಹುಟ್ಟಿಸುತ್ತದೆ. ಅವರನ್ನು ಅರಿಯದವರು ಅವರನ್ನು ಬದಲಾವಣೆಯ, ಆಂದೋಲನದ ವಿರೋಧಿಯೆಂದು ತಪ್ಪಾಗಿ ಗ್ರಹಿಸುತ್ತಾರೆ.

ಆದರೆ ಅವರ ಅಭಿಮತದ ಒಳಾರ್ಥವನ್ನು ಬಹುತೇಕರು ಗ್ರಹಿಸಿಯೇ ಇಲ್ಲ. ಇಂದು ಫ್ಯಾಷನ್ ಎಂಬಂತಾಗಿ ಬಿಟ್ಟಿರುವ, ಅಸಲಿತನವನ್ನು ಕಳೆದುಕೊಂಡು ಮಾರುಕಟ್ಟೆ ತಂತ್ರವಾಗಿಬಿಟ್ಟಿರುವ ‘ಸಾವಯವ’ ಎಂಬ ಹುಸಿ ಆಂದೋಲನದ ಅಪಾಯದ ಬಗೆಗೆ, ಹೇಳದೇ ಕೇಳದೇ ಹುಟ್ಟಿಕೊಳ್ಳುವ ರೈತ ಚಳವಳಿಗಳ ಬಗೆಗೆ, ಅದನ್ನು ವಿರೋಧಿಸುವ ತಮ್ಮ ನಿಲುವನ್ನು ತಮ್ಮ ಪ್ರಬಂಧದದಲ್ಲಿ ಅವರು ಸ್ಪಷ್ಟಪಡಿಸುತ್ತಾರೆ. ಕಳೆದೊಂದು ವರ್ಷ ಗಳಿಂದ ಕೃಷಿ ಕಾಯಿದೆ ವಿರೋಧಿಸಿ ಭಾರತ ದಲ್ಲಿ ನಡೆಯುತ್ತಿರುವ ರೈತರ ಹೆಸರಿನ ಪ್ರತಿಭಟನೆ ಹಾಗೂ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಳವಳಿ, ಆಂದೋಲನಗಳೆಲ್ಲದರ ಅಂತಿಮ ಗಂತವ್ಯ ಅಧಿಕಾರ ಗ್ರಹಣ ಎನ್ನುವಂತಾಗಿರುವ ಇಂದಿನ ಭಾರತೀಯ ಸನ್ನಿವೇಶದಲ್ಲಿ ತೀರಾ ಸಕಾಲಿಕವೆನಿಸುವ ಆ ಪ್ರಬಂಧದ ಭಾವಾನುವಾದದ ಆಯ್ದ ಭಾಗ ಇಲ್ಲಿದೆ ನೋಡಿ.
***

ಈ ಚಳವಳಿ ಎಂಬ ಪದವೇ ಅದೇಕೋ ನನ್ನಲ್ಲಿ, ಅಂದರೆ ನನ್ನ ಮನಸ್ಸಲ್ಲಿ ಸದಾ ಗುಂಯ್ ಗುಡುತ್ತಿರುತ್ತದೆ. ಈ ಹಿಂದೆ ನಾನು ‘ಮೌನ ಚಳವಳಿ’ಯ ಬಗ್ಗೆಯೂ ಪ್ರತಿಪಾದಿಸಿದ್ದೆ. ಅದರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚು ಈಗ ಕಾಣುತ್ತಿದೆ. ಅದರರ್ಥ ಜಗತ್ತಿನಾದ್ಯಂತ ಏನೋ ಬೃಹತ್ ಕ್ರಾಂತಿಯ ಧೂಳೆಬ್ಬಿಸಿಬಿಡಬೇಕೆಂದು ಹೇಳುತ್ತಿಲ್ಲ. ನಾವು ಈಗ ಗೂಟ ಹೊಡೆದುಕೊಂಡು ಕೂತಿರುವ ಜಾಗದಿಂದ ಹೊರಬರಬೇಕಾದ ಅನಿವಾರ್ಯ ಇದೆ.

