Sunday, 22nd September 2024

Road Accident: ದೇವನಹಳ್ಳಿ ಬಳಿ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ದಂಪತಿ ದುರ್ಮರಣ

Road Accident

ಬೆಂಗಳೂರು: ಬೈಕ್‌ ಯೂಟರ್ನ್ ತೆಗೆದುಕೊಳ್ಳುವಾಗ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿ ದುರ್ಮರಣ ಹೊಂದಿರುವ ಘಟನೆ (Road Accident) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ನಡೆದಿದೆ. ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ಯೂಟರ್ನ್ ತೆಗೆದುಕೊಳ್ಳುವಾಗ ದುರ್ಘಟನೆ ಸಂಭವಿಸಿದೆ.

ಲಕೊಂಡಹಳ್ಳಿ ಗ್ರಾಮದ ರಂಗಪ್ಪ ಹಾಗೂ ಸುಧಾ ಮೃತ ದಂಪತಿ. ಟ್ರ್ಯಾಕ್ಟರ್ ಡಿಕ್ಕಿಯಾದಾಗ ಚಕ್ರದಡಿ ಸಿಲುಕಿದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಚಾಲಕ, ಸ್ಥಳದಲ್ಲೇ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | America Shootout: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; ನಾಲ್ವರು ಸ್ಥಳದಲ್ಲೇ ಬಲಿ

ಶಿರೂರು ಗುಡ್ಡ ಕುಸಿತ; ನದಿಯಲ್ಲಿ ಲಾರಿಯ ಅವಶೇಷ ಪತ್ತೆ

Shirur Landslide

ಕಾರವಾರ: ಎರಡು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು (Shirur Landslide) ನಾಪತ್ತೆಯಾಗಿದ್ದ ಲಾರಿ ಶನಿವಾರ (ಸೆಪ್ಟೆಂಬರ್‌ 21) ಪತ್ತೆಯಾಗಿದೆ. ಆದರೆ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಬಗ್ಗೆ ಮಾತ್ರ ಯಾವುದೇ ಮಾಹಿತಿ ಸಿಕ್ಕಿಲ್ಲ. ಜುಲೈ 16ರಂದು ಭಾರಿ ಮಳೆಯ ಕಾರಣ ಗುಡ್ಡ ಕುಸಿದು, ಲಾರಿಯ ಸಮೇತ ಚಾಲಕ ಅರ್ಜುನ್ ಗಂಗಾವಳಿ ನದಿಗೆ ಬಿದ್ದಿದ್ದರು. ಭಾರಿ ಮಳೆಯ ಕಾರಣ ನದಿಯಲ್ಲಿ ನೀರಿನ ಸೆಳೆತ ಅಧಿಕವಾಗಿದ್ದರಿಂದ ಪತ್ತೆ ಕಾರ್ಯಕ್ಕೆ ಅಡಚಣೆಯಾಗಿತ್ತು. ಈಗ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಶನಿವಾರ ಈಶ್ವರ ಮಲ್ಪೆ ನೇತೃತ್ವದ ಮುಳುಗು ತಜ್ಞರ ತಂಡಕ್ಕೆ ಲಾರಿಯ ಅವಶೇಷಗಳು ಪತ್ತೆಯಾಗಿವೆ. ಆದರೆ ಇದು ಅರ್ಜುನ್‌ ಅವರ ಲಾರಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ʼʼಶಿರೂರಿನಲ್ಲಿ ಗುಡ್ಡ ಕುಸಿತದಿಂದ ನದಿಯಲ್ಲಿ ಕಾಣೆಯಾದ ಲಾರಿಯ ಕುರುಹು ದೊರೆತಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆʼʼ ಎಂದು ಮೂಲಗಳು ತಿಳಿಸಿವೆ.

ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 8ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕ ಸರ್ಕಾರ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದೆ. ಅರ್ಜುನ್‌ಗಾಗಿ ಹುಡುಕಾಟ ನಡೆಸಬೇಕು ಎಂದು ಕೇರಳ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಶೀಘ್ರದಲ್ಲೇ ಲಾರಿ ಮೇಲಕ್ಕೆತ್ತುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Theft Case: ಹಣವಿಲ್ಲ ಎಂದ ಯುವಕನ ಬೈಕ್ ಎಗರಿಸಿದ್ದ ಆಸಾಮಿ ಬಂಧನ

ಅರ್ಜುನ್ ಮರ ತುಂಬಿದ ಲಾರಿಯಲ್ಲಿ ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದ ವೇಳೆ ಜು. 16ರಂದು ಶಿರೂರಿನಲ್ಲಿ ಭೂಕುಸಿತವಾಗಿತ್ತು. ಈ ವೇಳೆ ಅವರು ಲಾರಿ ಸಮೇತ ಗಂಗಾವಳಿ ನದಿಗೆ ಬಿದ್ದಿದ್ದರು. ಅಂದಿನಿಂದ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಜತೆಗೆ ಕೇರಳದ ಜನಪ್ರತಿನಿಧಿಗಳು ಆಗಮಿಸಿದ್ದರು. ಇಂದು ಕೂಡ ಶೋದ ಕಾರ್ಯಾಚರಣೆ ನಡೆಯಲಿದೆ.