Sunday, 22nd September 2024

ಕಾಲಡಿಗಿನ ಸ್ವರ್ಗ ಕೀರಗಂಗೆ ತಟದಲ್ಲಿ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ನಿಮಗೆ ಎರಡು ಮೂರು ದಿನದ ಚಾರಣ ಸಾಕು, ಜಾಸ್ತಿ ನಡೆಯಲಾಗಲ್ಲ, ಆದರೆ ಚಾರಣ ಮತ್ತು ಪ್ರವಾಸವೊಂದರ ಎಲ್ಲ ಸೌಕರ್ಯ ಮತ್ತು ಮಜಾ ವನ್ನೂ ಅನುಭವಿಸಬೇಕು ಅಷ್ಟೆ. ಹಾಗಿದ್ದರೆ ಒಮ್ಮೆ ಕೀರಗಂಗಾ ಚಾರಣ ಅಥವಾ ಪ್ರವಾಸ ಎನ್ನಿ. ಹೋಗಿ ಮಾಡಿ ಬನ್ನಿ.

ಹದಿಮೂರು ಸಾವಿರ ಅಡಿ ಎತ್ತರದ ಅರೆಬರೆ ಆಮ್ಲಜನಕದ ಭೂ ಪರಿಸರ, ಎಡೆ ಹಸಿರು ಹೊನ್ನಿನ ಬಂಗಾರದ ಮೇರು ಪರ್ವತಗಳು, ಎತ್ತ ಕ್ಯಾಮೆರಾ
ತಿರುಗಿಸಿದರೂ ಚಿತ್ರಕ್ಕೆ ಕೊರತೆ ಇರದ ಭೂದೃಶ್ಯ ಕಾವ್ಯ ಎದುರಿಗೆ ತೆರೆದುಕೊಳ್ಳುತ್ತಲೇ ಸಾಗುವ ಅಪರೂಪದ ದೃಶ್ಯ ವೈಭವ ಕೀರಗಂಗಾ ಪ್ರವಾಸ covidತಾಣದ್ದು. ತಲುಪುವುದಕ್ಕೆ ಕೇವಲ ಕಾಲ್ನಡಿಗೆ ಮಾತ್ರವೇ ಸಾಧನವಾಗಿರುವುದರಿಂದ ಪ್ರಸ್ತುತ ಪ್ರವಾಸೋ ದ್ಯಮದ ಮುಖ್ಯ ಭೂಮಿಕೆಯಿಂದ ಸ್ವಲ್ಪ ದೂರ ಉಳಿದುಬಿಟ್ಟಿದೆ.

ಆದರೆ ಖಾಸಗಿಯವರಿಗೆ ಯಾವ ಅಡೆ ತಡೆ ಇಲ್ಲದ್ದರಿಂದ ಇಲ್ಲೀಗ ಪ್ರತೀ ಮನೆಯೂ ಅತಿಥಿ ಗೃಹವೇ. ಮೂಲತಃ ದೇವಭೂಮಿ ಹಿಮಾಚಲದ ಕಣಿವೆಯ ಸೆರಗಿಗೂ, ಪಾರ್ವತಿ ವ್ಯಾಲಿ ಶ್ರೇಣಿಯ ಮಗ್ಗುಲಿಗೆ, ಅತ್ತಲಿಂದ ವರಚ್ಚಾಗಿ ನಿಂತ ಪರ್ವತದ ಶ್ರೇಣಿಗಳ ಸಂದಿನಲ್ಲಿ ಅದುಮಿಟ್ಟಂತೆ ಅರಳಿರುವ ಕೀರಗಂಗಾ ಇತ್ತ ಊರೂ ಅಲ್ಲ ಅತ್ತ ಕಾಡೂ ಅಲ್ಲ. ಪ್ರವಾಸಿಗರಿಂದಾಗಿ ಆಗೀಗ ಗಿಜಗುಡುವ ಟೆಂಟುಗಳ ಲೋಕ, ಡೇರೆಗಳ ಗೋದಾಮು ಅದಕ್ಕೂ ಮೀರಿ ಹೋಮ್‌ ಸ್ಟೇಗಳ ಅಡ್ಡೆ ಎಂದರೂ ತಪ್ಪಲ್ಲ. ಊರಿನ ಲೆಕ್ಕದ ವ್ಯವಸ್ಥೆಯೇ ಇಲ್ಲಿರದಿದ್ದರೂ ಎಲ್ಲವೂ ಇದೆ.