ಎಲ್ಲಾ ಒಂದು ಕಡೆ ಈ ಪದವೇ ಸವಕಲು ಎಂದೆನಿಸುತ್ತದಲ್ಲವೇ? ಹೌದು, ಚಳವಳಿಗಳ ಬಗ್ಗೆ ನಮ್ಮಲ್ಲಿ ಒಂದು ರೀತಿಯ ರೇಜಿಗೆ ಹುಟ್ಟಿಬಿಟ್ಟಿದೆ. ಎಲ್ಲರೂ ಸ್ವಯಂ ದ್ರೋಹಕ್ಕೆ ಇಳಿದಿರುವ ಕಾಲಘಟ್ಟದಲ್ಲಿ ಬಹುತೇಕ ಏಕರೂಪವಾಗಿ ತೋರುತ್ತದೆ. ಚಳವಳಿಗಳಲ್ಲಿರುವ ಬಹುತೇಕ ಜನರು ಇದು ಕೇವಲ ತಮಗಾಗಿ ಸವಲತ್ತು ಗಳನ್ನು ಬೇಡಿಕೊಳ್ಳುವ ಹಕ್ಕು ಮತ್ತು ಇತರರಿಗೆ ನಿರಾಕರಿಸಲು ಇರುವ ಮಾರ್ಗ ಎಂದುಕೊಂಡುಬಿಟ್ಟಿದ್ದಾರೇನೋ? ಹೀಗಾಗಿ ಅದು ಅಷ್ಟೂ ಕೇವಲ ವಾಗಿ ಬಿಟ್ಟಿದೆ. ಬಹಳಷ್ಟು ಸಂದರ್ಭದಲ್ಲಿ ಹಿಂಸಾತ್ಮಕ ರೂಪ ಪಡೆಯುವುದೂ ಇದೇ ಕಾರಣಕ್ಕೆ.

ಅದರೊಳಗಿರುವವರು ತಮ್ಮದೇ ಭಾಷೆಯನ್ನು ಅರ್ಥೈಸಲು ಯತ್ನಿಸುತ್ತಿರುತ್ತಾರೆ. ಇದರಲ್ಲಿ ಒಂದಷ್ಟು ಮಂದಿ ತುಂಬಾ ಪರಿಣತರಾಗಿ ವೃತ್ತಿಪರರಾಗಿಬಿಟ್ಟಿzರೆ.
ಕೆಲವರಿಗೆ ಇದೇ ವೃತ್ತಿಯೂ ಆಗಿಬಿಟ್ಟಿರುವುದು ದುರಂತ. ಬಿಡಿ, ಅಂತಿಮವಾಗಿ ಅವರು ಸಾಂಸ್ಥಿಕ ಬುದ್ಧಿಜೀವಿಗಳ ‘ಪಿನ್ ಹೋಲ್ ದೃಷ್ಟಿ’ಯಲ್ಲಿ ಆಶ್ರಯ ಪಡೆಯಲು
ಹವಣಿಸುತ್ತಾರೆ. ಇದರಿಂದಲೇ ಅವರು ಯಾವಾಗಲೂ ಸಾಕಷ್ಟು ಆಮೂಲಾಗ್ರವಾಗಿ ವಿಷಯವನ್ನು ಗ್ರಹಿಸುವಲ್ಲಿ ವಿಫಲರಾಗುತ್ತಾರೆ, ಅಂತಿಮವಾಗಿ ಉದ್ದೇಶ ಕ್ಕಿಂತ ಹೆಚ್ಚಾಗಿ ಪರಿಣಾಮಗಳ ಕುರಿತೇ ವ್ಯವಹರಿಸುತ್ತಿರುತ್ತಾರೆ. ಅಥವಾ ಅದನ್ನು ಹೀಗೆ ಹೇಳಬಹುದೇನೋ, ಅವರ ‘ಅಜೆಂಡಾ’ದ ಮಾತ್ರವೇ ಅವರ ವ್ಯವಹಾರ ಕೇಂದ್ರೀಕೃತವಾಗಿರುತ್ತದೆ.

