Saturday, 27th April 2024

ಪರೇಶ್ ಮೇಸ್ತಾ ಸಾವಿನ ಪ್ರಕರಣ: ಇನ್ನೆರಡು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಕೆ

ಶಿರಸಿ/ ಹೊನ್ನಾವರ: ನಾಲ್ಕು ವರ್ಷಗಳ ಸುದೀರ್ಘ ತನಿಖೆ ನಂತರ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಅಂತಿಮ ವರದಿ ಸಿದ್ದವಾಗಿದ್ದು ಇನ್ನೆರೆಡು ತಿಂಗಳಲ್ಲಿ ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ಚನೈ ವಿಭಾಗದ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸಲಿದ್ದಾರೆ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ.

2017 ರ ಡಿಸೆಂಬರ್ 6ರಂದು ಎರಡು ಕೋಮುಗಳ ನಡುವೆ ಹೊನ್ನಾವರದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಭೆ ಯಾಗುತ್ತೆ. ಈ ಸಂದರ್ಭದಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿ ಡಿಸೆಂಬರ್ ಎಂಟರಂದು ನಗರದ ಶನಿದೇವಾಲಯದ ಹಿಂಭಾಗದಲ್ಲಿರುವ ಶಟ್ಟಿ ಕೆರೆಯಲ್ಲಿ ಶವ ವಾಗಿ ಪತ್ತೆಯಾಗಿದ್ದ. ಈ ವಿಷಯ ಇಡೀ ಜಿಲ್ಲೆಯಲ್ಲಿ ಹಬ್ಬಿ ಕೋಮು ಘರ್ಷಣೆಯಾಗುತ್ತದೆ. ನಂತರ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ದೂರಿನ ಆಧಾರದಲ್ಲಿ ಹೊನ್ನಾವರ ಪೊಲೀಸರು ಒಟ್ಟು ಐದು ಜನರನ್ನು ಬಂಧಿಸಿ ಎಫ್.ಐ.ಆರ್ ಹಾಕಿ ಹೊನ್ನಾವರ ನ್ಯಾಯಾಲಯದ ಸುಪರ್ದಿಗೆ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದುಜನ ಪ್ರಮುಖ ಆರೋಪಿಗಳ ಬಂಧನವನ್ನು ಹೊನ್ನಾವರ ಪೊಲೀಸರು ಮಾಡಿದ್ದು, ಸಲೀಮ್ ಶೇಖ್.-ಸಾಗರದ ಅಣಲೆಕೊಪ್ಪದಲ್ಲಿ ಬಂಧನ. ಇಮ್ತಿಯಾಜ್ ಶೇಖಗನಿ (44), ಪೈಸಲ್ ಸಯ್ಯದ್ ಹರೂನ್ (23) -ಶಿರಸಿಯಲ್ಲಿ ಬಂಧನ. ಆಜಾದ್ ಅಣ್ಣಿಗೇರಿ, ಆಸಿಫ್ ರಫೀಕ್ -ಭಟ್ಕಳದ ಶಿರಾಲಿಯಲ್ಲಿ ಬಂಧನವಾಗಿತ್ತು.

ಹೊನ್ನಾವರ ಪೊಲೀಸರು ಐದು ಜನರನ್ನು ಬಂಧಿಸಿ ಹೊನ್ನಾವರದ ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಈ ಪ್ರಕರಣದಲ್ಲಿ ಐದು ಆರೋಪಿಗಳು ಜಾಮೀನು ಪಡೆದು ಹೊರಕ್ಕೆ ಬಂದಿದ್ದಾರೆ.

ಇನ್ನು ಪ್ರಕರಣದಲ್ಲಿ ಸೂಕ್ತ ತನಿಖೆ ಆಗಿಲ್ಲವೆಂದು ಬಿಜೆಪಿ ಮತ್ತು ವಿವಿಧ ಸಂಘಟನೆ ಸಿಬಿಐ ಗೆ ವಹಿಸುವಂತೆ ಪಟ್ಟು ಹಿಡಿದಾಗ ಅಂದಿನ ಸಿದ್ದರಾಮಯ್ಯ ಸರ್ಕಾರ 2018ರ ಏಪ್ರಿಲ್ 23ರಂದು ಸಿಬಿಐ ಗೆ ಈ ಪ್ರಕರಣವನ್ನು ವಹಿಸಿತ್ತು.

ಇದಾದ ನಂತರ ಸಿಬಿಐ ಚನೈ ನ ತನಿಖಾ ವಿಭಾಗದವರು ತನಿಖೆ ಕೈಗೊಂಡಿದ್ದು, ಪ್ರಕರಣ ಸಂಬಂಧ ಈ ಹಿಂದೆ ಪೊಲೀಸರು ಬಂಧಿಸಿದ ಐದು ಜನ ಆರೋಪಿಗಳ ತನಿಖೆ ಕೈಗೊಂಡು ಹಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದರ ಜೊತೆ ಹಲವು ಬಾರಿ ಪರೇಶ್ ಮೇಸ್ತಾ ತಂದೆ ಹಾಗೂ ಕುಟುಂಬ ದವರನ್ನು ತನಿಖೆಗೆ ಒಳಪಡಿಸಲಾಗಿತ್ತು.

ಕಳೆದ ಒಂದೂವರೆ ತಿಂಗಳ ಹಿಂದೆ ಸಿಬಿಐ ಡಿಜಿಪಿ ರವರು ಹೊನ್ನಾವರಕ್ಕೆ ಭೇಟಿ ನೀಡಿ ಹಲವು ಮಾಹಿತಿ ಪಡೆದಿದ್ದು ಇದೀಗ ತನಿಖೆ ಕೈಗೊಂಡಿದ್ದ ನಾಲ್ಕು ವರ್ಷದ ಸುದೀರ್ಘ ತನಿಖೆ ನಂತರ ಈಗ ಅಂತಿಮ ವರದಿಯನ್ನು ಸಿಬಿಐ ಚನೈ ವಿಭಾಗದ ಅಧಿಕಾರಿಗಳು ಸಿದ್ದಪಡಿಸಿದ್ದು ಇನ್ನೆರೆಡು ತಿಂಗಳಲ್ಲಿ ಹೊನ್ನಾ ವರದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ.

error: Content is protected !!