ಸಾಲುಸಾಲು ಪೈನ್ ದೇವದಾರು ಮತ್ತು ಓಕ್ ಮರಗಳ ಜತೆಗೆ ಹಿಮಾಚಲದ ಸೇಬಿನ ತೋಟದ ಮರೆಗಳಲ್ಲಿ ಮಾಡಿನ ಸಾಲು, ಅದರ ಬಾಲ್ಕನಿ, ತಂಗಾಳಿಗೆ ಮೈಯೊಡ್ಡಿ ಕೂತು ಹೀರುವ ಮಸಾಲೆ ಟೀ, ಹೀಗೆ ಕೀರಗಂಗಾ ಒಂದು ನಿರಂತರ ಮತ್ತು ಮುಗಿಯದ ಪ್ರಾಕೃತಿಕ ನೆಲೆ. ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆ ಪ್ರದೇಶಕ್ಕೆ ಸೇರಿರುವ ಕೀರಗಂಗಾದ ಹೆಬ್ಬಾಗಿಲು ಬರಶೈಣಿ ಎಂಬ ಪ್ರದೇಶ. ದೆಹಲಿಯಿಂದ ಮನಾಲಿ ಮಾರ್ಗವಾಗಿ ಹೊರಟು ಅದಕ್ಕೂ ಮೊದಲೇ ಸಿಗುವ ಬುಂಥರ್‌ನಲ್ಲಿ ಇಳಿದುಬಿಡಬೇಕು. ಹೆಚ್ಚಿನಂಶ ಇದೇ ದಾರಿ ಎಲ್ಲ ಪ್ರವಾಸಿಗರದ್ದು.

ಅಲ್ಲಿಂದ ಕಸೋಲ್ ಎಂಬ ಮೆಕ್ಸಿಕನ್ ಸಿಟಿ ಎನ್ನಿಸುವ ಊರಿಗೆ ದಿನವಿಡೀ ಬಸ್ಸು ಇತರೆ ವಾಹನಗಳು ನಿಮ್ಮ ಪರ್ಸಿಗೆ ತಕ್ಕಂತೆ ಲಭ್ಯ ಇವೆ. ಈ ಮೆಕ್ಸಿಕನ್ ಸಿಟಿಯ ಮಜ ಕೇಳಿ. ಅಕಸ್ಮಾತ್ ನೀವಿಲ್ಲಿ ಒಂದು ಹೊತ್ತು ಕಳೆಯುತ್ತೀರಾದರೆ ನಿಮಗೆ ಅಪರಿಚಿತ ಭಾವ ಕಾಡತೊಡಗುತ್ತದೆ. ಪರದೇಶದಲ್ಲಿ ತಪ್ಪಿ
ಒಬ್ಬರೇ ಕಾಲಿಟ್ಟಾಗ ಆಗುವ ಅನುಭವ ಮತ್ತು ನೀವು ನೀವಲ್ಲದ ಅನುಭೂತಿಗೆ ಈಡಾಗುತ್ತೀರಿ. ಕಾರಣ ಏನೇ ನಮ್ಮ ದೇಶದಲ್ಲಿ ಹಿಮಾಚಲದ ಇದೇ
ಎಂದರೂ ಅಲ್ಲಿ ಮೆಕ್ಸಿಕೋ ಮತ್ತು ಬ್ರಾಜಿಲ್ ಜನರ ಜೋಡಿಗಳ ಹಾಗು ಪ್ರವಾಸಿಗರಿಗೆ ಮಣೆ ಹಾಕಿರುವ ಪರಿ ನೋಡಿದರೆ ತಪ್ಪಿ ಯಾವುದೋ ದೇಶಕ್ಕೆ ಕ್ಲಾಲಿಟ್ಟ ಅನಿಸಿಕೆ ಖಾತ್ರಿ. ಕಂಡಲ್ಲಿ ಸ್ನೂಕರ್ ಜಾಯಿಂಟ್ ಗಳು, ಪ್ರತಿ ಮನೆಯಲ್ಲೂ ಅಧಿಕೃತವೋ ಅನಧಿಕೃತವೋ ಬಾಟಲ್ಲುಗಳ ಸಾಲು ಪೇರಿಸಿ, ಪ್ರತಿ
ತಿರುವಿಗೂ ಒಂದೊಂದು ಟ್ಯಾಟೂ ಅಂಗಡಿಯ ಬೋರ್ಡು ನೆಟ್ಟು, ಅಲಲ್ಲಿ ಪೀಯರ್‌ಸಿಂಗುಗಳ ಅಂಗಡಿ ಇಟ್ಟುಕೊಂಡಿದ್ದಾರೆ.