ಅದನ್ನೇ ನಾನು ಹೇಳುತ್ತಿರುವುದು ಇಂಥ ಚಳವಳಿಗಳು ಸಾಕಷ್ಟು ಆಮೂಲಾಗ್ರವಾಗಿರುವುದಿಲ್ಲ ಎಂದು. ಹಾಗಾಗಿ  ಮಣ್ಣಿನ ಸಂರಕ್ಷಣೆ ಅಥವಾ ಶುದ್ಧ ನೀರು- ಗಾಳಿ ಅಥವಾ ಅರಣ್ಯ ಸಂರಕ್ಷಣೆ ಅಥವಾ ಸುಸ್ಥಿರ ಕೃಷಿ ಅಥವಾ ಸಮುದಾಯ ಆರೋಗ್ಯ ಅಥವಾ ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವ ಚಳವಳಿಗಳ ಬಗ್ಗೆ ನನ್ನ ಅಸಮಾಧಾನವನ್ನು ನಾನು ಘೋಷಿಸಲೇಬೇಕಿದೆ. ಇಂಥ ವಿಚಾರದಲ್ಲಿ ಯಾವುದೋ ಒಂದನ್ನು ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅಂತಹ ಪ್ರಯತ್ನಗಳ ಬಗ್ಗೆ ನನಗೆ ಅತೃಪ್ತಿ ಇದೆ. ಏಕೆಂದರೆ ಅವುಗಳು ತುಂಬಾ ಸಂಕೀರ್ಣ.

ಒಂದನ್ನು ಹೊರತಾಗಿ ಒಂದಿಲ್ಲ. ಅದರ ಬಗ್ಗೆ ಮಾತನಾಡುವ ಮಂದಿ ಗೆ ಅದರ ಅರಿವೇ ಇರುವುದಿಲ್ಲ. ಹೀಗಂದೇ ಮಣ್ಣು-ನೀರು, ಪರಿಸರದಂಥ ವಿಷಯಗಳ ಚಳವಳಿ ಸಾಕಷ್ಟು ಸಮಗ್ರವಾಗಿರುವುದಿಲ್ಲ, ಆಮೂಲಾಗ್ರವಾಗಿಲ್ಲ, ಹೀಗಾಗಿಯೇ ಇಂಥ ಆಂದೋಲನಗಳು ವೈಫಲ್ಯದ ಹಾದಿ ಹಿಡಿಯುತ್ತಿರುವುದನ್ನು ಗ್ರಹಿಸ ಬೇಕು. ಹಾಗೆಂದು ಒಂದಷ್ಟು ಪ್ರಾಮಾಣಿಕರೂ ಇಲ್ಲದಿಲ್ಲ. ಆದರೆ ಅವರಲ್ಲಿ ಅರಿವಿನ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಇದರೊಳಗಿರುವ ಬಹುತೇಕರು ಇತರ ಜನರಿಂದ ನಿಸರ್ಗಕ್ಕೆ ತೊಂದರೆ ಉಂಟಾಗುತ್ತಿದೆ ಎಂದೇ ಹೇಳುತ್ತಿರುತ್ತಾರೆ. ಅವರು ಬೇರೆಯವರ ರೀತಿ-ನೀತಿಗಳನ್ನು ಬದಲಿಸಲು ಬಯಸುತ್ತಾರೆ; ಹೊರತು ತಮ್ಮ ವರ್ತನೆಗಳನ್ನಲ್ಲ. ಕೆಟ್ಟ ಅಪಾಯವೆಂದರೆ ಒಂದು ಚಳವಳಿ ತನ್ನ ಇಂಥ ಭಾಷೆಯಿಂದಲೇ ಅರ್ಥ ಕಳೆದುಕೊಳ್ಳುವುದು; ಗೊಂದಲಕ್ಕೆ ಎಡೆ ಮಾಡಿಕೊಡುವುದು. ಪರಿಸರ ಪರರಿಗೆ ಹೊರಗಿನ ಶತ್ರುಗಳಿಗಿಂತ ಅವರು ಹೊಂದಿರುವ ಪೂರ್ವಗ್ರಹವೇ ಅವರಿಗೆ ಶತ್ರುವಾಗಿ ಸಿದ್ಧಾಂತಗಳು ಮೌಲ್ಯ ಕಳೆದು ಕೊಳ್ಳುತ್ತಿವೆ.