ರಾತ್ರಿಯ ಮಿಣುಕು ಮಿಣುಕಿಗೆ ಈ ಪೀಯರ್‌ಸಿಂಗ್ ಗಳಿಗೆ ಎಲ್‌ಇಡಿ ಲೈಟ್ ಹಾಕುವ ವೈಚಿತ್ರ್ಯವೂ ಇಲ್ಲಿ ದಕ್ಕುತ್ತದೆ. ಹಾಗಾಗಿ ಒಮ್ಮೆ ಇದು ಕಾಸೋಲ್‌ ಗಿಂತ ಇಂಥ ವಿಚಿತ್ರತೆಯೊಂದಿಗೆ ಅಕಸ್ಮಾತ್ ನಮ್ಮ ಕ್ಯಾಂಪು ಬಿಟ್ಟು ಮೂರು ಸಂಜೆ ಹೊತ್ತಿಗೆ ಈ ಹಳ್ಳಿ ಪ್ರವೇಶಿಸಿದರೆ ತಬ್ಬಿಬ್ಬಾಗುವುದು ನಿಶ್ಚಿತ. ಸಾಹಸಿಗಳಿಗೆ ಬುಂಥರ್‌ನಿಂದ ತರಹೇವಾರಿ ಬೈಕುಗಳ ಸೌಲಭ್ಯ ಇವೆ ಬಾಡಿಗೆಗೆ. ಬುಂಥರ್‌ನಿಂದ ಕಾಸೋಲ್‌ಗೆ ಸುಮಾರು ೩೨ ಕಿ.ಮೀ.ಗಳು. ಈ ರಸ್ತೆ ಒಂದು ರೀತಿಯ ಹೋಗುವ ಪ್ರದೇಶಕ್ಕಿಂತ ಆ ದಾರಿಯೇ ಅದ್ಭುತ ಎನ್ನುವ ಹಾಗೆ.

ಎಲ್ಲಿ ಬೇಕಿದ್ದರೂ ನಿಂತು ಅಹಾ ಎನ್ನುವಷ್ಟು ಹೊರಳು ಹಾದಿ ಜತೆಗೆ ಸಂಪೂರ್ಣ ಕಣಿವೆ ಮತ್ತು ಪ್ರಪಾತಗಳನ್ನು ಹಂಚಿಕೊಂಡ ಅನಾಹುತಕಾರಿ ತಿರುವಿನ ರಸ್ತೆ. ಕಾಸೋಲ್ ತಲುಪಿ, ಮಣಿಕರಣ ಎಂಬ ಪ್ರಸಿದ್ಧ ಯಾತ್ರಾ ಸ್ಥಳವನ್ನು ತಲುಪಿಕೊಂಡರೆ ಅಗಾಗ್ಗೆ ಚಲಿಸುವ ಹಿಮಾಚಲ ಪರಿವಾಹನ ನಿಮ್ಮನ್ನು ಬರಶೈಣಿ ಮೂಲಕ ತೋಷ್ ಗ್ರಾಮದವರೆಗೂ ಮುಟ್ಟಿಸುತ್ತದೆ. ಇಲ್ಲದಿದ್ದರೆ ಬಾಡಿಗೆ ಆಟೊರಿಕ್ಷಾಗಳು ಇದ್ದೇ ಇವೆ. ಇಲ್ಲಿಗೆ ತಲುಪುವವರೆಗೆ ಸರಿ
ಸುಮಾರು ಮಧ್ಯಾನ್ಹವಾಗಿ ಕಳೆದು ಬಿಡುವುದರಿಂದ ಇ ಎದರೂ ಮೊದಲ ದಿನದ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಕಾರಣ ತೋಷ್ನಿಂದ ರುದ್ರನಾಗ ಮೂಲಕ ನಿರಂತರ ಹದಿನಾಲ್ಕು ಕಿ.ಮೀ. ಚಾರಣ ಕಡ್ಡಾಯ.

ಅದರಲ್ಲೂ ಮೊದಲ ಅವಧಿಯ ರುದ್ರನಾಗವರೆಗೆ ಉತ್ತಮ ಎನ್ನಬಹುದಾದ ಸುಮಾರು ನಾಲ್ಕೈದು ರಸ್ತೆ ತರಹದ ಮಾರ್ಗ ಇದ್ದು ಅಲ್ಲಿವರೆಗೂ ಕೆಲವೊಮ್ಮೆ ಡ್ರಾಪು ಸಿಗುವುದಿದೆ. ನಾವೇ ವ್ಯವಸ್ಥೆ ಮಾಡಿಕೊಂಡರೆ ಘಟಾನು ಘಟಿ ಜೀಪುಗಳ ಅಷ್ಟು ದಾರಿಯನ್ನು ಕ್ರಮಿಸಿ ನಿಮ್ಮನ್ನು ಮೇಲಕ್ಕೇರಿ ಸುತ್ತವೆ.  ಆದರೆ ಅದರ ನಂತರ ಮಾತ್ರ ಕಡಿದಾದ ಪರ್ವತಗಳ ಹೆಗಲ ಮೇಲಿನ ಕಾಲ್ನಡಿಗೆಯೆ ಕೀರಗಂಗಾವರೆಗೂ ತಲುಪುತ್ತದೆ. ಅದಕ್ಕಾಗಿ ಬೆಳಿಗ್ಗೆ ಚಾರಣ ಆರಂಭಿಸಿದರೆ ಕೀರಗಂಗಾ ತಲುಪುವವರೆಗೆ ಸಂಜೆಯಾದರೂ ಆದೀತು. ಕಾರಣ ದಾರಿಯ ಎರಡೂ ಬದಿಗಳಲ್ಲಿ ಕೂತಲ್ಲಿ ನಿಂತಲ್ಲಿ ಪೋಟೊ ತೆಗೆ
ಯುವ ಅದ್ಭುತ ರಮ್ಯ ತಾಣಗಳೇ. ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಜತೆಗೆ ಚೆಂದದ ಚಿಕ್ಕಚಿಕ್ಕಹಳ್ಳಿಗಳ ದಾರಿ (ಗ್ರಹಣ, ಕಲ್ಗಾ, ಪುಲ್ಗಾ, ಮಲಾನಾ ಇತ್ಯಾದಿ) ಯಾವ ಪ್ರವಾಸಿಯನ್ನೂ ಮುದಗೊಳಿಸದೆ ಬಿಡುವುದಿಲ್ಲ. ಕೀರಗಂಗಾ ಪ್ರವಾಸಕ್ಕಾಗಿ ಹಿಂದಿನ ದಿನ ಕಸೋಲ್‌ನಲ್ಲಿ ಉಳಿದು ಅಲ್ಲಿಂದ ತೋಷ್‌ವರೆಗೆ ಡ್ರಾಪ್ ತೆಗೆದುಕೊಳ್ಳುವುದು ಉತ್ತಮ ಯೋಜನೆ.