ಮಣ್ಣಿನ ರಕ್ಷಣೆ, ಆರೋಗ್ಯದ ಬಗೆಗೆ, ಪರಿಸರದ ಹಿತ ಕಾಯುವ ಕುರಿತು ಎಲ್ಲರೂ ಮಾತಾಡುತ್ತಿದ್ದಾರೆ. ಪರಿಸರ ಆಂದೋಲನಗಳು, ರೈತ ಚಳವಳಿಗಳು ಎಂದರಲ್ಲಿ ಹುಟ್ಟಿಕೊಳ್ಳುತ್ತಿವೆ. ಬಹಳಷ್ಟು ಬಾರಿ ಇದರಿಂದ ಸತ್ತುಬಿಟ್ಟಿದ್ದೇನೆ. ವೆಸ್ ಜಾಕ್ಸನ್ (ಬೆರ್ರಿಯವರ ಆತ್ಮೀಯ) ಜತೆಗೆ ಈ ಬಗ್ಗೆ ನನ್ನ ಅಸಮಾಧಾನವನ್ನೂ
ಹೊರಹಾಕಿದ್ದೇನೆ. ಅದೆಷ್ಟು ಸಲ ಈ ‘ಆಂದೋಲನ’ಗಳನ್ನೇ ನಿಲ್ಲಿಸಿಬಿಡಬೇಕು ಎಂದೂ ಅಸಹನೆಯಿಂದ ಹೇಳಿದ್ದೇನೆ. ತಾವು ಮಾಡುತ್ತಿರುವುದೇ ಸರಿ ಎಂದು ತಂತಮ್ಮ ಮೂಗಿನ ನೇರಕ್ಕೆ ಕೊಂಡೊಯ್ಯುತ್ತಿರುವ ವೈಯಕ್ತಿಕ ಹಿತಾಸಕ್ತಿಯ, ಯಾರದ್ದೇ ಅಗತ್ಯಕ್ಕೆ ನಿಲ್ಲುತ್ತಿರುವ ಈ ಹೋರಾಟ, ಆಂದೋಲನಗಳಲ್ಲಿ ಏನೇನೂ ಅರ್ಥ ಕಾಣಿಸುತ್ತಲೇ ಇಲ್ಲ. ಇಂಥ ಆಂದೋಲನಗಳ ಮೂಲಕ, ಅದರಲ್ಲಿರುವವರಲ್ಲಿ ಬಹುತೇಕರು ತಮ್ಮ ಪ್ರತಿಪಾದನೆಯೇ ಸರಿಯಾದುದು ಎಂದುಕೊಂಡು ತಮಗೇ ಮೋಸ ಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತದೆ.

ಯಾವುದೇ ಆಂದೋಲನದ ನಾಯಕ, ಅದರಲ್ಲಿ ಭಾಗಿಯಾದವರಿಗೆ ಒಂದಷ್ಟು ಸ್ವಾತಂತ್ರ್ಯವನ್ನು ನೀಡುವುದು ಅತ್ಯಂತ ಜರೂರು. ಆದರೆ, ಇಂದಿನ ಆಂದೋಲನ
ಗಳಲ್ಲಿ ಏನಾಗುತ್ತಿದೆ ನೋಡಿ, ಬಹುತೇಕರು ತಮಗಿರುವ ಮುಕ್ತತೆಯನ್ನು ತಮ್ಮೊಂದಿಗೆ ಸಾಗಿ ಬರುತ್ತಿರುವ ಇತರರಿಗೆ ಕೊಡಲು ಮನಸ್ಸು ಮಾಡುವುದೇ ಇಲ್ಲ. ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಾರೆ. ತಮ್ಮ ಅಭಿಪ್ರಾಯವನ್ನಷ್ಟೇ ಹೇರಿಕೆ ಮಾಡುತ್ತಾರೆ. ಹೀಗಾದಾಗ ಆಂದೋನಗಳು ತಮ್ಮ ಮೂಲ ಉದ್ದೇಶ ದಿಂದ ಹೊರತಾಗಿ ದಿಕ್ಕು ತಪ್ಪುತ್ತದೆ. ಹೀಗೆಯೇ ಅದು ಮೂಲ ಮಾರ್ಗಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಅವರ ಗಮನಕ್ಕೇ ಬಂದಿರುವುದಿಲ್ಲ. ಶಾಂತಯುತ ಬದುಕನ್ನು ಬಯಸಿ ಆಂದೋಲನಕ್ಕೆ ಇಳಿದವರು ತಮ್ಮ ಶರಂಪರ ಕಿತ್ತಾಟಕ್ಕಿಳಿದರೆ ಹೇಗಿರುತ್ತದೆ ಹೇಳಿ? ಸಾಂಸ್ಥಿಕ ತಥಾಕಥಿತ ತಜ್ಞರ ಸೀಮಿತ ಅರಿವಿನಿಂದ ಹೀಗಾಗುತ್ತಿದೆ.

ಸಮಸ್ಯೆಯ ಸಮಗ್ರತೆ ಅವರಿಗೆ ಗೋಚರಿಸುತ್ತಲೇ ಇಲ್ಲ. ಅದರ ಒಂದು ತುದಿಯನ್ನಷ್ಟೇ ಹಿಡಿದು ಜಗ್ಗಾಡುತ್ತಿದ್ದಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು
ಅಂಥವರು ಮಾಡುತ್ತಿರುವುದು ಏನು ಗೊತ್ತಾ; ಕೇವಲ ವಿಷಯದ ಬಾಧಕಗಳನ್ನಷ್ಟೇ ಪ್ರತಿಪಾದಿಸುತ್ತಿದ್ದಾರೆ. ಎಲ್ಲದಕ್ಕೂ ಸಾಧಕ-ಬಾಧಕಗಳೆಂಬ ಎರಡೂ ಮುಖಗಳಿರುತ್ತವೆ. ಇಂಥವರೇ ತಮ್ಮ ಆಂದೋಲನದ ದಿಕ್ಕು ತಪ್ಪಿಸುತ್ತಿರುವವರು. ಇಂಥ ಚಳವಳಿಗಳ ಕೊನೆ ಸಮಸ್ಯೆಯನ್ನು, ಬಾಧಕಗಳನ್ನು ಪ್ರಚುರ ಪಡಿಸುವುದಷ್ಟೇ ಆಗಿ ನಿಲ್ಲುತ್ತದೆ. ಏಕೆಂದರೆ ಅವರನ್ನು ನಕಾರಾತ್ಮ ಸಂಗತಿಗಳೇ ಆವರಿಸಿಕೊಂಡುಬಿಟ್ಟಿರುತ್ತವೆ.

ಈ ನೀರು, ಮಣ್ಣು, ಕಾಡು, ಕೃಷಿ ಇಂಥವೆಲ್ಲದರ ರಕ್ಷಣೆಯ ವಿಷಯದಲ್ಲೂ ಆಗುತ್ತಿರುವುದು ಇದೇ. ಈ ಕಾರಣಕ್ಕೇ ಅದರ ಬಗೆಗೆ ನನಗೆ ಅಸಹನೆ. ಇವತ್ತಿನ
ದಿನಗಳಲ್ಲಿ ಇವೆಲ್ಲದರ ರಕ್ಷಣೆಗೆ ಎಲ್ಲರೂ ಇಳಿಯಲೇ ಬೇಕು. ಪ್ರತಿಯೊಬ್ಬರೂ ವ್ಯಕ್ತಿಗತ ನೆಲೆಯಲ್ಲಿ, ವೈಯಕ್ತಿಕ ವಾಗಿಯೂ ಇದನ್ನು ಅಳವಡಿಸಿಕೊಳ್ಳಬೇಕೆಂಬುದು
ನಿಜವಾದರೂ ಬದಲಾವಣೆ ಎಂಬುದು ಒಬ್ಬರಿಂದ ಸಾಧ್ಯವಾಗುವಂಥದ್ದಲ್ಲ. ಅದಕ್ಕೊಂದು ವಿಶಾಲ ವ್ಯಾಪ್ತಿಯಿದೆ. ಸಮಗ್ರವಾಗಿ ಅದನ್ನು ನೋಡಬೇಕು.
ನಿಸರ್ಗದ ರಕ್ಷಣೆಯೆಂದರೆ ಅದು ಕೇವಲ ಮರಗಳ ಉಳಿವಲ್ಲ. ಗಾಳಿ, ನೀರು, ಜೀವಿಗಳು ಎಲ್ಲವೂ ಅಲ್ಲಿ ಮುಖ್ಯ. ಕೃಷಿಯ ಉಳಿವಿನಲ್ಲಿ ಮಣ್ಣು-ನೀರಿನ
ಆರೋಗ್ಯವೂ ಮಹತ್ವದ ಪಾತ್ರವಹಿಸುತ್ತದೆ.