ಈ ಮಧ್ಯೆ ರುದ್ರನಾಗ ದಾಟಿದ ಮೇಲೆ ಸಾಲುಸಾಲು ಪರ್ವತಗಳ ಹೆಗಲು ಸವರಿಕೊಂಡು ಹೋಗುವ ಚಾರಣ ತೀರ ಬಾಹುಬಲಿ ಚಿತ್ರದ ಸೆಟ್ಟಿನಂತೆ ಕಾಣಿಸುತ್ತಿರುತ್ತದೆ. ಪ್ರತಿ ತಿರುವೂ ಅತ್ಯುತ್ತಮವಾದ ನಿಸರ್ಗ ಬರೆದ ಚಿತ್ರ ಶಾಲೆ. ಅದರಲ್ಲೂ ಕೀರಗಂಗಾ ಹತ್ತಿರ ಒಂದು ಅತ್ಯುತ್ತಮ ಬಿಸಿ ನೀರ ಕೊಳ ವಿದ್ದು ಆ ಹಳ್ಳಿಯ ಸುತ್ತಮುತ್ತ ಹಾಯುವ ಪ್ರತೀ ಚಾರಣಿಗ ಇಲ್ಲಿ ಸ್ನಾನ ಮಾಡದೆ ಹೊರಡಲಾರ. ಬೀಸಿನೀರು ಬುಗ್ಗೆಯಾಗಿ ಉಕ್ಕುತ್ತಲೇ ಇರುತ್ತದೆ. ಇದನ್ನು ಪವಿತ್ರ ತಾಣವಾಗಿಯೂ ಸ್ಥಳಿಯರು ಗುರುತಿಸುವುದರಿಂದ ಇಲ್ಲಿ ಮೋಜಿಗೆ ಅವಕಾಶವಿಲ್ಲ. ಮನದಣಿಯೆ ನೀರಿನಲ್ಲಿಳಿದು ಬಿಸಿ ನೀರ ಆಮೋದವನ್ನು ಸವಿಯಬಹುದು. ಚಿಕ್ಕ ಈಜುಕೊಳದಂತೆ ಅದಕ್ಕೆ ಕಟ್ಟೆ ಕಟ್ಟಿ ಅನುಕೂಲರವಾಗಿ ಇರಿಸಲಾಗಿದ್ದು ದಾರಿಯ ದಣಿವು ಪೂರ್ತಿ ತಣಿಯುವುದು ಸುಳ್ಳಲ್ಲ.

ಆದರೆ ದಕ್ಷಿಣ ಭಾರತೀಯರ ಕೆಟ್ಟ ಅಭ್ಯಾಸ ಹೋದಲ್ಲಿ ಬಂದಲ್ಲಿ ಬಟ್ಟೆ ಒಗೆಯುವ, ಒಣಗಿಸುವ ಕಾರಣ ಅಲ್ಲಲ್ಲಿ ಚೆಡ್ಡಿಗಳ ಪತಾಕೆ ಸಾಲು ಸಾಲಾಗಿ ಹಾರುವುದು ಅದಕ್ಕಾಗಿ ಬೈಸಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಸರಿ ಸುಮಾರು ಮೇ ತಿಂಗಳಾಂತ್ಯದಲ್ಲಿ ಹಿಮ ಸುರಿದ ಮೈಯ್ಯನ್ನು ಕೊಡವಿ ನಿಲ್ಲುವ ಕೀರಗಂಗೆ ನಂತರ ಸೆಪ್ಟೆಂಬರ್‌ವರೆಗೂ ಅಚ್ಚ ನಳನಳಿಸುವ ಹಸಿರಿನ ಹೊನಲಿನಲ್ಲಿ ಪ್ರವಾಸಿಗರಿಗೆ ಅಪ್ಪಟ ಸ್ವರ್ಗ. ಜೂನ್ ಮತ್ತು ಅಕ್ಟೋಬರ್‌ ನಲ್ಲಿ ಈಗೀಗ ಅತಿ ಹೆಚ್ಚು ಪ್ರವಾಸಿಗರು ಜಮೆಯಾಗತೊಡಗಿದ್ದು, ಅದರಲ್ಲೂ ವಿದೇಶಿಗರು ಬಂದರೆ ವಾರಗಟ್ಟಲೇ ಪುಸ್ತಕ ಓದುತ್ತ, ಹಸಿರು ಗುಡ್ಡ ನೋಡುತ್ತಾ ಕೂತು ಬಿಡುವುದರಿಂದ ಸ್ಥಳೀಯರಿಗೆ ಸ್ಥಳಾವಕಾಶಕ್ಕೆ ತೊಂದರೆ ನಿಚ್ಚಳ.