ಸಮುದಾಯದ ರಕ್ಷಣೆಯೆಂದರೆ ಕೇವಲ ಸೀಮಿತ ವ್ಯಕ್ತಿಗಳ ಒಳಿತಲ್ಲ. ಮಕ್ಕಳು, ಮಹಿಳೆಯರ ಕಲ್ಯಾಣಕ್ಕೂ ಶ್ರಮಿಸ ಬೇಕು. ನಮ್ಮ ಆಂದೋಲನಗಳು ಹೀಗೆ ಸಮಗ್ರವಾಗಿ ಸಮಸ್ಯೆಯನ್ನು ನೋಡುತ್ತಿಲ್ಲ. ಹಾಗೆ ನೋಡಿದ್ದರೆ ಅದರ ಮೂಲ ಕಾಣಿಸುತ್ತಿತ್ತು. ಸಮಸ್ಯೆಗೆ ಕಾರಣ ಹುಡುಕಿದರೆ, ಅದನ್ನು ಪರಿಹರಿಸುವುದು ಸುಲಭ. ನಾವು ಸಮಸ್ಯೆಗಳನ್ನು ಪರಿಹರಿಸದೇ ಕೇವಲ ಅದರ ಪರಿಣಾಮವನ್ನು ತಡೆಯಲಷ್ಟೇ ಹರಸಾಹಸ ಪಡುತ್ತಿದ್ದೇವೆ. ಅಲ್ಲಿಗೆ ಚಳವಳಿ ನಮ್ಮ ಕೈಯ್ಯಾರೆ ಸೋಲುತ್ತದೆ. ಈಗೆ ಹೇಳಿ ಇಂಥ ಆಂದೋಲನ ಅಸಲಿಯತ್ತಿನಲ್ಲೊಂದು ಅನಿಸುತ್ತಿದೆಯೇ? ನಮ್ಮೊಳಗೆ (ಪ್ರತಿಯೊಬ್ಬರೊಳಗೆ) ಬದಲಾವಣೆ ಇಣುಕಿದಾಗ ಮಾತ್ರವೇ ಪರಿವರ್ತನೆ ಸಾಧ್ಯ. ಹೊರತಾಗಿ ಇದನ್ನು ಕಾನೂನಿನಿಂದ ಸಾಧಿಸಲಾಗದು. ಇಂದಿನ ‘ಸಾವಯವ ಕೃಷಿ ಆಂದೋಲನ’ವೂ ಇಂಥದ್ದೇ ಉದ್ದೇಶ ಮರೆತ ರೀತಿಯದ್ದು. ನಿಜವಾಗಿ ಸಾವಯವ ಎನ್ನುವುದೊಂದು ಪರಿಕಲ್ಪನೆಯಲ್ಲ.

ಅದೊಂದು ಬೇಸಾಯ ಕ್ರಮ, ಕೃಷಿ ಪದ್ಧತಿ ಅಲ್ಲವೇ ಅಲ್ಲ. ಬಹುತೇಕ ಜನಕ್ಕೆ ಹಾಗೆಂದೇ ಬಿಂಬಿಸಲಾಗುತ್ತಿದೆ. ಇದು ಗೊತ್ತಾದಾಗ ನನಗೆ ತಲೆಸುತ್ತು
ಬಂತು. ಇದರಿಂದಲೇ ಜಗತ್ತಿಗೇ ಅನ್ನ ಬೆಳೆದು ಕೊಡುತ್ತಿರುವ ರೈತ ರಾತ್ರಿ ತಾನೇ ಸ್ವತಃ ಉಪವಾಸ ಮಲಗುವಂತಾಗಿದೆ. ಯಾವುದೇ ಒಂದು ಬೀಜವನ್ನು
ಬಿತ್ತಿ ಸಾವಯವ ಬೆಳೆ ತೆಗೆದುಬಿಡಬಹುದು ಎಂಬ ಭ್ರಮೆಯನ್ನು ಕಟ್ಟಿಕೊಡಲಾಗುತ್ತಿದೆ. ಇದರಿಂದಾಗಿಯೇ ಅದು ತನ್ನ ವೈಶಾಲ್ಯವನ್ನು ಕಳೆದುಕೊಳ್ಳುತ್ತಿದೆ. ಇಂಥ ತಪ್ಪು ಕಲ್ಪನೆಯಿಂದಲೇ ಸರಕಾರಗಳು ಸಹ ಜೈವಿಕ ತಂತ್ರಜ್ಞಾನ ವನ್ನೇ, ಆಹಾರ ಕ್ರಾಂತಿಯನ್ನೇ ಸಾವಯವ ಎಂದು ಅಽಕೃತವಾಗಿ ಘೋಷಿಸಲು ಹೊರಟಿ ರುವುದು.

ರೇಡಿಯೇಷನ್‌ನಂಥ ತಂತ್ರಜ್ಞಾನದ ಮೂಲಕ ಸಂರಕ್ಷಿಸುವ ಆಹಾರಗಳನ್ನು, ಕಾರ್ಪೋರೇಟ್ ಸಂಸ್ಥೆಗಳು ಎಬ್ಬಿಸಿರುವ ಸೋ ಕಾಲ್ಡ ಆಹಾರ ಕ್ರಾಂತಿಯನ್ನು ಸಹ
ಸಾವಯವದ ಹೆಸರಿನ ಬಿಂಬಿಸಲಾಗುತ್ತಿದೆ. ಇದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಮೋಸವಲ್ಲವೇ? ಒಮ್ಮೆ ಹೀಗೆ ಘೋಷಿಸಿಬಿಟ್ಟರೆ ಕೊನೆಗೆ ಅವೆಲ್ಲವೂ
ಸಾವಯವವೆಂದೇ ಆಗಿಬಿಡುತ್ತದೆ. ಅದಕ್ಕೇ ನಾನು ಹೇಳಿದ್ದು, ಸಾವಯವ ಎಂಬುದು ಕೃಷಿ ಕ್ರಮವಲ್ಲ. ಇವತ್ತು ಯಾರು ಬೇಕಾದರೂ, ಯಾವುದಕ್ಕೆ ಬೇಕಾದರೂ
‘ಸಾವಯವ’ ಎಂಬ ಪದವನ್ನು ಬಳಸಬಹುದು. ಹೀಗೆ ಬೇಕಾಬಿಟ್ಟಿ ಅದು ಬಳಕೆಯಾದಾಗಲೇ ಅದರ ಮೌಲ್ಯ ಕುಸಿಯುವುದು. ಇಂಥವುಗಳ ಅಬ್ಬರದಲ್ಲಿ ನಿಜವಾದ
ಸಾವಯವ’ವನ್ನು ಗುರುತಿಸಲೇ ಸಾಧ್ಯವಾಗುತ್ತಿಲ್ಲ.

ಇಂಥ ಅರ್ಥ ಹೀನ ಆಂದೋಲನಗಳನ್ನು ನಾವು ಬೆಂಬಲಿಸಬೇಕೇಕೆ? ಅದನ್ನು ನಿಖರವಾಗಿ ಸಾವಯವದ ಲೇಬಲ್ ಹಚ್ಚುವುದು ಎಷ್ಟು ಸರಿ? ಹೀಗೆಲ್ಲ ಅರ್ಥ ವಿಲ್ಲದೇ ಹೆಸರಿಟ್ಟುಕೊಂಡು ಸಾಗುವ, ಘೋಷಿಸಿಕೊಳ್ಳುವ ಆಂದೋಲನಗಳ ಬಗೆಗೇ ನನಗೆ ಹಿಂಜರಿಕೆಯಿರುವುದು.

(ವೆಂಡೆಲ್ ಬೆರ್ರಿಯ In distrust of movements ಎಂಬ ಪ್ರಬಂಧದ ಆಯ್ದ ಭಾಗ)

error: Content is protected !!