ಇದಕ್ಕೆ ಎರಡು ಕಾರಣ ಅವರು ಭಾರತೀಯ ಚಾರಣಿಗರಂತೆ ಪಿಸಣಾರಿಗಳಲ್ಲ. ಒಮ್ಮೆ ಮಾತು ಮುಗಿಸಿ ಬಂದು ತಳ ಊರಿದರೆ ಯಾವುದಕ್ಕೂ ತಗಾದೆ ತೆಗೆಯುವ ಜಾಯಮಾನವಲ್ಲ. ಅವರಿಗೆ ಶಾಂತತೆ ಮತ್ತು ನೆಮ್ಮದಿ ಓದು, ಆಗೀಗ ಕಡುಕಪ್ಪು ಚಹ ಮತ್ತು ಲಿಂಬು ಇಷ್ಟಿದ್ದರೆ ಜಗತ್ತಿಗೆ ಬೆಂಕಿ ಬಿದ್ದರೂ ನೆಲ ಬಿಟ್ಟು ಮೇಲೆಳುವುದಿಲ್ಲ. ಯಾವುದಕ್ಕೂ ಮುಂಗಡ ಯೋಜನೆ ಮತ್ತು ಬುಕಿಂಗ್ ವಾಸಿ.

ಅಲ್ಲಿ ಯಾವುದೇ ನೆಟ್‌ವರ್ಕ್ ಕೆಲಸ ಮಾಡುವುದಿಲ್ಲ. ಮೊಬೈಲ್ ಸಿಗ್ನಲ್ಲು ಮೊದಲೇ ಇಲ್ಲ. ಆಗೀಗ ಬಿಎಸ್ಸೆನ್ನೆಲ್ ಬಂದು ಹೋಗಿ ಮಾಡುತ್ತಿರುತ್ತದೆ. ಅದಕ್ಕಾಗಿ ಕಾಸೋಲ್ ನಲ್ಲಿ ಕೆಲವು ಟೂರ್ ಆಪರೇಟರ್ಸ್ ವ್ಯವಸ್ಥೆ ಮಾಡುತ್ತಾರಾದರೂ ಅದು ಕೆಲವೊಮ್ಮೆ ದುಬಾರಿಯಾಗುವುದೂ ಇದೆ. ನೇರವಾಗಿ ಹೋದಲ್ಲಿ ಸ್ಥಳಿಯವಾಗಿ ಲಭ್ಯವಾಗುವ ದಿನಕ್ಕೆ ಇನ್ನೂರು ಮುನ್ನೂರ ಲೆಕ್ಕದ ಹೋಮ್‌ಸ್ಟೇಗಳಿಗೆ ಸಾವಿರದ ಸುಲಿಗೆಯಾಗುತ್ತದೆ. ಹಾಗಾಗಿ ಸ್ಥಳೀಯರ ಬೆಂಬಲದ ಸ್ವಂತಃ ವ್ಯವಸ್ಥೆ ಕೀರಗಂಗೆ ಮಟ್ಟಿಗೆ ಅದ್ಭುತ ಪ್ರವಾಸ ಮತ್ತು ಮನದಲ್ಲುಳಿಯುವ ಹಸಿರು ನಾಕವಾಗುವುದರಲ್ಲಿ ಸಂಶಯವಿಲ್ಲ. ಯೋಜನೆ ಮತ್ತು ಯೋಚನೆ ಎರಡೂ ಬೇಡಾ. ಸುಮ್ಮನೆ ಏಕಾಂತ ಬಯಸಿ ಕೂರುವುದಾದರೆ ಹೊರಟು ಬಿಡಿ. ಸ್ವರ್ಗ ಎಲ್ಲಿದೆ ಎಂದರೆ ಕೀರಗಂಗೆಯ ತಟದಲ್ಲಿದೆ ಅಷ್ಟೆ.